ಕೊರೊನಾ ಮೂರನೇ ಅಲೆ ಆತಂಕವಿದ್ದರೂ ಶಾಲೆಗಳನ್ನು ಆರಂಭಿಸುತ್ತಿರುವುದು ಯಾಕೆ?
ಬೆಂಗಳೂರು, ಆ. 16: ಕೊರೊನಾವೈರಸ್ ಮೂರನೇ ಅಲೆ ಆತಂಕವಿದ್ದರೂ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಠಿಣ ಮಾರ್ಗಸೂಚಿ ಪ್ರಕಟಿಸಲಾಗಿದೆ. ಜೊತೆಗೆ ಕೆಲವು ರಾಜ್ಯಗಳಿಂದ ಬರುವವರಿಗೆ ಆರ್ಟಿಪಿಸಿಆರ್ ಪರೀಕ್ಷೆಯನ್ನು ಕಡ್ಡಾಯ ಮಾಡಲಾಗಿದೆ. ಜೊತೆಗೆ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಕೊರೊನಾ ವೈರಸ್ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ಅದಕ್ಕಾಗಿ ಮಕ್ಕಳ ಐಸಿಯು, ಮಕ್ಕಳಿಗಾಗಿ ಆಕ್ಸಿಜನ್ ಬೆಡ್ಗಳ ಆಸ್ಪತ್ರೆಗಳನ್ನು ಸರ್ಕಾರ ಹೆಚ್ಚು ಮಾಡುತ್ತಿದೆ ಎಂಬ ಮಾಹಿತಿಯಿದೆ.
ಪರಿಸ್ಥಿತಿ ಹೀಗಿದ್ದಾಗ್ಯೂ ಕೂಡ ತರಾತುರಿಯಲ್ಲಿ ಶಾಲೆ ತೆರೆಯುತ್ತಿರುವುದ್ಯಾಕೆ? ಎಂಬ ಪ್ರಶ್ನೆ ಇಡೀ ರಾಜ್ಯದ ಜನರನ್ನು ಕೊರೆಯುತ್ತಿದೆ. ಒಂದೆಡೆ ಕೊರೊನಾ ರೂಪಾಂತರಿ ಡೆಲ್ಟಾ ವೈರಸ್ ಕಾಟ ಶುರುವಾಗಿದೆ. ಈ ಆತಂಕಗಳ ಮಧ್ಯೆ ಶಾಲೆಗಳನ್ನು ತೆರೆಯುತ್ತಿರುವುದರ ಹಿಂದಿರುವ ಕಾರಣವಾದರೂ ಏನು? ಎಂದು ಜನರು ತಮ್ಮಲ್ಲಿ ತಾವೇ ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಮ್ಮ ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕೋವಿಡ್ ತಜ್ಞರ ಸಮಿತಿಯನ್ನು ರದ್ದು ಮಾಡಲಾಗಿದೆ. ರಾಜ್ಯ ಸರ್ಕಾರ ಇನ್ನೂ ಹೊಸ ಸಮಿತಿ ರಚನೆ ಮಾಡಬೇಕಿದೆ. ಈಗ ಸರ್ಕಾರಕ್ಕೆ ಸಲಹೆ ಕೊಡುತ್ತಿರುವವರು ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಕೊರೊನಾ ಅಧ್ಯಯನ ಮಾಡಿದ್ದವರು. ಆಗಿನ ಪರಿಸ್ಥಿತಿ ಬೇರೆ ಇತ್ತು. ಈಗ ಬರಬಹುದಾದ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆ ಎನ್ನಲಾಗುತ್ತಿದೆ. ಹೀಗಾಗಿ ತಜ್ಞರ ಸಮಿತಿಯಿಲ್ಲದೇ, ಕನಿಷ್ಠ ವರದಿಯೂ ಇಲ್ಲದೇ ಅತಿದೊಡ್ಡ ನಿರ್ಧಾರವನ್ನು ಸರ್ಕಾರ ಯಾಕೆ ತರಾತುರಿಯಲ್ಲಿ ತೆಗೆದುಕೊಳ್ಳುತ್ತಿದೆ ಎಂಬ ಪ್ರಶ್ನೆ ಪೋಷಕರಲ್ಲಿ ಬಂದಿದೆ.
ಶಾಲೆ ಆರಂಭಿಸಲು ತಜ್ಞರ ಸಮಿತಿ ವರದಿ ಕೊಟ್ಟಿದೆಯಾ? ತಜ್ಞರ ಸಮಿತಿ ವರದಿ ಇಲ್ಲದೆ ಶಾಲೆ ಆರಂಭ ಸರಿಯಾ? ಮುಂದಿದೆ ಮಾಹಿತಿ!
