"ಇಂಥ ಕಠಿಣ ಪರಿಸ್ಥಿತಿಯಲ್ಲೂ ಮೋದಿ ಮೌನಕ್ಕೆ ಗಂಟುಬಿದ್ದಿದ್ದೇಕೆ?"
ನವದೆಹಲಿ, ಡಿಸೆಂಬರ್ 21: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿವೆ ಎಂದು ಆರೋಪಿಸಿ ನವೆಂಬರ್ 26ರಿಂದಲೂ ಹಲವು ರೈತ ಸಂಘಗಳು ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿವೆ. ಈ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ರೈತರು ಪಟ್ಟು ಹಿಡಿದಿದ್ದು, ರೈತರು-ಕೇಂದ್ರದ ನಡುವಿನ ಹಲವು ಮಾತುಕತೆಗಳು ಫಲ ನೀಡಿಲ್ಲ.
ಆದರೆ ಈ ಹೋರಾಟದಲ್ಲಿ ಹಲವು ಕಾರಣಗಳಿಂದಾಗಿ 33 ರೈತರು ಸಾವನ್ನಪ್ಪಿದ್ದಾರೆ. ಇಷ್ಟು ರೈತರು ಸಾವನ್ನಪ್ಪಿದ್ದರೂ ಮೋದಿ ಮೌನಾಚರಣೆ ಮಾಡುತ್ತಿರುವುದು ಏಕೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ನವೆಂಬರ್ ತಿಂಗಳಿನಿಂದಲೂ ರೈತರು ಧರಣಿ ಕುಳಿತಿದ್ದಾರೆ. ಆದರೆ ಮೋದಿ ಮಾತ್ರ ಹಟ ಬಿಡದಂತೆ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂದೆ ಓದಿ...

"ಮೋದಿ ಯಾಕೆ ಮೌನವಾಗಿದ್ದಾರೆ?"
ಇಷ್ಟು ರೈತರು ಸಾವನ್ನಪ್ಪಿದ್ದಾರೆ. ನಡುಗುವ ಚಳಿಯಲ್ಲಿ ರೈತರು ಬೀದಿಗಳಲ್ಲೇ ಹೋರಾಟ ಮುಂದುವರೆಸಿದ್ದಾರೆ. ಆದರೆ ಇಷ್ಟೆಲ್ಲಾ ಆಗುತ್ತಿದ್ದರೂ ಪ್ರಧಾನಿ ಮೌನವಾಗಿರುವುದು ಏಕೆ? ಅವರಿಂದ ಏಕೆ ರೈತರ ಪರವಾಗಿ ಒಂದು ಪದವೂ ಹೊರಡುತ್ತಿಲ್ಲ? ದೆಹಲಿಯಲ್ಲಿ ನಮ್ಮ ಅನ್ನದಾತರು ತಮ್ಮ ಹೆಂಡತಿ, ಮಕ್ಕಳೊಂದಿಗೆ ಚಳಿ ನಡುವೆ ಹೋರಾಟ ಮಾಡುತ್ತಿದ್ದಾರೆ. ಆದರೆ ಮೋದಿ ಇಂಥ ಕಠಿಣ ಸಂದರ್ಭದಲ್ಲಿ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಶಮಾ ಮೊಹಮದ್ ದೂರಿದ್ದಾರೆ.

"ಗೃಹ ಸಚಿವರಿಗೆ ಈ ಸಮಯದಲ್ಲಿ ಬಂಗಾಳ ಭೇಟಿ ಬೇಕಿತ್ತಾ?"
ರೈತರ ಈ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾದ ನಮ್ಮ ಗೃಹ ಸಚಿವರೂ ಪಶ್ಚಿಮ ಬಂಗಾಳ ಭೇಟಿಯಲ್ಲಿದ್ದಾರೆ. ರೈತರಿಗೆ ಉತ್ತರಿಸಲು ಅವರ ಬಳಿ ಸಮಯವಿಲ್ಲ. ಆದರೆ ಪಶ್ಚಿಮ ಬಂಗಾಳಕ್ಕೆ ಹೋಗಲು ಸಮಯವಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

