ಕರ್ನಾಟಕ ಬಜೆಟ್ 2016-17 : ಯಾರು, ಏನು ಹೇಳಿದರು?
ಬೆಂಗಳೂರು, ಮಾರ್ಚ್ 19 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2016-17ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಒಟ್ಟಾರೆಯಾಗಿ 11ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ ಅವರು, ಹಲವು ಕೊಡುಗೆಗಳನ್ನು ನೀಡಿದ್ದಾರೆ.
ಬಜೆಟ್ನಲ್ಲಿ ಬರಗಾಲ, ಸಾಲಭಾದೆಯಿಂದ ಕಂಗೆಟ್ಟಿರುವ ರೈತನಿಗೆ ಸಿದ್ದರಾಮಯ್ಯ ಬಲ ತುಂಬಿದ್ದಾರೆ. ವಾಹನ ಸವಾರರ ಜೇಬಿಗೆ ತೆರಿಗೆ ಹೆಚ್ಚಿಸುವ ಮೂಲಕ ಕತ್ತರಿ ಹಾಕಿದ್ದಾರೆ. ಆರೋಗ್ಯ ಮತ್ತು ವಿದ್ಯುತ್ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. [ಬಜೆಟ್ : ಯಾವ ಕನ್ನಡ ದಿನಪತ್ರಿಕೆ ಶೀರ್ಷಿಕೆ ಚೆನ್ನಾಗಿದೆ?]
'ಈ ಬಾರಿ ಬಜೆಟ್ನಲ್ಲಿ ಭಾಗ್ಯಗಳನ್ನು ಘೋಷಣೆ ಮಾಡಿಲ್ಲ. ಈಗ ಭಾಗ್ಯದಿಂದ ಸೌಭಾಗ್ಯದತ್ತ ಸಾಗುತ್ತಿದ್ದೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಜೆಟ್ನಲ್ಲಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂದು ಬಿಜೆಪಿ ದೂರಿದೆ. [ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]
ಸಿದ್ದರಾಮಯ್ಯ ಅವರು ಮಂಡನೆ ಮಾಡಿದ ಬಜೆಟ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ತೆರಿಗೆ ಹೆಚ್ಚಳವನ್ನು ವಾಹನ ಸವಾರರು ವಿರೋಧಿಸಿದ್ದಾರೆ. ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿಲ್ಲ ಎಂದು ಪ್ರತಿಪಕ್ಷಗಳು ದೂರಿವೆ. [ಕರ್ನಾಟಕ ಬಜೆಟ್ 2016-17, ಮುಖ್ಯಾಂಶಗಳು]

'ಆಶಾದಾಯಕವಲ್ಲದ ನಿರ್ಜೀವ ಬಜೆಟ್'
'ರಾಜ್ಯದ ಪ್ರಗತಿಗೆ ಆಶಾದಾಯಕವಲ್ಲದ ನಿರ್ಜೀವ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ' ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ' ಕೃಷ್ಣಾ ಮೇಲ್ದಂಡೆ ಯೋಜನ ಮತ್ತು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಎಷ್ಟು ಹಣ ಎಂದು ಸ್ಪಷ್ಟಪಡಿಸಿಲ್ಲ. ಕಳಸಾ ಬಂಡೂರಿ ಯೋಜನೆ ಪ್ರಸ್ತಾಪವೇ ಇಲ್ಲ. ಬಜೆಟ್ನಲ್ಲಿ ಉತ್ತರ ಮತ್ತು ಹೈದರಾಬಾದ್ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ' ಎಂದು ಶೆಟ್ಟರ್ ಆರೋಪಿಸಿದ್ದಾರೆ.

'ಉತ್ತಮ ಶಿಕ್ಷಣಕ್ಕೆ ಮುನ್ನುಡಿಯಾಗಲಿದೆ'
'ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆ ಮತ್ತು ಇ-ವಿಷಯಾಧಾರಿತ 'ಐಟಿ ಸ್ಕೋಲ್ಸ್ ಇನ್ ಕರ್ನಾಟಕ' ಕಾರ್ಯಕ್ರಮ ನಿಜಕ್ಕೂ ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮ ಬೀರುತ್ತದೆ. ಈವರೆಗೆ ವಿದ್ಯಾರ್ಥಿಗಳಿಗಿದ್ದ ಬ್ಯಾಗ್ನ ತೂಕದ ಹೊರೆ ಈ ಬಜೆಟ್ನಿಂದ ಇಳಿದಂತಾಗಿದೆ. ಆಧುನಿಕ ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಟ್ಟಿರುವ ಬಜೆಟ್ನಲ್ಲಿ ಸಿದ್ದರಾಮಯ್ಯನವರು, ಪಠ್ಯಕ್ರಮದ ರೂಪು ರೇಷೆಗಳನ್ನು ಇದೀಗ ತಾಂತ್ರಿಕತೆಯತ್ತ ಕೊಂಡೊಯ್ಯಲು ಪ್ರಯತ್ನಿಸಿರುವುದನ್ನು ಶ್ಲಾಘಿಸುತ್ತೇನೆ' ಎಂದು ಎಡುಟರ್ ಟೆಕ್ನಾಲಜೀಸ್ ಸಿಇಓ ರಾಮ್ ಗೊಲ್ಲಮುಡಿ ಹೇಳಿದ್ದಾರೆ.

