ಯುಪಿ ಚುನಾವಣೆ: ಭೀಮ್ ಆರ್ಮಿ ಜೊತೆ ಬಿಜೆಪಿಯ ಮಾಜಿ ಮಿತ್ರಪಕ್ಷ ಮೈತ್ರಿ
ಬಲಿಯಾ, ಸೆಪ್ಟೆಂಬರ್ 23: "ಭೀಮ್ ಆರ್ಮಿ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಶೀಘ್ರವೇ ಭಾಗಿದರಿ ಸಂಕಲ್ಪ ಮೋರ್ಚಾದ ಭಾಗವಾಗಲಿದ್ದಾರೆ," ಎಂದು ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್ಬಿಎಸ್ಪಿ) ಮುಖ್ಯಸ್ಥ ಓಂ ಪ್ರಕಾಶ್ ರಾಜಭರ್ ಬುಧವಾರ ತಿಳಿಸಿದ್ದಾರೆ.
"ಚಂದ್ರಶೇಖರ್ ಆಜಾದ್ ಶೀಘ್ರದಲ್ಲೇ ಭಾಗಿದರಿ ಸಂಕಲ್ಪ ಮೋರ್ಚಾದ ಭಾಗವಾಗಲಿದ್ದಾರೆ. ಈ ಬಗ್ಗೆ ನಾವು ಅಕ್ಟೋಬರ್ 27 ರಂದು ಅಧಿಕೃತ ಘೋಷಣೆಯನ್ನು ಮಾಡಲಿದ್ದೇವೆ," ಎಂದು ಹೇಳಿದ್ದಾರೆ. ಭಾಗಿದರಿ ಸಂಕಲ್ಪ ಮೋರ್ಚಾ ಸಮಾನ ಮನಸ್ಕ ರಾಜಕೀಯ ಪಕ್ಷಗಳ ಮೈತ್ರಿ ಒಕ್ಕೂಟವಾಗಿದ್ದು, ಇದರ ನೇತೃತ್ವವನ್ನು ಬಿಜೆಪಿಯ ಮಾಜಿ ಮೈತ್ರಿ ಪಕ್ಷ ಎಸ್ಬಿಎಸ್ಪಿಯ ಮುಖ್ಯಸ್ಥ ಓಂ ಪ್ರಕಾಶ್ ರಾಜಭರ್ ವಹಿಸಿದ್ದಾರೆ.
'ಡಬಲ್ ಇಂಜಿನ್ ಸರ್ಕಾರ': ಯೋಗಿ ಸರ್ಕಾರವನ್ನು ಶ್ಲಾಘಿಸಿದ ಮೋದಿ
ಈ ಬಗ್ಗೆ ಬುಧವಾರ ಪಿಟಿಐ ಜೊತೆಗೆ ಮಾತನಾಡಿದ ಎಸ್ಬಿಎಸ್ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜಭರ್, "ಎಐಎಮ್ಐಎಮ್ ಮುಖ್ಯಸ್ಥ ಅಸ್ಸಾದುದ್ಧೀನ್ ಓವೈಸಿ ಹಾಗೂ ಭೀಮ್ ಆರ್ಮಿ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ್ ಜೊತೆಗೆ ಲಕ್ನೋದಲ್ಲಿ ಮಂಗಳವಾರ ನಾನು ಸಭೆಯನ್ನು ನಡೆಸಿದೆ. ಈ ಸಭೆಯು ಉತ್ತಮ ಫಲವನ್ನು ನೀಡಿದೆ. ಭಾಗಿದರಿ ಸಂಕಲ್ಪ ಮೋರ್ಚಾಕ್ಕೆ ಸೇರಲು ಭೀಮ್ ಆರ್ಮಿ ಪಕ್ಷದ ಮುಖ್ಯಸ್ಥ ಚಂದ್ರ ಶೇಖರ್ ಆಜಾದ್ ರಾವಣ್ ಸಮ್ಮತಿ ಸೂಚಿಸಿದ್ದಾರೆ," ಎಂದು ಹೇಳಿದ್ದಾರೆ. ಇತ್ತೀಚೆಗೆ ಎಐಎಮ್ಐಎಮ್ ಮುಖ್ಯಸ್ಥ ಅಸ್ಸಾದುದ್ಧೀನ್ ಓವೈಸಿ ಅವರು ಈ ಮೈತ್ರಿಯ ಬಗ್ಗೆ ತಿಳಿಸಿದ್ದರು. "ಓಂ ಪ್ರಕಾಶ್ ರಾಜಭರ್ ನೇತೃತ್ವದ ಎಸ್ಬಿಎಸ್ಪಿ ಹಾಗೂ ಅದರ ಭಾಗಿದರಿ ಸಂಕಲ್ಪ ಮೋರ್ಚಾಕ್ಕೆ ಸೇರಿ ನಾವು 100 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದೇವೆ," ಎಂದು ಎಐಎಮ್ಐಎಮ್ ಮುಖ್ಯಸ್ಥ ಅಸ್ಸಾದುದ್ಧೀನ್ ಓವೈಸಿ ಮಾಹಿತಿ ನೀಡಿದ್ದರು.
ಏನಿದು ಭಾಗಿದರಿ ಸಂಕಲ್ಪ ಮೋರ್ಚಾ?
ಈ ಹಿಂದೆ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್ಬಿಎಸ್ಪಿ), ಬಿಜೆಪಿಯ ಮೈತ್ರಿ ಪಕ್ಷವಾಗಿತ್ತು. ಎಸ್ಬಿಎಸ್ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜಭರ್ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರು ಆಗಿದ್ದರು. ಆದರೆ 2019 ರ ಲೋಕ ಸಭಾ ಚುನಾವಣೆಗೂ ಮುನ್ನ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಓಂ ಪ್ರಕಾಶ್ ರಾಜಭರ್ ಸಣ್ಣ ಪಕ್ಷಗಳ ಮೈತ್ರಿ ಕೂಟವನ್ನು ರಚನೆ ಮಾಡಿದರು. ಇದಕ್ಕೆ ಭಾಗಿದರಿ ಸಂಕಲ್ಪ ಮೋರ್ಚಾ ಎಂದು ಹೆಸರು ಇಟ್ಟರು.
ಅಕ್ಟೋಬರ್ 27 ರಂದು ಮೋರ್ಚಾದ ಮೊದಲ ರ್ಯಾಲಿಯಲ್ಲಿ ಘೋಷಣೆ
ಇನ್ನು ಎಐಎಮ್ಐಎಮ್ ಮುಖ್ಯಸ್ಥ ಅಸ್ಸಾದುದ್ಧೀನ್ ಓವೈಸಿ ಹಾಗೂ ಭೀಮ್ ಆರ್ಮಿ ಪಕ್ಷದ ಮುಖ್ಯಸ್ಥ ಚಂದ್ರ ಶೇಖರ್ ಆಜಾದ್ ಜೊತೆ ನಡೆದ ಸಭೆಯ ಬಗ್ಗೆ ಅಧಿಕ ಮಾಹಿತಿ ನೀಡಿದ ಓಂ ಪ್ರಕಾಶ್ ರಾಜಭರ್, "ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಉಭಯ ಪಕ್ಷಗಳ ನಾಯಕರ ಜೊತೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಎಸ್ಬಿಎಸ್ಪಿ ಸ್ಥಾಪನ ದಿನ ಅಕ್ಟೋಬರ್ 27 ಆಗಿದೆ. ಆದ್ದರಿಂದ ಆ ದಿನದಂದೇ ಮೌ ಜಿಲ್ಲೆಯ ಹಲ್ದಾರ್ಪುರದಲ್ಲಿ ಭಾಗಿದರಿ ಸಂಕಲ್ಪ ಮೋರ್ಚಾದ ಮೊದಲ ರ್ಯಾಲಿಯನ್ನು ನಡೆಸಲು ಚರ್ಚೆ ನಡೆಸಿ ನಿರ್ಧಾರ ಮಾಡಲಾಗಿದೆ," ಎಂದು ತಿಳಿಸಿದರು. "ಭಾಗಿದರಿ ಸಂಕಲ್ಪ ಮೋರ್ಚಾಕ್ಕೆ ಸೇರ್ಪಡೆಯಾಗಿರುವ ಅಧಿಕೃತ ಘೋಷಣೆಯನ್ನು ಭೀಮ್ ಆರ್ಮಿ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರೇ ಅಕ್ಟೋಬರ್ 27 ರಂದು ನಡೆಯುವ ಭಾಗಿದರಿ ಸಂಕಲ್ಪ ಮೋರ್ಚಾದ ಮೊದಲ ರ್ಯಾಲಿಯಲ್ಲಿ ಮಾಡಲಿದ್ದಾರೆ. ಇನ್ನು ಮೋರ್ಚಾದ ಮುಂದಿನ ರ್ಯಾಲಿಯು ನವೆಂಬರ್ 27 ರಂದು ಹರ್ದೋಯಿ ಜಿಲ್ಲೆಯ ಸಂಡೀಲಾದಲ್ಲಿ ನಡೆಯಲಿದೆ," ಎಂದು ಹೇಳಿದರು.
'ಮಾಫಿಯಾ ವ್ಯಕ್ತಿಗೆ ಟಿಕೆಟ್ ಇಲ್ಲ': ಮುಖ್ತಾರ್ ಅನ್ಸಾರಿಗೆ ಟಿಕೆಟ್ ನಿರಾಕರಿಸಿದ ಬಿಎಸ್ಪಿ
ಮೋರ್ಚಾದ ಇನ್ನು ಅಧಿಕ ರ್ಯಾಲಿಗಳು ನಡೆಯಲಿದೆ
"ಕಾನ್ಪುರ, ಮೋರಾದಬಾದ್ ಹಾಗೂ ಬಸ್ತಿಯಲ್ಲಿಯೂ ಬಳಿಕ ರ್ಯಾಲಿಯನ್ನು ನಡೆಸುವ ನಿರ್ಧಾರವನ್ನು ಈಗಲೇ ಮಾಡಿಕೊಳ್ಳಲಾಗಿದೆ. ಚಂದ್ರಶೇಖರ್ ಆಜಾದ್, ಅಸ್ಸಾದುದ್ಧೀನ್ ಓವೈಸಿ ಮಾತ್ರವಲ್ಲದೇ ಭಾಗಿದರಿ ಸಂಕಲ್ಪ ಮೋರ್ಚಾದಲ್ಲಿ ಇರುವ ಎಲ್ಲಾ ಪಕ್ಷಗಳ ಮುಖ್ಯಸ್ಥರು ಈ ರ್ಯಾಲಿಯಲ್ಲಿ ಭಾಗಿಯಾಗಿ, ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ. ಭೀಮ್ ಆರ್ಮಿ ಪಕ್ಷವು ಉತ್ತರ ಪ್ರದೇಶದಲ್ಲಿ ಮೊದಲು 2014 ರಲ್ಲಿ ಸ್ಥಾಪನೆಯಾಗಿದ್ದು, ದಲಿತ ಸಮುದಾಯದ ಪರವಾಗಿ ಹೋರಾಟವನ್ನು ನಡೆಸುತ್ತಾ ಬಂದಿದೆ. ಬಳಿಕ ಚಂದ್ರಶೇಖರ್ ಆಜಾದ್ ಚುನಾವಣೆಯಲ್ಲಿ ಭಾಗಿಯಾಗುವ ಹಿನ್ನೆಲೆ 2020 ರಲ್ಲಿ ಆಜಾದ್ ಸಮಾಜ ಪಕ್ಷವನ್ನು ಸ್ಥಾಪನೆ ಮಾಡಿದರು. ಈ ಪಕ್ಷವು ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಪಪ್ಪು ಯಾದವ್ ನೇತೃತ್ವದ ಜನ ಅಧಿಕಾರಿ ಪಕ್ಷದ ಮೈತ್ರಿ ಪಕ್ಷವಾಗಿದೆ.
