ಸೃಜನಶೀಲ ಕವಿ ಪುತಿನ ಜನ್ಮಶತಾಬ್ದಿ
- ಖಾದ್ರಿ ಎಸ್. ಅಚ್ಯುತನ್, ಬೆಂಗಳೂರು
ಕಾವ್ಯ, ಲಲಿತಪ್ರಬಂಧ, ವ್ಯಕ್ತಿಚಿತ್ರಗಳು, ಗೀತರೂಪಕ ಹಾಗೂ ಕಾವ್ಯ ಮೀಮಾಂಸೆಗಳಿಗೆ ಇವರು ನೀಡಿದ ಕೊಡುಗೆ ಅಪಾರ. ಅವರ ಗೋಕುಲ ನಿರ್ಗಮನ ಹಾಗೂ ಇತರ ಗೀತರೂಪಕಗಳು ಹಲವಾರು ರಂಗ ಪ್ರಯೋಗಗಳನ್ನು ಕಂಡಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಫೆಲೋಶಿಪ್ ಇವರನ್ನು ಹುಡುಕಿಕೊಂಡು ಬಂದರೆ, ಚಿಕ್ಕಮಗಳೂರಿನಲ್ಲಿ ನಡೆದ 53ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪುತಿನ ಅವರದಾಗಿತ್ತು.
ಬದುಕಿನ ಕೊನೆ ಘಳಿಗೆಯವರೆಗೂ ಕೃತಿಗಳನ್ನು ರಚಿಸಿಕೊಂಡು ಬಂದ ಇವರು 1998ರ ಅಕ್ಟೋಬರ್ 13ರಂದು ಅಸ್ತಂಗತರಾದಾಗ ಕನ್ನಡ ಸಾರಸ್ವತ ಲೋಕದಲ್ಲಿ ದೊಡ್ಡ ಶೂನ್ಯವೇ ಸೃಷ್ಟಿಯಾದಂತಿತ್ತು. ಅವರ ಜೀವಿತ ಕಾಲದಲ್ಲೇ ಕರ್ನಾಟಕ ಸರಕಾರ ಪುತಿನ ಹೆಸರಿನ ಟ್ರಸ್ಟ್ ಸ್ಥಾಪಿಸಿತ್ತು.
ಮೈಸೂರಿನ ಪ್ರಾಚ್ಯವಸ್ತು ಸಂಶೋಧನೆ ಇಲಾಖೆಯ ನೆರವಿನಿಂದ ಮೇಲುಕೋಟೆಯಲ್ಲಿ ಪುತಿನ ಅವರ ಮನೆಯನ್ನು ಪುನರುಜ್ಜೀವನಗೊಳಿಸಿ ಅದನ್ನು ಸಾಂಸ್ಕೃತಿಕ ಸಂಸ್ಮರಣೆ ಕೇಂದ್ರವನ್ನಾಗಿಸಿದೆ. ಪುತಿನ ಅವರ ಅಪ್ರಕಟಿತ ರಸಪ್ರಕಾಶ ದ ಸಮಗ್ರ ಗದ್ಯ ಸಂಪುಟವನ್ನು 2002ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಪ್ರಕಟಿಸಿದೆ.
ಕನ್ನಡದ ಅತ್ಯುತ್ತಮ ಕಾವ್ಯ ಅಥವಾ ನಾಟಕ ಕೃತಿಗಳಿಗೆ ಪ್ರತಿ ವರ್ಷ ಪುತಿನ ಟ್ರಸ್ಟ್ 10 ಸಾವಿರ ರೂ. ಬಹುಮಾನ ನೀಡುತ್ತಿದೆ. ಪುತಿನ ಅವರಿಗೆ ಪ್ರಿಯವಾದ ಕಾವ್ಯ ಮೀಮಾಂಸೆಯನ್ನು ಅಧ್ಯಯನದ ವಿಷಯವನ್ನಾಗಿ ಆಯ್ದು ಅತಿ ಹೆಚ್ಚು ಅಂಕ ಪಡೆಯುವ ಮೈಸೂರು ವಿವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈ ಕವಿಯ ಹೆಸರಿನಲ್ಲಿ ಚಿನ್ನದ ಪದಕವನ್ನು ಪ್ರತಿ ವರ್ಷವೂ ನೀಡುವ ವ್ಯವಸ್ಥೆಯನ್ನು ಈ ಟ್ರಸ್ಟ್ ಮಾಡಿದೆ.
(ಸ್ನೇಹ ಸೇತು : ವಿಜಯ ಕರ್ನಾಟಕ)
ಪೂರಕ ಓದಿಗೆ :
ಗೋಕುಲ ನಿರ್ಗಮನ - ಒಂದೆ ಬಾರಿ ನುಡಿಸು ಕೃಷ್ಣ ಅಭಯಗೀತವ