ಮಳೆಗಾಲ ಎಂದರೆ ತಂಪಾದ ಹವಾಮಾನ ಮತ್ತು ಹಚ್ಚ ಹಸಿರಿನ ವಾತಾವರಣ. ಮನೆಯಲ್ಲಿಯೇ ತೋಟಗಾರಿಕೆ ಮಾಡಲು ಇದು ಸೂಕ್ತವಾದ ಸಮಯ. ತೋಟಗಾರಿಕೆಗೆ ಅಗತ್ಯವಿರುವ ತೇವಾಂಶವುಳ್ಳ ಮಣ್ಣು ಮತ್ತು ಮಧ್ಯಮ ತಾಪಮಾನದಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯಲು ಈ ಋತು ಅವಕಾಶ ಮಾಡಿಕೊಡುತ್ತದೆ. ಹಿತ್ತಲು, ಟೆರೇಸ್ ಅಥವಾ ನಿಮ್ಮ ಬಾಲ್ಕನಿಯಲ್ಲಿ ಪಾಟ್ನಲ್ಲಿಯೂ ಈ ತರಕಾರಿಗಳನ್ನು ಮಳೆಗಾಲದಲ್ಲಿ ಆರಾಮಾಗಿ ಬೆಳೆಯಬಹುದು. ಈ ಮೂಲಕ ತಾಜಾ ಮತ್ತು ಕೆಮಿಕಲ್ ರಹಿತ ತರಕಾರಿಗಳ ಸೇವನೆಗೂ ಅವಕಾಶ ಸಿಗುವುದು.
ಮಾನ್ಸೂನ್ನಲ್ಲಿ ಮನೆಯಲ್ಲಿಯೇ ಬೆಳೆಯಬಹುದಾದ ಏಳು ತರಕಾರಿಗಳು:
ಪಾಲಕ್ ಸೊಪ್ಪು: ಮಳೆಗಾಲದಲ್ಲಿ ಬೆಳೆಯಬಹುದಾದ ಸುಲಭವಾದ ಎಲೆ ತರಕಾರಿಗಳಲ್ಲಿ ಪಾಲಕ್ ಕೂಡಾ ಒಂದು. ನಿಯಮಿತ ತೇವಾಂಶ ಮತ್ತು ಸೌಮ್ಯ ತಾಪಮಾನದ ಸಂಯೋಜನೆಯು ಇದರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಮಳೆಗಾಲದಲ್ಲಿ ಬಹಳ ಬೇಗನೆ ಬೆಳೆಯುವುದಲ್ಲದೆ, ಆರೋಗ್ಯಕರ ಎಲೆಗಳನ್ನು ಕೂಡಾ ಬಿಡುತ್ತದೆ. ಇದರ ಬೀಜಗಳನ್ನು ಮಣ್ಣಿನಲ್ಲಿ ಬಿತ್ತಿದ ನಾಲ್ಕರಿಂದ ಆರು ವಾರಗಳಲ್ಲಿ ಎಲೆಗಳನ್ನು ಅಡುಗೆಗೆ ಬಳಸಬಹುದು.
ಬೆಂಡೆಕಾಯಿ: ಬೆಂಡೆಕಾಯಿ ಬೆಚ್ಚಗಿನ ಮತ್ತು ಆರ್ದ್ರ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದು ಮಳೆಗಾಲದಲ್ಲಿ ವೇಗವಾಗಿ ಬೆಳೆಯುತ್ತದೆ. ಆದರೆ ನೆನಪಿರಲಿ, ಇದರ ಬೇರುಗಳ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದನ್ನು ಪಾಟ್ನಲ್ಲಿ ನೆಟ್ಟರೆ ಹೆಚ್ಚುವರಿ ನೀರು ಹರಿದು ಹೋಗುವುದಕ್ಕೆ ಅವಕಾಶ ಇದೆಯೇ ಎನ್ನುವುದರ ಬಗ್ಗೆ ಗಮನ ಇರಬೇಕು. ಸೋರೆಕಾಯಿ: ಸೋರೆಕಾಯಿ ಮಳೆಗಾಲದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಇದರ ಬಳ್ಳಿಗೆ ಗಟ್ಟಿಮುಟ್ಟಾದ ಆಧಾರವನ್ನು ನೀಡಿದರೆ, ಹಲವಾರು ವಾರಗಳವರೆಗೆ ಸಾಕಷ್ಟು ಕಾಯಿಯನ್ನು ಬಿಡುತ್ತದೆ. ಮಳೆಗಾಲದಲ್ಲಿ ಇದಕ್ಕೆ ನಿಯಮಿತವಾಗಿ ನೀರುಹಾಕುವ ಅಗತ್ಯವೂ ಇರುವುದಿಲ್ಲ. ಹಾಗಲಕಾಯಿ: ಹಾಗಲಕಾಯಿ ಮಾನ್ಸೂನ್ನ ಉಷ್ಣತೆ ಮತ್ತು ತೇವಾಂಶದಲ್ಲಿ ಉತ್ತಮವಾಗಿ ಬೆಳೆಯುವ ಮತ್ತೊಂದು ತರಕಾರಿ. ಮಳೆಗಾಲದಲ್ಲಿ ಇದರ ಬಳ್ಳಿಗಳು ಬೇಗನೆ ಬೆಳೆದು ಒಂದೆರಡು ತಿಂಗಳಲ್ಲಿ ಹಣ್ಣುಗಳನ್ನು ನೀಡಲು ಪ್ರಾರಂಭಿಸುತ್ತವೆ. ಹಾಗಲಕಾಯಿ ಸಣ್ಣದಾಗಿರುವಾಗಲೇ ಕೊಯ್ಲು ಮಾಡುವುದರಿಂದ ಅವುಗಳ ಪರಿಮಳವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸೌತೆಕಾಯಿ: ಸೌತೆಕಾಯಿಯನ್ನು ಮಳೆಗಾಲದಲ್ಲಿ ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣಿನಲ್ಲಿ ನೆಟ್ಟರೆ ಚೆನ್ನಾಗಿ ಬೆಳೆಯುತ್ತವೆ.ಇದರ ಬಳ್ಳಿ ಮೇಲಕ್ಕೆ ಏರುವಂತೆ ಆಧಾರ ನೀಡಿದರೆ ಹಣ್ಣುಗಳು ಸ್ವಚ್ಛವಾಗಿರುತ್ತವೆ. ಸಸ್ಯಗಳ ಸುತ್ತ ಗಾಳಿಯ ಪ್ರಸರಣವನ್ನು ಸುಧಾರಿಸುತ್ತದೆ. ನಿಯಮಿತವಾಗಿ ಕೊಯ್ಲು ಮಾಡುತ್ತಿದ್ದರೆ ಹೆಚ್ಚು ಹೆಚ್ಚು ಕಾಯಿಯನ್ನು ಬಿಡುತ್ತದೆ. ಮೂಲಂಗಿ: ತ್ವರಿತ ಸುಗ್ಗಿಯನ್ನು ಬಯಸುವ ತೋಟಗಾರರಿಗೆ ಮೂಲಂಗಿ ಅತ್ಯುತ್ತಮ ಆಯ್ಕೆಯಾಗಿದೆ. ಇದರ ಅನೇಕ ಪ್ರಭೇದಗಳು ಒಂದು ತಿಂಗಳೊಳಗೆ ಪಕ್ವವಾಗುತ್ತವೆ. ಸಡಿಲವಾದ, ಚೆನ್ನಾಗಿ ಬಸಿದು ಹೋಗುವ ಮಣ್ಣು ಬೇರುಗಳು ಸರಿಯಾಗಿ ಬೆಳೆಯಲು ಸಹಾಯ ಮಾಡುತ್ತದೆ. ಆದರೆ, ಇದನ್ನು ನೆಟ್ಟ ಜಾಗದಲ್ಲಿ ಅತಿಯಾದ ನೀರು ನಿಲ್ಲುದಂತೆ ನೋಡಿಕೊಳ್ಳಬೇಕು. ಹಸಿರು ಮೆಣಸಿನಕಾಯಿ: ಹಸಿರು ಮೆಣಸಿನಕಾಯಿ ಸಸ್ಯಗಳು ಸಾಕಷ್ಟು ಸೂರ್ಯನ ಬೆಳಕು ಮತ್ತು ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯನ್ನು ಮಾಡಿಕೊಟ್ಟಾಗ ಚೆನ್ನಾಗಿ ಬೆಳೆಯುತ್ತದೆ. ಒಮ್ಮೆ ನೆಟ್ಟ ಗಿಡ ದೀರ್ಘಕಾಲದವರೆಗೆ ಮೆಣಸಿನಕಾಯಿಗಳನ್ನು ಉತ್ಪಾದಿಸುತ್ತಲೇ ಇರುತ್ತವೆ. ಮೊದಲ ಕೆಲವು ಹೂವುಗಳನ್ನು ಕಿತ್ತುಹಾಕುವುದರಿಂದ ಬಲವಾದ ಸಸ್ಯ ಬೆಳವಣಿಗೆ ಮತ್ತು ನಂತರದ ಋತುವಿನಲ್ಲಿ ಉತ್ತಮ ಇಳುವರಿ ನೀಡಲು ಸಹಾಯ ಮಾಡುತ್ತದೆ. ಭಾರೀ ಮಳೆಯು ಕೆಲವೊಮ್ಮೆ ನೀರು ನಿಲ್ಲುವುದಕ್ಕೆ ಕಾರಣವಾಗುತ್ತದೆ. ಇದು ಬೇರುಗಳಿಗೆ ಹಾನಿ ಉಂಟು ಮಾಡುವುದರ ಜೊತೆಗೆ ಶಿಲೀಂಧ್ರ ರೋಗಗಳನ್ನು ಹರಡಬಹುದು. ನೀರಿನ ಪ್ರಮಾಣ ಸರಿಯಾಗಿ ಸಿಕ್ಕಾಗ ಸಸ್ಯಗಳು ಆರೋಗ್ಯಕರವಾಗಿ ಬೆಳೆಯುತ್ತವೆ. ಇನ್ನು ಸರಿಯಾಧ ಪ್ರಮಾಣದಲ್ಲಿ ಗೊಬ್ಬರವನ್ನು ಸೇರಿಸುವ ಮೂಲಕ ಮಣ್ಣಿನ ರಚನೆಯನ್ನು ಸುಧಾರಿಸಬಹುದು. ಮಳೆಗಾಲದಲ್ಲಿ ಹೆಚ್ಚು ಸಕ್ರಿಯವಾಗುವ ಬಸವನ, ಗೊಂಡೆಹುಳುಗಳು ಮತ್ತು ಮರಿಹುಳುಗಳಂತಹ ಕೀಟಗಳು ಬಾರದಂತೆ ನಿಯಮಿತವಾಗಿ ಎಲೆಗಳನ್ನು ಪರೀಕ್ಷಿಸುತ್ತಿರಬೇಕು. ಮಳೆಗಾಲವು ಸ್ವಾಭಾವಿಕವಾಗಿ ಸ್ಥಿರವಾದ ತೇವಾಂಶವನ್ನು ಒದಗಿಸುತ್ತದೆ. ಮಳೆಗಾಲದಲ್ಲಿ ಬೆಳೆಗಳಿಗೆ ಆಗಾಗ ನೀರುಹಾಕುವ ಅಗತ್ಯ ಇರುವುದಿಲ್ಲ. ಋತುವಿಗೆ ತಕ್ಕಂತೆ ಸೂಕ್ತವಾದ ಬೆಳೆಗಳನ್ನು ಆಯ್ಕೆ ಮಾಡುವ ಮೂಲಕ ಮಾನ್ಸೂನ್ ತಿಂಗಳುಗಳಲ್ಲಿ ತಮ್ಮ ತೋಟದಿಂದ ನೇರವಾಗಿ ತಾಜಾ, ಪೌಷ್ಟಿಕ ಉತ್ಪನ್ನಗಳನ್ನು ಆನಂದಿಸಬಹುದು. (ಬರಹ: ರಂಜಿತಾ ಆರ್.ಕೆ.)ಮಳೆಗಾಲದಲ್ಲಿ ಮಾಡುವ ಇದೊಂದು ತಪ್ಪು ಸೊಂಪಾಗಿ ಬೆಳೆದಿರುವ ತುಳಸಿ ಗಿಡ ಕೂಡಾ ಸಾಯಲು ಕಾರಣವಾಗಬಹುದು!
ಮಳೆಗಾಲಕ್ಕೆ ಮನೆ ಮದ್ದು, ಆರೋಗ್ಯ ಜೋಪಾನ, ಇರಲಿ ಎಚ್ಚರ
ಮಳೆಗಾಲದಲ್ಲಿ ತರಕಾರಿಗಳನ್ನು ಬೆಳೆಯಲು ಸಲಹೆಗಳು:
ತರಕಾರಿ ತೋಟಗಾರಿಕೆಗೆ ಮಾನ್ಸೂನ್ ಏಕೆ ಸೂಕ್ತ: