ರೈತರು-ಕೇಂದ್ರ ಸರ್ಕಾರದ ನಡುವೆ ಇಂದು ನಿರ್ಣಾಯಕ ಸಭೆ
ನವದೆಹಲಿ, ಜನವರಿ 4: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರ ಇಂದು ಏಳನೇ ಸುತ್ತಿನ ಮಾತುಕತೆ ನಡೆಸಲಿದೆ. ಸುಮಾರು 40 ರೈತ ಒಕ್ಕೂಟಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಮಧ್ಯಾಹ್ನ 2 ಗಂಟೆಗೆ ವಿಜ್ಞಾನ ಭವನದಲ್ಲಿ ಮಾತುಕತೆ ನಡೆಯಲಿದೆ.
ಈ ಮಹತ್ವದ ಸಭೆಗೂ ಮುನ್ನ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಸರ್ಕಾರದ ಕಾರ್ಯತಂತ್ರದ ಬಗ್ಗೆ ಸಮಾಲೋಚಿಸಿದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ರಾಜನಾಥ್ ಸಿಂಗ್, ಕಳೆದ ಕೆಲವು ವಾರಗಳಿಂದ ಕೇಂದ್ರ ಸರ್ಕಾರ ನಡೆಸುತ್ತಿರುವ ಸಂಧಾನ ಸಭೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.

ರೈತ ಒಕ್ಕೂಟಗಳು ಮತ್ತು ಕೇಂದ್ರದ ನಡುವೆ ಕಗ್ಗಂಟಾಗಿ ಉಳಿದಿರುವ ಸಮಸ್ಯೆಯನ್ನು ಪರಿಹರಿಸಲು ಮಧ್ಯಂತರ ಮಾರ್ಗವನ್ನು ಅನುಸರಿಸುವ ಎಲ್ಲ ಸಾಧ್ಯತೆಗಳ ಬಗ್ಗೆ ರಾಜನಾಥ್ ಸಿಂಗ್ ಜತೆ ನರೇಂದ್ರ ತೋಮರ್ ಸಮಾಲೋಚಿಸಿದರು.
ಸೋಮವಾರ ನಡೆಯುವ ಸಭೆಯು ನಿರ್ಣಾಯಕ ಫಲಿತಾಂಶವನ್ನು ನೀಡಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ 'ಆ ಭರವಸೆ ಇದೆ' ಎಂದಷ್ಟೇ ನರೇಂದ್ರ ಸಿಂಗ್ ತೋಮರ್ ಪ್ರತಿಕ್ರಿಯಿಸಿದರು. ಕೇಂದ್ರ ಹಾಗೂ ರೈತ ನಡುವೆ ಇದು ಕೊನೆಯ ಸಭೆಯಾಗಲಿದೆಯೇ ಎಂಬುದಕ್ಕೆ ಅವರು ಉತ್ತರಿಸಲಿಲ್ಲ.












Click it and Unblock the Notifications