ಇತಿಹಾಸ ನಿರ್ಮಾಣ : ಟಿಪ್ಪು ಸುಲ್ತಾನ್ ಮದ್ದಿನಮನೆ ಸ್ಥಳಾಂತರ
ಶ್ರೀರಂಗಪಟ್ಟಣ, ಮಾರ್ಚ್ 07 : ಬೆಂಗಳೂರು ಮತ್ತು ಮೈಸೂರು ನಡುವಿನ ಹೊಸ ಜೋಡಿ ಮಾರ್ಗದ ನಿರ್ಮಾಣಕ್ಕೆ ದಶಕಗಳಿಂದ ಅಡ್ಡವಾಗಿದ್ದ ಹದಿನೆಂಟನೇ ಶತಮಾನಾದಲ್ಲಿ ನಿರ್ಮಿಸಲಾಗಿದ್ದ ಟಿಪ್ಪು ಸುಲ್ತಾನ್ ಮದ್ದಿನ ಮನೆಯನ್ನು ಮಂಗಳವಾರ ಸ್ಥಳಾಂತರಿಸಲಾಗಿದೆ.
ಇದು ಭಾರತೀಯ ರೈಲ್ವೆಯಲ್ಲಿ ಮಾತ್ರವಲ್ಲ ಇಡೀ ಭಾರತದ ಇತಿಹಾಸದಲ್ಲಿ, ಈ ರೀತಿ ಕಟ್ಟಡವನ್ನು ಸ್ಥಳಾಂತರಿಸಿರುವುದು ಮೈಲಿಗಲ್ಲು ಎಂದು ಭಾರತೀಯ ರೈಲ್ವೆ ಟ್ವೀಟ್ ಮಾಡಿದೆ. ಅತ್ಯಂತ ವ್ಯವಸ್ಥಿತವಾಗಿ, ಕಟ್ಟಡಕ್ಕೆ ಯಾವುದೇ ಹಾನಿ ಆಗದಂತೆ ವೈಜ್ಞಾನಿಕವಾಗಿ ಸ್ಥಳಾಂತರಿಸಲಾಗಿದೆ.
ಈ ಜೋಡಿ ರೈಲು ಮಾರ್ಗ ಬರುವುದರಿಂದ ಬೆಂಗಳೂರು ಮತ್ತು ಮೈಸೂರು ನಡುವೆ ಓಡಾಡುವ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಕಳೆದ 10 ವರ್ಷಗಳಿಂದ ಈ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಕೆಲ ದಿನಗಳ ಹಿಂದೆ ಮೈಸೂರು ಮಡಿಕೇರಿ ಸಂಸದ ಪ್ರತಾಪ್ ಸಿಂಹ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. [ಜೋಡಿ ಮಾರ್ಗಕ್ಕಾಗಿ ಟಿಪ್ಪು ಮದ್ದಿನಮನೆ ಸ್ಥಳಾಂತರ : ಪ್ರತಾಪ್ ಸಿಂಹ]
900 ಟನ್ ತೂಕವಿರುವ ಮದ್ದಿನಮನೆ
900 ಟನ್ ತೂಕವಿರುವ ಟಿಪ್ಪು ಸುಲ್ತಾನ್ ಗೆ ಸೇರಿದ್ದ ಮದ್ದಿನ ಮನೆಯನ್ನು ರೋಲರ್ ಗಳ ಸಹಾಯದಿಂದ, ಇದ್ದ ಸ್ಥಳದಿಂದ 40 ಮೀಟರ್ ದೂರ ಸ್ಥಳಾಂತರಿಸಲಾಯಿತು. ಈ ಕಾರ್ಯ ನಡೆಯುವಾಗ ಸಾರ್ವಜನಿಕರಿಗೆ ಅವಕಾಶ ಇರಲಿಲ್ಲ.
ಹಾಳಾಗದಂತೆ ಸಾಕಷ್ಟು ಎಚ್ಚರಿಕೆ
ನಿಗದಿಪಡಿಸಿದ ಸ್ಥಳದಲ್ಲಿ ಮದ್ದಿನಮನೆ ಇದ್ದ ಸುತ್ತಳತೆಯಷ್ಟು ಗುಣಿಯನ್ನು ತೆಗೆದು ಅದರಲ್ಲಿ ಮನೆಯನ್ನು ಇಳಿಸಲಾಯಿತು. ಐತಿಹಾಸಿಕ ಮದ್ದಿನಮನೆ ಹಾಳಾಗದಂತೆ ಸಾಕಷ್ಟು ಎಚ್ಚರಿಕೆಯನ್ನೂ ವಹಿಸಲಾಗಿತ್ತು.
ಶ್ರೀರಂಗಪಟ್ಟಣಕ್ಕೆ ಪ್ರತಾಪ್ ಸಿಂಹ ಭೇಟಿ
ಕೆಲ ದಿನಗಳ ಹಿಂದೆ ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ ಅವರು ಶ್ರೀರಂಗಪಟ್ಟಣದಲ್ಲಿರುವ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೆಲವೇ ದಿನಗಳಲ್ಲಿ ಸ್ಥಳಾಂತರ ಕಾರ್ಯ ಆರಂಭವಾಗುತ್ತದೆ ಎಂದು ಕೂಡ ಹೇಳಿದ್ದರು.
ಹತ್ತು ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು
ಕಳೆದ 10 ವರ್ಷಗಳಿಂದ ಬೆಂಗಳೂರು ಮೈಸೂರು ನಡುವಿನ ಜೋಡಿ ರೈಲು ಮಾರ್ಗ ನೆನೆಗುದಿಗೆ ಬಿದ್ದಿತ್ತು. ಈಗ ಟಿಪ್ಪು ಮದ್ದಿನ ಮನೆ ಸ್ಥಳಾಂತರಗೊಂಡಿರುವುದರಿಂದ ಸದ್ಯದಲ್ಲಿಯೇ 13 ಕೋಟಿ ರುಪಾಯಿ ವೆಚ್ಚದಲ್ಲಿ ಹೊಸ ಮಾರ್ಗದ ಕಾರ್ಯ ಆರಂಭವಾಗಲಿದೆ.