ನನಗೆ ಟೈಮ್ ಟ್ರಾವೆಲ್ ಅವಕಾಶ ಸಿಕ್ಕರೆ ಆ ದುರಂತ ತಡೀತಿದ್ದೆ: ದರ್ಶನ್ ಬಗ್ಗೆ ಕೊನೆಗೂ ಮೌನ ಮುರಿದ ನಟ ಡಾಲಿ


ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಡಾಲಿ ಧನಂಜಯ್ (Daali Dhananjay) ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಡುವೆ ಒಂದು ಕಾಲದಲ್ಲಿ ಅತ್ಯಂತ ಆತ್ಮೀಯ ಒಡನಾಟವಿತ್ತು. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆದಾಗ ಚಿತ್ರರಂಗದ ಹಲವು ಸ್ಟಾರ್‌ಗಳಂತೆ ಧನಂಜಯ್ ಕೂಡ ಯಾವುದೇ ಬಹಿರಂಗ ಹೇಳಿಕೆ ನೀಡಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಡಿ-ಬಾಸ್ ಅಭಿಮಾನಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಡಾಲಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ಕಷ್ಟದ ಸಮಯದಲ್ಲಿ ಬೆಂಬಲಕ್ಕೆ ನಿಲ್ಲದವರು ಸ್ನೇಹಿತರೇ? ಎಂದು ಗರಂ ಆಗಿದ್ದರು. ಇದೀಗ ಕೊನೆಗೂ ಡಾಲಿ ದರ್ಶನ್‌ ಅವರ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.

Advertisement

ಧನಂಜಯ್ ಅವರು ದರ್ಶನ್ ಅಭಿಮಾನಿಗಳ ಮುನಿಸಿಗೆ ಹಾಗೂ ಇಡೀ ವಿವಾದಕ್ಕೆ ಮೌನ ಮುರಿದು ಉತ್ತರ ನೀಡಿದ್ದಾರೆ. ತಮ್ಮ ಮುಂಬರುವ ಬಹುನಿರೀಕ್ಷಿತ ಸಿನಿಮಾ "ಮದರ್ ಪ್ರಾಮಿಸ್" ಪ್ರಚಾರ ಕಾರ್ಯಕ್ರಮದ ವೇಳೆ ಮಾತನಾಡಿದ ಡಾಲಿ, ದರ್ಶನ್ ಪ್ರಕರಣದ ಕುರಿತು ಉಲ್ಲೇಖಿಸಿದ್ದಾರೆ. ಇದರೊಂದಿಗೆ ನಟ ಪುನೀತ್‌ ರಾಜ್‌ಕುಮಾರ್‌ ಅವರ ಸಾವು ಕೂಡ ಚಿತ್ರರಂಗಕ್ಕೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ವಿವರಿಸಿದ್ದಾರೆ.

Advertisement

ಸ್ಯಾಂಡಲ್‌ವುಡ್‌ಗೆ ಬಿದ್ದ ಎರಡು ದೊಡ್ಡ ಪೆಟ್ಟು

ಸಂದರ್ಶನದಲ್ಲಿ ಚಿತ್ರರಂಗದ ಇಂದಿನ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಧನಂಜಯ್, ಕನ್ನಡ ಸಿನಿರಂಗ ಅನುಭವಿಸಿದ ಎರಡು ಅತಿದೊಡ್ಡ ನಷ್ಟಗಳನ್ನು ನೆನೆದಿದ್ದಾರೆ. "ದರ್ಶನ್ ಸರ್ ಜೈಲು ಸೇರಿದ್ದು ನಿಜಕ್ಕೂ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅಪ್ಪು ಸರ್ ನಿಧನ ಮತ್ತು ದರ್ಶನ್ ಸರ್ ಜೈಲಿಗೆ ಹೋಗಿದ್ದು ಇವೆರಡೂ ಕನ್ನಡ ಚಿತ್ರರಂಗಕ್ಕೆ ಬಿದ್ದ ದೊಡ್ಡ ಪೆಟ್ಟುಗಳು. ಅವರಿಬ್ಬರೂ ಚಿತ್ರರಂಗಕ್ಕೆ ಎರಡು ದೊಡ್ಡ ಮರಗಳಿದ್ದಂತೆ" ಎಂದು ಧನಂಜಯ್ ಬೇಸರ ಹೊರಹಾಕಿದ್ದಾರೆ.