ಮಕ್ಕಳು ಮಾಸ್ಕ್ ಧರಿಸಿ ಬಂದರೆ ಸಾಕು!
ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. "ಶಾಲೆ ಆರಂಭಿಸಲು ಶೀಘ್ರ ಮಾರ್ಗಸೂಚಿ ಪ್ರಕಟ ಮಾಡುತ್ತೇವೆ" ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಶಾಲೆ ಪ್ರಾರಂಭವನ್ನು ಘೋಷಿಸಿದ್ದಾರೆ. ಆಗಸ್ಟ್ 23 ರಿಂದ ಶಾಲೆಗಳು ಪ್ರಾರಂಭವಾಗುತ್ತವೆ 9 ರಿಂದ 12 ನೇ ತರಗತಿವರೆಗೆ ಶಾಲಾ-ಕಾಲೇಜುಗಳನ್ನು ಆರಂಭಿಸುತ್ತೇವೆ. ತರಗತಿ ನಡೆಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಜಿಲ್ಲಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದೇನೆ. ಎರಡು ಜಿಲ್ಲೆ ಹೊರತು ಪಡಿಸಿ ಉಳಿದ ಕಡೆ ಶಾಲೆ ಆರಂಭ ಮಾಡುತ್ತೇವೆ" ಎಂದು ಬಿ.ಸಿ. ನಾಗೇಶ್ ಹೇಳಿದ್ದಾರೆ.
"ಮಕ್ಕಳು ಪಾಲನೆ ಮಾಡುವಂತಹ ಪೂರಕವಾದ ಮಾರ್ಗಸೂಚಿಯನ್ನು ಪ್ರಕಟಿಸಲಿದ್ದೇವೆ. ಮಕ್ಕಳಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿದ್ದೇವೆ. ಮನೆಯಿಂದ ಬಂದು ಮನೆಗೆ ವಾಪಸಾಗುವವರೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಲೇ ಬೇಕು. ಮಕ್ಕಳು ಮಾಸ್ಕ್ ಹಾಕಿಕೊಳ್ಳುವುದನ್ನು ಶಿಕ್ಷಕರು ನೋಡಿಕೊಳ್ಳಬೇಕು. ಜೊತೆಗೆ ಶಿಕ್ಷಕರಿಂದಲೂ ಶಾಲೆ ಆರಂಭಿಸಲಿಕ್ಕೆ ಬೆಂಬಲವನ್ನು ಕೊಟ್ಟಿದ್ದಾರೆ" ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಆದರೆ ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆ ಹೆಚ್ಚು ಎಂಬುದರ ಬಗ್ಗೆ ಸರ್ಕಾರ ವಿಶೇಷ ವ್ಯವಸ್ಥೆ ಮಾಡಿಕೊಂಡಿರುವುದು ಕಂಡು ಬರುತ್ತಿಲ್ಲ. ಆದರೂ ಮೂರನೇ ಅಲೆಯನ್ನು ಎದುರಿಸಲು ಸರ್ಕಾರ ಸಮರ್ಥವಾಗಿದೆ ಎಂದು ಬಿ.ಸಿ. ನಾಗೇಶ್ ಹೇಳಿದ್ದಾರೆ.
ಮಕ್ಕಳನ್ನು ಕಳುಹಿಸಿ ಅಥವಾ ಬಿಡಿ; ಶಾಲೆ ಆರಂಭಿಸುತ್ತೇವೆ!
