ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಾಂಕ ನಿಗದಿ ಆಗಿದೆ. ಈ ವರ್ಷ ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಸರ್ಕಾರ ಮಹತ್ವದ ಪ್ಲ್ಯಾನ್ ಮಾಡಿಕೊಂಡಿದೆ. ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು ವರ್ಷಪೂರ್ತಿ ಕಾರ್ಯ ನಿರ್ವಹಿಸುವ ಅಮ್ಯೂಸ್ಮೆಂಟ್ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರಾದ ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಭೇಟಿ ನೀಡಿ, ಪರಿವೀಕ್ಷಣೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಬಾರಿಯ ವಸ್ತು ಪ್ರದರ್ಶನವು ದಸರಾ ಹಬ್ಬದಿಂದ ಆರಂಭವಾಗಿ ಒಟ್ಟು 90 ದಿನಗಳ ಕಾಲ, ಅಂದರೆ ಜನವರಿ 8 2027 ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ಮುಕ್ತ ಅವಕಾಶ ಇದೆ.
2025ರಲ್ಲಿ ಕಳೆದ ವರ್ಷಗಳಲ್ಲಿ 8 ಮತ್ತು 9 ಲಕ್ಷದಷ್ಟಿದ್ದ ಪ್ರವಾಸಿಗರ ಸಂಖ್ಯೆಯು ಪ್ರಸ್ತುತ ಸಾಲಿನಲ್ಲಿ ಅಧಿಕಾರಿಗಳ ಉತ್ತಮ ನಿರ್ವಹಣೆಯಿಂದಾಗಿ ಬರೋಬ್ಬರಿ 15 ಲಕ್ಷದ ಗಡಿ ದಾಟಿದೆ. ಪ್ರವಾಸಿಗರ ಭೇಟಿಯನ್ನು ಮತ್ತಷ್ಟು ಸುಲಭ ಹಾಗೂ ಆರಾಮದಾಯಕವಾಗಿಸಲು 4 ಕೋಟಿ ರೂಪಾಯಿ ವೆಚ್ಚದಲ್ಲಿ 32 ಶಾಶ್ವತ ಮಳಿಗೆಗಳನ್ನು ಹಾಗೂ ಮಳೆ-ಬಿಸಿಲಿನಿಂದ ರಕ್ಷಣೆ ನೀಡುವ ಅತ್ಯಾಧುನಿಕ ಶೆಲ್ಟರ್ ಒಳಗೊಂಡ ಶಾಶ್ವತ ಫುಡ್ ಕೋರ್ಟ್ ವ್ಯವಸ್ಥೆಯನ್ನು ಆವರಣದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ತಾತ್ಕಾಲಿಕ ಮಳಿಗೆಗಳನ್ನು ನಿರ್ಮಿಸುವ ವೆಚ್ಚ ತಡೆಗೆ ಈ ಬಾರಿ 'ಸಿದ್ದರಾಮಯ್ಯ ಪ್ರದರ್ಶನ ಅಂಗಳ'ದಲ್ಲಿ ಈಗಾಗಲೇ ಕಾಯಂ ಮಳಿಗೆಗಳನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಸಾರ್ವಜನಿಕರ ನೆಚ್ಚಿನ ಆಕರ್ಷಣೆಗಳಾದ ಸಂಗೀತ ಕಾರಂಜಿ ಹಾಗೂ ಲೇಸರ್ ಶೋ, ಬೋಟಿಂಗ್ ಮತ್ತು ಬೆಂಕಿ ಉಗುಳುವ ಡ್ರ್ಯಾಗನ್ ಪ್ರದರ್ಶನ ಒಳಗೊಂಡ ರಾಜೀವ್ ಗಾಂಧಿ ಡ್ರ್ಯಾಗನ್ ಪಾಂಡ್ ಮನರಂಜನಾ ಕಾರ್ಯಕ್ರಮಗಳನ್ನು ಈ ಬಾರಿಯೂ ಮುಂದುವರಿಸಲಾಗುತ್ತಿದ್ದು, ಮೈದಾನದ ಒಳಭಾಗದಲ್ಲಿ ರಸ್ತೆ , ಕುಡಿಯುವ ನೀರಿನಂತಹ ಮೂಲ ಸೌಕರ್ಯ ಮೇಲ್ದರ್ಜೆಗೇರಿಸಲಾಗಿದೆ. ಮೈಸೂರು ನಗರದ ಮಧ್ಯ ಭಾಗದಲ್ಲಿರುವ ಜಾಗಗಳಲ್ಲಿ ರ್ಯಾಲಿಗಳು, ಖಾಸಗಿ ಕಾರ್ಯಕ್ರಮ, ಸಂಗೀತ ಕಚೇರಿಗಳಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ನಗರದ ಹೊರ ವಲಯದಲ್ಲಿ ಇಂತಹ ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಪ್ರತ್ಯೇಕ ಮೈದಾನವೊಂದನ್ನು ಮೀಸಲಿಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇರುವುದರಿಂದ ದಸರಾವನ್ನು ಸರಳವಾಗಿ ಆಚರಿಸಬೇಕೆಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧರಿಸಿದಂತೆ ಈ ವರ್ಷವು ಅದ್ಧೂರಿ ದಸರಾ ಆಚರಣೆ ನಡೆಯಲಿದೆ ಎಂದು ತಿಳಿಸಿದರು. ಕರಾವಳಿ ಭಾಗದ ಸಾಂಸ್ಕೃತಿಕ ಕ್ರೀಡೆಯಾದ ಕಂಬಳವನ್ನು ಕೇವಲ ಆ ಭಾಗಕ್ಕೆ ಸೀಮಿತಗೊಳಿಸದೆ, ಇಡೀ ರಾಜ್ಯದ ಜನರಿಗೆ ಪರಿಚಯಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಮೈಸೂರು ದಸರಾದಲ್ಲಿ ಕಂಬಳವನ್ನು ಆಯೋಜಿಸಲು ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಬಹುತೇಕ ಶಾಸಕರು ಮತ್ತು ಸದಸ್ಯರು ಒಲವು ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ದಸರಾ ಆರಂಭವಾಗುವುದಕ್ಕಿಂತ ಮುನವನೇ ಮೈಸೂರು ನಗರದ ರಸ್ತೆಗಳ ರಿಪೇರಿ ಹಾಗೂ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಮುಗಿಸು ಸೂಚಿಸಲಾಗಿದೆ. ದಸರಾ ವಸ್ತುಪ್ರದರ್ಶನಕ್ಕೆ ವಿಶೇಷ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ವಸ್ತುಪ್ರದರ್ಶನವು ಪ್ರಮುಖ ಆಕರ್ಷಣೆಯಾಗಿದ್ದು, ಲಕ್ಷಾಂತರ ಜನ ಭೇಟಿ ನೀಡುವುದರಿಂದ ಅದರ ಅಭಿವೃದ್ಧಿಗೆ ಅನುದಾನದ ಅಗತ್ಯವಿದೆ. ದಸರಾ ಶಾಶ್ವತ ಪ್ರಾಧಿಕಾರ ರಚನೆ ಮಾಡಬೇಕೆಂಬ ಬೇಡಿಕೆ ಪ್ರತಿ ವರ್ಷದಂತೆ ಈ ಬಾರಿಯೂ ಬಂದಿದ್ದು, ಮುಖ್ಯಮಂತ್ರಿಗಳು ಇದನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡು ಕೇವಲ ಒಂದು ತಿಂಗಳಷ್ಟೇ ಆಗಿರುವುದರಿಂದ, ಮುಂದಿನ ತಿಂಗಳು ಕಡ್ಡಾಯವಾಗಿ ಕೆ.ಡಿ.ಪಿ ಸಭೆಯನ್ನು ಕರೆಯುವುದು ಎಂದು ತಿಳಿಸಿದರು.ಬರ ಸಂಕಷ್ಟ: ವಾರದೊಳಗೆ ಮೇವಿನ ಬೀಜ ವಿತರಣೆ?, ಕುಡಿಯೋ ನೀರಿಗೆ ಆದ್ಯತೆ; ಅಧಿಕಾರಿಗಳಿಗೆ ಜಿ. ಪರಮೇಶ್ವರ್ ತರಾಟೆ
ಪ್ರತ್ಯೇಕ ಮೈದಾನಕ್ಕಾಗಿ ಸರ್ಕಾರಕ್ಕೆ ಮನವಿ
ಮೈಸೂರು ದಸರಾದಲ್ಲಿ ಕರಾವಳಿ ಕಂಬಳ
ದಸರಾ ಶಾಶ್ವತ ಪ್ರಾಧಿಕಾರ ರಚನೆಗೆ ಬೇಡಿಕೆ