ಡಿಕೆಶಿ ಭ್ರಷ್ಟಾಚಾರ ಆರೋಪ ಕುರಿತ ದೂರು ವಿಚಾರಣೆ ನಡೆಸಲು ಅನರ್ಹವೇ?
ಬೆಂಗಳೂರು, ಅಕ್ಟೋಬರ್ 18: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬೇನಾಮಿ ಆಸ್ತಿ ಕುರಿತು ಕುರಿತ ಕಾಂಗ್ರೆಸ್ ಮಖಂಡ ಸಲೀಂ ಮತ್ತು ಮಾಜಿ ಸಚಿವ ವಿ.ಎಸ್. ಉಗ್ರಪ್ಪ ಅವರಿಂದ ಸ್ಫೋಟಗೊಂಡಿದ್ದ ಅಡಿಯೋ ಬಾಂಬ್ ಹೊಸ ತಿರುವು ಪಡೆದು ಕೊಂಡಿದೆ. ಡಿ.ಕೆ. ಶಿವಕುಮಾರ್ ಸೇರಿದಂತೆ ಹದಿಮೂರು ಮುಂದಿ ವಿರುದ್ಧ ಸ್ವಯಂ ಸೇವಾ ಸಂಸ್ಥೆಯ ಸಂಸ್ಥಾಪಕ ಅಲಂಪಾಷಾ ಅವರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡಿದ್ದಾರೆ.
ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇತ್ತೀಚೆಗೆ ಐಟಿ ದಾಳಿಗೆ ತುತ್ತಾಗಿದ್ದ ಬಿ.ವೈ. ಉಪ್ಪಾರ್, ವಿಜಯೇಂದ್ರ ಅವರ ಆಪ್ತ ಅರವಿಂದ್, ಬಸ್ ನಿರ್ವಾಹಕ ಎಂ.ಆರ್. ಉಮೇಶ್ ಸೇರಿದಂತೆ ಹದಿಮೂರು ಮಂದಿ ವಿರುದ್ಧ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ. ಆದರೆ, ಆಲಂಪಾಷಾ ಅವರು ನೀಡಿರುವ ದೂರನ್ನು ಆಧರಿಸಿ ಎಸಿಬಿ ಪೊಲೀಸರು ಪ್ರಾಥಮಿಕ ತನಿಖೆಯನ್ನು ನಡೆಸುವುದು ಕೂಡ ಅನುಮಾನ. ಯಾಕೆಂದರೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ದೂರು ಸ್ವೀಕರಿಸಿ ತನಿಖೆ ನಡೆಸಲು ಈ ದೂರು ಅರ್ಹತೆಯೇ ಪಡೆದಿಲ್ಲ ಎಂಬ ಮಾಹಿತಿ ಎಸಿಬಿ ಅಧಿಕಾರಿ ಮೂಲಗಳಿಂದ ತಿಳಿದು ಬಂದಿದೆ.
ಭ್ರಷ್ಟಾಚಾರದ ಮೂಲ
ಜಲಸಂಪನ್ಮೂಲ ಇಲಾಖೆಯ ಟೆಂಡರ್ ಅಕ್ರಮಗಳಿಗೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 50 ಕಡೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಮೂವರು ಗುತ್ತಿಗೆದಾರರ ಬಳಿ 750 ಕೋಟಿ ರೂ.ಗೂ ಅಧಿಕ ಅಕ್ರಮ ವಹಿವಾಟಿನ ದಾಖಲೆಗಳು ಲಭ್ಯವಾಗಿದ್ದವು. ಬಿ.ಎಸ್. ಯಡಿಯೂರಪ್ಪ ಅವರ ಅಪ್ತ, ಬಿ.ವೈ. ವಿಜಯೇಂದ್ರ ಅವರ ಅವರ ಕ್ಲಾಸ್ಮೇಟ್ ಸೇರಿದಂತೆ ಅನೇಕ ಗುತ್ತಿಗೆದಾರರು ದಾಳಿಗೆ ತುತ್ತಾಗಿದ್ದರು. ಇದು ರಾಷ್ಟ್ರ ಮಟ್ಟದ ಸುದ್ದಿಯಾಗಿತ್ತು.
ಇದರ ಬೆನ್ನಲ್ಲೇ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಅವರದ್ದೇ ಪಕ್ಷದ ಮುಖಂಡರಾದ ವಿ.ಎಸ್. ಉಗ್ರಪ್ಪ ಮತ್ತು ಸಲೀಂ ಗುಪ್ತವಾಗಿ ಮಾತನಾಡುವ ಭರದಲ್ಲಿ ಡಿ.ಕೆ. ಶಿವಕುಮಾರ್ ಒಬ್ಬ ಭ್ರಷ್ಟಾಚಾರಿ. ನೀರಾವರಿ ಇಲಾಖೆಯ ಟೆಂಡರ ಗಳ ಅಕ್ರಮದಲ್ಲಿ ಇವರು ಭಾಗಿಯಾಗಿದ್ದಾರೆ. 12 ಪರ್ಸೆಂಟ್ ಕಮೀಷನ್ ಪಡೆದಿದ್ದಾರೆ ಎಂದು ಪರಸ್ಪರ ಮಾತನಾಡಿಕೊಂಡಿದ್ದ ಅಡಿಯೋ ಮಾಧ್ಯಮಗಳ್ಲಲಿ ಸ್ಫೋಟಗೊಂಡಿತ್ತು.
