ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರನ್ನು ಭೇಟಿ ಮಾಡಲು ರೈತ ಸಂಘ ನಿರ್ಧಾರ
ಮೈಸೂರು, ಫೆಬ್ರವರಿ 24:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರೈತರನ್ನು ಮೋಸಗೊಳಿಸುವ ಪ್ರಣಾಳಿಕೆ ಸಿದ್ಧಪಡಿಸದೆ, ಬದ್ಧತೆ ತೋರುವ ಪ್ರಣಾಳಿಕೆಯನ್ನು ಸಿದ್ಧಪಡಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರನ್ನು ಭೇಟಿ ಮಾಡಲು ರೈತ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ ಎಂದು ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ರೈತಪರ ಪ್ರಣಾಳಿಕೆ ರೂಪಿಸುವಂತೆ ಒತ್ತಾಯಿಸಿ, ಮಾರ್ಚ್ 27 ಮತ್ತು 28ರಂದು ದೆಹಲಿಗೆ ತೆರಳಿ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು.
ವಿವಿಧ ರಾಜ್ಯಗಳ 20 ರೈತ ಮುಖಂಡರು ದೆಹಲಿಗೆ ತೆರಳಲಿದ್ದಾರೆ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು, ದಕ್ಷಿಣ ಭಾರತದಲ್ಲಿ ವರ್ಷಕ್ಕೆ ಒಂದು ಬಾರಿ ಸಂಸತ್ ಅಧಿವೇಶನ ನಡೆಸಬೇಕು ಎಂಬ ಸಲಹೆಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಲಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯ ಸರ್ಕಾರದ ಭೂಸ್ವಾಧೀನ ಕಾಯ್ದೆ ಮತ್ತು ಬುಡಕಟ್ಟು ಜನರನ್ನು ಕಾಡಿನಿಂದ ತೆರವುಗೊಳಿಸಲು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ರೈತರು ಮತ್ತು ಅರಣ್ಯವಾಸಿಗಳಿಗೆ ಮಾರಕವಾಗಿವೆ ಎಂದರು.
2013ರ ಭೂಸ್ವಾಧೀನ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದು ವಿಧಾನಸಭೆಯಲ್ಲಿ ಚರ್ಚೆಗೂ ಅವಕಾಶ ನೀಡದೇ ಅಂಗೀಕರಿಸಿ, ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದೆ. ಆಹಾರ ಧಾನ್ಯ ಉತ್ಪಾದನೆಗೆ ಹೊಡೆತ ಬೀಳುವಂತಿದ್ದರೆ ಕೈಗಾರಿಕಾ ಪ್ರದೇಶ, ಹೆದ್ದಾರಿ ಮುಂತಾದ ಯೋಜನೆಗಳನ್ನು ಮಾಡಬಾರದು ಎಂಬ ನಿಯಮವನ್ನು ಮಾರ್ಪಾಡುಗೊಳಿಸಲಾಗಿದೆ. ಅಲ್ಲದೇ ಈ ಕಾಯ್ದೆಯು ಕಡಿಮೆ ಬೆಲೆಗೆ ಸಮ್ಮತಿಯಿಲ್ಲದೇ ಭೂಸ್ವಾಧೀನ ಮಾಡಿಕೊಳ್ಳಲು ಅವಕಾಶ ನೀಡುವಂತಿದ್ದು, ರಾಜ್ಯಪಾಲರು ಅದಕ್ಕೆ ಅಂಕಿತ ಹಾಕಬಾರದು ಎಂದು ಮನವಿ ಮಾಡಿದರು.












Click it and Unblock the Notifications