"ಪ್ರಧಾನಿ ಕನಿಷ್ಠ ಸೌಜನ್ಯ ತೋರಬಹುದಿತ್ತು"
ಪ್ರಧಾನಿ ತಮ್ಮ ದೇಶವನ್ನು ಪ್ರೀತಿಸುತ್ತಾರೆ, ತಮ್ಮ ಜನರನ್ನು ಪ್ರೀತಿಸುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕನಿಷ್ಠ ಸೌಜನ್ಯ ತೋರಬಹುದಿತ್ತು. ರೈತರು, ಅವರ ಕುಟುಂಬಕ್ಕೆ ಸಮಾಧಾನದ ಮಾತುಗಳನ್ನು ಹೇಳಬಹುದಿತ್ತು. ಸತ್ತ ರೈತರ ಕುಟುಂಬದ ಪರಿಸ್ಥಿತಿಯನ್ನು ಒಮ್ಮೆ ಕಲ್ಪನೆ ಮಾಡಿಕೊಳ್ಳಿ ಸಾಕು ಎಂದಿದ್ದಾರೆ.
ಸಂಸತ್ ಭವನದ ಬಳಿ ಗುರುದ್ವಾರ್ ಗೆ ಭೇಟಿ ನೀಡಿದ ಪ್ರಧಾನಿ ಕುರಿತು ಮಾತನಾಡಿ, "ಧಾರ್ಮಿಕ ಸ್ಥಳಗಳಿಗೆ ಹೋಗುವುದು ಒಳ್ಳೆಯದು. ಆದರೆ ಅಲ್ಲಿಗೆ ಭೇಟಿ ನೀಡುವುದಷ್ಟೇ ಅಲ್ಲ, ಒಳ್ಳೆಯದನ್ನೂ ಅರ್ಥ ಮಾಡಿಕೊಳ್ಳಬೇಕು. ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮೋದಿ ಭೇಟಿಯಾಗಬೇಕು. ಅವರ ಕಷ್ಟವನ್ನು ಕೇಳಬೇಕು, ಅವರಿಗೆ ನ್ಯಾಯ ಕೊಡಬೇಕು. ಈ ಕಾಯ್ದೆಗಳ ಕುರಿತು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
"ಈ ರೈತರ ಸಾವಿಗೆ ಮೋದಿ ಸರ್ಕಾರವೇ ಹೊಣೆ"
ಡಿ.20ರ ಭಾನುವಾರ ಅಖಿಲ ಭಾರತ ಕಿಸಾನ್ ಸಭಾ, ಹೋರಾಟದಲ್ಲಿ ಸಾವನ್ನಪ್ಪಿದ ರೈತರಿಗಾಗಿ ಶ್ರದ್ಧಾಂಜಲಿ ದಿವಸವನ್ನು ಹಮ್ಮಿಕೊಂಡಿತ್ತು. ಅಪಘಾತ, ಆತ್ಮಹತ್ಯೆ ಹಾಗೂ ಅಸ್ವಸ್ಥತೆಯಿಂದ ಹೋರಾಟದಲ್ಲಿ ಭಾಗಿಯಾಗಿದ್ದ ಸುಮಾರು 33 ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
"ಚಳಿ ತಾಳಲಾರದೇ, ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿ ಮೂವತ್ತಮೂರು ರೈತರು ಸಾವನ್ನಪ್ಪಿದ್ದಾರೆ. ಈ ಎಲ್ಲಾ ರೈತರ ಸಾವಿಗೂ ಮೋದಿ ಸರ್ಕಾರವೇ ಹೊಣೆ" ಎಂದು ಎಚ್ಚರಿಸಿದ್ದಾರೆ.












Click it and Unblock the Notifications