ಮಗ ಕಿರೀಟಿಗಾಗಿ ಜನಾರ್ದನ ರೆಡ್ಡಿ ಸಿನಿಮಾ ನಿರ್ಮಾಣ!
ಬೆಂಗಳೂರು, ಜೂನ್ 5 : ಕಳೆದ ವರ್ಷ ಮಗಳ ಅದ್ಧೂರಿ ಮದುವೆ ಮಾಡುವ ಮೂಲಕ ಸುದ್ದಿಯಲ್ಲಿದ್ದ ಗಣಿಧಣಿ-ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ಮಗನನ್ನು ಚಲನಚಿತ್ರರಂಗಕ್ಕೆ ತರಲು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ telugu360.com ವರದಿ ಮಾಡಿದೆ.
ಜನಾರ್ದನ ರೆಡ್ಡಿ ಅವರ ಮಗ ಕಿರೀಟಿ. ತನಗೆ ಸಿನಿಮಾದಲ್ಲಿ ನಟಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ತಮ್ಮ ಮಗನನ್ನು ನಾಯ್ಕ ನಟನಾಗಿ ಸಿನಿಮಾ ರಂಗಕ್ಕೆ ಪರಿಚಯಿಸಲು ಜನಾ ರೆಡ್ಡಿ ದೊಡ್ಡ ಮಟ್ಟದ ತಯಾರಿ ನಡೆಸಿದ್ದಾರೆ. ಸಹೋದರಿಯ ಮದುವೆ ಸಂದರ್ಭದಲ್ಲಿ ತನ್ನ ನೃತ್ಯ ಕೌಶಲವನ್ನು ಕಿರೀಟಿ ಪ್ರದರ್ಶಿಸಿದ್ದರು.[ಸಂಕ್ರಾಂತಿ ನಂತರ ಮತ್ತೆ ಬಳ್ಳಾರಿಯಲ್ಲಿ ಗಾಲಿ ರೆಡ್ಡಿ ಪ್ರತ್ಯಕ್ಷ!]
ಇದೀಗ ನಟನೆ ಕಲಿಯುವುದಕ್ಕೆ ಕಿರೀಟಿ ಇನ್ ಸ್ಟಿಟ್ಯೂಟ್ ಸೇರಲಿದ್ದಾರೆ. ಆ ನಂತರ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಲಿದ್ದಾರೆ. ಜನಾ ರೆಡ್ಡಿ ಸ್ವಂತ ಪ್ರೊಡಕ್ಷನ್ ಆರಂಭಿಸಿ, ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಹಿಂದಿನಿಂದಲೂ ಸುದ್ದಿಯಿತ್ತು. ತಮ್ಮ ನಿರ್ಮಾಣ ಸಂಸ್ಥೆಯ ಮೊದಲ ಸಿನಿಮಾ ಆಗಿ ಮಗನನ್ನೇ ಲಾಂಚ್ ಮಾಡಲಿದ್ದಾರೆ ಎಂಬ ಸುದ್ದಿ ಇದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ತೆಲುಗು-ಕನ್ನಡ ಎರಡೂ ಭಾಷೆಯಲ್ಲೂ ಚಲನಚಿತ್ರ ನಿರ್ಮಾಣವಾಗಲಿದೆ. ಅಂದಹಾಗೆ, ರೆಡ್ಡಿ ರಾಜಕೀಯ ಪ್ರತಿಸ್ಪರ್ಧಿ ಕುಮಾರಸ್ವಾಮಿ ಅವರು ಕೂಡ ತಮ್ಮ ಮಗ ನಿಖಿಲ್ ಕುಮಾರ್ ಗಾಗಿ ಜಾಗ್ವಾರ್ ಎಂಬ ಕನ್ನಡ-ತೆಲುಗು ಭಾಷೆಯ ಸಿನಿಮಾ ನಿರ್ಮಾಣ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.