ಕೋಲಾರ ಚಿನ್ನದ ಗಣಿ ಮುಚ್ಚಿ 20 ವರ್ಷ ಪೂರ್ಣ : ಗಣಿ ಆರಂಭದ ಕನಸು ನನಸಾಗಲಿದೆಯೇ ?
ಜಗತ್ತಿನ ಭೂಪಟದಲ್ಲಿ ಕೋಲಾರ್ ಗೋಲ್ಡ್ ಫೀಲ್ಡ್ಸ್( ಕೆಜಿಎಫ್) ಚಿನ್ನದ ಗಣಿ ತನ್ನದೇ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಮೊಟ್ಟ ಮೊದಲು ವಿದ್ಯುತ್ ದೀಪ ಕಂಡ ನಗರ ಕೆಜಿಎಫ್. ಜಗತ್ತಿನ ಅತಿ ಆಳದಲ್ಲಿ ಗಣಿಗಾರಿಕೆ ನಡೆದಿರುವ ಗಣಿ. ಏಷ್ಯಾದಲ್ಲಿ ವಿದ್ಯುತ್ ಕಂಡ ಎರಡನೇ ನಗರ. ಹೀಗೆ ನಾನಾ ಕಿರೀಟ ಹೊತ್ತ ಕೋಲಾರದ ಚಿನ್ನದ ಗಣಿ ಬಾಗಿಲು ಮುಚ್ಚಿ ಎರಡು ದಶಕ ಕಳೆದಿದೆ.
ಈ ಹೊತ್ತಿನಲ್ಲಿ ಗಣಿಗಾರಿಕೆ ಆರಂಭಿಸಬೇಕೆಂಬ ಕೂಗು ದಶಕಗಳಿಂದಲೇ ಕೇಳಿ ಬರುತ್ತಿದೆ. ಗಣಿಗಾರಿಕೆ ನಡೆಸಲು ಮುಂದಾದ ಕಂಪನಿಗಳಲ್ಲಿ ಪಾಲುದಾರಿಕೆ ಪಡೆಯಲು ಯತ್ನಿಸಿದ ರಾಜಕಾರಣಿಗಳು ಕಾಲಾಂತರದಲ್ಲಿ ಮೌನದ ಮೊರೆ ಹೋದರು. ಗಣಿಯಿಂದ ನಮ್ಮ ಭವಿಷ್ಯ ಮತ್ತೆ ಕಟ್ಟಿಕೊಳ್ಳಹುದೆಂಬ ಆಶಯ ಜೀವಂತವಾಗಿದೆ. ಇಂತಹ ಸಂಗತಿಗಳು ಗಣಿ ಧೂಳಿನಲ್ಲಿ ಅಡಗಿ ಕುಳಿತಿವೆ. ಮಾರ್ಚ್ 1, 2001 ರಲ್ಲಿ ಅಧಿಕೃತ ಬಾಗಿಲು ಮುಚ್ಚಿಕೊಂಡು ಇಪ್ಪತ್ತು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೆಜಿಎಫ್ ಗಣಿ ಸುತ್ತ ಒಂದು ವರದಿ.
19 ವರ್ಷಗಳ ಬಳಿಕ ಕೆಜಿಎಫ್ ಚಿನ್ನದ ಗಣಿ ಪ್ರಾರಂಭಕ್ಕೆ ಹಸಿರು ನಿಶಾನೆ
ಕೆಜಿಎಫ್ ಗಣಿ ಮುಚ್ಚಿದ ಹಿನ್ನೆಲೆ :
ಅದು ಮಾರ್ಚ್ 1, 2001 ರಂದು ಕೆಜಿಎಫ್ ಚಿನ್ನದ ಗಣಿ ಮುಚ್ಚಿಕೊಂಡಿತು. ಅವತ್ತು ಒಂದು ಗ್ರಾಂ ಚಿನ್ನದ ಬೆಲೆ ಕೇವಲ 430 ರೂ. ಇತ್ತು. ಹತ್ತು ಗ್ರಾಂ ಚಿನ್ನದ ಬೆಲೆ 4300 ರೂ. ಇದೆ. ಹತ್ತು ಗ್ರಾಂ ಚಿನ್ನ ತೆಗೆಯಲು 12 ಸಾವಿರ ರೂ. ವೆಚ್ಚವಾಗುತ್ತಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿ ಕೇಂದ್ರದ ಎನ್ಡಿಎ ಸರ್ಕಾರ ಗಣಿ ಮುಚ್ಚಿ ತೀರ್ಮಾನ ಪ್ರಕಟಿಸಿತು. ಸರ್ಕಾರದ ತೀರ್ಮಾನದ ವಿರುದ್ಧ ಕಾರ್ಮಿಕರು ಹೋರಾಟ ಆರಂಭಿಸಿದ್ದರು. ಕಾರ್ಮಿಕರಿಗೆ ವಿಶೇಷ ಭತ್ಯೆ ನೀಡಿ ಗಣಿಯನ್ನು ಮುಚ್ಚಲಾಯಿತು. ಕಾಲಾಂತರದಲ್ಲಿ ಗಣಿ ಆಸ್ತಿಯನ್ನೇ ಜಾಗತಿಕ ಹರಾಜಿಗೆ ಕೇಂದ್ರ ಸರ್ಕಾರ ಮುಂದಾಗಿತ್ತು.
