ದೇಹ, ಮನಸ್ಸುಗಳ ಉಲ್ಲಾಸಕ್ಕೆ ನಿಸರ್ಗಧಾಮಕ್ಕೆ ಭೇಟಿ...
ದಣಿದ ದೇಹ, ಮನಸ್ಸಿಗೆ ವಿರಾಮ ಬೇಕು. ಆಹ್ಲಾದಕಾರ ವಾತಾವರಣದಲ್ಲಿ ದಿನ ಕಳೆದು ಬರಬೇಕು. ಆ ಸ್ಥಳ ಬೆಂಗಳೂರಿಗೆ ಹತ್ತಿರವೂ ಇರಬೇಕು. ಹೋಗಿ-ಬರಲು ರಸ್ತೆ ಚೆನ್ನಾಗಿದ್ದು, ನಾವಿರಿಸಿಕೊಂಡ ಉದ್ದೇಶ ಹೋದ ಜಾಗದಲ್ಲಿ ಈಡೇರಬೇಕು ಅಂತೆಲ್ಲಾ ನಿಮಗನಿಸುತ್ತಿದ್ದರೆ ಇಲ್ಲೊಂದು ಸ್ಥಳವಿದೆ.
ಇದರ ಹೆಸರು ನಿಸರ್ಗಧಾಮ. ಮಡಿಕೇರಿಯ ಕುಶಾಲನಗರದಲ್ಲಿ ಇದೆ. ಮೈಸೂರಿಗೆ 95 ಕಿ.ಮೀ., ಕುಶಾಲನಗರಕ್ಕೆ 3 ಕಿ.ಮೀ ದೂರದಲ್ಲಿರುವ ನಿಸರ್ಗಧಾಮವನ್ನು ಅರಣ್ಯ ಇಲಾಖೆಯವರು ನೋಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಇದು ಮಡಿಕೇರಿ ಹೆದ್ದಾರಿಯಲ್ಲೇ ಇದೆ. 1989ರಲ್ಲಿ ಆರಂಭವಾಗಿರುವ ಈ ನಿಸರ್ಗಧಾಮ 64 ಎಕರೆ ವ್ಯಾಪಿಸಿದೆ. ನಮಗಂತೂ ಈ ಸ್ಥಳ ತಲುಪಿದ ಕ್ಷಣದಲ್ಲಿ ಆದ ಸಂತೋಷ ಅಷ್ಟಿಷ್ಟಲ್ಲ.[ಮೈದುಂಬಿ ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್ ನತ್ತ ಪ್ರವಾಸಿಗರ ದೌಡು]
ಕಾವೇರಿ ನದಿ, ಗಂಧದ ಘಮ
ಸೇತುವೆ ಮೇಲಿಂದ ನಡೆದು ಹೋಗುವಾಗ ಅದರ ಕೆಳಗೆ ಹರಿಯುವ ಕಾವೇರಿ ನದಿಯ ಶಬ್ದ ಕಿವಿಗೆ ತಾಕುತ್ತಿರುತ್ತದೆ. ಸುತ್ತಲೂ ಬಿದಿರ ಮರಗಳು. ಗಂಧದ ಘಮ, ಟೀಕ್ ಮರಗಳ ಮೇಲಿನ ಪ್ರಾಣಿಗಳ ಕೆತ್ತನೆಗೆ ಬಣ್ಣದ ಅಲಂಕಾರ...ಮನೆಯಿಂದ ಹೊರಗೆ ಇಂಥದ್ದೊಂದು ತಾಣಕ್ಕೆ ಬಂದರೆ ದೊರೆಯುವ ಉಲ್ಲಾಸಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವೇ?
ಬುತ್ತಿ ಕಟ್ಟಿಕೊಂಡು ಹೋಗಿ
ಬುತ್ತಿ ಕಟ್ಟಿಕೊಂಡು ಹೋಗಿದ್ದರೆ ಬಿದಿರು ಮನೆಯಲ್ಲಿ ಕೂರಲು ಆರಾಮವಾಗಿರುವ ಕುರ್ಚಿಗಳು, ಪಕ್ಕದಲ್ಲಿಯೇ ನಲ್ಲಿ, ವಾಶ್ ಬೇಸಿನ್, ಕಸ ಹಾಕಲು ತೊಟ್ಟಿ ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿದೆ. ಮಕ್ಕಳಿಗಾಗಿ ಉಯ್ಯಾಲೆ ಇದೆ. ನಮಗೆ ಕುತೂಹಲ ಅನಿಸಿದ್ದು ಅಲ್ಲಿನ ಕಾಟೇಜ್ ಗಳು. ಪಯಶ್ವಿನಿ, ವಿಜಯಶ್ರೀ ಹೆಸರಿನ ಕಾಟೇಜ್ ನಾವು ನೋಡಿದೆವು. ಅಲ್ಲಿಂದ ಮುಂದೆ ಜಿಂಕೆ ಮೈದಾನ, ಆನೆ ಸವಾರಿ, ವಾಟರ್ ರಾಫ್ಟಿಂಗ್, ದೋಣಿ ವಿಹಾರ ಎಲ್ಲ ಇದೆ.
