Gruhalakshmi Scheme: ರಾಜ್ಯದ 'ಗೃಹಲಕ್ಷ್ಮಿ'ಯರು ಗಮನಿಸಲೇಬೇಕಾದ ಮಹತ್ವದ ಮಾಹಿತಿ


Gruhalakshmi Scheme: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳಲ್ಲಿ 'ಗೃಹಲಕ್ಷ್ಮಿ' ಯೋಜನೆ ಕೂಡ ಒಂದಾಗಿದೆ. ಇದರಡಿಯಲ್ಲಿ ಪ್ರತಿ ತಿಂಗಳು ಪ್ರತಿ ಮನೆ ಯಜಮಾನಿ ಬ್ಯಾಂಕ್‌ ಖಾತೆಗೆ 2,000 ರೂಪಾಯಿ ಹಾಕಲಾಗುತ್ತಿದೆ. ಆದ್ರೆ ಕೆಲವು ದಿನಗಳ ಹಿಂದೆಯಷ್ಟೇ ಈ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಅಪ್ಡೇಟ್‌ ಮಾಡಿಸದಿದ್ರೆ ಹಣ ಬರುವುದಿಲ್ಲ ಎನ್ನುವ ವದಂತಿಗಳು ಹರಿದಾಡಿದ್ದವು. ಆದರೆ ಇದೀಗ ಇವುಗಳಿಗೆಲ್ಲಾ ತೆರೆ ಎಳೆಯಲಾಗಿದೆ.

Advertisement

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಅಪ್ಡೇಟ್ ಮಾಡಿಸಬೇಕು. ಇಲ್ಲದಿದ್ದರೆ ಹಣ ಹಣ ಬರುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಿದಾಡಿದ್ದವು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ಅವರು,' ಸಾರ್ವಜನಿಕರು ಇಂತಹ ವದಂತಿಗೆಳಿಗೆ ಕಿವಿಗೊಡಬಾರದು,' ಎಂದು ಹೇಳಿದ್ದಾರೆ.

Advertisement

ಸೈಬರ್ ಸೆಂಟರ್‌ಗಳಿಗೆ ಅಲೆದಾಡದಂತೆ ಸೂಚನೆ

'ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದ ಈ ತಪ್ಪು ಮಾಹಿತಿಯಿಂದ ಯೋಜನೆಯ ಲಾಭವನ್ನು ಮುಂದುವರೆಸಲು ಫಲಾನುಭವಿಗಳು ಖಾಸಗಿ ಸೈಬರ್ ಕೇಂದ್ರಗಳು, ಗ್ರಾಮ್ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಿಗೆ ಮುಗಿಬೀಳುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಸಾರ್ವಜನಿಕರು ಸುಮ್ಮನೆ ಸುಳ್ಳು ಸುದ್ದಿಗಳಿಗೆ ಕಿವಿಗೊಟ್ಟು ಸೈಬರ್ ಕೇಂದ್ರಗಳಿಗೆ ಅಲೆದಾಡಬೇಡಿ,' ಎಂದು ಅವರು ಮನವಿ ಮಾಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪರಿಷ್ಕರಣೆ ಮಾಡುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಆದರೂ ಸಹ ಈ ಪರಿಷ್ಕರಣೆ ಯಾವ ಮಟ್ಟದಲ್ಲಿ ನಡೆಯಬೇಕು ಮತ್ತು ಯಾವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾರ್ಗದರ್ಶನ ಅಥವಾ ಸೂಚನೆಗಳು ಸರ್ಕಾರದಿಂದ ಇನ್ನು ಹೊರಬಿದ್ದಿಲ್ಲ.

Advertisement

'ಗೊಂದಲಕ್ಕೆ ಒಳಗಾಗಬೇಡಿ'

'ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಎಪಿಎಲ್, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ಹಾಕಲಾಗುತ್ತಿದೆ. ಯೋಜನೆ ಆರಂಭ ಆದಾಗಿನಿಂದ ಈವರೆಗೆ ಒಟ್ಟು 30 ಕಂತುಗಳಲ್ಲಿ ಹಣವನ್ನು ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಯಶಸ್ವಿಯಾಗಿ ಜಮೆ ಮಾಡಲಾಗಿದೆ. ಪ್ರಸ್ತುತ ಯಾವುದೇ ಅಡಚಣೆಯಿಲ್ಲದೆ ಹಣ ಪಾವತಿಯಾಗುತ್ತಿದ್ದು, ಇ-ಕೆವೈಸಿ ನೆಪದಲ್ಲಿ ಸಾರ್ವಜನಿಕರು ಗೊಂದಲಕ್ಕೀಡಾಗಬಾರದು,' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಮಹತ್ವಾಕಾಂಕ್ಷಿ ಯೋಜನೆ ರಾಜ್ಯದ ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಯಲ್ಲಿ ಇದೆ. ಈ ಯೋಜನೆಯಡಿ ಅರ್ಹ ಕುಟುಂಬದ ಮಹಿಳಾ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ನೇರವಾಗಿ ಡಿಬಿಟಿ ಮೂಲಕ ಜಮಾ ಮಾಡಲಾಗುತ್ತದೆ. ಯೋಜನೆಯಿಂದ ಅದೆಷ್ಟೋ ಮಹಿಳೆಯರು ಕುಟುಂಬದ ದೈನಂದಿನ ಖರ್ಚು, ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚ ಸೇರಿದಂತೆ ಇನ್ನಿತರೆ ಮನೆ ಖರ್ಚು ನಿರ್ವಹಿಸಲು ನೆರವು ಪಡೆಯುತ್ತಿದ್ದಾರೆ.

Advertisement

ಈ ಯೋಜನೆಗೆ ಯಾರೆಲ್ಲಾ ಅರ್ಹರು?

* ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
* ರೇಷನ್ ಕಾರ್ಡ್‌ನಲ್ಲಿ ಮಹಿಳೆ ಕುಟುಂಬದ ಮುಖ್ಯಸ್ಥೆ ಆಗಿರಬೇಕು.
* ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು.
* ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರು ಯೋಜನೆಗೆ ಅರ್ಹರಲ್ಲ.

ಹಣ ಜಮಾ ಆಗಿದೆಯೇ ಎಂದು ಪರಿಶೀಲಿಸುವುದೇಗೆ?

* DBT ಕರ್ನಾಟಕ ಆಪ್
* ಸೇವಾ ಸಿಂಧು ಪೋರ್ಟಲ್
* ಬ್ಯಾಂಕ್ ಪಾಸ್‌ಬುಕ್ ಅಥವಾ ಸ್ಟೇಟ್‌ಮೆಂಟ್‌
* ಬ್ಯಾಂಕ್‌ನಿಂದ ಬರುವ ಎಸ್‌ಎಂಎಸ್‌ ಮೂಲಕ ಹಣ ಜಮೆಯಾದ ಮಾಹಿತಿ ತಿಳಿದುಕೊಳ್ಳಬಹುದು.

ಹಣ ಜಮೆಯಾಗದಿದ್ದರೆ ಏನು ಮಾಡಬೇಕು?

* ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಿ.
* e-KYC ಪೂರ್ಣಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಿ.
* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರದಲ್ಲಿ ಪಾವತಿ ಸ್ಥಿತಿಯನ್ನು ಪರಿಶೀಲಿಸಬಹುದು.

English Summary

Karnataka government has clarified that Gruhalakshmi Scheme beneficiaries do not need mandatory e-KYC to continue receiving ₹2,000 monthly assistance. Officials have urged the public to ignore social media rumours and avoid unnecessary visits to cyber centres.