ಬಿಡಿಎಗೆ ಭೂಮಿ ಕೊಟ್ಟ ರೈತರಿಗೆ ಶೇ. 40 ರಷ್ಟು ಅಭಿವೃದ್ಧಿ ಭೂಮಿ: ಬಿಎಸ್ ವೈ
ಬೆಂಗಳೂರು, ಜನವರಿ 18: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸುವ ಬಡಾವಣೆಗೆ ಭೂಮಿ ಬಿಟ್ಟು ಕೊಡುವ ರೈತರಿಗೆ ಅಭಿವೃದ್ಧಿ ಪಡಿಸಿದ ಬಡಾವಣೆಯಲ್ಲಿ ಶೇ. 40 ರಷ್ಟು ಭೂಮಿ ರೈತರಿಗೆ ಬಿಟ್ಟು ಕೊಡಲು ತೀರ್ಮಾನಿಸಲಾಗಿದೆ. ಭೂ ಸ್ವಾಧೀನಕ್ಕೆ ಒಳಪಡುವ ರೈತರಿಗೆ ಮೊದಲು ಭೂಮಿ ನೀಡಿದ ಬಳಿಕವಷ್ಟೇ ಬಿಡಿಎ ಅರ್ಜಿದಾರರಿಗೆ ನಿವೇಶನ ಹಂಚಿಕೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಬಿಡಿಎ ಆಯುಕ್ತರ ಏಟಿಗೆ- ಬ್ರೋಕರ್ ಜಾಲ ತಲ್ಲಣ: ಕೆಎಎಸ್ ಅಧಿಕಾರಿಗಳಿಗೆ ಬಂಧನ ಭೀತಿ !
ರೈತರು ಬಯಸುವ ಕಡೆ ಭೂಮಿ:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ವಿಶೇಷ ಪ್ರಗತಿ ಪರಿಶೀಲನಾ ಸಭೆ ಬಳಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ವಿಶ್ವದ ಅಗ್ರಮಾಣ್ಯ ಪ್ರಗತಿ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ತಾಂತ್ರಿಕ ನೆಲೆಯಲ್ಲಿ ಬೆಂಗಳೂರು ಅಗ್ರಗಣ್ಯ ನಗರ. ಈ ಜಾಗತಿಕ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಸಮಗ್ರ ಅಭಿವೃದ್ಧಿ ಬಗ್ಗೆ ನೀಡಿರುವ ಸಲಹೆ ಮಾರ್ಗದರ್ಶನದಂತೆ ಬೆಂಗಳೂರು ಅಭಿವೃದ್ಧಿ- 2020 ಯೋಜನೆ ರೂಪಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು. ಬಿಡಿಎ ಅಭಿವೃದ್ಧಿ ಪಡಿಸುವ ಬಡಾವಣೆಗೆ ಭೂಮಿ ನೀಡುವ ರೈತರಿಗೆ ಶೇ. 40 ರಷ್ಟು ಅಭಿವೃದ್ಧಿ ಪಡಿಸಿದ ಜಾಗ ನೀಡಲು ತೀರ್ಮಾನಿಸಲಾಗಿದೆ. ರೈತರು ಬಯಸುವ ಕಡೆಯಲ್ಲಿ ಭೂಮಿ ನೀಡಲಾಗುವುದು. ಈಗಾಗಲೇ ಬಿಡಿಎಗೆ ಭೂಮಿ ರೈತರು ನಿವೇಶನಕ್ಕಾಗಿ ಅಲೆಯುತ್ತಿದ್ದಾರೆ. ಅಂತವರಿಗೆ ಮೊದಲ ಆದ್ಯತೆ ಅನುಸಾರ ನಿವೇಶನ ನೀಡಲು ಆಯುಕ್ತರಿಗೆ ಸೂಚಿಸಿದ್ದೇನೆ. ರೈತರು ಯಾರೂ ಭೂ ಪರಿಹಾರ ಅರ್ಜಿ ಹಿಡಿದು ಬಿಡಿಎಗೆ ಅಲೆಯಬಾರದು ಎಂದು ಸೂಚಿಸಿದ್ದೇನೆ ಎಂದರು.
