ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಲ ನಾಡು ಕೊಪ್ಪಳ ಜಿಲ್ಲೆಯ ಕಬ್ಬರಗಿ ಜಲಪಾತ

By Mahesh
|
Google Oneindia Kannada News

ಸಾಮಾನ್ಯವಾಗಿ ಜಲಪಾತಗಳನ್ನು ನೋಡಬೇಕು ಎಂದರೆ ನಾವು ಮಲೆನಾಡಿಗೆ ಹೋಗಬೇಕು. ಆದರೆ, ಬಿಸಿಲನಾಡಲ್ಲಿ ಜಲಪಾತ ನೋಡಲು ಸಿಗುತ್ತೆ ಅಂದರೆ ನಂಬುವುದೇ ಕಷ್ಟ. ಆದರೂ ಇದು ನಿಜ.

ಅದು ಹೈದ್ರಾಬಾದ್ ಕರ್ನಾಟಕದಲ್ಲಿ ಇರೋ ಏಕೈಕ ಜಲಪಾತವಾಗಿದೆ. ಅರೇ ಇದೇನಪ್ಪ ಬರದ ನಾಡಲ್ಲಿ ಜಲಪಾತ ಅಂತೀರಾ? ಹೌದು ಇಂತಹದ್ದೊಂದು ಅಪರೂಪದ ಜಲಪಾತವನ್ನು ನಾವು ಬಿಸಿಲ ನಾಡಾದ ಕೊಪ್ಪಳ ಜಿಲ್ಲೆಯಲ್ಲಿ ಕಾಣಬಹುದು.

ಸೆ. 27 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ನಿಮಿತ್ಯ ಕೊಪ್ಪಳ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಾಧ್ಯಮದವರಿಗೆ ವಿಶೇಷ ಪ್ರವಾಸಿ ತಾಣಕ್ಕೆ ಪ್ರವಾಸ ಏರ್ಪಡಿಸಲಾಗಿತ್ತು.

ಒಂದೆಡೆ ಹಚ್ಚ ಹಸಿರಿನ ಕಾಡು, ಇನ್ನೊಂದಡೆ ರಭಸವಾಗಿ ಭೋರ್ಗರೆಯುತ್ತಿರುವ ಜಲಪಾತ, ಇನ್ನೊಂದಡೆ ಭೋರ್ಗೆರೆಯೋ ನೀರಿನಲ್ಲಿ ಮನಸು ಬಿಚ್ಚಿ ಆಟ ಆಡುತ್ತಿರೋ ಜನ. ಮತ್ತೊಂದೆಡೆ ಜಲಪಾತದ ದೃಶ್ಯ ವೈಭೋಗವನ್ನು ತಮ್ಮ ಮೊಬೈಲ್ ಅಥವಾ ಇನ್ಯಾವುದೋ ಕ್ಯಾಮೆರಾದಲ್ಲಿ ಸೆರೆಹಿಡಿಯಲು ತಲ್ಲೀನವಾಗಿರೋ ಪ್ರವಾಸಿಗರ ದೃಶ್ಯ .

ಇದನ್ನೆಲ್ಲ ನೋಡಿ ಇದ್ಯಾವುದೋ ಮಲೆನಾಡಿನ ಜಲಪಾತ ಎಂದು ಭಾವಿಸಿದಲ್ಲಿ ಅದು ಅವರ ತಪ್ಪು ಕಲ್ಪನೆ. ಈ ಜಲಪಾತ ಯಾವುದೇ ಮಲೆನಾಡಿನಲ್ಲಿ ಇರುವ ಜಲಪಾತವಲ್ಲ. ಬದಲಾಗಿ ಬಿಸಿಲನಾಡು ಕೊಪ್ಪಳ ಜಿಲ್ಲೆಯಲ್ಲಿ ಇರುವ ಜಲಪಾತ. ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಬೆಟ್ಟದ ಮೇಲಿರುವ ಕಪೀಲತೀರ್ಥ ಜಲಪಾತ. ಮಹಾಭಾರತ ಕಾಲದಲ್ಲಿ ಕಪಿಲಮುನಿಗಳು ಈ ಸ್ಥಳದಲ್ಲಿ ತಪಸ್ಸು ಮಾಡಿ, ಗಂಗೆಯನ್ನು ಇಲ್ಲಿಗೆ ಕರೆತಂದರು.