ಆದರೆ, ಕಾರ್ಮಿಕ ಸಂಘಟನೆಗಳು ನ್ಯಾಯಾಲಯದ ಕದ ತಟ್ಟಿದ್ದರಿಂದ ಸರ್ಕಾರದ ಉದ್ದೇಶ ನೆರವೇರಲಿಲ್ಲ. 2015 ರಲ್ಲಿ ಮೈನ್ಸ್ ಮತ್ತು ಮಿನರಲ್ ಕಾಯಿದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಅದರ ಪ್ರಕಾರ ಕೇಂದ್ರ ಸರ್ಕಾದ ಸುಪರ್ದಿಯಲ್ಲಿದ್ದ ಚಿನ್ನದ ಉದ್ಯಿಮೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬಂತು. ರಾಜ್ಯ ಸರ್ಕಾರ ಭಾರತ್ ಗೋಲ್ಡ್ ಮೈನ್ ಲಿಮಿಟೆಡ್ ಪುನರಾಂಭಿಸುವ ಬಗ್ಗೆ ಇನ್ನೂ ಗೊಂದಲದಲ್ಲೇ ಮುಳುಗಿದೆ.
ಇದರ ನಡುವೆ ಗಣಿಗಾರಿಕೆಗೆ ನೀಡಿದ್ದ ಪರವಾನಗಿಯನ್ನು ರಾಜ್ಯ ಸರ್ಕಾರ ರದ್ದು ಪಡಿಸಿದ್ದು, 2013 ಕ್ಕೆ ಗಣಿಗಾರಿಕೆ ಲೀಸ್ ಅವಧಿ ಮುಗಿದಿದೆ. ಭಾರತ ಚಿನ್ನದ ಗಣಿ ಸದ್ಯದ ಮಾಹಿತಿ ಪ್ರಕಾರ 1600 ಕೋಟಿ ರೂ. ಸಾಲ ಹೊಂದಿದ್ದು, ಅದನ್ನು ಕೇಂದ್ರ ಮನ್ನಾ ಮಾಡಿದರೆ ಗಣಿ ಪುನರಾರಂಭಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ ಎಂಬ ಮಾತುಗಳು ಅಧಿಕಾರಿ ವಲಯದಿಂದ ಕೇಳಿ ಬರುತ್ತಿವೆ.
ಕಾರ್ಮಿಕರ ಕಷ್ಟ ಕೇಳುವರು ಯಾರೂ ಇಲ್ಲ
ಕಾರ್ಮಿಕರ ಸಂಕಟ : ಬಿಜಿಎಂಎಲ್ ಮುಚ್ಚಿದಾಗ ಗಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 3100 ಕಾರ್ಮಿಕರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು. ಗಣಿಗಾರಿಕೆ ನಂಬಿ ಬದುಕುತ್ತಿದ್ದವರಿಗೆ ಆರ್ಥಿಕ ನೆರವು ಕೊಡಬೇಕು. ಮೂರು ದಶಕದಿಂದ ಕಾರ್ಯ ನಿರ್ವಹಿಸಿದ ಕಾರ್ಮಿಕರು ವಾಸವಿರುವ ಮನೆಗಳನ್ನು ಬಿಟ್ಟುಕೊಡಬೇಕು. ಮತ್ತೆ ಚಿನ್ನದ ಗಣಿ ಆರಂಭಿಸಬೇಕೆಂಬ ಕೂಗು ಕಾರ್ಮಿಕ ವಲಯದಿಂದ ಕೇಳಿ ಬರುತ್ತಲೇ ಇದೆ. ಚುನಾವಣೆ ಹೊಸ್ತಿನಲ್ಲಿ ಈ ಕಾರ್ಮಿಕರ ಬೇಡಿಕೆಗಳು ರಾಜಕಾರಣಿಗಳ ಅಸ್ತ್ರ ವಾಗಿದ್ದು ಬಿಟ್ಟರೆ ಈವರೆಗೂ ಒಂದು ಬೇಡಿಕೆ ಕೂಡ ಈಡೇರಿಲ್ಲ. ಇನ್ನೊಂದಡೆ ಕಾರ್ಮಿಕರಿಗೆ ಸೇರಬೇಕಿರುವ ಗ್ರಾಜುಯಿಟಿ, ಅದರ ಮೇಲಿನ ಬಡ್ಡಿ ಬರುತ್ತದೆ ಎಂದು ಚಾತಕ ಪಕ್ಷಿಗಳಂತೆ ಕಾರ್ಮಿಕರು ಲೆಕ್ಕ ಹಾಕುವಲ್ಲಿ ದಿನ ದೂಡುತ್ತಿದ್ದಾರೆ.