'ಪ್ರಧಾನಿ ಹೆಸರಲ್ಲಿ ಪ್ರಚಾರ ಮಾಡುತ್ತೇವೆ': ಬಿಜೆಪಿಯನ್ನು ಅಣಕಿಸಿದ ಟಿಕಾಯತ್
ಎಸ್ಪಿ, ವಿಕಾಸ್ಶೀಲಾ ಇನ್ಸಾನ್ ಪಕ್ಷ ಮೋರ್ಚಾಗೆ ಸೇರ್ಪಡೆ?
ಇನ್ನು ಓಂ ಪ್ರಕಾಶ್ ರಾಜಭರ್ ಬಳಿ ಭಾಗಿದರಿ ಸಂಕಲ್ಪ ಮೋರ್ಚಾಕ್ಕೆ ವಿಕಾಸ್ಶೀಲಾ ಇನ್ಸಾನ್ ಪಕ್ಷ ಕೂಡಾ ಸೇರ್ಪಡೆಯಾಗಲಿದೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಜಭರ್, "ಅಕ್ಟೋಬರ್ 15 ರ ಒಳಗಾಗಿ ಈ ಬಗ್ಗೆ ನಿರ್ಧಾರ ತಿಳಿಸಲಾಗುವುದು ಎಂದು ವಿಕಾಸ್ಶೀಲಾ ಇನ್ಸಾನ್ ಪಕ್ಷದ ಅಧ್ಯಕ್ಷ, ಬಿಹಾರ ಸಂಪುಟ ಸಚಿವ ಮುಖೇಶ್ ಸಾಹ್ನಿ ತಿಳಿಸಿದ್ದಾರೆ," ಎಂದರು. "ಮುಖೇಶ್ ಸಾಹ್ನಿ ಅಕ್ಟೋಬರ್ 27 ರ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ ಎಂಬ ಭರವಸೆ ಇದೆ," ಎಂದು ಇದೆ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿಯ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ರಾಜಭರ್, "ಸಮಾಜವಾದಿ ಪಕ್ಷದ ರಾಷ್ಟ್ರೀಯ ನಾಯಕ ಅಖಿಲೇಶ್ ಯಾದವ್ರನ್ನು ಈವರೆಗೂ ಭೇಟಿಯಾಗಿಲ್ಲ. ಹಾಗೆಯೇ ಈ ಬಗ್ಗೆ ಪಕ್ಷದ ಯಾವುದೇ ನಾಯಕರುಗಳ ಜೊತೆ ಮಾತುಕತೆ ನಡೆಸಿಲ್ಲ," ಎಂದು ಮಾಹಿತಿ ನೀಡಿದ್ದಾರೆ.
ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್ಬಿಎಸ್ಪಿ) ಪಕ್ಷವು 2017 ರಲ್ಲಿ ಬಿಜೆಪಿಯಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಿದೆ. ರಾಜಭರ್ ಕ್ಷೇತ್ರದಲ್ಲಿ ಸುಮಾರು ಶೇಕಡ 20 ರಷ್ಟು ಮಂದಿ ಪೂರ್ವಾಂಚಲ್ನವರು ಆಗಿದ್ದಾರೆ. ಉತ್ತರ ಪ್ರದೇಶದಲ್ಲಿ ಯಾದವ ಸಮುದಾಯವನ್ನು ಹೊರತುಪಡಿಸಿ ಅಧಿಕ ರಾಜಕೀಯ ಪ್ರೇರಿತ ಸಮುದಾಯ ಇದಾಗಿದೆ.
(ಒನ್ ಇಂಡಿಯಾ ಸುದ್ದಿ)