ಇದರಿಂದಾಗಿಯೇ ಇಲ್ಲಿ ಜಲಪಾತ ಸೃಷ್ಠಿಯಾಯಿತೆಂಬ ಐತಿಹ್ಯ ಜನಪದರಲ್ಲಿ ಮನೆ ಮಾಡಿದೆ. ಕೇವಲ ಮಳೆಗಾಲದಲ್ಲಿಮಾತ್ರ ಸೃಷ್ಟಿಯಾಗುವ ಈ ಜಲಪಾತವನ್ನು ನೋಡಲು ಕೊಪ್ಪಳ ಜಿಲ್ಲೆ ಸೇರಿದಂತೆ ಗದಗ, ಬಾಗಲಕೋಟೆ, ವಿಜಯಪುರ ಹಾಗೂ ಬಳ್ಳಾರಿ ಸೇರಿದಂತೆ ನೆರೆಹೊರೆಯ ವಿವಿಧ ಜಿಲ್ಲೆಗಳ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.

ಕಬ್ಬರಗಿ ಜಲಪಾತಕ್ಕೆ ಹೋಗುವುದು ಹೇಗೆ?

ಕಬ್ಬರಗಿ ಜಲಪಾತಕ್ಕೆ ಹೋಗುವುದು ಹೇಗೆ?

ಕಬ್ಬರಗಿ ಗ್ರಾಮದಿಂದ ಎರಡು ಕಿಲೋಮೀಟರ್ ದೂರವಿರುವ ಈ ಜಲಪಾತಕ್ಕೆ ಬೆಟ್ಟದಲ್ಲಿ ಒಂದು ಕಿಲೋ ಮೀಟರ್ ನಷ್ಟು ದೂರವನ್ನು ನಡೆದುಕೊಂಡೇ ಹೋಗಬೇಕು. ಜಲಪಾತದ ಸ್ಥಳದ ಹತ್ತಿರಕ್ಕೆ ಹೋದರೂ ಸಹ ನಮಗೆ ಇಲ್ಲಿ ಒಂದು ಜಲಪಾತ ಇದೇ ಅನ್ನುವುದು ಅರಿವಿಗೆ ಬರುವುದಿಲ್ಲ. ಬೆಟ್ಟದಿಂದ ಸ್ವಲ್ಪ ಕೆಳಗೆ ಇಳಿದಲ್ಲಿ ಭೋರ್ಗೆರೆಯೋ ನೀರಿನ ನಿನಾದ ಕೇಳಿದಾಗಲೆ ಗೊತ್ತಾಗುತ್ತದೆ ಇಲ್ಲಿ ಜಲಪಾತ ಇದೆ ಎಂದು.

ಕೊಪ್ಪಳ ಜಿಲ್ಲೆಯ ಕಪೀಲತೀರ್ಥ ಜಲಪಾತದ ಕೆಳಗೆ ನಿಂತು ಅದರ ಸೊಬಗು ಸವಿಯುತ್ತ ಸ್ನಾನವನ್ನೂ ಸಹ ಮಾಡಬಹುದಾಗಿದೆ. ಇಲ್ಲಿನ ವೈಶಿಷ್ಟ್ಯ ಎಂದರೆ, ಕೇವಲ 20 ಅಡಿ ಎತ್ತರದಿಂದ ರಭಸವಾಗಿ ಹರಿಯುವ ನೀರಿನ ಕೆಳಗೆ ನಿಂತು ಸ್ನಾನ ಮಾಡುವುದು.

