158 ವರ್ಷಗಳ ಬಳಿಕ ಅರುಣಾಚಲ ಪ್ರದೇಶದಲ್ಲಿ ಪ್ರತ್ಯಕ್ಷವಾಯ್ತು ಈ ಅಪರೂಪದ ಹೂವು


ಹಿಮಾಲಯ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಹಿಮ ಅಥವಾ ಮಂಜು ತುಂಬಿರುವ ಎತ್ತರದ ಗಿರಿ ಶಿಖರಗಳು. ಆದರೆ ಹಿಮಾಲಯ ಇದಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ಅಲ್ಲಿ ಅನೇಕ ವಿಸ್ಮಯಕಾರಿ, ಅಪರೂಪದ ಗಿಡಮೂಲಿಕೆಗಳು ಹಾಗೂ ಜೀವಸಂಕುಲಗಳಿಗೆ ಹಿಮಾಲಯದ ತಪ್ಪಲು ಶತಮಾನಗಳಿಂದ ಆಶ್ರಯ ನೀಡುತ್ತಿದೆ. ಆಗೊಮ್ಮೆ ಇಗೊಮ್ಮೆ ಈ ಪ್ರಕೃತಿಯ ಮಡಿಲಲ್ಲಿ ಅಡಗಿರುವ ಕೆಲವೊಂದು ರಹಸ್ಯಗಳು ಜಗತ್ತಿನೆದುರು ಹೊರಬರುತ್ತಲೇ ಇರುತ್ತವೆ. ಇದೀಗ ಇಂತಹದ್ದೇ ಒಂದು ಕುತೂಹಲ ಮೂಡಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ. ಸುಮಾರು ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲ ಕಣ್ಮರೆಯಾಗಿದ್ದ, ಅತಿ ಅಪರೂಪದ ನೇರಳೆ ಬಣ್ಣದ ಹೂವಿನ ಸಸ್ಯವೊಂದು ಈಗ ಮತ್ತೆ ಹಿಮಾಲಯದಲ್ಲಿ ಕಂಡು ಬಂದಿದೆ.

Advertisement

ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ವಿಜ್ಞಾನಿಗಳ ತಂಡವೊಂದು 'ಸಯಾನಾಂಥಸ್ ಹೂಕೆರಿ'ಎಂಬ ಹೆಸರಿನ ಈ ಅಪರೂಪದ ಗಿಡವನ್ನು ಪತ್ತೆಹಚ್ಚಿದ್ದಾರೆ. ಈ ಸಸ್ಯವು 158 ವರ್ಷಗಳ ನಂತರ ಭಾರತದಲ್ಲಿ ಮತ್ತೆ ಕಾಣಿಸಿಕೊಂಡಿರುವುದು ಅತ್ಯಂತ ವಿಶೇಷ. ಪೂರ್ವ ಹಿಮಾಲಯದ ಸುಮಾರು 3,600 ಮೀಟರ್ ಎತ್ತರದ ತುಂಬಾ ಚಳಿಯಿರುವ ಹವಾಮಾನವಿರುವ ಪ್ರದೇಶದಲ್ಲಿ ಈ ಆಕರ್ಷಕ ನೇರಳೆ ಬಣ್ಣದ ಹೂವಿನ ಗಿಡಗಳು ಪತ್ತೆಯಾಗಿವೆ. ಇದು ಹಿಮಾಲಯದಲ್ಲಿರುವ ಅಪಾರ ಜೀವವೈವಿಧ್ಯತೆಯನ್ನ ಮತ್ತೊಮ್ಮೆ ಜಗತ್ತಿನ ಎದುರು ತೆರೆದಿಟ್ಟಿದೆ.

Advertisement

158 ವರ್ಷಗಳ ಇತಿಹಾಸ ಇರುವ ಸಯಾನಾಂಥಸ್ ಹೂಕೆರಿ

ಈ ಸಸ್ಯದ ಇತಿಹಾಸವನ್ನ ಒಂದು ಚುರು ತಿಳಿಯಬೇಕೆಂದರೆ ಬಹಳ ಹಿಂದಿನ ದಿನಗಳಿಗೆ ಹೋಗಬೇಕಾಗುತ್ತದೆ. 1867ರಲ್ಲಿ ಸರ್ ಜೋಸೆಫ್ ಡಾಲ್ಟನ್ ಹೂಕರ್ ಎಂಬ ಖ್ಯಾತ ಸಸ್ಯವಿಜ್ಞಾನಿ ಮೊಟ್ಟಮೊದಲ ಬಾರಿಗೆ ಸಿಕ್ಕಿಂ ರಾಜ್ಯದಲ್ಲಿ ಈ ಗಿಡವನ್ನು ನೋಡಿ ಈ ಗಿಡದ ಬಗ್ಗೆ ದಾಖಲಿಸಿ ಇಟ್ಟದ್ದರು. ಅವರು ನೀಡಿರು ಮಹತ್ವದ ಕೊಡುಗೆಯ ಸ್ಮರಣಾರ್ಥವಾಗಿ ಈ ಸಸ್ಯಕ್ಕೆ 'ಹೂಕೆರಿ' ಎಂದು ಹೆಸರಿಡಲಾಯಿತು. ಅದನಂತರ, ಅಂದರೆ 1867ರ ಬಳಿಕ, ಈ ಗಿಡ ಭಾರತದ ಯಾವುದೇ ಭಾಗದಲ್ಲಿಯೂ ಅಧಿಕೃತವಾಗಿ ಕಂಡುಬಂದಿರಲಿಲ್ಲ. ಹವಮಾನ ಮತ್ತು ಪ್ರಕೃತಿಯಲ್ಲಾಗುವ ಬದಲಾವಣೆಯಿಂದಾಗಿ ಈ ಗಿಡ ಸಂಪೂರ್ಣವಾಗಿ ಅಳಿದುಹೋಗಿದೆ ಎಂದೇ ತಜ್ಞರು ಅಂದುಕೊಂಡಿದ್ದರು. ಆದರೆ, ಈ ಸಸ್ಯ ಪ್ರಭೇದವು ಈಗ ಮತ್ತೆ ತವಾಂಗ್‌ನ ಬೆಟ್ಟಗಳಲ್ಲಿ ಇನ್ನೂ ಜೀವಂತಾವಾಗಿದೆ ಎನ್ನುವುದು ಪರಿಸರ ವಿಜ್ಞಾನಿಗಳಿಗೆ ಒಂದು ರೀತಿ ಸಂತಸವಾಗಿದೆ.

Advertisement

ಭಾರತದಲ್ಲಿ ಅಳಿವಿನಂಚಿನಲ್ಲಿರುವ ಸಸ್ಯಗಳು

ಇನ್ನೂ ಈ ಗಿಡ ಪತ್ತೆಯಾಗಿರುವುದು ಕೇವಲ ಸಂತಸದ ವಿಚಾರವಷ್ಟೇ ಅಲ್ಲ, ಇದರ ಉಳಿವಿನ ಬಗ್ಗೆ ಕೂಡ ಗಂಭೀರ ಕಳವಳ ವ್ಯಕ್ತವಾಗಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಪ್ರಸ್ತುತ ಭಾರತದ ಹಿಮಾಲಯ ಪ್ರದೇಶಗಳಲ್ಲಿ ಕೇವಲ 50ಕ್ಕಿಂತಲೂ ಕಡಿಮೆ ಪ್ರಬುದ್ಧ ಸಸ್ಯಗಳು ಮಾತ್ರ ಉಳಿದುಕೊಂಡಿವೆ ಎಂದು ಅಂದಾಜಿಸಲಾಗಿದೆ. ಈ ಸಯಾನಾಂಥಸ್ ಹೂಕೆರಿ ಗಿಡಗಳು ಅತ್ಯಂತ ಸೂಕ್ಷ್ಮ ಹವಾಮಾನದಲ್ಲಿ ಮತ್ತು ನಿರ್ದಿಷ್ಟ ಪರಿಸರದಲ್ಲಿ ಮಾತ್ರ ಬೆಳೆಯಬಲ್ಲವು. ಹಾಗಾಗಿ, ಈ ಅಪರೂಪದ ಸಸ್ಯವನ್ನು ಐಯುಸಿಎನ್ ಮಾನದಂಡಗಳ ಅಡಿಯಲ್ಲಿ 'ಅಳಿವಿನಂಚಿನಲ್ಲಿರುವ ಸಸ್ಯ'ಎಂದು ಪರಿಗಣಿಸಲು ಈಗಾಗಲೇ ಶಿಫಾರಸು ಮಾಡಲಾಗಿದೆ.

ನೈಸರ್ಗಿಕ ಆವಾಸಸ್ಥಾನಗಳ ನಾಶ, ಹವಾಮಾನ ವೈಪರೀತ್ಯ ಹಾಗೂ ಅತೀಯಾದ ಮಾನವನ ಹಸ್ತಕ್ಷೇಪದಿಂದ ಹಿಮಾಲಯದಲ್ಲಿರುವ ಇಂತಹ ಅಪರೂಪದ ಸಸ್ಯಗಳು ಅಳಿವಿನಂಚಿಗೆ ಹೋಗಿದ್ದಾವೆ. ಸಯಾನಾಂಥಸ್ ಹೂಕೆರಿಯಂತಹ ಸಸ್ಯಗಳ ಮರುಶೋಧವು ನಮ್ಮ ಪರಿಸರದಲ್ಲಿರುವ ವಿವಿಧ ಅಪರೂಪದ ಸಸ್ಯರಾಶಿಯನ್ನ ಉಳಿಸಿಕೊಳ್ಳುವ ಜವಾಬ್ದಾರಿಯನ್ನ ಮತ್ತಷ್ಟು ಹೆಚ್ಚಿಸಿದೆ.ನಮ್ಮ ಜೊತೆ ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿ ಅಂದರೆ ಅದರಲ್ಲಿ ಸಸ್ಯವನ್ನೂ ಸೇರಿಸಿ ಎಲ್ಲವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಮುಂದಿನ ಪೀಳಿಗೆಗೆ ಇಂತಹ ನೈಸರ್ಗಿಕ ವಿಸ್ಮಯಗಳನ್ನು ಉಳಿಸಿಕೊಡಬೇಕಾದರೆ, ಕಟ್ಟುನಿಟ್ಟಾದ ಸಂರಕ್ಷಣಾ ಕ್ರಮಗಳನ್ನ ಅಗತ್ಯವಿದೆ.

English Summary

After 158 years, the rare Cyananthus hookeri plant has been rediscovered in Tawang, Arunachal Pradesh.