ಈರುಳ್ಳಿ ಸಿಪ್ಪೆಯನ್ನು ಈ ರೀತಿ ಬಳಸಿದರೆ ತರಕಾರಿ ಬೆಳೆಗಳಿಗೆ ಇದಕ್ಕಿಂತ ಬೆಸ್ಟ್‌ ಗೊಬ್ಬರವಿಲ್ಲ!


ಈಗ ಬಹಳಷ್ಟು ಮನೆಗಳಲ್ಲಿ ಟೆರೇಸ್‌ ಗಾರ್ಡನ್‌ ಅನ್ನು ನೋಡಬಹುದು. ಅಲ್ಲದೆ, ಅನೇಕರು ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಯುತ್ತಾರೆ. ಬಾಲ್ಕನಿ, ಟೆರೇಸ್ ಅಥವಾ ಹಿತ್ತಲಿನಲ್ಲಿ ತರಕಾರಿಗಳನ್ನು ಬೆಳೆಯುವುದನ್ನು ಬಹಳಷ್ಟು ಮಂದಿ ಇಷ್ಟಪಡುತ್ತಾರೆ. ಹೀಗೆ ಮನೆಯಲ್ಲಿಯೇ ಸಣ್ಣದಾಗಿ ತರಕಾರಿಗಳನ್ನು ಬೆಳೆಯುವವರು ಇಳುವರಿ ಚೆನ್ನಾಗಿ ಆಗಲಿ ಎನ್ನುವ ಉದ್ಧೇಶದಿಂದ ರಸಗೊಬ್ಬರಗಳ ಮೇಲೆ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಇದರ ಬದಲು ಈರುಳ್ಳಿ ಸಿಪ್ಪೆಗಳನ್ನು ಬಳಸಿಯೇ ಪೋಷಕಾಂಶ-ಭರಿತ ದ್ರವ ಗೊಬ್ಬರವನ್ನು ಗಿಡಗಳಿಗೆ ಬಳಸಬಹುದು.

Advertisement

ಈರುಳ್ಳಿ ಸಿಪ್ಪೆಯನ್ನು ಬಳಸಿ ತಯಾರಿಸುವ ಈ ಗೊಬ್ಬರದಲ್ಲಿ ಗಿಡಗಳ ಪೋಷಣೆಗೆ ಅವಶ್ಯಕವಾಗಿರುವ ಖನಿಜಾಂಶಗಳು ಇರುತ್ತವೆ. ಇದು ಬೇರುಗಳನ್ನು ಬಲಪಡಿಸುವ ಜೊತೆಗೆ ಕೆಲವು ಕೀಟಗಳನ್ನು ಕೂಡಾ ತೋಟದಿಂದ ದೂರವಿಡಲು ಸಹಾಯ ಮಾಡುತ್ತದೆ.

Advertisement

ಸಸ್ಯಗಳಿಗೆ ಈರುಳ್ಳಿ ಸಿಪ್ಪೆಯ ಉಪಯೋಗ:

ಒಣ ಈರುಳ್ಳಿ ಸಿಪ್ಪೆಗಳು ಆರೋಗ್ಯಕರ ಸಸ್ಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಸಸ್ಯಗಳಿಗೆ ಅಗತ್ಯವಿರುವ ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಈರುಳ್ಳಿಯಲ್ಲಿರುವ ಪೋಷಕಾಂಶಗಳೆಂದರೆ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು
ರಂಜಕ.

ಈ ಖನಿಜಗಳು ಮಣ್ಣಿನ ಗುಣಮಟ್ಟವನ್ನು ಸುಧಾರಿಸುತ್ತವೆ. ಗಿಡವನ್ನು ಬೇರಿನಿಂದಲೇ ಗಟ್ಟಿ ಮಙಡುತ್ತದೆ. ಹೀಗಾದಾಗ ಸಸ್ಯಗಳು ಪೋಷಕಾಂಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಸಹಾಯವಾಗುತ್ತದೆ. ಆರೋಗ್ಯಕರ ಬೇರುಗಳು ಹೆಚ್ಚಾಗಿ ಹಸಿರು ಎಲೆಗಳು, ಉತ್ತಮ ಹೂ ಬಿಡುವುದು ಮತ್ತು ಸುಧಾರಿತ ತರಕಾರಿ ಇಳುವರಿಗೆ ಕಾರಣವಾಗುತ್ತವೆ.