ಆನೆ ಶಿಬಿರಕ್ಕೆ ಹೋಗಿದ್ವಿ
ಆದರೆ, ನಾವು ಹೋಗಿದ್ದ ದಿನ ಕಾವೇರಿ ನದಿ ಹರಿವು ಜಾಸ್ತಿ ಇದ್ದಿದ್ದರಿಂದ ವಾಟರ್ ರಾಫ್ಟಿಂಗ್, ದೋಣಿ ವಿಹಾರ ನಿಲ್ಲಿಸಿದ್ದರು. ನಿಸರ್ಗಧಾಮಕ್ಕೆ ಹತ್ತಿರದಲ್ಲೇ ಅಂದರೆ ಬರೀ 12 ಕಿ.ಮೀ. ದೂರ ಇದೆ. ಆನೆಗಳ ಶಿಬಿರ ಇಲ್ಲಿದ್ದು, ಅವುಗಳಿಗೆ ಸ್ನಾನ ಮಾಡಿಸುವುದನ್ನು, ಹಣೆಗೆ ಎಣ್ಣೆ ಹಚ್ಚೋದನ್ನ, ಆಹಾರ ತಯಾರು ಮಾಡುವುದನ್ನ ನೋಡಬಹುದು. ಜತೆಗೆ ಆನೆಗಳಿಂದ ಏರ್ಪಡಿಸುವ ಪ್ರದರ್ಶನ ಸಕತ್ತಾಗಿ ಇರುತ್ತೆ.
ಆನೆ ಸವಾರಿ
ದಸರಾ ಆನೆಗಳನ್ನೂ ಇಲ್ಲೇ ಪಳಗಿಸುತ್ತಾರೆ ಎಂದು ಕೇಳಿ ತಿಳಿದೆವು. ಆನೆಗಳ ಚಟುವಟಿಕೆ ನೋಡುವಾಗ ಅವು ಇಷ್ಟಪಡುವ ಪರಿಸರ, ವಿಜ್ಞಾನ, ಇತಿಹಾಸ, ಸಂರಕ್ಷಣೆ ಎಲ್ಲವನ್ನೂ ಪ್ರವಾಸಿಗರಿಗೆ ವಿವರಿಸಿದರು. ಕೊನೆಯಲ್ಲಿ 10-15 ನಿಮಿಷ ಆನೆ ಸವಾರಿಯೂ ಇತ್ತು. ಅದು ಮಕ್ಕಳಿಗೆ ಬಹಳ ಖುಷಿ ನೀಡಿತು.
ಅಬ್ಬಿ ಜಲಪಾತ
ಅರಣ್ಯ ಇಲಾಖೆ ನಡೆಸುವ ಅತಿಥಿ ಗೃಹವೂ ಇರುವುದರಿಂದ ನಿಸರ್ಗಧಾಮ ಹೆಚ್ಚು ಆಕರ್ಷಣೀಯ. ವಸತಿಗೆ ಯಾವುದೇ ಸಮಸ್ಯೆ ಇಲ್ಲ. 40 ಕಿ.ಮೀ. ದೂರದಲ್ಲಿ ತಲಕಾವೇರಿ ಇದೆ. ಅಕ್ಟೋಬರ್ 17ರಂದು ಸಂಕ್ರಮಣ ಇದೆ, ಕಾವೇರಿ ನೀರು ಚಿಮ್ಮುತ್ತದೆ ಎಂದು ತಿಳಿಯಿತು. ಇನ್ನು ಭಾಗಮಂಡಲದಲ್ಲಿ ಗಣಪತಿ, ಭಗಂಡೇಶ್ವರ ಮತ್ತು ಸುಬ್ರಹ್ಮಣ್ಯ ದೇವಸ್ಥಾನಗಳಿದ್ದು, ಮಧ್ಯಾಹ್ನ ಊಟದ ವ್ಯವಸ್ಥೆಯೂ ಇದೆ. ಅದರ ಹತ್ತಿರದಲ್ಲೇ ಅಬ್ಬಿ ಜಲಪಾತವಿದ್ದು, ಪ್ರವಾಸಿಗರಿಗೆ ಮನತಣಿಸುತ್ತದೆ.