'ರಾಜ್ಯದ ಜನರ ಮೇಲೆ ಸಾಲದ ಹೊರೆ'
'ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರೆಸಿರುವ ಕಳಪೆ ಬಜೆಟ್ ಇದು' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. '2013ರಲ್ಲಿ 1.18 ಲಕ್ಷ ಕೋಟಿ ಇದ್ದ ರಾಜ್ಯದ ಸಾಲ ಈ ಬಾರಿ 2.18 ಲಕ್ಷ ಕೋಟಿಗೆ ಏರಿಕೆಯಾಗಿದೆ. ರೈತರಿಗೆ ಭರವಸೆ ಮೂಡಿಸುವ ಯಾವ ಅಂಶಗಳು ಬಜೆಟ್ನಲ್ಲಿಲ್ಲ' ಎಂದು ಕುಮಾರಸ್ವಾಮಿ ದೂರಿದ್ದಾರೆ.

ನೀರಾವರಿ ವಿಚಾರದಲ್ಲಿ ನಿರಾಶದಾಯಕ ಬಜೆಟ್
ಸಿದ್ದರಾಮಯ್ಯ ಅವರು ಮಂಡನೆ ಮಾಡಿದ ಬಜೆಟ್ ನೀರಾವರಿ ವಿಚಾರದಲ್ಲಿ ನಿರಾಶದಾಯಕ ಎಂದು ಕರ್ನಾಟಕ ನೀರಾವರಿ ವೇದಿಕೆ ಅಧ್ಯಕ್ಷ ಹಾಗೂ ಖ್ಯಾತ ಕಣ್ಣಿನ ವೈದ್ಯ ಡಾ. ಮಧು ಸೀತಪ್ಪ ಅಭಿಪ್ರಾಯಪಟ್ಟಿದ್ದಾರೆ. 1,65,000 ಕೋಟಿ ಒಟ್ಟು ಬಜೆಟ್ನಲ್ಲಿ ಕೇವಲ ಶೇ.9% ಅಂದರೆ 14,404 ಕೋಟಿ ರೂ.ಗಳನ್ನು ನೀರಾವರಿಗೆ ಮೀಸಲಿಟ್ಟಿರುವುದು ನಿರಾಶಾದಾಯಕ. ಪ್ರಸ್ತುತ ಕಳೆದ 23 ವರ್ಷಗಳಿಂದ ನಡೆಯುತ್ತಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕನಿಷ್ಠ 1.2 ಲಕ್ಷ ಕೋಟಿ ರೂ.ಗಳು ಬೇಕಾಗುತ್ತದೆ' ಎಂದು ಅವರು ಹೇಳಿದ್ದಾರೆ.

'ಭರವಸೆಗಳನ್ನು ಈಡೇರಿಸಲಾಗಿದೆ'
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡನೆ ಮಾಡಿದ ಬಜೆಟ್ ಉತ್ತಮವಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ. ಶಿಕ್ಷಣ, ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಅಭಿಪ್ರಾಯಪಟ್ಟಿದ್ದಾರೆ.

'ಕೆಟ್ಟ ಬಜೆಟ್ ಮಂಡಿಸಲಾಗಿದೆ'
'ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಂಥ ಕೆಟ್ಟ ಬಜೆಟ್ ಮಂಡಿಸಲಾಗಿದೆ. ಕೋಟಿಗಟ್ಟಲೆ ಹಣ ಮಾಡುವ ಉದ್ದೇಶದಿಂಲೇ ಟೋಲ್ ವಿಧಿಸಲಾಗಿದೆ. ಡೀಸೆಲ್ ದರ ಹೆಚ್ಚಳ ಮಾಡಿರುವುದು ಅತಿ ದೊಡ್ಡ ಹೊರೆ' ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.

ರೈತ ಆತ್ಮಹತ್ಯೆ ತಡೆಗೆ ಕ್ರಮ ಕೈಗೊಂಡಿಲ್ಲ
ಕರ್ನಾಟಕ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈತ ಮುಖಂಡ ಕರುಬೂರು ಶಾಂತ ಕುಮಾರ್ ಅವರು, 'ತುರ್ತುನಿಗಾ ಘಟಕದ ರೋಗಿಗೆ ಟಾನಿಕ್ ಔಷಧಿ ಚಿಕಿತ್ಸೆ ನೀಡುವಂತಿದೆ ಬಜೆಟ್' ಎಂದು ಹೇಳಿದ್ದಾರೆ. 'ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವ ಕ್ರಮಗಳನ್ನು ಪ್ರಕಟಿಸದೆ ಇರುವುದು ನಿರಾಶೆ ತಂದಿದೆ' ಅವರು ಹೇಳಿದ್ದಾರೆ.

ನಿರಾಶಾದಾಯಕ ಬಜೆಟ್
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಾಶಾದಾಯಕ ಬಜೆಟ್ ಮಂಡನೆ ಮಾಡಿದ್ದಾರೆ. ಹಿಂದಿನ ವರ್ಷ ಜಿಡಿಪಿ ದರ ಶೇ705 ರಷ್ಟಿತ್ತು. ಈ ವರ್ಷ ಅದು 6.5ಕ್ಕೆ ಇಳಿದಿದೆ ಎಂದು ಮುಖ್ಯಮಂತ್ರಿಗಳೇ ಹೇಳಿಕೊಂಡಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.












Click it and Unblock the Notifications