Dali Dhananjay: ನಾನು ಬಿರಿಯಾನಿ ತಿಂದಿದ್ದಲ್ಲ, ರಾಜಕಾರಣಿಗಳು ಎಷ್ಟೆಷ್ಟು ಹಣ ತಿಂತಿದ್ದಾರೆ ಅಂತ ಪ್ರಶ್ನಿಸಲಿ: ಡಾಲಿ ಧನಂಜಯ್
Advertisement

ಆ ಘಟನೆಗಳನ್ನ ನಾನು ತಡೆಯುತ್ತಿದ್ದೆ

"ನನಗೆನಾದರೂ 'ಟೈಮ್ ಟ್ರಾವೆಲ್' ಮಾಡುವ ಮತ್ತು ಭೂತಕಾಲಕ್ಕೆ ಹೋಗುವ ಅವಕಾಶ ಸಿಕ್ಕರೆ, ನಾನು ಮೊದಲು ಪುನೀತ್‌ ಸರ್‌ ಹಾಗೂ ದರ್ಶನ್‌ ಅವರ ಜೀವನದಲ್ಲಿ ಸಂಭವಿಸಿದ ಆ ಎರಡು ಘಟನೆಗಳನ್ನು ತಡೆಯುವ ಕೆಲಸ ಮಾಡುತ್ತೇನೆ. ಇದನ್ನು ನನ್ನ ಸ್ನೇಹಿತರ ಬಳಿ ಮಾತನಾಡುವಾಗಲೂ ಹೇಳುತ್ತಿರುತ್ತೇನೆ. ಆ ಎರಡೂ ಘಟನೆಗಳು ಕನ್ನಡ ಚಿತ್ರರಂಗದಲ್ಲಿ ನಡೆಯಲೇಬಾರದಾಗಿತ್ತು. ಅವುಗಳ ಪರಿಣಾಮ ಇಡೀ ಸ್ಯಾಂಡಲ್‌ವುಡ್ ಮೇಲೆ ಬೀರಿದೆ. ಆದರೆ ದುರದೃಷ್ಟವಶಾತ್ ನಾವು ಈಗಾಗಲೇ ನಡೆದುಹೋದ ಘಟನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಡಾಲಿ ಧನಂಜಯ್ ಕರೆ

ಕೊನೆಯದಾಗಿ ಚಿತ್ರರಂಗದ ಭವಿಷ್ಯದ ಬಗ್ಗೆ ಮಾತನಾಡಿದ ಅವರು, "ನಡೆದು ಹೋದ ತಪ್ಪುಗಳನ್ನು ನೆನೆದು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಇನ್ಮುಂದೆ ನಾವು ಏನು ಮಾಡಬೇಕು? ಚಿತ್ರರಂಗವನ್ನು ಮತ್ತೆ ಹೇಗೆ ಕಟ್ಟಬೇಕು ಎನ್ನುವುದರ ಬಗ್ಗೆ ಯೋಚಿಸಬೇಕು ಮತ್ತು ಅದಕ್ಕೆ ಪೂರಕವಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದೂ ಕರೆ ನೀಡಿದ್ದಾರೆ. ಸದ್ಯ ಡಾಲಿ ಧನಂಜಯ್ ನೀಡಿರುವ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಡಿ-ಬಾಸ್ ಅಭಿಮಾನಿಗಳ ಕೋಪ ಕೊಂಚ ತಣ್ಣಗಾಗುವಂತೆ ಮಾಡಿದೆ. ಡಾಲಿ ಅವ್ರೇ ಡಿಬಾಸ್‌ನ ಹೊಗಳಿ ಅಂತ ನಾವು ಯಾವತ್ತೂ ಕೇಳಿಲ್ಲ. ಆದರೆ ಗೌರವ ಕಾಪಾಡಿ ಮಾತನಾಡಿದ್ರೆ ಸಾಕು. ಇವತ್ತು ನಿಮ್ಮ ಮಾತು ಕೇಳಿ ಖುಷಿ ಆಯ್ತು. ನಾಳೆ ಕುಟುಂಬ ಸಮೇತ "ಮದರ್‌ ಪ್ರಾಮಿಸ್‌" ಸಿನಿಮಾ ನೋಡ್ತೀನಿ, ನಿಮಗೂ ಚಿತ್ರತಂಡಕ್ಕೂ ಶುಭವಾಗಲಿ ಎಂದು ಆಲ್‌ ದಿ ಬೆಸ್ಟ್‌ ಕೂಡ ಹೇಳಿದ್ದಾರೆ.

English Summary

Actor Daali Dhananjay has finally reacted to Darshan’s jail episode, saying he would have prevented the tragedy if he had a chance to travel back in time.