ಮುಸುಕಿನ ಜೋಳ ಬೆಳೆಗೆ ವಿವಿಧ ರೋಗ: ಮುಂಜಾಗ್ರತಾ ಕ್ರಮಕ್ಕೆ ರೈತರಿಗೆ ಸಲಹೆ
ಹಾಸನ, ಸೆಪ್ಟೆಂಬರ್ 29: ಜೂನ್ನಲ್ಲಿ ಆರಂಭವಾದ ನೈಋತ್ಯ ಮುಂಗಾರು ಹಂಗಾಮಿನ ಅವಧಿ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಳ್ಳುತ್ತದೆ. ಆದರೆ ಈ ಬಾರಿಯ ಮುಂಗಾರಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಪರಿಣಾಮವಾಗಿ ವಿವಿಧ ಬೆಳೆಗಳು ನಷ್ಟವಾಗಿವೆ. ಈಗ ಬೆಳೆದು ನಿಂತಿರುವ ಬೆಳೆಗಳಿಗೆ ಸಹ ಹಲವು ರೋಗಗಳು ಕಾಣಿಸಿಕೊಂಡಿವೆ. ಇಂತಹ ಬೆಳೆಗಳಲ್ಲಿ ಮುಸುಕಿನ ಜೋಳ ಸಹ ಒಂದು.
ಹಾಸನದ ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ಪಿ. ಮಳೆ ಹಾಗೂ ನೀರಾವರಿ ಆಶ್ರಯದಲ್ಲಿ ಜಿಲ್ಲೆಯಾದ್ಯಂತ ಬಿತ್ತನೆ ಕಂಡಿರುವ ಮುಸುಕಿನ ಜೋಳದ ಬೆಳೆಯು ಬಿಳಿ ಸುಳಿ/ ಬೂಜು ರೋಗದ ಭಾದೆಗೆ ಸಿಲುಕಿದೆ ಎಂದು ಹೇಳಿದ್ದಾರೆ. ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.

ಕೃಷಿ ಕಾಲೇಜು ವಿಜ್ಞಾನಿಗಳ ತಂಡ ಗಂಡಸಿ ಹೋಬಳಿ, ಅರಸೀಕೆರೆ ತಾಲೂಕು ರಮೇಶ್ ಬಿನ್ ಲೇ ಹುಚ್ಚೇಗೌಡ, ಹುರುಗಿಲವಾಡಿ ಗ್ರಾಮ ಇವರ ತಾಕಿಗೆ ಭೇಟಿ ನೀಡಿತ್ತು. ಈ ವೇಳೆ ಬಿಳಿ ಸುಳಿ ರೋಗದ ಬಾಧಿತ ಗಿಡಗಳನ್ನು ವೀಕ್ಷಣೆ ಮಾಡಿದ್ದಾರೆ. ರೋಗ ಹತೋಟಿ ಕ್ರಮಗಳ ಕುರಿತು ರೈತರಿಗೆ ವಿವರಣೆ ಕೊಟ್ಟಿದ್ದಾರೆ.