ಸರ್ಕಾರದ ಲಾಭ ನಷ್ಟದ ಲೆಕ್ಕಾಚಾರ :
ಸರ್ಕಾರದ ದಿವ್ಯ ನಿರ್ಲಕ್ಷ್ಯ : ಗಣಿ ಮುಚ್ಚಿದಾಗ ಒಂದು ಗ್ರಾಂ ಚಿನ್ನದ ಬೆಲೆ 430 ರೂ. ಇತ್ತು. ಈಗ ಒಂದು ಗ್ರಾಂ ಚಿನ್ನದ ಬೆಲೆ 4500 ಕ್ಕೇರಿದೆ. ಚಿನ್ನದ ನಿಕ್ಷೇಪ ಹೊಂದಿರುವ ದೇಶಗಳು ಆರ್ಥಿಕ ಪ್ರಗತಿಯತ್ತ ದಾಪುಗಾಲು ಇಡುತ್ತಿದೆ. ಚಿನ್ನವನ್ನು ಅತಿ ಹೆಚ್ಚು ಬಳಸುವ ಅಗ್ರಗಣ್ಯ ರಾಷ್ಟ್ರ ಭಾರತ. ಅಗತ್ಯ ಇರುವ ಚಿನ್ನಕ್ಕಾಗಿ ಬೇರೆ ದೇಶಗಳಿಂದ ಅಮದು ಮಾಡಿಕೊಳ್ಳುತ್ತಿದೆ. ಕೋಲಾರ ಚಿನ್ನದ ಗಣಿಯಲ್ಲಿ ಹಳದಿ ಲೋಹ ಹೇರಳವಾಗಿದ್ದರೂ, ಗಣಿ ಪುನರಾರಂಭ ಮಾಡುವ ಬಗ್ಗೆ ಸರ್ಕಾರಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿವೆ.
ಐಸಿಐಸಿಐಯ ಕಂಪನಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಂಪನಿಯನ್ನು ಪುನರ್ ಆರಂಭಿಸಲು ಸರ್ಕಾರದ ಸಹಕಾರ ಕೋರಿ ಮನವಿ ಸಲ್ಲಿಸಿತು. ಆದರೆ ಸರ್ಕಾರವು ಚಿನ್ನದ ಉತ್ಪಾದನೆ ಮಾಡುವ ವೆಚ್ಚವು ಚಿನ್ನದ ಬೆಲೆ ದುಪ್ಪಾಟ್ಟಾಗುತ್ತದೆ. ಅಂದರೆ, ಚಿನ್ನದ ಬೆಲೆ 10 ಗ್ರಾಂಗಳಿಗೆ 4 ಸಾವಿರ ರೂ. ಆದರೆ ಅದನ್ನು ಉತ್ಪಾದನೆ ಮಾಡಲು12 ಸಾವಿರ ರೂ. ವೆಚ್ಚವಾಗಲಿದೆ. ಅಲ್ಲದೇ ಲೋಹದ ನಿಕ್ಷೇಪ ಕಡಿಮೆಯಾಗಿದೆ ಎಂಬ ಕಾರಣಗಳನ್ನು ನೀಡಿ ಕಂಪನಿ ಮುಚ್ಚಿ ಹಾಕುವ ನಿರ್ಧಾರವನ್ನು ಸರ್ಕಾರ ಸಮರ್ಥಿಸಿಕೊಂಡಿದ್ದು ಗಮನಾರ್ಹ.
ಚಿನ್ನದ ಗಣಿಗಾರಿಕೆ ಮೂಲ
ಕೋಲಾರದ ಚಿನ್ನದ ಗಣಿಯಲ್ಲಿ ಗಣಿಗಾರಿಕೆ ಪ್ರಾರಂಭವಾಗಿದ್ದು 1880 ರಲ್ಲಿ ಜಾನ್ ಟೇಲರ್ ಕಂಪನಿಯಿಂದ. 1956 ರಲ್ಲಿ ಮೈಸೂರು ಸರ್ಕಾರ ಖರೀದಿ ಮಾಡಿತ್ತು. 1962 ರಲ್ಲಿ ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಸುಮಾರು 12 ಸಾವಿರ ಎಕರೆ ಭೂ ಪ್ರದೇಶ ಈ ಗಣಿ ಹೊಂದಿದೆ. ಸದ್ಯ ಕೆಜಿಎಫ್ ಚಿನ್ನದ ಗಣಿ ಸಂಪೂರ್ಣ ಮುಚ್ಚಲಾಗಿದ್ದರೂ, ಗಣಿಗಾರಿಕೆಯಿಂದ ಹೊರ ಹಾಕಿರುವ ಮಣ್ಣಿನಲ್ಲಿಯೇ ಚಿನ್ನವಿದೆ ಎಂಬ ಮಾತು ಕೇಳಿತ್ತು.
