ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಮೂಲಕ 2 ಗಂಟೆಗೆ ತಗ್ಗಿದ ಪ್ರಯಾಣ ಅವಧಿ
ಬೆಂಗಳೂರು, ಆಗಸ್ಟ್ 08: ಬೆಂಗಳೂರು ಮತ್ತು ಚೆನ್ನೈ ನಗರಗಳ ನಡುವಿನ ಪ್ರಯಾಣದ ಸಮಯ ಇದೀಗ ಐದು ಗಂಟೆಯಿಂದ ಎರಡು ಗಂಟೆಗೆ ಕಡಿತಗೊಂಡಿದೆ. ಎರಡು ರಾಜ್ಯಗಳ ರಾಜಧಾನಿ ನಡುವಿನ ಅಂತರ ತಗ್ಗುವುದಕ್ಕೆ ಬೆಂಗಳೂರು, ಚೆನ್ನೈ ಎಕ್ಸ್ಪ್ರೆಸ್ವೇ ಕಾರಣವಾಗಿದೆ.
ಇತ್ತೀಚಿಗೆ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಈ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಕುರಿತು ಮಾಹಿತಿ ನೀಡಿದ್ದಾರೆ. ಭಾರತವು ಮುಂದಿನ ಮೂರು ವರ್ಷಗಳಲ್ಲಿ 26 ಹೊಸ ಹಸಿರು ಎಕ್ಸ್ಪ್ರೆಸ್ವೇಗಳನ್ನು ಹೊಂದಲಿದೆ. ಇದು ರಸ್ತೆ ಮಾರ್ಗಗಳನ್ನು ಆಯ್ಕೆ ಮಾಡುವ ಜನರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಎಂದು ಸಚಿವರು ಹೇಳಿದರು.
ಬೆಂಗಳೂರು-ಮೈಸೂರು ರಸ್ತೆ; ಗಡ್ಕರಿ ಕೊಟ್ಟ ಹೊಸ ಅಪ್ ಡೇಟ್
2 ಗಂಟೆಯಲ್ಲಿ ರಸ್ತೆ ಮಾರ್ಗದಲ್ಲೇ ಚೆನ್ನೈ ತಲುಪಿರಿ
ಕೇಂದ್ರದ ಗ್ರೀನ್ ಎಕ್ಸ್ಪ್ರೆಸ್ವೇಗಳ ಸಾಲಿನಲ್ಲಿ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಕೂಡಾ ಒಂದಾಗಿದೆ. ಇದರಿಂದ ಪ್ರಯಾಣಿಕರಿಗೆ ಚೆನ್ನೈನಿಂದ ಬೆಂಗಳೂರು ಅಥವಾ ಬೆಂಗಳೂರಿನಿಂದ ಚೆನ್ನೈಗೆ ತಲುಪುವುದಕ್ಕೆ ರಸ್ತೆ ಮಾರ್ಗ ಆಯ್ದುಕೊಳ್ಳುವುದು ಉತ್ತಮವಾಗಿರುತ್ತದೆ. ಏಕೆಂದರೆ ಎರಡು ಗಂಟೆಗಳಲ್ಲಿ ಪ್ರಯಾಣಿಕರು ತಮ್ಮ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಸಚಿವು ತಿಳಿಸಿದ್ದಾರೆ.
ನಮ್ಮ ರಸ್ತೆಗಳು ಅಮೆರಿಕಾದಲ್ಲಿನ ರಸ್ತೆಗಳಂತೆ ಆಗುತ್ತವೆ
"ಗ್ರೀನ್ ಎಕ್ಸ್ಪ್ರೆಸ್ವೇಗಳು ನಮ್ಮ ರಸ್ತೆ ಮಾರ್ಗದ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಭವಿಷ್ಯದಲ್ಲಿ ನಮ್ಮ ರಸ್ತೆಗಳು ಅಮೆರಿಕದ ರಸ್ತೆಗಳಿಗಿಂತ ಕಡಿಮೆಯಾಗಿ ಇರುವುದಿಲ್ಲ. ಈ ಮಾತನ್ನು ನಾನು ಪುನರುಚ್ಛರಿಸುವುದಕ್ಕೆ ಬಯಸುತ್ತೇನೆ," ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಮೇನಲ್ಲಿ ಬೆಂಗಳೂರು-ಚೆನ್ನೈ ಹೆದ್ದಾರಿ ಕುರಿತು ಮೋದಿ ಮಾತು
ಕಳೆದ ಮೇ ತಿಂಗಳಿನ ಮೊದಲಿನಿಂದಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಬೆಂಗಳೂರು-ಚೆನ್ನೈ ಹೆದ್ದಾರಿಯನ್ನು ಪ್ರಸ್ತಾಪಿಸಿದ್ದರು. "ಬೆಂಗಳೂರು-ಚೆನ್ನೈ ಹೆದ್ದಾರಿಯು ಎರಡು ಪ್ರಮುಖ ಅಭಿವೃದ್ಧಿ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಚೆನ್ನೈ ಬಂದರು ಮತ್ತು ಮಧುರವಾಯಲ್ ನಡುವಿನ ನಾಲ್ಕು ಪಥಗಳ ಎಲಿವೇಟೆಡ್ ರಸ್ತೆಯು ಚೆನ್ನೈ ಬಂದರಿನ ದಕ್ಷತೆಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ನಗರದಲ್ಲಿ ದಟ್ಟಣೆಯನ್ನು ನಿವಾರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಪ್ರಧಾನಿ ಮೋದಿ
ಕಳೆದ ಮೇ ತಿಂಗಳಿನಲ್ಲಿ 262 ಕಿಲೋ ಮೀಟರ್ ದೂರದ ಎಕ್ಸ್ಪ್ರೆಸ್ವೇಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಹೆದ್ದಾರಿಯು ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸಂಚರಿಸಲಿದೆ. ಹೆದ್ದಾರಿಯು ಚೆನ್ನೈ ಮತ್ತು ಬೆಂಗಳೂರು ನಡುವಿನ ಪ್ರಸ್ತುತ ಐದರಿಂದ ಆರು ಗಂಟೆಗಳ ಸರಾಸರಿ ಪ್ರಯಾಣದ ಸಮಯವನ್ನು ಎರಡರಿಂದ ಮೂರು ಗಂಟೆಗೆ ಕಡಿತಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ 117 ಕಿಲೋಮೀಟರ್ ಬೆಂಗಳೂರು-ಮೈಸೂರು ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಅಕ್ಟೋಬರ್ನೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.