ಮಂಗ್ಳೂರು: ವಿವೇಕ್ ರೈಗೆ ಡಾಕ್ಟರೇಟ್ ಸೇರಿದಂತೆ ಇತರೆ ತುಣುಕು ಸುದ್ದಿ ರೌಂಡಪ್
ಮಂಗಳೂರು, ಮಾರ್ಚ್. 03 : ಜಾನಪದ ವಿದ್ವಾಂಸ ಪ್ರೊ. ಬಿ.ಎ. ವಿವೇಕ್ ರೈ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಶುಕ್ರವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ವಿವೇಕ್ ರೈ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿ ಗೌರವಿಸಿದರು.
ಆಟೋಚಾಲಕ ಮನಗನಿಗೆ 5 ಚಿನ್ನದ ಪದಕ, ಫೆಬ್ರವರಿ 25ರಂದು ಮಂಗಳೂರು ಬಂದ್ ವೇಳೆ ದಾಂದಲೆಗೆ ಪ್ರಚೋಧನೆ ನೀಡುತ್ತಿದ್ದವರ ಬಂಧನ, ಸಾಕ್ಷಿ ಹೇಳಲು ಬಂದವರಿಗೆ ಕೊಲೆ ಬೆದರಿಕೆ ಸೇರಿದಂತೆ ಇತರೆ ಮಂಗಳೂರು ಜಿಲ್ಲೆಯ ಶುಕ್ರವಾರದ ತುಣುಕು ಸುದ್ದಿ ರೌಂಡಪ್ ಇಲ್ಲಿದೆ.
ಅಟೋಡ್ರೈವರ್ ಮಗನಿಗೆ 5 ಚಿನ್ನದ ಪದಕ
ಶುಕ್ರವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವದಲ್ಲಿ ಮಡಿಕೇರಿಯ ಮಾದಾಪುರದ ಆಟೋ ಡ್ರೈವರ್ ಹಸೈನಾರ್ ಮತ್ತು ಜುಬೇದಾ ದಂಪತಿಯ ಪುತ್ರ ಮುಸ್ತಫಾ ಕೆ.ಎಚ್ ಅವರು ಎಂ.ಎ ಇನ್ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿ 5 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.
ಸಾಕ್ಷಿ ಹೇಳಲು ಬಂದವರಿಗೆ ಕೊಲೆ ಬೆದರಿಕೆ
ವಿಟ್ಲದಲ್ಲಿ 2015ರಲ್ಲಿ ನಡೆದ ಆಸೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹೇಳಲು ಬಂದಿದ್ದ ಮಂಜೇಶ್ವರ ಉಪ್ಪಳದ ಅಬೂಬಕರ್ ರಿಯಾಜ್ ಎಂಬವರಿಗೆ ಸಾಕ್ಷಿ ಹೇಳದಂತೆ ತಂಡವೊಂದು ಕೊಲೆ ಬೆದರಿಕೆ ಹಾಕಿರುವ ಘಟನೆ ನ್ಯಾಯಾಲಯದ ಆವರಣದಲ್ಲೇ ನಡೆದಿದ್ದು, ಇದೀಗ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಬಂದರ್ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ನಪಾಟ ರಫೀಕ್ ಹಾಗೂ ಪದ್ಮನಾಭ ಮಂಗಳೂರು ಇವರ ಸಹಚರರು ಎನ್ನಲಾದ ಪ್ರಭಾಕರ, ಹಮೀದ್ , ನೂವರ್ ಶಾಯ, ಶಂಶೀರ್ ಬಂಧಿತ ಆರೋಪಿಗಳಾಗಿದ್ದಾರೆ.
ಮೂವರ ಬಂಧನ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೇಟಿಯನ್ನು ವಿರೋಧಿಸಿ ಕಳೆದ ವಾರ ಜಿಲ್ಲಾ ಬಂದ್ ಗೆ ಕರೆ ನೀಡಿದ ಸಂದರ್ಭದಲ್ಲಿ ಕಾರಿನಲ್ಲಿ ಟಯರ್ ಮತ್ತು ಪೆಟ್ರೋಲ್ನ್ನು ಕೊಂಡೊಯ್ಯುತ್ತಿದ್ದ ಮೂವರು ಆರೋಪಿಗಳನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರೇಮ್, ಅರುಣ್ ಮತ್ತು ಶಿವರಾಜ್ ಎಂದು ಗುರುತಿಸಲಾಗಿದೆ.
ಸಿಪಿಐ ಪ್ರತಿಭಟನೆ
ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ )ನೇತೃತ್ವದಲ್ಲಿ ಮಾರ್ಚ್ 10ರಂದು ರಾಜ್ಯಾದ್ಯಂತ ಬಜೆಟ್ ಪೂರ್ವ ಜನಾಗೃಹ ಚಳವಳಿ ನಡೆಯಲಿರುವುದರಿಂದ ಮಂಗಳೂರು ಸಿಪಿಐ ಘಟಕ ಅಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಕೇಂದ್ರದ ಮೋದಿ ಸರಕಾರ ಬಜೆಟ್ ನಲ್ಲಿ ಸಾಲ ಮನ್ನಾ, ಬೆಳೆ ನಷ್ಟ ಪರಿಹಾರದಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಿಪಿಐ ಕಾರ್ಯದರ್ಶಿ ವಿ. ಕುಕ್ಯಾನ್ ತಿಳಿಸಿದ್ದಾರೆ.