ವಿಜಯಪುರ, ಆಗಸ್ಟ್ 16: ಇತ್ತೀಚೆಗಷ್ಟೇ ನಡೆದಿದ್ದ ಮಹಿಳಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್, ತಮ್ಮ ಸಾಧನೆಗೆ ಕಾರು, ನಗದು ಕೊಡಲು ಮುಂದಾಗಿರುವ ರಾಜ್ಯ ಸರ್ಕಾರ, ತನಗೊಂದು ನಿವೇಶನ ಕೊಟ್ಟರೆ ಸಾಕೆಂದು ಮನವಿ ಸಲ್ಲಿಸಿದ ಪ್ರಸಂಗ ನಡೆದಿದೆ.
ಬೆಳಗಾವಿಗೆ ಅಟಪಟ್ಟು ಮಾರ್ಗದರ್ಶಿ, ವೇದಾ ರಾಯಭಾರಿ
ಸ್ವಾತಂತ್ರ್ಯೋತ್ಸವದ ನಿಮಿತ್ತ ಬುಧವಾರ (ಆಗಸ್ಟ್ 15) ನಡೆದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೇಶ್ವರಿಯನ್ನು ಸರ್ಕಾರದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರು, ರಾಜೇಶ್ವರಿಯವರಿಗೆ ಸರ್ಕಾರದಿಂದ 5 ಲಕ್ಷ ರು. ಬಹುಮಾನ ನೀಡುವ ಭರವಸೆಯನ್ನು ನೀಡಿದರು.
ಪಾಟೀಲ್ ಅವರ ಮಾತಿನ ನಂತರ, ಮಾತನಾಡಲು ಎದ್ದು ನಿಂತ ರಾಜೇಶ್ವರಿ, ತಮ್ಮ ಮನೆಯಲ್ಲಿ ಒಬ್ಬ ತಾಯಿ, ತಂಗಿ ಹಾಗೂ ತಮ್ಮಂದಿರು ಇದ್ದು, ನಿಲ್ಲಲು ಒಂದು ಗಟ್ಟಿಯಾದ ಸೂರು ಇಲ್ಲ. ಹಾಗಾಗಿ, ತಮಗೆ ನಿವೇಶನವೊಂದನ್ನು ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾರಮ್ಯ ಮೆರೆದರೂ, ನಮ್ಮ ದೇಶದ ಕ್ರೀಡಾಳುಗಳು ಇರುವ ಅಸಲಿ ಪರಿಸ್ಥಿತಿಯನ್ನು ಎತ್ತಿ ತೋರಿಸುವಂತಿತ್ತು ರಾಜೇಶ್ವರಿ ಅವರ ಈ ಪ್ರಸಂಗ.