ಇಂದಿನ ವ್ಯವಸ್ಥೆ ಬದಲಾವಣೆಗೆ ಹೊಸಬರೇ ಬೇಕು, ಉಪೇಂದ್ರ ಸಂದರ್ಶನ
"ರಾಜಕೀಯ ವ್ಯವಸ್ಥೆಯೊಳಗೆ ಇದ್ದುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಮೇಲ್ಮಟ್ಟದಿಂದ ಬದಲಾವಣೆಗೆ ಪ್ರಯತ್ನ ಪಡುತ್ತಿದ್ದಾರೆ. ನಾನು ಹೇಳುತ್ತಿರುವುದು ಕೆಳ ಮಟ್ಟದಿಂದ ಬದಲಾವಣೆ ತರಬೇಕು ಅನ್ನೋದನ್ನ. ನನ್ನ ಪ್ರಯತ್ನ ಅದರ ಕಡೆಗೆ" ಎಂದರು ನಟ-ನಿರ್ದೇಶಕ ಉಪೇಂದ್ರ.
'ಪ್ರಜಾಕೀಯ' ಎಂಬ ತಮ್ಮ ಹೊಸ ಪರಿಕಲ್ಪನೆಯನ್ನು ಮಾಧ್ಯಮಗಳೆದುರು ಇಟ್ಟ ಒಂದು ವಾರದ ನಂತರ ಒನ್ಇಂಡಿಯಾ ಕನ್ನಡಕ್ಕೆ ಉಪೇಂದ್ರ ಸಂದರ್ಶನ ನೀಡಿದ್ದಾರೆ. ಜನರ ಪ್ರತಿಕ್ರಿಯೆ ಹೇಗಿದೆ ಎಂಬ ಬಗ್ಗೆ ಕೂಡ ಅವರು ಹೇಳಿಕೊಂಡಿದ್ದಾರೆ. ತಾವು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಕೆಲಸಗಳನ್ನು ಆರಂಭಿಸಿರುವ ಮಾಹಿತಿ ನೀಡಿದ್ದಾರೆ.
ಉಪ್ಪಿ ರಾಜಕೀಯ ಪಕ್ಷವೂ ಬುದ್ಧಿವಂತರು, ಐಡಿಯಾ ಇರುವವರಿಗೆ ಮಾತ್ರ!
ಒಬ್ಬರಿಂದಲೇ ಎಲ್ಲವೂ ಆರಂಭವಾಗುವುದು. ಆ ನಂತರವೇ ಅದು ಎಲ್ಲರನ್ನೂ ತಲುಪುತ್ತದೆ. ಜನರ ನಂಬಿಕೆಯನ್ನು ಯಾವುದೇ ಕಾರಣಕ್ಕೂ ಹುಸಿಯಾಗಲು ಬಿಡುವುದಿಲ್ಲ ಎಂಬುದು ಅವರು ನೀಡುವ ಭರವಸೆ. ಇನ್ನೇನು ಎಂಟರಿಂದ ಒಂಬತ್ತು ತಿಂಗಳಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ಬರಲಿದೆ. ಅದರಲ್ಲಿ ಸ್ಪರ್ಧಿಸುವುದಾಗಿ ಮತ್ತು ಆ ಕಾರಣಕ್ಕಾಗಿಯೇ ಈ ನಿರ್ಧಾರ ಅನ್ನೋದನ್ನೂ ತಿಳಿಸಿದ್ದಾರೆ.
ತುಂಬು ಪ್ರೀತಿಯಿಂದ ನಮ್ಮ ಉಪೇಂದ್ರರಿಗೊಂದು ಪತ್ರ...
ಒಟ್ಟಾರೆ ಉಪೇಂದ್ರ ಅವರು ಸಂದರ್ಶನದಲ್ಲಿ ಏನೇನು ಹೇಳಿದರು, ಅವರಿಗೆ ಕೇಳಿದ ಪ್ರಶ್ನೆಗಳೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.