ಸಾಮಾನ್ಯ ಮಾತುಕತೆಯ ಅಡಿಯೋ ಆಧರಿಸಿ ಆಲಂಪಾಷಾ ಅವರು ಎಸಿಬಿಗೆ ದೂರು ನೀಡಿದ್ದಾರೆ. ಅಡಿಯೋ ಆಧರಿಸಿ ನೀಡುವ ದೂರಿಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಊರ್ಜಿತವಾಗದ ದೂರು ನೀಡುವ ಮೂಲಕ ಮಾಧ್ಯಮಗಳಲ್ಲಿ ಪುಕ್ಕಟ್ಟೆ ಪ್ರಚಾರ ಪಡೆಯಲು ಇಳಿದರಾ? ಇಲ್ಲವೇ ಮಾಧ್ಯಮಗಳ ದಿಕ್ಕು ತಪ್ಪಿಸುವ ಪ್ರಯತ್ನದ ಭಾಗವಾಗಿ ಮಾಧ್ಯಮಗಳಿಗೆ ಸುದ್ದಿಯನ್ನಾಗಿ ಹುಟ್ಟು ಹಾಕಿದರಾ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ದೂರಿನಲ್ಲಿ ಏನಿದೆ?
ಸಲೀಂ ಹಾಗೂ ಉಗ್ರಪ್ಪ ಅವರ ಸಂಭಾಷಣೆ ಅಕ್ಷರಶಃ ಸತ್ಯವಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಡಿ.ಕೆ ಶಿವಕುಮಾರ್ ಅವರ ಭ್ರಷ್ಟಾಚಾರದ ಬಗ್ಗೆ ಗೊತ್ತಿದೆ. ಡಿ.ಕೆ ಶಿವಕುಮಾರ್ ನೀರಾವರಿ ಸಚಿವರಾಗಿದ್ದ ವೇಳೆ ಜಲಸಂಪನ್ಮೂಲ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದ ಆರೋಪ ಕೇಳಿ ಬಂದಿದೆ. ಡಿ.ಕೆ. ಶಿವಕುಮಾರ್ 10 ರಿಂದ 12 ರಷ್ಟು ಕಮೀಷನ್ ಪಡೆಯುತ್ತಿದ್ದರು ಎಂದು ಅವರೇ ಮಾತನಾಡಿದ್ದಾರೆ. ಜಲ ಸಂಪನ್ಮೂಲ ಇಲಾಖೆಯಲ್ಲಿ ನಡೆದಿರುವ ಟೆಂಡರ್ ಅಕ್ರಮಕ್ಕೆ ಸಂಬಂಧಿಸಿದಂತೆ 750 ಕೋಟಿ ರೂ. ಅಕ್ರಮ ನಡೆದಿರುವ ಬಗ್ಗೆ ಐಟಿ ಅಧಿಕಾರಿಗಳು ದಾಖಲೆ ಕಲೆ ಹಾಕಿದ್ದಾರೆ.
ಡಿ.ಕೆ. ಶಿವಕುಮಾರ್ ಮಾತ್ರವಲ್ಲ, ಬಿ.ಎಸ್. ಯಡಿಯೂರಪ್ಪ ಅವರು ಕೂಡ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ. ಸಲೀಂ ಅವರ ಅಡಿಯೋ ಕುರಿತು ತನಿಖೆ ನಡೆಸುವಂತೆ ಕೋರಿ ಎಸಿಬಿ ಬೆಂಗಳೂರು ಘಟಕದ ಅಧಿಕಾರಿಗಳಿಗೆ ಆಲಂಪಾಷಾ ದೂರು ನೀಡಿದ್ದಾರೆ. ದೂರಿನ ಜತೆಗೆ ಇಬ್ಬರ ನಡುವಿನ ಸಂಭಾಷಣೆ ಸಿಡಿ ಕೊಟ್ಟಿದ್ದಾರೆ. ಆದರೆ ಈ ದೂರನ್ನು ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಾರಾ? ಅಥವಾ ಅರ್ಜಿಯನ್ನ ಕಸದ ಬುಟ್ಟಿಗೆ ಹಾಕ್ತಾರಾ ಕಾದು ನೋಡಬೇಕಿದೆ.
