ತುಳು, ಕನ್ನಡ ಸಾಹಿತಿ ಬೋಲ ಚಿತ್ತರಂಜನ್ ಶೆಟ್ಟಿ ವಿಧಿವಶ
ಮಂಗಳೂರು, ಆಗಸ್ಟ್ 08 : ಖ್ಯಾತ ತುಳು, ಕನ್ನಡ ಸಾಹಿತಿ ಬೋಲ ಚಿತ್ತರಂಜನ್ ಶೆಟ್ಟಿ ಅವರು ವಿಧಿವಶರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, 2013ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು.
ಮಂಗಳೂರಿನಲ್ಲಿ ಭಾನುವಾರ ಸಂಜೆ 4ಗಂಟೆ ಸುಮಾರಿಗೆ ಚಿತ್ತರಂಜನ್ ಶೆಟ್ಟಿ (72) ಅವರು ಹೃದಯಾಘಾತದಿಂದ ನಿಧನರಾದರು. ಬೆಳಗ್ಗೆ ಆತ್ಮೀಯರ ಜತೆ ಸಹಜವಾಗಿ ಮಾತನಾಡಿದ್ದ ಚಿತ್ತರಂಜನ್ ಶೆಟ್ಟಿ ಅವರ, ಹಠಾತ್ ನಿಧನದಿಂದ ತುಳು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.[ದೈವಾರಾಧನೆ: ಈ ದೈವ ಮುಟ್ಟಿದರೆ ವರ್ಷದೊಳಗೆ ಸಾವು ಖಚಿತ!]
1944ರ ಆಗಸ್ಟ್ 30ರಂದು ಉಡುಪಿ ಜಿಲ್ಲೆಯ ಕಾರ್ಕಳದ ಬೋಳ ಗ್ರಾಮದಲ್ಲಿ ಅವರು ಜನಿಸಿದ್ದರು. 1973 ರಲ್ಲಿ 'ಪೊಣ್ಣು ಮಣ್ಣ್ದ ಬೊಂಬೆ' ಎಂಬ ತುಳು ನಾಟಕವನ್ನು ರಚಿಸಿದ್ದ ಅವರು, 1983ರಲ್ಲಿ ಕಂಬುಲ ಎಂಬ ಪ್ರಬಂಧ ಬರೆದಿದ್ದರು. ಇದು ತುಳುನಾಡಿನ ಕ್ರೀಡೆಯಾದ ಕಂಬಳದ ಬಗೆಗಿನ ಪ್ರಥಮ ದಾಖಲೆ ಬರಹ.[ತುಳುನಾಡಿನ ಹೊಸ ವರ್ಷ ಬಿಸು ಪರ್ಬದ ಬಗ್ಗೆ ತಿಳಿಯಿರಿ]
1990ರಲ್ಲಿ ಅಳಿಯ ಸಂತಾನ ಕಟ್ಟಿಗೆ ಸಂಬಂಧಿಸಿದಂತೆ 'ಅಳಿದುಳಿದವರು' ಎಂಬ ಕನ್ನಡ ಕಾದಂಬರಿಯನ್ನು ಬರೆದಿದ್ದರು. ಇದು ಇವರಿಗೆ ಪ್ರಖ್ಯಾತಿಯನ್ನು ತಂದು ಕೊಟ್ಟಿತು. 2005ರಲ್ಲಿ 'ಕುಡಿ ಕನ್ನಡ' ಕಾದಂಬರಿ 2006 ರಲ್ಲಿ 'ನೀರ್' ಎಂಬ ತುಳು ನಾಟಕವನ್ನು ಮಕ್ಕಳಿಗಾಗಿ ಬರೆದಿದ್ದರು.[ತುಳುನಾಡಿನ ಕಂಬಳ ಕ್ರೀಡೆಯ ಕಿಂಗ್ ಸದಾಶಿವ ಸಾಲ್ಯಾನ್ ವಿಧಿವಶ]
'ಬಿನ್ನೆದಿ ತುಳು ಪಾಡ್ದನ', 'ಅಮರ ಬೀರೆರ ಮಾಮಣ್ಣೆ', 'ಒಂಟಿ ಒಬ್ಬಂಟಿ', 'ತಮ್ಮಲೆ ಅರುವತ್ತ ಕಟ್ಟ್' ಮುಂತಾದ ಕವನ ಸಂಕಲನ, 'ಶ್ರೀ ಮದ್ವ ಭಾರತ ತುಳು ಪಾಡ್ದನ', 'ಅನ್ನಾರ್ಥಿ' ಎಂಬ ಕನ್ನಡ ಕವನ ಸಂಕಲನವನ್ನು ಇವರು ರಚಿಸಿದ್ದಾರೆ.
2012ರಲ್ಲಿ ತುಳು ಗೌರವ ಪ್ರಶಸ್ತಿ, ಶ್ರೀಕೃಷ್ಣ ವಾದಿರಾಜ ಪ್ರಶಸ್ತಿ ಮತ್ತು 2013ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಚಿತ್ತರಂಜನ್ ಶೆಟ್ಟಿ ಪಡೆದಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.