ಪ್ರಶ್ನೆ: ನಿಮ್ಮ ಸಿನಿಮಾಗಳಲ್ಲಿ ಕಾಣುತ್ತಿದ್ದಂಥ ದೇಶ- ರಾಜ್ಯದ ಬಗ್ಗೆ ಆಲೋಚನೆ ಹಾಗೆ ಇದೆಯಾ?
ಉಪೇಂದ್ರ: ಸಿನಿಮಾ ರೀಲ್- ಇದು ರಿಯಲ್. ಖಂಡಿತಾ ಬದಲಾವಣೆ ಇದ್ದೇ ಇರುತ್ತದೆ.
ಪ್ರಶ್ನೆ: ನಿಮ್ಮನ್ನು ಸಿನಿಮಾಗಳಲ್ಲಿ ನೋಡಿದಂತೆಯೇ ಉಪೇಂದ್ರ ಇರ್ತಾರೆ ಅಂತ ಎಲ್ಲರೂ ಅಂದುಕೊಳ್ತಾರೆ?
ಉಪೇಂದ್ರ: ಆಗ ಅದು ಸರಿ ಅನ್ನಿಸಿತ್ತು, ಮಾಡಿದ್ದೀನಿ, ಈಗ ಇದನ್ನು ಮಾಡ್ತಿದ್ದೀನಿ. ನನ್ನನ್ನು ನೋಡಿದ ಜನ, ನೀವು ಅದನ್ನು ಹೇಳಬೇಕು.
ಪ್ರಶ್ನೆ: ನಿಮ್ಮ ಸಿನಿಮಾಗಳಲ್ಲಿ ಪ್ರಜಾಪ್ರಭುತ್ವಕ್ಕಿಂತ ಸರ್ವಾಧಿಕಾರದ ಬಗ್ಗೆ ಹೆಚ್ಚಿನ ಒಲವು ಕಾಣುತ್ತದೆ, ಇದಕ್ಕೇನಂತೀರಾ?
ಉಪೇಂದ್ರ: ಸಿನಿಮಾ ನೋಡಿ ಒಬ್ಬ ವ್ಯಕ್ತಿಯನ್ನು ಹಾಗೆ ಇರ್ತಾನೆ ಅಂದುಕೊಳ್ಳೋದು ಎಷ್ಟು ಸರಿ? ಅದು ನಿಮ್ಮ ತೀರ್ಮಾನ.
ಪ್ರಶ್ನೆ: ಕಾಲೇಜು ದಿನಗಳಲ್ಲಿ ಎಬಿವಿಪಿಯಲ್ಲಿ ತುಂಬ ಚಟುವಟಿಕೆಯಿಂದ ತೊಡಗಿಕೊಂಡಿದ್ದರಂತೆ ಹೌದಾ?
ಉಪೇಂದ್ರ: ಹೌದು, ಎಬಿವಿಪಿಯಲ್ಲಿ ಇದ್ದೆ. ಮೆಂಬರ್ ಷಿಪ್ ಮಾಡಿಸುತ್ತಾ ಇದ್ದೆ. ತುಂಬ ಓಡಾಡ್ತಿದ್ದೆ.
ಪ್ರಶ್ನೆ: ಹಾಗಿದ್ದರೆ ಸಿದ್ಧಾಂತ, ಒಲವು ಅಂತ ಬಿಜೆಪಿಗೆ ಹತ್ತಿರ ಇದೀರಾ?
ಉಪೇಂದ್ರ: ನನಗೆ ಈಗ ಅನ್ನಿಸಿರೋದು ಇದು. ಸತ್ಯ ಅಂದರೆ ಕೆಲಸ. ಎಲ್ಲರಿಗೂ ಒಳ್ಳೆದಾಗಲಿ ಅಂತ ಕೆಲಸ ಮಾಡಬೇಕು ಅಷ್ಟೇ. ಅದಕ್ಕೆ ಸಂಬಳ ತಗೋತಾರೆ. ಅದಕ್ಕೆ ಸಂವಿಧಾನವೇ ಅನುಕೂಲ ಮಾಡಿಕೊಟ್ಟಿದೆ.
ಆದರೆ, ಈಗ ಅದು ಬಿಜಿನೆಸ್ ಆಗಿದೆ. ಅದನ್ನು ಯಾರೂ ಸರಿ ಅನ್ನಲ್ಲ. ಆದರೆ ಅದು ನಡೆದುಕೊಂಡು ಹೋಗ್ತಿದೆ ಅಲ್ಲವಾ? ಒಳ್ಳೆ ಸಿದ್ಧಾಂತ ಇಟ್ಟುಕೊಂಡು ಬಂದವರು ಅದನ್ನು ಉಳಿಸಿಕೊಳ್ಳಬೇಕು ಅಲ್ಲವಾ?
ಪ್ರಶ್ನೆ: ನಮ್ಮ ಮುಂದೆ ಕಡಿಮೆ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಟಿಡಿಪಿ ಹಾಗೂ ಎಎಪಿಯ ಎರಡು ಯಶಸ್ವಿ ಮಾದರಿಗಳಿವೆ, ನಿಮ್ಮ ಕಣ್ಣೆದುರು ಮಾದರಿ ಇತ್ತಾ?
ಉಪೇಂದ್ರ: ಬಹಳ ವರ್ಷಗಳಿಂದ ನನ್ನ ಮನಸ್ಸಿನಲ್ಲಿದ್ದ ಆಲೋಚನೆ ಇದು. ತುಂಬ ಜನಕ್ಕೆ ಹೇಳ್ತಿದ್ದೆ. ಎಷ್ಟೋ ಜನ ಆಡಳಿತ ಪಕ್ಷದವರಿಗೂ ಹೇಳಿದ್ದೆ.
ಸತ್ಯ ಹಿಡಿದುಕೊಂಡು ಆಚೆ ಬಂದರೆ ಬದಲಾವಣೆ ಆಗುತ್ತದೆ ಅಂತಿದ್ದೆ. ಅವರವರ ಪರಿಸ್ಥಿತಿ ಹೇಳೋಕಾಗಲ್ಲ. ನನ್ನೊಳಗೆ ನಡೆಯುತ್ತಿದ್ದ ಯುದ್ಧ ಇದು. ಎಷ್ಟೋ ಸಲ ನಾವು ನಿರ್ಧರಿಸೋದಲ್ಲ, ಅದಾಗಿಯೇ ಆಗೋದು.
ಪ್ರಶ್ನೆ: ಆಡಳಿತ, ಪಾರದರ್ಶಕತೆ ದೃಷ್ಟಿಯಿಂದ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರದ ಆಲೋಚನೆ ನಿಮ್ಮ ಆಲೋಚನೆಗೆ ಹತ್ತಿರ ಇದೆಯಾ?
ಉಪೇಂದ್ರ: ಮೋದಿ ಅವರೂ ಅಲ್ಲಿ ಪ್ರಯತ್ನ ಪಡುತ್ತಿದ್ದಾರೆ. ಅವರು ಮೇಲ್ಮಟ್ಟದಿಂದ ಮಾಡ್ತಿದ್ದಾರೆ. ಆದರೆ ಕೆಳಮಟ್ಟದಿಂದ ಆಗಬೇಕು. ಅದಕ್ಕೆ ಹೊಸಬರೇ ಆಗಬೇಕು.
ದುಡ್ಡಿಲ್ಲದೆ ರಾಜಕಾರಣ ಮಾಡಬೇಕು ಅಂತ ತೀರ್ಮಾನಿಸಿದರೆ ಮೋದಿ ಅವರು ಇನ್ನೂ ದೊಡ್ಡ ಮಟ್ಟದಲ್ಲಿ ಮಾಡಬಹುದು. ಫೇಸ್ ಬುಕ್, ಟಿವಿ ಮೂಲಕ ಪ್ರಚಾರ ಮಾಡ್ತೀವಿ, ಹಣ ಖರ್ಚು ಮಾಡಲ್ಲ ಅಂತ ತೀರ್ಮಾನ ಮಾಡಬಹುದು.
ಪ್ರಶ್ನೆ: ಪ್ರಜಾಕೀಯ ಘೋಷಣೆ ಮಾಡಿದ ನಂತರ ಯಾರನ್ನಾದರೂ ಪ್ರಮುಖರನ್ನು ಭೇಟಿ ಮಾಡಿದ್ದೀರಾ?
