ಲಿಂಗಾಯತರನ್ನು ಒಡೆದಿದ್ದು ಬಿಎಸ್ ವೈ ಎಂದ ನಟ ಚೇತನ್ ವಿರುದ್ಧ ಪ್ರತಿಭಟನೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಲಿಂಗಾಯತ ಸಮಾಜದಲ್ಲಿ ಒಡಕು. ರಾಜಕೀಯ ಲಾಭಕ್ಕಾಗಿ ಸಮಾಜ ಒಡೆದ ಯಡಿಯೂರಪ್ಪ ಎಂದು ಕನ್ನಡ ನಟ ಚೇತನ್ ಆರೋಪ.
Recommended Video
ಬೆಂಗಳೂರು, ಆಗಸ್ಟ್ 30: ಲಿಂಗಾಯತರನ್ನು ಒಡೆದಿದ್ದೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂದು ಕನ್ನಡ ಚಿತ್ರ ನಟ ಚೇತನ್ ಆರೋಪಿಸಿದ್ದಾರೆ. ಆದರೆ, ಈ ಆರೋಪ ಅವರನ್ನು ವಿವಾದಕ್ಕೆ ಸಿಲುಕಿಸಿದೆ.
ಲಿಂಗಾಯತರ ಪ್ರತ್ಯೇಕ ಧರ್ಮದ ವಿಚಾರವಾಗಿ ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರುವ ಬಸವ ಭವನದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಚೇತನ್, ಮಾಜಿ ಮುಖ್ಯಮಂತ್ರಿ ವಿರುದ್ಧ ಈ ಆರೋಪ ಮಾಡಿದರು. ಆದರೆ, ಅವರ ಈ ಮಾತಿಗೆ ಸಭೆಯಲ್ಲಿ ಕುಳಿತಿದ್ದ ಬಿಎಸ್ ವೈ ಅಭಿಮಾನಿ ಶಿವಕುಮಾರ್ ಎಂಬಾತ ತೀವ್ರವಾಗಿ ಪ್ರತಿಭಟನೆ ನಡೆಸಿದರು. ಅವರಿಗೆ ಇತರ ಕೆಲವು ಸಭಿಕರೂ ದನಿಗೂಡಿಸಿದರು.
ಈ ಸಂದರ್ಭದಲ್ಲಿ ಬಹುತೇಕ ಮಂದಿ ಶಿವಕುಮಾರ್ ಅವರನ್ನು ತಡೆಯಲು ಮುಂದಾದಾಗ ಮಾತಿಗೆ ಮಾತು ಬೆಳೆದು ಸಭೆಯಲ್ಲಿ ಗದ್ದಲದ ವಾತಾವಣ ಉಂಟಾಯಿತು. ಇದು ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿ ಮುಟ್ಟಿದಾಗ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಶಿವಕುಮಾರ್ ಅವರನ್ನು ಸಭೆಯಿಂದ ಹೊರಹಾಕಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡುವಾಗ ಭಾವೋದ್ವೇಗಕ್ಕೆ ಒಳಗಾದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ರಾಜಕೀಯ ಲಾಭಗಳಿಗಾಗಿ ಲಿಂಗಾಯತ ಸಮುದಾಯವನ್ನು ಒಡೆದರು. ಅವರ ಈ ಕಾರ್ಯಕ್ಕೆ ಸುತ್ತೂರು ಮಠದ ಸ್ವಾಮೀಜಿ ಸೇರಿದಂತೆ ಕೆಲವಾರು ಮಠಾಧಿಪತಿಗಳೂ ಕೈಜೋಡಿಸಿದ್ದರು ಎಂದು ಕಿಡಿಕಾರಿದರು.