ಕೃಷಿಯಲ್ಲಿ ತಂತ್ರಜ್ಞಾನ ಬಳಸಿ ಲಾಭ ಕಂಡುಕೊಂಡ ರೈತ
ಡಿಸೆಂಬರ್ 30 : ಕೃಷಿಯಿಂದ ನಷ್ಟ ಗ್ಯಾರಂಟಿ ಎಂದು ಭಾವಿಸಿದ್ದವರಿಗೆ, ತಂತ್ರಜ್ಞಾನ ಅಳವಡಿಕೆಯಿಂದ ಲಾಭ ಪಡೆಯಬಹುದು ಎಂದು ತೋರಿಸಿಕೊಡುವ ನಿಟ್ಟಿನಲ್ಲಿ ಇಲ್ಲೊಬ್ಬ ರೈತ, 40 ಎಕರೆ ಭೂಮಿಯನ್ನೇ ಕಳೆದುಕೊಂಡರೂ ಧೃತಿಗೆಡದೆ, ಆವಿಷ್ಕಾರ ಮಾಡಿ ರೈತರನ್ನು ಲಾಭದತ್ತ ತಂದು ನಿಲ್ಲಿಸಿದ್ದಾರೆ.
ಅಣ್ಣಿಗೇರಿಯ ಕೃಷಿಕ ಅಬ್ದುಲ್ ಖಾದರ್ ನಡಕಟ್ಟಿ ಎಂಬ ರೈತ. ಅಲ್ಲಿನ ಜನ ಅವರನ್ನು ಇಂದಿಗೂ ಹುಚ್ಚ ಎಂದೇ ಕರೆಯುತ್ತಾರೆ. ರೈತನಿಗೆ ಸ್ನೇಹಿಯಾಗಿ, ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿಗೆ ಸಹಾಯಕವಾಗುವ ರೊಟೊವೇಟರ್, ಗೊಬ್ಬರ ಹಾಕುವುದು, ಬೀಜ ಬಿತ್ತುವುದು, ಎಡೆ ಹೊಡೆಯುವುದು, ಔಷಧ ಸಿಂಪಡಿಸುವುದು ಹಾಗೂ ಭೂಮಿ ಹಸಿ ಇರುವಾಗಲೇ ಹುಲ್ಲು ತಿರುವಿ ಹಾಕುವಂತಹ 5 ಕೆಲಸಗಳನ್ನು ಒಂದೇ ಯಂತ್ರದಲ್ಲಿ ಮಾಡುವಂತಹ ಯಂತ್ರಗಳ ಆವಿಷ್ಕಾರ ಮಾಡಿದ್ದಾರೆ.

ತಮ್ಮ ಹೆಸರಿಗಿದ್ದ ಆಸ್ತಿಯನ್ನೆಲ್ಲ ಕಳೆದುಕೊಂಡು ಆವಿಷ್ಕಾರಕ್ಕೆ ನಿಂತ ಅವರ ಪ್ರಯತ್ನ ಕಂಡ ಪ್ರತಿಯೊಬ್ಬರೂ ಹುಚ್ಚ ಎಂದೇ ಅವರನ್ನು ಕರೆಯುತ್ತಿದ್ದರು. ಆದರೂ ಧೃತಿಗೆಡದ ಖಾದರ್, ತಮ್ಮ ಸಂಶೋಧನೆ ಮುಂದುವರೆಸಿ. ಹೊಸ ಆವಿಷ್ಕಾರ ಮಾಡಿ, ರೈತರು ಲಾಭದತ್ತ ಮುಖ ಮಾಡುವಂತೆ ಮಾಡಿದ್ದಾರೆ.
ಹೀಗಾಗಿ ಇವರು ತಯಾರಿಸುವ ಕೂರಿಗೆಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ರಾಜ್ಯ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಂದಲೂ ಬೇಡಿಕೆ ಹೆಚ್ಚುತ್ತಿದೆ. ರೈತರ ಇಳುವರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಾದರ್ ಅವರ ಪ್ರಯತ್ನವನ್ನು ಹಲವು ಕೃಷಿ ವಿಶ್ವವಿದ್ಯಾಲಯಗಳು ಸೇರಿದಂತೆ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಗುರುತಿಸಿ ಸನ್ಮಾನಿಸಿದ್ದಾರೆ.

ಇವರ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿಗೈದ ರೈತರನ್ನು ಸರ್ವೆಗೆ ಒಳಪಡಿಸಿದಾಗ ಹಲವು ಲಾಭದಾಯಕ ಅಂಶಗಳು ಕಂಡು ಬಂದಿವೆ. ಎಕರೆಗೆ ಕನಿಷ್ಠ 2000 ರೂ. ಲಾಭವಾಗಿದೆ. ಶೇ.30ರಷ್ಟು ಬೀಜಗಳ ಉಳಿತಾಯವಾಗಿದೆ. ಬೀಜ ಮೊಳಕೆ ಒಡೆಯುವ ಪ್ರಮಾಣ ಶೇ. 100ರಷ್ಟು ಹೆಚ್ಚಾಗಿದೆ.
ಕೃಷಿ ಕೂಲಿ ಕಾರ್ಮಿಕರ ತಲೆನೋವು ಶೇ. 50ರಷ್ಟು ತಗ್ಗಿದೆ. ಎಕರೆಗೆ 1ರಿಂದ 1.5ಲೀ ಡೀಸೆಲ್ ಸಹ ಉಳಿತಾಯವಾಗಿದೆ. ಮುಂಗಾರು ಮತ್ತು ಹಿಂಗಾರು ಬಿತ್ತನೆಯಲ್ಲಿ ಸರಾಸರಿ ನೂರು ಎಕರೆಗೆ 2,30,000 ರೂ. ಉಳಿತಾಯವಾಗುತ್ತದೆ ಎಂಬುವುದನ್ನು ರೈತರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಇವರ ಯಂತ್ರೋಪಕರಣಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.












Click it and Unblock the Notifications