ಆಯಾ ತಾಲ್ಲೂಕುಗಳ ಬಿಇಓ, ತಹಶೀಲ್ದಾರ್ ಅವರಿಗೆ ಈಗಾಗಲೇ ತಿಳಿಸಿದ್ದೇವೆ. ಶಿಕ್ಷಕರ ಜೊತೆ ಕೈಜೋಡಿಸುವಂತೆ ಅವರಿಗೆ ಸೂಚನೆ ಕೊಡಲಾಗಿದೆ. ಶಾಲೆಗಳ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವುದು, ಮಕ್ಕಳಿಗೆ ಮಾಸ್ಕ್ ಒದಗಿಸುವುದನ್ನು ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯಿತಿಗಳು ನೋಡಿಕೊಳ್ಳುತ್ತವೆ. ಜೊತೆಗೆ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಲೇಬೇಕು ಎಂಬ ಪೋಷಕರಿಗೆ ಸೂಚಿಸಿಲ್ಲ. ಆನ್ಲೈನ್ ಅಥವಾ ಆಫ್ಲೈನ್ ಯಾವುದರಲ್ಲಾದರೂ ತರಗತಿಗೆ ಹಾಜರಾಗಬಹುದು. ಆ ಆಯ್ಕೆಯನ್ನು ಪೋಷಕರ ಇಚ್ಚೆಗೆ ಬಿಟ್ಟಿದ್ದೇವೆ. ಸೋಂಕು ಕಂಡು ಬಂದರೆ ಅದನ್ನು ತಡೆದು ನಿಲ್ಲಿಸುವ ಶಕ್ತಿ ಸರ್ಕಾರಕ್ಕಿದೆ. ಒಂದೇ ಒಂದು ಸೋಂಕು ಕಂಡು ಬಂದರೂ ನಿಲ್ಲಿಸುತ್ತೇವೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಮೂರನೇ ಅಲೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಶಾಲೆ ಆರಂಭದ ಬಳಿಕ ಮೂರನೇ ಬಗ್ಗೆ ಸಭೆ!
"ಮೂರನೇ ಅಲೆ ಬರುತ್ತದೆ ಎಂಬುದು ಇದೆ. ಹೀಗಾಗಿ ತಜ್ಞರ ಸಲಹೆಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಆಗಸ್ಟ್ 30 ರಂದು ತಜ್ಞರ ಸಮಿತಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಸಿಎಂ ಎಲ್ಲರೊಂದಿಗೆ ಚರ್ಚೆ ಮಾಡುತ್ತಾರೆ. ಆ ನಂತರ 1 ರಿಂದ 8ನೇ ತರಗತಿಯ ಮಕ್ಕಳಿಗೆ ಶಾಲೆ ಆರಂಭಿಸಲು ತೀರ್ಮಾನ ಮಾಡುತ್ತೇವೆ. ಆ ನಿರ್ಧಾರವನ್ನೂ ಸಿಎಂ ಬೊಮ್ಮಾಯಿ ಮಾಡಲಿದ್ದಾರೆ" ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ವಿಪರ್ಯಾಸ ಎಂದರೆ ಇನ್ನೂ ಕೂಡ ಸಿಎಂ ಯಡಿಯೂರಪ್ಪ ಅವರ ಬದಲಾವಣೆ ಬಳಿಕ ಕೋವಿಡ್ ತಜ್ಞರ ಸಮಿತಿಯನ್ನು ರಚನೆ ಮಾಡಲಾಗಿಲ್ಲ. ಈಗ ಸರ್ಕಾರಕ್ಕೆ ಸಲಹೆ ಕೊಡುತ್ತಿರುವವರು ಕೊರೊನಾ ವೈರಸ್ ಎರಡನೇ ಹಾಗೂ ಮೂರನೇ ಅಲೆಯ ಸಂದರ್ಭದಲ್ಲಿ ಕೋವಿಡ್ ತಜ್ಞರ ಸಮಿತಿಯಲ್ಲಿದ್ದವರು. ಜೊತೆಗೆ ಮೂರನೇ ಅಲೆಯ ಬಗ್ಗೆ ಯಾರ ರೀತಿಯ ವರದಿಯನ್ನು ತಜ್ಞರು ಕೊಟ್ಟಿದ್ದಾರೆ ಎಂಬುದನ್ನು ಸರ್ಕಾರ ಇನ್ನೂ ಬಹಿರಂಗಪಡಿಸಿಲ್ಲ. ಹೀಗಾಗಿ ಯಾವ ಭರವಸೆಯ ಮೇಲೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು? ಎಂಬುದು ಪೋಷಕರ ಆತಂಕವಾಗಿದೆ.
ಜೊತೆಗೆ ಶಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಶುಲ್ಕದ ವಿಚಾರದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಸಹಾಯಕರಾಗಿದ್ದಾರಾ? ಎಂಬ ಪ್ರಶ್ನೆ ಪೋಷಕರಲ್ಲಿ ಮೂಡುವಂತೆ ಅವರು ಮಾತನಾಡಿದ್ದಾರೆ.
ಖಾಸಗಿ ಲಾಬಿ ಎದುರು ಅಸಹಾಯಕರಾದ ಶಿಕ್ಷಣ ಸಚಿವರು?