ಎಂಜಿನಿಯರ್ ಮತ್ತು ವಕೀಲರಿಗೆ ಗೇಟ್ ಪಾಸ್ :
ಬಿಡಿಎನಲ್ಲಿ ಅಗತ್ಯಕ್ಕಿಂತಲೂ ಹೆಚ್ಚಾಗಿ 24 ಇಂಜಿನಿಯರ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕಾರ್ಯ ಭಾರ ನೋಡಿ ಮಾತೃ ಇಲಾಖೆಗೆ ಕಳುಹಿಸಲು ಸೂಚಿಸಿದ್ದೇನೆ. ಅದೇ ರೀತಿ ಬಿಡಿಎ ಲೀಗಲ್ ಸೆಲ್ ವಿಭಾಗದಲ್ಲಿ 196 ಹೆಚ್ಚುವರಿ ವಕೀಲರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅನಗತ್ಯವಾಗಿ ಇರುವರನ್ನು ಸೆಲ್ ನಿಂದ ಬಿಡುಗಡೆ ಮಾಡಿ ಬಿಡಿಎ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸುವ ವಕೀಲರನ್ನಷ್ಟೇ ಇಟ್ಟಿಕೊಳ್ಳಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಆಯುಕ್ತರಿಗೆ ಶಹಬ್ಬಾಶ್ ಗಿರಿ:
ಬಿಡಿಎ ನಿವೇಶನ ಪರಭಾರೆ ಅಕ್ರಮವನ್ನು ತನಿಖೆ ನಡೆಸುವ ಜತೆಗೆ ಬಿಡಿಎಗೆ ಹೊಸ ಕಾಯಕಲ್ಪ ನೀಡುತ್ತಿರುವ ಆಯುಕ್ತ ಎಚ್.ಆರ್. ಮಹದೇವ್ ಅವರ ಕಾರ್ಯಶೈಲಿಯನ್ನು ಮುಖ್ಯಮಂತ್ರಿಗಳು ಮುಕ್ತ ಕಂಠದಿಂದ ಹೊಗಳಿದರು. ಬಿಡಿಎ ಆಯುಕ್ತರು ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಭ್ರಷ್ಟ ಕೂಟದ ವಿರುದ್ಧ ಕ್ರಮ ಜರುಗಿಸುತ್ತಿದ್ದಾರೆ. ಬ್ರೋಕರ್ ಗಳು ಯಾರೂ ಬಿಡಿಎಗೆ ಕಾಲಿಡಬಾರದು. ಈ ನಿಟ್ಟಿನಲ್ಲಿ ಕ್ರಮ ಜರುಗಿಸಲು ಆಯುಕ್ತರಿಗೆ ಸೂಚಿಸಿದ್ದೇನೆ. ಬಿಡಿಎಗೆ ಬರುವ ರೈತರಿಗೆ ಗೌರವದಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಲಾಗುವುದು. ಈ ನಿಟ್ಟಿನಲ್ಲಿ ಆಯುಕ್ತರು ಕೈಗೊಂಡಿರುವ ಕಾರ್ಯಗಳು ಸಂತಸ ನೀಡಿದೆ. ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಜೋಡೆತ್ತುಗಳಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ನಾನು ಇನ್ನುಮುಂದೆ ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಬಿಡಿಎ ಪ್ರಗತಿ ಪರಿಶೀಲನೆ ನಡೆಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ಅಕ್ರಮ ಪರಭಾರೆ ಸ್ವಾಧೀನ :
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬ್ರೋಕರ್ ಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಸೂಚಿಸಿದ್ದೇನೆ. ಈಗಾಗಲೇ ಬ್ರೋಕರ್ ಗಳು ಎಸಗಿರುವ ಅಕ್ರಮವನ್ನು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸುತ್ತೇನೆ. ತನಿಖೆ ವರದಿ ಕುರಿತು ಮುಖ್ಯ ಕಾರ್ಯದರ್ಶಿಗಳ ಜತೆ ಚರ್ಚಿಸಿ ಅಕ್ರಮವಾಗಿ ಪರಭಾರೆಯಾಗಿರುವ ಬಿಡಿಎ ಆಸ್ತಿಯನ್ನು ಮರು ಸ್ವಾಧೀನಕ್ಕೆ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಯಡಿಯೂರಪ್ಪ ಅವರು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು. ಬಿಡಿಎ ಅಕ್ರಮ ಕುರಿತು ಎಸ್ಐಟಿ ರಚನೆ ಮಾಡುವ ಬಗ್ಗೆ ಪ್ರಸ್ತಾವನೆ ಬಂದಿದ್ದು, ಈ ಕುರಿತು ಪರಿಶೀಲಿಸಲಾಗುವುದು ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.