ಸೌತೆಕಾಯಿ ಕಹಿಯಾಗಿದೆ ಎನ್ನುವುದನ್ನು ಗುರತಿಸುವುದು ಹೇಗೆ? ಇಲ್ಲಿದೆ ಸುಲಭ ಉಪಾಯ
Advertisement

ಈರುಳ್ಳಿ ಸಿಪ್ಪೆಯ ದ್ರವ ಗೊಬ್ಬರ ತಯಾರಿಸುವುದು ಹೇಗೆ?:

ಈ ನೈಸರ್ಗಿಕ ಗೊಬ್ಬರವನ್ನು ತಯಾರಿಸುವ ವಿಧಾನ ಬಹಳ ಸುಲಭ. ಇಲ್ಲಿ ನಿಮಗೆ ಅಗತ್ಯವಾಗಿ ಬೇಕಾಗಿರುವುದು.

ಒಣಗಿದ ಈರುಳ್ಳಿ ಸಿಪ್ಪೆಗಳು

ಪ್ಲಾಸ್ಟಿಕ್ ಬಕೆಟ್ ಅಥವಾ ದೊಡ್ಡ ಪಾತ್ರೆ ನೀರು

ಗೊಬ್ಬರ ತಯಾರಿಸುವ ವಿಧಾನ:

* ಕೆಲವು ದಿನಗಳ ಕಾಲ ಒಣಗಿದ ಈರುಳ್ಳಿ ಸಿಪ್ಪೆಗಳನ್ನು ಸಂಗ್ರಹಿಸಿಟ್ಟುಕೊಳ್ಳಿ.

* ಅವುಗಳನ್ನು ಬಕೆಟ್ ಅಥವಾ ಪಾತ್ರೆಯಲ್ಲಿ ಹಾಕಿಡಿ.

* ಸಿಪ್ಪೆಗಳು ಸಂಪೂರ್ಣವಾಗಿ ಮುಳುಗುವಷ್ಟು ನೀರು ಸೇರಿಸಿ.

* ಪಾತ್ರೆಯನ್ನು ಮುಚ್ಚಿ ಎರಡು ದಿನಗಳ ಕಾಲ ನೆರಳಿನಲ್ಲಿ ಇರಿಸಿ.

* ಸಿಪ್ಪೆಗಳು ನೆನೆಯುತ್ತಿದ್ದಂತೆ, ಅವುಗಳ ಪೋಷಕಾಂಶಗಳು ಕ್ರಮೇಣ ನೀರಿನಲ್ಲಿ ಕರಗುತ್ತವೆ. ಎರಡು ದಿನಗಳ ನಂತರ, ದ್ರವವು ಕೆಂಪು-ಕಂದು ಅಥವಾ ಗಾಢ ಹಳದಿ ಬಣ್ಣಕ್ಕೆ ತಿರುಗಬಹುದು. ಇಷ್ಟಾದರೆ ಈ ಗೊಬ್ಬರ ಬಳಸಲು ಸಿದ್ಧವಾಗಿದೆ ಎಂದು ಸೂಚಿಸುತ್ತದೆ.

Advertisement

* ಬಳಸುವ ಮೊದಲು ದ್ರವವನ್ನು ಸೋಸಿ. ಇಲ್ಲಿ ಮಿಶ್ರಣವನ್ನು ಉತ್ತಮವಾದ ಜರಡಿ ಅಥವಾ ಮಸ್ಲಿನ್ ಬಟ್ಟೆಯಿಂದ ಸೋಸುವುದನ್ನು ಮರೆಯಬೇಡಿ.

* ಈ ಫಿಲ್ಟರ್ ಮಾಡಿದ ದ್ರವವು ಯಾವುದೇ ರಾಸಾಯನಿಕವಿಲ್ಲದೆ ಮನೆಯಲ್ಲಿ ತಯಾರಿಸಿದ ಗೊಬ್ಬರವಾಗಿದೆ.

ಮಳೆಗಾಲಕ್ಕೆ ಮನೆ ಮದ್ದು, ಆರೋಗ್ಯ ಜೋಪಾನ, ಇರಲಿ ಎಚ್ಚರ

ಈ ದ್ರವವನ್ನು ನೇರವಾಗಿ ಗಿಡಗಳ ಮೇಲೆ ಬಳಸುವಂತಿಲ್ಲ:

ಹೀಗೆ ತಯಾರಿಸಿಕೊಂಡಿರುವ ದ್ರಾವಣವನ್ನು ನೇರವಾಗಿ ಸಸ್ಯಗಳ ಮೇಲೆ ಸುರಿಯಬಾರದು. ಬಳಸುವುದಕ್ಕೆ ಮುನ್ನ ಒಂದು ಭಾಗ ಈರುಳ್ಳಿ ಸಿಪ್ಪೆಯ ಸಾರವನ್ನು ಒಂದರಿಂದ ಎರಡು ಭಾಗ ಶುದ್ಧ ನೀರಿನೊಂದಿಗೆ ಸೇರಿ ತೆಳು ಮಾಡಿಕೊಳ್ಳಿ. ಇದು ಅತಿಯಾದ ಸಾಂದ್ರತೆಯನ್ನು ತಡೆಯುವ ಮೂಲಕ ಸಸ್ಯಗಳು ಪೋಷಕಾಂಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ.