ಖಾಸಗಿ ಶಾಲೆಗಳು ಬಲವಂತವಾಗಿ ಶಾಲಾ ಶುಲ್ಕ ವಸೂಲಿ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೊಟ್ಟಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. "ನಾವು ಯಾವುದನ್ನೂ ಬಲವಂತವಾಗಿ ಹೇರಲಾಗುವುದಿಲ್ಲ. ಖಾಸಗಿ ಶಾಲೆಗಳ ಒಕ್ಕೂಟ ರೂಪ್ಸಾ ಸಂಘಟನೆ ಜೊತೆ ನಾನು ಮಾತನಾಡಿದ್ದೇನೆ. ಕೊರೊನಾವೈರಸ್ನಿಂದಾಗಿ ಮಕ್ಕಳ ಪೋಷಕರು ಸಂಕಷ್ಟದಲ್ಲಿದ್ದಾರೆ, ಹಾಗಾಗಿ ಹೆಚ್ಚು ಬಲವಂತ ಮಾಡಬೇಡಿ ಎಂದಿದ್ದೇನೆ. ಖಾಸಗಿ ಶಾಲೆಗಳ ಸಂಘಟನೆ ಕೂಡ ಒಪ್ಪಿದೆ. ಪೂರ್ತಿ ಶುಲ್ಕ ಕಟ್ಟಿ ಅನ್ನುವುದು ಸರಿಯಲ್ಲ. ಪೋಷಕರನ್ನು ಗ್ರಾಹಕರಂತೆ ರೀತಿ ನೋಡಿಬೇಡಿ ಎಂದಿದ್ದೇನೆ. ಶಾಲೆಗಳ ಇತಿಮಿತಿ, ಪೋಷಕರ ಹಿತವನ್ನೂ ಗಮನಿಸಬೇಕು. ಎಲ್ಲವನ್ನೂ ನೋಡಿಯೇ ನಿರ್ಧಾರ ತೆಗೆದುಕೊಳ್ತೇವೆ. ಕೆಲವೊಂದು ವಿಚಾರ ನ್ಯಾಯಾಲಯದಲ್ಲಿವೆ. ಹೀಗಾಗಿ ನೇರವಾಗಿ ಹಿಡಿತ ಸಾಧಿಸುವುದು ಕಷ್ಟ" ಎಂದು ಹೇಳಿದ್ದಾರೆ.
ಹಾಗೆ ಹೇಳುವ ಮೂಲಕ ತಾವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಇಷ್ಟೇ ಶುಲ್ಕ ವಸೂಲಿ ಮಾಡಿ ಎಂಬುದನ್ನು ಹೇಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಲೆ ಆರಂಭಿಸಲು ಖಾಸಗಿ ಸಂಸ್ಥೆಗಳ ಒತ್ತಡ?
ಹೀಗಾಗಿ ಶಾಲೆ ಆರಂಭಿಸಲು ಖಾಸಗಿ ಶಾಲೆಗಳ ಒತ್ತಡವೇನಾದರೂ ಸರ್ಕಾರದ ಮೇಲಿದೆಯಾ ಎಂಬ ಸಂಶಯ ಇದೀಗ ಮಕ್ಕಳ ಪೋಷಕರನ್ನು ಕಾಡುತ್ತಿದೆ. ಅದೇನೇ ಇರಲಿ ಶಾಲೆಗಳನ್ನು ಆರಂಭಿಸುವ ಮೂಲಕ ದೊಡ್ಡ ರಿಸ್ಕನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಎಂಬುದಂತೂ ನಿಜ. ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆ ಉಂಡಾಟದಲ್ಲಿ ಅದರ ಪರಿಣಾಮ ಬಿಜೆಪಿ ಸರ್ಕಾರಕ್ಕೆ ಆಗಲಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮೊದಲು ತಜ್ಞರ ಸಮಿತಿ ರಚಿಸಿ, ಸಮಗ್ರ ವರದಿ ಕೊಡುವಂತೆ ಸೂಚಿಸಿ, ವರದಿ ಆಧರಿಸಿ ಸರ್ಕಾರ ಶಾಲೆ ಆರಂಭಕ್ಕೆ ಮುಂದಾಗಲಿ ಎಂದು ಪೋಷಕರು ಆಶಿಸುತ್ತಿದ್ದಾರೆ. ಹೀಗಾಗಿ ಮಕ್ಕಳ ವಿಚಾರದಲ್ಲಿ ಬೇಜವಾಬ್ದಾರಿತನ ಬೇಡ ಎಂಬುದು ಎಲ್ಲರ ಒತ್ತಾಸೆಯಾಗಿದೆ.