ಸುಲಭವಾಗಿ ಹೋಗುವ ರಸ್ತೆ ಸಂಪರ್ಕ ಇಲ್ಲ

ಸುಲಭವಾಗಿ ಹೋಗುವ ರಸ್ತೆ ಸಂಪರ್ಕ ಇಲ್ಲ

ಈ ಜಲಪಾತದಲ್ಲಿ ಕೆಳಗೆ ನಿಂತು ಸ್ನಾನ ಮಾಡಿದರೆ ಮೈಯೆಲ್ಲಾ ಹಗುರವಾದ ಅನುಭವವನ್ನು ನೀಡುತ್ತದೆ. ಆದರೆ ಕಪಿಲ ತೀರ್ಥದ ಸೊಬಗನ್ನು ಆನಂದಿಸಲು ಸುಲಭವಾಗಿ ಹೋಗುವ ರಸ್ತೆ ಸಂಪರ್ಕ ಇಲ್ಲ. ಈ ಜಲಪಾತ ರಕ್ಷಿತ ಅರಣ್ಯ ಪ್ರದೇಶವಾಗಿರುವುದರಿಂದ ಇಲ್ಲಿ ರಸ್ತೆ ಮಾಡಲು ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ನಿಯಮಗಳ ಅಡ್ಡಿ ಇದೆ.

ಅರಣ್ಯ ಇಲಾಖೆಯ ಈ ಕಟ್ಟುನಿಟ್ಟಿನ ನಿಯಮಗಳೇ ಇಲ್ಲಿನ ಕಾಡು ಪ್ರದೇಶ ವಿಸ್ತಾರವಾಗಲು ಹಾಗೂ ಅರಣ್ಯದ ಸೊಬಗು ಉಳಿಯಲು ನೆರವಾಗಿದೆ ಎನ್ನುವುದು ಕೆಲವರ ಅಭಿಪ್ರಾಯ.

ನಿಮ್ಮೊಂದಿಗೆ ಊಟ, ಉಪಹಾರದ ಬುತ್ತಿ ತನ್ನಿ

ನಿಮ್ಮೊಂದಿಗೆ ಊಟ, ಉಪಹಾರದ ಬುತ್ತಿ ತನ್ನಿ

ಭೋರ್ಗರೆಯುತ್ತಿರುವ ಕಪಿಲತೀರ್ಥ ಜಲಪಾತಕ್ಕೆ ತಂಡೋತಂಡವಾಗಿ ಆಗಮಿಸುತ್ತಿರುವ ಜನ, ತಮ್ಮೊಂದಿಗೆ ಊಟ, ಉಪಹಾರದ ಬುತ್ತಿಯನ್ನು ಹೊತ್ತು ತರಲೇಬೇಕು.

ಈ ಪ್ರದೇಶದಲ್ಲಿ ಬುತ್ತಿ ಕಟ್ಟಿಕೊಂಡು ಬಂದು, ಜಲಪಾತದಲ್ಲಿ ಸ್ನಾನ ಮಾಡಿ, ಪ್ರಕೃತಿಯ ರಮ್ಯ ತಾಣದಲ್ಲಿ ಊಟ ಮಾಡುವುದೇ ಒಂದು ವಿಶೇಷ ಆನಂದ ನೀಡುತ್ತದೆ ಎಂದು ಕೆಲ ಪ್ರವಾಸಿಗರ ಅಭಿಪ್ರಾಯ.

ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆಗ್ರಹ

ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆಗ್ರಹ

ಒಟ್ಟಿನಲ್ಲಿ ಕಪೀಲತೀರ್ಥ ಜಲಪಾತಕ್ಕೆ ಉತ್ತಮ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳು ಲಭ್ಯವಾದಲ್ಲಿ, ಕಪೀಲತೀರ್ಥ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಇನ್ನೇಕೆ ತಡ ನೀವು ಒಮ್ಮೆ ಕಬ್ಬರಗಿಯ ಕಪೀಲತೀರ್ಥ ಜಲಪಾತಕ್ಕೆ ಭೇಟಿ ನೀಡಿ ಎಂಜಾಯ್ ಮಾಡಿ.

ಕಪೀಲತೀರ್ಥ ಜಲಪಾತ ನೋಡಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಬೆಟ್ಟದ ಮೇಲಿರುವ ಕಪೀಲತೀರ್ಥ ಜಲಪಾತ ನೋಡಿ ಆನಂದಿಸಿ

English summary
Tourism Day Special: Karnataka Information department has organised visit to Kabbaragi Water Falls in Kushtagi taluk, Koppal District, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X