ಆಸ್ಟ್ರೇಲಿಯಾ ಮೂಲದ ಕಂಪನಿ ಈ ಮಣ್ಣನ್ನು ಶೋಧಿಸಿ ಮತ್ತೆ ಚಿನ್ನ ಉತ್ಪಾದಿಸುವ ಬಗ್ಗೆ ಮಾತು ಕೇಳಿ ಬಂದಿತ್ತು. ಈಗಲೂ ಕೆಲವರು ಚಿನ್ನದ ಗಣಿಯೊಳಗೆ ನುಗ್ಗಿ ಚಿನ್ನದ ನಿಕ್ಷೇಪ ತೆಗೆದುಕೊಂಡು ಬರಲು ಹೋಗಿ ಜೀವ ಕಳೆದುಕೊಂಡಿದ್ದಾರೆ. ಪೊಲೀಸರ ಕೈಗೆ ಸಿಕ್ಕಿ ಜೈಲಿಗೆ ಹೋಗಿದ್ದಾರೆ. ಇದೇ ಚಿನ್ನ ನಂಬಿ ನೂರಾರು ಚಿನ್ನದ ಅಂಗಡಿಗಳು ಈಗಲೂ ಕೆಜಿಎಫ್ ನಲ್ಲಿ ನೆಲೆಯೂರಿವೆ.
ಕೆಜಿಎಫ್ ಚಿನ್ನದ ಗಣಿಯ ಅಚ್ಚರಿ ಸಂಗತಿಗಳು
1. ಏಷ್ಯಾದಲ್ಲಿಯೇ ಅತಿ ದೊಡ್ಡ ಚಿನ್ನದ ಗಣಿ ಕೆಜಿಎಫ್.
2. ಭೂಮಿ ಮೇಲಿರುವ ಚಿನ್ನದ ಗಣಿಗಳಿಗೆ ಹೋಲಿಸಿದರೆ ಅತಿ ಆಳದಲ್ಲಿ ಗಣಿಗಾರಿಕೆ ನಡೆಸಿರುವ ಏಕೈಕ ಗಣಿ ಕೆಜಿಎಫ್ ಚಿನ್ನದ ಗಣಿ. ಮೂರು ಸಾವಿರ ಮೀಟರ್ ಆಳದಲ್ಲಿ ಗಣಿಗಾರಿಕೆ ನಡೆಸಲಾಗಿದೆ.
3. ಕೆಜಿಎಫ್ ಮಿನಿ ಇಂಗ್ಲೆಂಡ್ ಎಂದೇ ಖ್ಯಾತಿ ಪಡೆದಿದೆ.
4. ಜಪಾನ್ ನ ಟೋಕಿಯೋ ಬಿಟ್ಟರೆ ಏಷ್ಯಾದಲ್ಲಿಯೇ ವಿದ್ಯುತ್ ಪಡೆದ ಎರಡನೇ ನಗರ ಕೆಜಿಎಫ್.
5. ಗಣಿ ಧೂಳಿನಿಂದ 30 ಮೀಟರ್ ಎತ್ತರ ಬೆಳೆದಿರುವ ಬೆಟ್ಟದಲ್ಲಿ ಸಣ್ಣ ಗಿಡವೂ ಚಿಗರೊಡೆಯುವುದಿಲ್ಲ.
6. ಗಂಗರು ಚೋಳರು, ಕದಂಬರು ಆಳಿದ ಭೂಮಿ. ಹೈದರಾಲಿ ಕೂಡ ರೂಲ್ ಮಾಡಿದ್ದ. ಬ್ರಿಟೀಷರ ವಶದಲ್ಲಿದ್ದ ಕೆಜಿಎಫ್ ನ್ನು ಮೈಸೂರು ಸರ್ಕಾರ ಖರೀದಿಸಿತ್ತು.
7. ಸಿಲಿಕೋಸಿಸ್ ಎಂಬ ಶ್ವಾಶಕೋಶ ಸಂಬಂಧಿ ಕಾಯಿಲೆ ಮೊದಲು ಪತ್ತೆ ಯಾಗಿದ್ದು ಕೆಜಿಎಫ್ ನಲ್ಲಿ.
8. 1885 ರಲ್ಲಿಯೇ ಗಾಲ್ಫ್ ಕೋರ್ಟ್ ಹೊಂದಿದ ನಗರ ಕೆಜಿಎಫ್.