ಸರ್ಕಾರದಿಂದ ರೈತರಿಗೆ ಪತ್ರ; ಮುಂದಿನ ನಡೆಯೇನು?
ನವದೆಹಲಿ, ಡಿಸೆಂಬರ್ 21: ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಸೋಮವಾರ ಕೇಂದ್ರ ಸರ್ಕಾರ ರೈತ ಸಂಘಗಳಿಗೆ ಪತ್ರ ಬರೆದಿದೆ.
ಆದರೆ "ಈ ಪತ್ರದಲ್ಲಿ ಹೊಸದೇನೂ ಇಲ್ಲ. ತಮ್ಮ ಹಿಂದಿನ ಕೃಷಿ ಕಾಯ್ದೆ ತಿದ್ದುಪಡಿ ಪ್ರಸ್ತಾವದ ಕುರಿತ ಚರ್ಚೆಗೆ ಮಾತುಕತೆ ದಿನಾಂಕ ನಿಗದಿಪಡಿಸುವಂತೆ ತಿಳಿಸಲಾಗಿದೆ. ಸರ್ಕಾರ ಎಲ್ಲಿವರೆಗೂ ನಮಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡುವುದೋ ಅಲ್ಲಿಯವರೆಗೂ ನಾವು ಮಾತುಕತೆ ನಡೆಸಲು ಸಿದ್ಧವಾಗಿಯೇ ಇರುತ್ತೇವೆ" ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ತಿಕೈಟ್ ತಿಳಿಸಿದ್ದಾರೆ.
"ಸರ್ಕಾರ ತನ್ನ ಪತ್ರದಲ್ಲಿ, ಮತ್ತೆ ಕೃಷಿ ಕಾಯ್ದೆಗಳ ತಿದ್ದುಪಡಿ ಪ್ರಸ್ತಾವದ ಕುರಿತು ಮಾತನಾಡುತ್ತಿದೆ. ಈ ಬಗ್ಗೆ ನಾವು ಹಿಂದೆ ಮಾತನಾಡಿಯೇ ಇರಲಿಲ್ಲ. ಹೀಗಾಗೇ ಹಿಂದಿನ ಮಾತುಕತೆಯು ರದ್ದಾಗಿತ್ತು. ಸದ್ಯಕ್ಕೆ ಈ ಪತ್ರಕ್ಕೆ ಉತ್ತರಿಸುವ ಕುರಿತು ಚರ್ಚೆ ನಡೆಸುತ್ತಿದ್ದೇವೆ" ಎಂದಿದ್ದಾರೆ.

40 ರೈತ ಸಂಘಗಳನ್ನು ಉದ್ದೇಶಿಸಿ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ ವಾಲ್ ಭಾನುವಾರ ಪತ್ರ ಬರೆದಿದ್ದು, ಕೃಷಿ ಕಾಯ್ದೆ ತಿದ್ದುಪಡಿ ಸಂಬಂಧ ತಮ್ಮ ಹಿಂದಿನ ಪ್ರಸ್ತಾವದ ಕುರಿತು ಚರ್ಚೆ ನಡೆಸಲು ಹಾಗೂ ಈ ಹೋರಾಟವನ್ನು ಆದಷ್ಟು ಬೇಗ ಕೊನೆಗೊಳಿಸಲು ಮಾತುಕತೆಗೆ ದಿನಾಂಕ ನಿಗದಿಪಡಿಸಲು ತಿಳಿಸಿದ್ದಾರೆ. ಆದರೆ ಆ ಪತ್ರದಲ್ಲಿ ಹೊಸತೇನಿಲ್ಲ. ನಾವು ಈಗಾಗಲೇ ಸರ್ಕಾರದ ಪ್ರಸ್ತಾವವನ್ನು ತಿರಸ್ಕರಿಸಿದ್ದೇವೆ. ಮತ್ತೆ ಪ್ರಸ್ತಾವದ ಕುರಿತು ಮಾತನಾಡುತ್ತಿರುವುದರಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ.
"ಸರ್ಕಾರಕ್ಕೆ ನಮ್ಮ ಬೇಡಿಕೆ ಏನೆಂದು ಗೊತ್ತಿಲ್ಲವೇ? ನಾವು ಕೇಳುತ್ತಿರುವುದು ಒಂದೇ. ಮೂರು ಹೊಸ ಕೃಷಿ ಕಾಯ್ದೆಗಳನ್ನು ರದ್ದು ಮಾಡುವುದು. ನಮ್ಮ ಮಾತನ್ನು ಸರ್ಕಾರ ಕೇಳಿಸಿಕೊಳ್ಳಬೇಕು ಎಂದು ಇಲ್ಲಿ ಕುಳಿತುಕೊಂಡಿದ್ದೇವೆ. ಸರ್ಕಾರವೇ ಬ್ಯುಸಿಯಾಗಿದೆ. ಸರ್ಕಾರವೇ ನಮಗೆ ದಿನಾಂಕ ನಿಗದಿಪಡಿಸಬೇಕು, ಇಲ್ಲವೇ ನಮ್ಮ ಬಳಿಯೇ ಬಂದು ಮಾತನಾಡಿದರೂ ಸರಿ" ಎಂದಿದ್ದಾರೆ ಮತ್ತೊಬ್ಬ ರೈತ ಮುಖಂಡ ಅಭಿಮನ್ಯು ಕೋಹರ್. ಮಾತುಕತೆ ಅಷ್ಟೇ ಅಲ್ಲ, ಸೂಕ್ತ ಪರಿಹಾರದೊಂದಿಗೆ ಸರ್ಕಾರ ಬರಲಿ ಎಂದು ಆಗ್ರಹಿಸಿದ್ದಾರೆ.












Click it and Unblock the Notifications