ಬಿಳಿ ಸುಳಿ ರೋಗ ಬಾಧೆ: ಜೂನ್ನಿಂದ ಸೆಪ್ಟೆಂಬರ್ 30. ಈ ಬಾರಿ ಮಂಗಾರಿನಲ್ಲಿ ವಾಡಿಕೆಗಿಂತ ಅತೀ ಹೆಚ್ಚು ಮಳೆಯಾಗಿದೆ. ಅಲ್ಲದೇ ಜೂನ್ ಅಂತ್ಯದಿಂದ ಜುಲೈ ಅಂತ್ಯದವರೆಗೆ ಮೋಡ ಕವಿದ ವಾತಾವರಣದ ಜೊತೆಗೆ ನಿರಂತರ ತುಂತುರು ಮಳೆಯಾದ ಕಾರಣ, ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ತಾಪಮಾನ ಇಳಿಕೆಯಾದ ಕಾರಣ ಬೂಜು ರೋಗದ ಶಿಲೀಂಧ್ರದ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಠಿಯಾಗಿ ರೋಗ ಉಲ್ಬಣಕ್ಕೆ ಕಾರಣವಾಗಿರುತ್ತದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
ಜಿಲ್ಲೆಯಲ್ಲಿ 1,05,105 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದೆ. ರೈತರು ಬೆಳೆ ಪರಿವರ್ತನೆಯನ್ನು ಮಾಡದೇ ಏಕ ಬೆಳೆ ಬೇಸಾಯ ಮಾಡಿರುವ ಕಾರಣ ಹಾಗೂ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು ಜೂನ್ -ಜುಲೈ ಮಾಹೆಯಲ್ಲಿ ಮಳೆ ಜೊತೆ ಮೋಡ ಕವಿದ ವಾತವರಣದಿಂದ ರೋಗಭಾದೆಯು ಹೆಚ್ಚಾಗಿದೆ. ಜಿಲ್ಲೆಯ ರೈತರು ಮುಂಜಾಗ್ರತಾ ಕ್ರಮವಾಗಿ ಶಿಲೀಂಧ್ರನಾಶಕ ಸಿಂಪಡಣೆ ಕೈಗೊಳ್ಳವುದು ಅಗತ್ಯವೆಂದು ಸಲಹೆ ನೀಡಲಾಗಿದೆ.
ಈ ಶಿಲೀಂಧ್ರವು ಮಣ್ಣು ಹಾಗೂ ಗಾಳಿಯ ಮೂಲಕ ಹರಡಿ ಅತೀ ವೇಗವಾಗಿ ಪ್ರಸರಣಗೊಳ್ಳುವ ಮೂಲಕ ಬೆಳೆಯಲ್ಲಿ ರೋಗದ ತೀವ್ರತೆ ಹೆಚ್ಚಾಗುತ್ತದೆ. ಶಿಲೀಂಧ್ರ ಬೆಳೆದ ಭಾಗದಲ್ಲಿ ಗರಿ ಹಳದಿ ಬಣ್ಣಕ್ಕೆ ತಿರುಗಿ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ತೆನೆ ವಿಕಾರವಾಗಿ ಪರಾಗ ಉತ್ಪತ್ತಿಯಾಗದೆ ಎಲೆ ಆಕಾರದ ಬೆಳವಣಿಗೆ ಕಂಡುಬರುತ್ತದೆ. ರೋಗದ ಸೋಂಕು ಹೆಚ್ಚಾದರೆ ಶೇ.70 ರಷ್ಟು ಇಳುವರಿ ಕುಂಠಿತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ರೈತರು ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರಾದ ರಮೇಶ್ ಕುಮಾರ್ ಪಿ. ಕರೆ ನೀಡಿದ್ದಾರೆ.
ಬಿತ್ತನೆಗೆ ಮೊದಲು ಬೀಜವನ್ನು Metalaxyl 4wp + Mancozeb 64 wp ಮಿಶ್ರಣ 4gm/ kg ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡುವುದು, ರೋಗ ಬಾದಿತ ಗಿಡಗಳನ್ನು ಕಿತ್ತು ಹಾಕುವುದು, ಬಿತ್ತನೆಯಾದ 40 ರಿಂದ 45 ದಿನಗಳ ನಂತರ Metalaxyl 4wp + Mancozeb 64wp ಮಿಶ್ರಣ 2gm ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸುವುದು.
ಭೂಮಿಯಂದ ನೀರು ಬಸಿಯಲು ಕ್ರಮ ವಹಿಸುವುದು. ಬೆಳೆ ಪರಿವರ್ತನೆ ಕೈಗೊಳ್ಳುವುದು. ಪ್ರತಿ ವರ್ಷ ಮುಸುಕಿನ ಬೆಳೆ ಬೆಳೆಯುವುದರಿಂದ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಏಕದಳ ಬೆಳೆಗಳ ನಂತರ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆಯಲು ಕ್ರಮವನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications