ಟಾಲಿವುಡ್‌ನಲ್ಲಿ ಕನ್ನಡಿಗನ ಹವಾ, ಹೀರೋಗಿಂತ ಈ ಮಂಡ್ಯ ಹೈದನ ಆಕ್ಟಿಂಗ್‌ ಸೂಪರ್‌ ಎಂದ ತೆಲುಗು ಮಂದಿ


ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ನಟಿಯರ ಪೈಕಿ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಆಶಿಕಾ ರಂಗನಾಥ್‌, ಶ್ರದ್ಧಾ ಶ್ರೀನಾಥ್‌ ಸೇರಿ ಹಲವರು ತೆಲುಗು ಚಿತ್ರರಂಗದಲ್ಲಿ ನೆಲೆಯೂರಿದ್ದಾರೆ. ಇನ್ನು ನಟರ ಪೈಕಿ ಡಾಲಿ ಧನಂಜಯ್‌, ವಸಿಷ್ಠ ಸಿಂಹ, ದೀಕ್ಷಿತ್‌ ಶೆಟ್ಟಿ, ದಿಗಂತ್‌ ಕೂಡ ಮೋಡಿ ಮಾಡಿದ್ದಾರೆ. ಸದ್ಯ ಕನ್ನಡದ ಮತ್ತೊಬ್ಬ ಪ್ರತಿಭಾನ್ವಿತ ನಟ ಇಡೀ ತೆಲುಗು ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅದು ಬೇರೆ ಯಾರೂ ಅಲ್ಲ, ಕನ್ನಡದ "ರತ್ನನ್‌ ಪ್ರಪಂಚ" ಸಿನಿಮಾದಲ್ಲಿ 'ಉಡಾಳ್‌ ಬಾಬು' ಪಾತ್ರ ಮಾಡಿದ್ದ ನಟ ಪ್ರಮೋದ್‌ ಪಂಜು.

Advertisement

ಸಲಾರ್‌ ಬಳಿಕ ಲೆನಿನ್‌ ಅಬ್ಬರ

ಹೌದು, ಕನ್ನಡ ಕಿರುತೆರೆಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಅಪ್ಪಟ ಮಂಡ್ಯ ಪ್ರತಿಭೆ ಪ್ರಮೋದ್‌ ಪಂಜು ಈಗ ಟಾಲಿವುಡ್‌ನಲ್ಲಿ ಆ ಒಂದು ಪಾತ್ರದಿಂದ ಹವಾ ಸೃಷ್ಟಿಸಿದ್ದಾರೆ. ಮಾಡಿದ್ದು ವಿಲನ್‌ ಪಾತ್ರವೇ ಆದರೂ, ಹೀರೋಗಿಂತ ಪ್ರಮೋದ್‌ ನಟನೆಯೇ ಸೂಪರ್‌ ಎಂದು ಜೈಕಾರ ಹಾಕುತ್ತಿದ್ದಾರೆ ತೆಲುಗು ಪ್ರೇಕ್ಷಕರು. ಸಲಾರ್‌ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದ ಪ್ರಮೋದ್‌ ಇದೀಗ "ಲೆನಿನ್‌" ಸಿನಿಮಾ ಮೂಲಕ ಅವರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.

Advertisement

ಸಾಮಾನ್ಯವಾಗಿ ಪರಭಾಷೆಗಳಲ್ಲಿ ನಟಿಸುವ ಕಲಾವಿದರಿಗೆ ಸಕ್ಸಸ್‌ ಸಿಗುವುದು ದೂರದ ಮಾತು. ಆದರೆ ಪ್ರಮೋದ್‌ ಈ ಮಾತನ್ನ ತಮ್ಮ ನಟನೆಯಿಂದ ಸುಳ್ಳು ಮಾಡಿದ್ದಾರೆ. ಇತ್ತೀಚೆಗೆ ಟಾಲಿವುಡ್‌ನ ಎವರ್‌ಗ್ರೀನ್‌ ಹೀರೋ ನಾಗಾರ್ಜುನ್‌ ಅಕ್ಕಿನೇನಿ ಪುತ್ರ ಅಖಿಲ್‌ ಅಕ್ಕಿನೇನಿ ನಟನೆಯ "ಲೆನಿನ್"‌ ಸಿನಿಮಾ ಬಿಡುಗಡೆಯಾಗಿದ್ದು, ಬ್ಲಾಕ್‌ಬಸ್ಟರ್‌ ಹಿಟ್‌ ಆಗಿದೆ. ಈ ಸಿನಿಮಾ ಒಂದೆಡೆ ಅಖಿಲ್‌ ಕೆರಿಯರ್‌ಗೆ ದೊಡ್ಡ ಅಡಿಪಾಯ ಹಾಕಿದ್ದರೆ, ನಮ್ಮ ಕನ್ನಡದ ಪ್ರಮೋದ್‌ ಪ್ರತಿಭೆಗೆ ತಕ್ಕ ವೇದಿಕೆಯೂ ಆಗಿದೆ.

ಈ ಸಿನಿಮಾದಲ್ಲಿ ಪ್ರಮೋದ್‌ ಮಾಡಿರುವುದು ವಿಲನ್‌ ಪಾತ್ರ. ಆದರೆ ಹೀರೋ ಪಾತ್ರವನ್ನೇ ಪಕ್ಕಕ್ಕಿಡುವಂತೆ ಅಭಿನಯಿಸಿದ್ದಾರೆ ಮಂಡ್ಯದ ಹೈದ. ಈ ಮಾತನ್ನ ಹೇಳ್ತಿರೋದು ನಾವಲ್ಲ, ಲೆನಿನ್‌ ಸಿನಿಮಾ ನೋಡಿ ಬಂದ ತೆಲುಗು ಪ್ರೇಕ್ಷಕರೇ ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಮೋದ್‌ಗೆ ದೊಡ್ಡ ಅಭಿಮಾನಿಗಳ ಬಳಗವೇ ಕಟ್ಟಿಬಿಟ್ಟಿದ್ದಾರೆ. ಪ್ರಮೋದ್‌ ನಟನೆಗೆ ಬೆರಗಾಗಿರುವ ಎಷ್ಟೋ ಮಂದಿ, ನಾವು ಈ ಸಿನಿಮಾದಲ್ಲಿ ಹೀರೋಗಿಂತ ವಿಲನ್‌ ಪಾತ್ರ ಮಾಡಿರುವ ಪ್ರಮೋದ್‌ ಅವರ ನಟನೆ ನೋಡಲೆಂದೇ ಎರಡೆರಡು ಬಾರಿ ಥಿಯೇಟರ್‌ಗೆ ಹೋದ್ವಿ ಎನ್ನುತ್ತಿದ್ದಾರೆ.

Advertisement

ನಾಗಾರ್ಜುನ್‌ ಕೂಡ ಫಿದಾ

ಪ್ರಮೋದ್‌ ಎಂತ ಅಭಿನಯ? ನಾನು ಸೀರೆ ಕಟ್ಟಿಕೊಂಡು ಮಾಡಿರುವ ನಟನೆ ನೋಡಿ ನಾನೇ ಬೆರಗಾದೆ. ನಾನು ಕೂಡಲೇ ಅಖಿಲ್‌ನ ಕರೆದು, ನೀನು ಹುಷಾರಾಗಿ ಇಲ್ಲದೇ ಹೋದ್ರೆ ಪ್ರಮೋದ್‌ ಮುನ್ನುಗ್ಗೋದು ಗ್ಯಾರಂಟಿ ಅಂತ ಹೇಳಿದೆ. ಅಷ್ಟರಮಟ್ಟಿಗೆ ಪ್ರಮೋದ್‌ ನಟನೆಯಲ್ಲಿ ಮುಳುಗಿದ್ದಾರೆ ಎಂದು ನಟ ನಾಗಾರ್ಜುನ್‌ ಕೂಡ ಕನ್ನಡಿಗರ ಪ್ರತಿಭೆಯನ್ನ ವೇದಿಕೆಯಲ್ಲಿ ಕೊಂಡಾಡಿದ್ದಾರೆ. ಈ ವಿಡಿಯೋ ಕೂಡ ವೈರಲ್‌ ಆಗಿದೆ.

ಕನ್ನಡದಲ್ಲಿ ಪ್ರತಿಭೆಗಳನ್ನ ಗುರುತಿಸುತ್ತಿಲ್ಲ

ಕನ್ನಡದ ಕಲಾವಿದರಿಗೆ ಪರಭಾಷೆಗಳಲ್ಲಿ ಸಿಗುತ್ತಿರುವ ಅವಕಾಶ ಸ್ವಂತ ನೆಲದಲ್ಲಿ ಸಿಗುತ್ತಿಲ್ವಾ? ಅಥವಾ ಇಂತಹ ಪ್ರತಿಭೆಗಳನ್ನ ಕನ್ನಡ ಚಿತ್ರರಂಗ ಕಳೆದುಕೊಳ್ಳುತ್ತಿದೆಯಾ? ಎಂದು ಕೆಲವರು ವಾಸ್ತವ ಬಿಚ್ಚಿಟ್ಟಿದ್ದಾರೆ. ಇದೇ ರೀತಿ ಮುಂದುವರಿದರೆ, ಕನ್ನಡದ ಪ್ರತಿಭಾನ್ವಿತರು ಪರಭಾಷೆಗಳಲ್ಲಿ ಸೆಟಲ್‌ ಆಗ್ತಾರೆ, ಕನ್ನಡ ಚಿತ್ರರಂಗವೂ ಇದರಿಂದ ಬೆಳೆಯುತ್ತೆ ಎಂದು ಕಿವಿಮಾತು ಹೇಳಿದ್ದಾರೆ.

Advertisement

ಪ್ರಮೋದ್ ಪಂಜು 'ಲಕುಮಿ' ಹಾಗೂ 'ಮಹಾದೇವಿ' ಧಾರಾವಾಹಿಗಳಲ್ಲಿ ನಟಿಸಿ, 'ಗೀತಾ ಬ್ಯಾಂಗಲ್ ಸ್ಟೋರ್' ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. 'ರತ್ನನ್ ಪ್ರಪಂಚ' ಚಿತ್ರದ 'ಉಡಾಳ್ ಬಾಬು' ಪಾತ್ರಕ್ಕಾಗಿ ಇವರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರೀಮಿಯರ್‌ ಪದ್ಮಿನಿ, ಸಲಾರ್‌ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಪ್ರಮೋದ್‌, ಹಲ್ಕಾ ಡಾನ್‌ ಸಿನಿಮಾದಲ್ಲಿಯೂ ಅಬ್ಬರಿಸಲಿದ್ದಾರೆ. ನಿಮ್ಮ ಪ್ರತಿಭೆಗೆ ಇದೇ ರೀತಿ ಅವಕಾಶ ಸಿಗಲಿ ಎಂದು ಕನ್ನಡಿಗರು ಆಲ್‌ ದಿ ಬೆಸ್ಟ್‌ ಹೇಳುತ್ತಿದ್ದಾರೆ.

English Summary

Kannada actor Pramod Panju is making waves in Tollywood. His powerful performance in Lenin has impressed Telugu audiences, with many praising him over the film's hero.