ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರು
ಬೆಂಗಳೂರು ಮಾರ್ಚ್ 03 : ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ನಿವೃತ್ತ ಐಎಎಸ್ ಅಧಿಕಾರಿ ಮನುಬಳಿಗಾರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮನು ಬಳಿಗಾರ್ ಸೇರಿದಂತೆ 15 ಅಭ್ಯರ್ಥಿಗಳು ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಗುರುವಾರ ಮನು ಬಳಿಗಾರ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಮನು ಬಳಿಗಾರ್ ಶತಮಾನೋತ್ಸವದ ಸಂಭ್ರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ 25ನೇ ಅಧ್ಯಕ್ಷರು. ಪರಿಷತ್ತು ಮತ್ತು ಜಿಲ್ಲಾಧ್ಯಕ್ಷರ ಅಧಿಕಾರಾವಧಿ 5 ವರ್ಷಗಳು. [ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ ಸೈಟ್]

2016ರ ಫೆಬ್ರವರಿ 28 ರಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, 30 ಜಿಲ್ಲಾಧ್ಯಕ್ಷರು ಮತ್ತು 4 ಗಡಿ ರಾಜ್ಯಗಳ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿತ್ತು. ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಚುನಾವಣಾಧಿಕಾರಿ ಕೆ.ನಾಗರಾಜು ಅವರು ಚುನಾವಣಾ ಫಲಿತಾಂಶ ಪ್ರಕಟಿಸಿದರು.
ವಿಧಾನಸಭೆ ಚುನಾವಣೆಯಂತೆ ಸಾಹಿತ್ಯ ಪರಿಷತ್ತಿನ ಚುನಾವಣೆಯ ಪ್ರಚಾರ ನಡೆದಿತ್ತು. ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳು ಫೇಸ್ ಬುಕ್, ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಬಿರುಸಿನಿಂದ ಪ್ರಚಾರ ನಡೆಸಿದ್ದರು. [ಕನ್ನಡಕ್ಕಾಗಿ ಮನು ಬಳಿಗಾರ ಫೇಸ್ ಬುಕ್ ಪುಟ]
ಗಡಿರಾಜ್ಯ, ಹೊರರಾಜ್ಯ ಮತ್ತು ಹೊರದೇಶಗಳ ಅಂಚೆ ಮತಗಳನ್ನು ಎಣಿಕೆ ಮಾಡಿದ ಬಳಿಕ ಮನು ಬಳಿಗಾರ್ ಅವರು ಒಟ್ಟು 61, 535 ಮತಗಳನ್ನು ಪಡೆದಿದ್ದು, ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗುರುವಾರ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಯಾರಿಗೆ ಎಷ್ಟು ಮತ? : ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ ಬಿ. ಜಯಪ್ರಕಾಶ ಗೌಡ ಅವರು 22,980,
ಡಾ. ಜನಾರ್ದನ ಎಚ್.ಎಲ್ ಅವರು 6,089, ಸಂಗಮೇಶ ಬಾದವಾಡಗಿ ಅವರು 4,547, ಪಟೇಲ್ ಪಾಂಡು ಅವರು 3,900 ಮತಗಳನ್ನು ಪಡೆದಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ನೀಲಾವರ ಸುರೇಂದ್ರ ಅಡಿಗ ಮತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಪ್ರದೀಪ ಎಸ್.ಕಲ್ಕೂರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗಡಿರಾಜ್ಯ ಘಟಕಗಳ ಅಧ್ಯಕ್ಷರು
* ಸುಬ್ರಹ್ಮಣ್ಯ ವಿ.ಭಟ್ (ಕೇರಳ)
* ಡಾ. ತಮಿಳ್ ಸೆಲ್ವಿ (ತಮಿಳುನಾಡು)
* ಬಸವರಾಜ ಸಿದ್ರಾಮಪ್ಪ ಮಸೂತಿ (ಮಹಾರಾಷ್ಟ್ರ)












Click it and Unblock the Notifications