ದೂರಿನ ಮೇಲೆ ಮತ್ತೊಂದು ದೂರು
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರ ವಿರುದ್ಧ ಆಲಂಪಾಷಾ ದೂರು ನೀಡಿದ ಬೆನ್ನಲ್ಲೇ ಕೆಂಚನಹಳ್ಳಿಯ ನಿವಾಸಿ ರವಿಕುಮಾರ್ ಎಂಬುವರು ಮತ್ತೊಂದು ದೂರು ನೀಡಿದ್ದಾರೆ. ಡಿ.ಕೆ. ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್, ಗುತ್ತಿಗೆದಾರರ ವಿರುದ್ಧ ದೂರು ನೀಡಿದ್ದಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದಿರುವ ಟೆಂಡರ್ ಹಾಗು ಇದರಲ್ಲಿ ಅಧಿಕಾರಿಗಳು ಭಾಗಿಯಾಗಿದ್ದು, ಕಮೀಷನ್ ದಂಧೆ ಕುರಿತು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಿನಿಮಾ ವಿತರಕರ ಬಳಿ ಜೀವನ ಸಾಗಿಸುತ್ತಿದ್ದ ಡಿ.ಕೆ. ಶಿವಕುಮಾರ್, ಎಂಎಲ್ಎ ಆದ ಬಳಿಕ ಸಮಾಜ ಘಾತುಕರನ್ನ ಜತೆಯಲ್ಲಿ ಇಟ್ಟುಕೊಂಡು ಅಕ್ರಮ ಹಣ ಗಳಿಸಿದ್ದಾರೆ. ಇಡಿ, ಐಟಿ ದಾಳಿಗೆ ಒಳಗಾಗಿದ್ದಾರೆ. ಇವರುಗಳ ವಿರುದ್ಧದ ಹಲವು ದೂರು ಇನ್ನೂ ತನಿಖೆಯಲ್ಲಿವೆ. ಶೇ. 12 ರಷ್ಟು ಕಮೀಷನ್ ಪಡೆಯುತ್ತಾರೆ. ಇವರ ಹುಡುಗನ ಬಳಿ ನೂರಾರು ಕೋಟಿ ಇದೆ ಎನ್ನುವುದಾದರೆ ಇವರ ಬಳಿ ಎಷ್ಟಿರಬೇಕು. ಈ ಕುರಿತು ತನಿಖೆ ಮಾಡಿ ಕೇಸು ದಾಖಲಿಸಿ ಎಂದು ರವಿಕುಮಾರ್ ದೂರು ನೀಡಿದ್ದಾರೆ. ಶಿವಕುಮಾರ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ರವಿಕುಮಾರ್ ಮನವಿ ಮಾಡಿದ್ದಾರೆ.
ಎರಡು ದೂರು ವಿಚಾರಣೆಗೆ ಅನರ್ಹ
ಸಾಮಾಜಿಕ ಕಾರ್ಯಕರ್ತ ಆಲಂಪಾಷಾ ಮತ್ತು ರವಿಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ನೀಡಿರುವ ದೂರುಗಳಿಂದ ಏನೂ ಪ್ರಯೋಜನವಿಲ್ಲ. ಆ ಎರಡು ದೂರು ಪ್ರಾಥಮಿಕ ವಿಚಾರಣೆ ನಡೆಸಲು ಅರ್ಹತೆ ಪಡೆದಿಲ್ಲ ಎಂಬ ವಿಚಾರ ಬಯಲಿಗೆ ಬಂದಿದೆ. ಯಾವುದೇ ಒಬ್ಬ ಜನ ಪ್ರತಿನಿಧಿ ಹಾಗೂ ಸರ್ಕಾರಿ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ದೂರು ನೀಡಿದರೆ, ಅದಕ್ಕೆ ಸಮರ್ಥ ದಾಖಲೆಗಳನ್ನು ನೀಡಬೇಕು. ಆ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ( ತಿದ್ದುಪಡಿ ) 17 a ಪ್ರಕಾರ ವಿಚಾರಣೆ ನಡಸಬೇಕು.
ಆದರೆ, ದೂರಿನ ವಿಚಾರಣೆಗೂ ಮುನ್ನ ಸರ್ಕಾರದ ಅನುಮತಿ ಪಡೆಯಬೇಕು. ಸರ್ಕಾರ ಅನುಮತಿ ( ಶಾಸಕರು ಆದರೆ ವಿಧಾನಸಭಾ ಅಧ್ಯಕ್ಷರು, ಸಚಿವರು ಆಗಿದ್ದರೆ ರಾಜ್ಯಪಾಲರು) ನೀಡಬೇಕಾದರೆ, ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಲಗತ್ತಿಸಿರಬೇಕು. ಆದರೆ, ಆಲಂಪಾಷಾ ಹಾಗು ರವಿಕುಮಾರ್ ನೀಡಿರುವ ದಾಖಲೆಗಳು ಕೇವಲ ಸಲೀಂ ಹೇಳಿಕೆ ಆಧಾರಿತ ಅಡಿಯೋ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ತಿದ್ದುಪಡಿ ಅಧಿನಿಯಮದ ಪ್ರಕಾರ ಈ ಎರಡು ದೂರುಗಳು ಎಸಿಬಿ ವಿಚಾರಣೆ ನಡೆಸಲು ಅರ್ಹತೆ ಪಡೆದಿಲ್ಲ ಎಂಬ ಮಾಹಿತಿ ಎಸಿಬಿ ಮೂಲಗಳಿಂದ ತಿಳಿದು ಬಂದಿದೆ.