ಆಗ ಮಳೆ ಕೊರತೆ, ಈಗ ರೋಗ ಬಾಧೆ, ಬೆಳೆಹಾನಿಯಿಂದ ತತ್ತರಸಿದ ಉತ್ತರಕನ್ನಡ ಜಿಲ್ಲೆ ರೈತರು
ಕಾರವಾರ, ಅಕ್ಟೋಬರ್, 04: ಬಿತ್ತನೆ ವೇಳೆಗೆ ಮಳೆ ಕೊರತೆಯಿಂದಾಗಿ ಕಂಗಾಲಾಗಿ ಕುಳಿತಿದ್ದ ರೈತರು ಕೊನೆಗಳಿಯಲ್ಲಿ ಸುರಿದ ಅಲ್ಪ ಮಳೆಯಲ್ಲಿಯೇ ಕೃಷಿ ಚಟುವಟಿಕೆ ಮುಗಿಸಿದ್ದರು. ಬಿದ್ದ ಮಳೆಗೆ ಸ್ವಲ್ಪ ಬೆಳವಣಿಗೆ ಕಂಡಿದ್ದ ಬೆಳೆಗೆ ಇದೀಗ ರೋಗ ಬಾಧೆ ಶುರುವಾಗಿದೆ. ಬೆಂಕಿ ರೋಗ, ಕರಿ ಜೀಗಿ ರೋಗ ಬಂದು ಭತ್ತದ ಬೆಳೆ ಒಣಗಿ ನಿಂತಿದ್ದು, ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದ ರೈತರು ಕಂಗಾಲಾಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೈ ಕೊಟ್ಟರೂ ಜನ ಧೃತಿಗೆಡದೆ ಕೊನೆಗಳಿಗೆಯಲ್ಲಿ ಸುರಿದ ಮಳೆ ಹಾಗೂ ಕೊಳವೆ ಬಾವಿಗಳ ನೀರಿನಿಂದಲೇ ತಡವಾಗಿಯಾದರೂ ಭತ್ತದ ಕೃಷಿ ಚಟುವಟಿಕೆ ಮುಗಿಸಿದ್ದರು. ಆದರೆ ಇನ್ನೇನು ತೆನೆ ಒಡೆಯಬೇಕು ಎನ್ನುವಾಗಲೇ ಇದೀಗ ಭತ್ತದ ಬೆಳೆಗೆ ರೋಗದ ಬಾಧೆ ಶುರುವಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟ ಕಾರಣ ರೈತರು ಬೆಳೆ ಬೆಳೆಯಲಾಗದೆ ಕಂಗಾಲಾಗಿದ್ದರು. ಕೊನೆ ಗಳಿಗೆಯಲ್ಲಿ ಭತ್ತ, ಮೆಕ್ಕೆಜೋಳ ಇತರೆ ಬೆಳೆಗಳನ್ನು ಬೆಳೆದಿದ್ದರಾದರೂ ಆ ಬೆಳೆಗಳಿಗೆ ಇದೀಗ ರೋಗ ಬಾಧೆ ಸಂಕಷ್ಟ ಎದುರಾಗಿದೆ. ಜಿಲ್ಲೆಯ ಅಂಕೋಲ, ಶಿರಸಿ, ಬನವಾಸಿ, ಕುಮಟಾ, ಮುಂಡಗೋಡ, ಹಳಿಯಾಳ ಭಾಗದಲ್ಲಿ ಭತ್ತದ ಬೆಳೆಗೆ ಬೆಂಕಿ ಗಾಳಿ ರೋಗ ಕಾಣಿಸಿಕೊಂಡಿದ್ದು, ಸಾವಿರಾರು ಎಕರೆ ಭತ್ತದ ಬೆಳೆ ಒಣಗಿ ನಿಂತಿದೆ.