ಉಪೇಂದ್ರ: ಸಂತೋಷ್ ಹೆಗ್ಡೆ ಅವರ ಜತೆ ಮಾತನಾಡಿದ್ದೀವಿ. ಅಂಥವರು ಬಂದರೆ ಸ್ವಾಗತಿಸ್ತೀವಿ. ಆದರೆ ಯಾರನ್ನೂ ಬೆನ್ನಟ್ಟಿ ಹೋಗಿ ಕೇಳೋಕೆ ಆಗಲ್ಲ. ಯಾರಿಗೆ ನಂಬಿಕೆ ಇರುತ್ತದೋ ಅವರು ಬರಬಹುದು. ಪ್ರಜಾಕೀಯವನ್ನು ರಾಜಕೀಯದ ತಕ್ಕಡಿಯಲ್ಲಿಟ್ಟು ತೂಗಕ್ಕಾಗಲ್ಲ.
ಪ್ರಶ್ನೆ: ದುಡ್ಡಿಲ್ಲದ ರಾಜಕಾರಣ ಅಂದರೆ ಸಾವಿರ ಪ್ರಶ್ನೆಗಳು ಬರುತ್ತವೆ...
ಉಪೇಂದ್ರ: ಹೌದು. ಅದೇ ಸಮಸ್ಯೆ. ನಾವು ಹಳೆ ಮನಸ್ಥಿತಿಯಿಂದ ಆಚೆಗೆ ಬರಬೇಕು. ನಾವು ಹೇಳುತ್ತಿರುವುದು ಅಸಾಧ್ಯ ಅಂದುಕೊಂಡರೆ ಅಸಾಧ್ಯ. ಹಾಗಂದುಕೊಂಡರೆ ನಾವು ಪ್ರಯತ್ನ ಮಾಡುವುದಕ್ಕೆ ಆಗಲ್ಲ ಅಲ್ಲವಾ?
ಈಗ ಜನರೇ ಪ್ರಚಾರ ಮಾಡುತ್ತಿದ್ದಾರೆ. ಗಾಡಿ ಮೇಲೆ, ಅಂಗಡಿಯಲ್ಲಿ ಬೋರ್ಡ್ ಹಾಕ್ತಿದ್ದಾರೆ. ಮೊನ್ನೆ ಶಿವಮೊಗ್ಗದಿಂದ ಐನೂರು ಬೈಕ್ ನಲ್ಲಿ ಬರ್ತೀವಿ ಅಂದರು. ನಾನೇ ಅವರಿಗೆ ಬೇಡ ಅಂದೆ. ಅಷ್ಟು ಜನ ಬಂದು ಟ್ರಾಫಿಕ್ ಜಾಮ್ ಮಾಡುವ ಬದಲು, ನೀವು ಐನೂರು ಜನಕ್ಕೆ ಈ ಬಗ್ಗೆ ಹೇಳಿ ಅಂದೆ.
ಪ್ರಶ್ನೆ: ಕರ್ನಾಟಕ ಚುನಾವಣೆ ಇನ್ನು ಒಂಬತ್ತು ತಿಂಗಳು ಇದೆ, ಅದಕ್ಕೆ ಕೆಲಸ ಆರಂಭಿಸಿದ್ದೀರಾ? ಏಕೆಂದರೆ ನಿಮ್ಮ ಸೋಲು ನಿಮ್ಮಂತೆ ಆಲೋಚನೆ ಮಾಡುವ ಹಲವರ ಸೋಲಲ್ಲವಾ?
ಉಪೇಂದ್ರ: ಅದಕ್ಕಾಗಿಯೇ ಶ್ರಮ ಪಡುತ್ತಿರೋದು. ಈ ವಿಚಾರದಲ್ಲಿ ಜನ ನನ್ನ ಕೈ ಬಿಡಬಾರದು ಅಷ್ಟೇ. ಅದಕ್ಕಾಗಿಯೇ ಕೆಲಸ ಮಾಡುತ್ತಿದ್ದೇವೆ.