Advertisement

ಸ್ಸಯಗಳ ಮೇಲೆ ಬಳಸುವುದು ಹೇಗೆ?:

ತೆಳು ಮಾಡಿದ ದ್ರಾವಣವನ್ನು ಸಸ್ಯದ ಬುಡದ ಸುತ್ತಲೂ, ಬೇರುಗಳ ಹತ್ತಿರ ಸುರಿಯಿರಿ. ಇದು ಕೆಲವೊಂದು ತರಕಾರಿ ಗಿಡಗಳ ಮೇಲೆ ಚೆನ್ನಾಗಿ ಕೆಲಸ ಮಾಡುತ್ತದೆ. ಟೊಮ್ಯಾಟೋ, ಮೆಣಸಿನಕಾಯಿ, ಬದನೆಕಾಯಿ, ಕೊತ್ತಂಬರಿ ಸೊಪ್ಪು,ಪುದೀನ ಈ ಗಿಡಗಳ ಮೇಲೆ ಈರುಳ್ಳಿ ಸಿಪ್ಪೆಯ ಗೊಬ್ಬರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಪ್ರತಿ 10 ರಿಂದ 15 ದಿನಗಳಿಗೊಮ್ಮೆ ಈ ರೀತಿ ಮಾಡಿದರೆ ಸಾಕಾಗುತ್ತದೆ.

ಕೀಟಗಳನ್ನು ದೂರವಿಡಲು ನೈಸರ್ಗಿಕ ಮಾರ್ಗ:

ಈರುಳ್ಳಿ ಸಿಪ್ಪೆಯ ನೀರು ಕೇವಲ ಗೊಬ್ಬರವಲ್ಲ, ಇದು ಕೆಲವು ಸಾಮಾನ್ಯ ತೋಟದ ಕೀಟಗಳ ಬಾಧೆಯಿಂದಲೂ ಪರಿಹಾರ ನೀಡುತ್ತದೆ. ಈರುಳ್ಳಿಯಲ್ಲಿ ಕಂಡುಬರುವ ನೈಸರ್ಗಿಕ ಸಲ್ಫರ್ ಸಂಯುಕ್ತಗಳು ಕೆಲವು ಕೀಟಗಳು ಮತ್ತು ಶಿಲೀಂಧ್ರಗಳನ್ನು ನಾಶ ಮಾಡುತ್ತದೆ. ಹೆಚ್ಚುವರಿ ಸಸ್ಯ ರಕ್ಷಣೆಗಾಗಿ ದುರ್ಬಲಗೊಳಿಸಿದ ದ್ರಾವಣವನ್ನು ಸ್ಪ್ರೇ ಬಾಟಲಿಗೆ ಸುರಿಯಿರಿ ಮತ್ತು ವಾರಕ್ಕೊಮ್ಮೆ ಎಲೆಗಳು ಮತ್ತು ಕಾಂಡಗಳ ಮೇಲೆ ಲಘುವಾಗಿ ಸಿಂಪಡಿಸಿ.

Advertisement

ಅಡುಗೆಮನೆಯ ತ್ಯಾಜ್ಯವನ್ನು ಮರುಬಳಕೆ ಮಾಡುವ ಸರಳ ಮಾರ್ಗ:

ಈರುಳ್ಳಿ ಸಿಪ್ಪೆಗಳನ್ನು ಕಸದ ಬುಟ್ಟಿಗೆ ಎಸೆಯುವ ಬದಲು, ತೋಟಕ್ಕೆ ಅವುಗಳನ್ನು ಬಳಸಬಹುದು. ಈ ಸರಳ ನೈಸರ್ಗಿಕ ಗೊಬ್ಬರವು ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆರೋಗ್ಯಕರ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಮತ್ತು ಕೀಟಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಈ ಗೊಬ್ಬರ ತಯಾರಿಸಲು ಒಂದೇ ಒಂದು ಪೈಸೆ ಹೆಚ್ಚು ಖರ್ಚಾಗುವುದಿಲ್ಲ.

(ಬರಹ: ರಂಜಿತಾ ಆರ್.ಕೆ.)

English Summary

Onion Peel: Turn onion peel into natural fertilizer for your garden. Onion Peels Contain nutrients that support healthy plant growth.