ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ದೇಶದಾದ್ಯಂತ ಹೊಸ ಹೊಸ ಸ್ಕೀಂಗಳನ್ನು ಪರಿಚಯಿಸುತ್ತಿದ್ದಾರೆ. ಆದರೆ ಕೇಂದ್ರ ಸಚಿವರ ಹೊಸ ಯೋಜನೆಗಳು ಟ್ರೋಲ್ ಹಾಗೂ ಚರ್ಚೆಗೆ ಗುರಿಯಾಗುತ್ತಿದೆ. ಪೆಟ್ರೋಲ್ನೊಂದಿಗೆ ಶೇ.20ರಷ್ಟು ಎಥನಾಲ್ ಮಿಶ್ರಣ ಮಾಡುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ರೀತಿ ಇರುವಾಗಲೇ ಭಾರತದಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸದೊಂದು ಯೋಜನೆ ಪರಿಚಯಿಸುವುದಾಗಿ ಹೇಳಿದ್ದಾರೆ. ಆದರೆ ನಿತಿನ್ ಗಡ್ಕರಿ ಅವರ ಹೊಸ ಯೋಜನೆ ಟ್ರೋಲ್ಗೆ ಗುರಿಯಾಗಿದೆ. ಭಾರತೀಯರಿಗೆ ಮತ್ತೊಂದು ಗುಡ್ನ್ಯೂಸ್ ಕೊಡ್ತೀನಿ ಅಂತ ನಿತಿನ್ ಗಡ್ಕರಿ ಅವರು ಹೇಳಿದ್ರೆ, ಅಣ್ಣ ನಮ್ಮನ್ನ ಬಿಟ್ಬಿಡಿ ಪ್ಲೀಸ್ ಅಂತ ಜನ ಹೇಳ್ತಿದ್ದಾರೆ!
ಭಾರತದ ಪ್ರಮುಖ ನಗರಗಳಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಮಡುವ ಉದ್ದೇಶದಿಂದ ದೇಶದಲ್ಲಿ "ಹಾರುವ ಬಸ್ಗಳು" (ಏರಿಯಲ್ ಪಾಡ್/ಇವಿಟಿಒಎಲ್ ವ್ಯವಸ್ಥೆಗಳು) ತಮ್ಮ ಮುಂದಿನ ದೊಡ್ಡ ಯೋಜನೆ ಎಂದು ಅವರು ಘೋಷಿಸಿದ್ದಾರೆ. ಮುಂದುವರಿದು ಭವಿಷ್ಯದ ವೈಮಾನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಈ ಹಿಂದೆ ಜಾರಿಗೆ ತರಲಾಗಿದ್ದ ಸೀಪ್ಲೇನ್ ಹಾಗೂ ಆಧುನಿಕ ರೋಪ್ವೇ ಯೋಜನೆಗಳಂತೆಯೇ ಮಹತ್ವದ ಯೋಜನೆಗಳ ಮಾದರಿಯಲ್ಲಿ ಇರಲಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
ಜುಲೈ 14 ರಂದು ಲಕ್ನೋ-ಕಾನ್ಪುರ್ ಎಕ್ಸ್ಪ್ರೆಸ್ವೇಯ ಉದ್ಘಾಟನೆಯಲ್ಲಿ ಮಾತನಾಡಿರುವ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಮುಂದಿನ ಬೃಹತ್ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಈ ಯೋಜನೆಯ ಬಗ್ಗೆ ಅವರು ಈ ಹಿಂದೆ ಬಿಹಾರ ವಿಧಾನಸಭೆ ಚುನಾವಣೆಯ ಸಮಯದಲ್ಲಿಯೂ ಮಾತನಾಡಿದ್ದರು. ಇದೀಗ ದೇಶದಲ್ಲಿ ಪೆಟ್ರೋಲ್ನಲ್ಲಿ ಶೇ.20 ಎಥನಾಲ್ ಮಿಶ್ರಣ ಮಾಡುತ್ತಿರುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ರೀತಿ ಇರುವಾಗಲೇ ನಿತಿನ್ ಗಡ್ಕರಿ ಅವರು ಹೊಸ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾರೆ. E20 ಕುರಿತ ಪ್ರಶ್ನೆಗಳು ಮತ್ತು ಗೊಂದಲಗಳ ನಡುವೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಭಾರತದ ನಗರ ಸಂಚಾರ ದಟ್ಟಣೆಯನ್ನು ನಿಭಾಯಿಸಲು ತಮ್ಮ ಮುಂದಿನ ದೊಡ್ಡ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಇದೇ "ಹಾರುವ ಬಸ್ಗಳು"! ಹೊಸ ಯೋಜನೆಯ ಬಗ್ಗೆ ಮಾತನಾಡಿರುವ ನಿತಿನ್ ಗಡ್ಕರಿ ಅವರು, ಇದು ತಮ್ಮ ಮುಂದಿನ ಮಹತ್ವದ ಯೋಜನೆ ಎಂದಿದ್ದಾರೆ. ವೈಮಾನಿಕ ಪಾಡ್ ಅಥವಾ ಇವಿಟಿಒಎಲ್ ಆಧಾರಿತ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಸುವ ಗುರಿಯನ್ನು ನಾವು ಹಾಕಿಕೊಂಡಿದ್ದೇವೆ ಎಂದಿದ್ದಾರೆ. ಆದರೆ ಈ ಯೋಜನೆ ಯಾವಾಗಿನಿಂದ ಜಾರಿಯಾಗಲಿದೆ ಇದನ್ನು ತಾಂತ್ರಿಕವಾಗಿ ಹೇಗೆ ನಿಭಾಯಿಸಲಾಗುತ್ತದೆ. ಅಲ್ಲದೆ ಯಾವ ನಗರದಿಂದ ಇದನ್ನು ಪ್ರಾರಂಭಿಸುವ ಚಿಂತನೆ ಇದೆ ಎನ್ನುವುದು ಸೇರಿದಂತೆ ಯಾವುದೇ ಅಂಶದ ಬಗ್ಗೆ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ಹಂಚಿಕೊಂಡಿಲ್ಲ. ದೇಶದಲ್ಲಿ ಹಲವು ವರ್ಷಗಳಿಂದ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗಿದೆ. ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುವ ಉದ್ದೇಶದಿಂದ ಹಾಗೂ ಭವಿಷ್ಯದ ಸಾಮೂಹಿಕ ಕ್ಷಿಪ್ರ ವಿದ್ಯುತ್ ಸಾರಿಗೆಗಾಗಿ ವ್ಯವಸ್ಥೆ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.