ಇನ್ನು ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದಿದ್ದ ಹೊಲಗಳನ್ನು ನೋಡಿ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕ್ಗಳಲ್ಲಿ ಸಾಲ ಮಾಡಿ ಬೆಳೆ ಬೆಳೆದವರಿಗೆ ಇದೀಗ ಆತಂಕ ಹೆಚ್ಚಾಗಿದೆ. ಮಳೆ ಜೊತೆಗೆ ಇದೀಗ ರೋಗ ಬಾಧೆ ಕಾಡುತ್ತಿರುವ ಕಾರಣ ಜನ ಕಂಗಾಲಾಗಿದ್ದಾರೆ. ಕಳೆದೊಂದು ತಿಂಗಳ ಹಿಂದೆ ಬನವಾಸಿ ಭಾಗದ ರೈತ ಬೆಳೆ ಹಾನಿಯಾಗಿದ್ದಕ್ಕೆ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಆದರೆ ಇದೀಗ ಈ ರಿತಿ ಬೆಳೆ ಹಾನಿ ಆಗುತ್ತಿರುವುದರಿಂದ ಸರ್ಕಾರ ಸಂಬಂಧಪಟ್ಟ ಇಲಾಖೆ ರೈತರಿಗೆ ಪರಿಹಾರೋಪಾಯದ ಬಗ್ಗೆ ತಿಳಿಸಿ ಧೈರ್ಯ ತುಂಬಬೇಕಿದೆ. ಅಲ್ಲದೆ ರೈತರಿಗೆ ಆಗಿರುವ ಹಾನಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ರೈತರಾದ ರಾಜೇಶ ನಾಯ್ಕ ಆಗ್ರಹಿಸಿದ್ದಾರೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುತೇಕ ರೈತರು ಭತ್ತದ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ವರ್ಷ ಸುಮಾರು 44 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆ, 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆ ಜೋಳವನ್ನು ಬೆಳೆದಿದ್ದಾರೆ.
ಜೂನ್ ತಿಂಗಳಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರು ಭೂಮಿಗೆ ಬೀಜ ಬಿತ್ತದೆ ಹಾಗೆ ಬಿಟ್ಟಿದ್ದರು. ನಂತರ ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಬಿತ್ತನೆ ಕಾರ್ಯ ಜೋರಾಗಿತ್ತು. ಜುಲೈ ತಿಂಗಳು ಮುಗಿದ ನಂತರ ಈವರಗೂ ಮಳೆ ಬರಲೇ ಇಲ್ಲ. ಹೀಗಾಗಿ ಬಿತ್ತಿದ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಕೊಳವೆ ಬಾವಿಗಳ ಮೂಲಕ ನೀರು ಹರಿಸಿದ್ದರು. ಹೀಗಾಗಿ ಬೆಳೆಯು ಸಹ ಸೊಂಪಾಗಿ ಬೆಳೆದಿತ್ತು. ಆದರೆ ಈಗ ಅದಕ್ಕೂ ರೋಗ ಅಂಟಿದ್ದು, ರೈತನಿಗೆ ಸಂಕಷ್ಟ ಎದುರಾಗಿದೆ.
ಈಗಾಗಲೇ ಒಣ ಬೇಸಾಯದ ಬೆಳೆ ಶೇಕಡಾ 90ರಷ್ಟು ಹಾನಿಯಾಗಿದೆ. ಜಿಲ್ಲೆಯ 10 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಲಾಗಿದೆ. ಹೀಗಾಗಿ ಪರಿಹಾರ ನೀಡುವ ನಿರೀಕ್ಷೆ ಇದೆ ಎಂದು ಜಂಟಿ ಕೃಷಿ ಅಧಿಕಾರಿ ಹೊನ್ನಪ್ಪ ಗೌಡ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿದ್ದು, ರೈತ ಸಂಕಷ್ಟ ಎದುರಿಸುತ್ತಿದ್ದಾನೆ. ಹೀಗಾಗಿ ಸಂಕಷ್ಟದಲ್ಲಿರುವ ರೈತನಿಗೆ ಸರ್ಕಾರ ಸೂಕ್ತ ಪರಿಹಾರ ಘೋಷಣೆ ಮಾಡಬೇಕಿದೆ ಎನ್ನುವ ಒತ್ತಾಯಗಳು ಕೇಳಿಬರುತ್ತಿವೆ.












Click it and Unblock the Notifications