ಕರಾವಳಿ ಕಡೆಗೆ ಪ್ರವಾಸಕ್ಕೆ ಹೋಗುವ ಮುನ್ನ ಎಚ್ಚರ: ಇಲ್ಲಿದೆ ಕೆಲ ಸೂಚನೆಗಳು!
ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿ ಬೊಬ್ಬೆರಿಯುತ್ತಿದೆ. ಕರಾವಳಿಯ ಎಲ್ಲಾ ಜೀವ ನದಿಗಳು ಮೈ ತುಂಬಿ ಹರಿಯುತ್ತಿದೆ. ಎಲ್ಲಾ ಜಲಪಾತಗಳು ಶರವೇಗದಲ್ಲಿ ಧುಮ್ಮುಕ್ಕುತ್ತಿದೆ. ನಿರಂತರವಾಗಿ ಸುರಿದ ಮಳೆಗೆ ಮಣ್ಣು ತೇವಗೊಂಡು ಮನೆಯೊಳಗೂ ನೀರಿನ ಪಸೆ ಕಾಣಿಸಿಕೊಂಡಿದೆ.
ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಕರಾವಳಿ ಅಕ್ಷರಶಃ ತೋಯ್ದು ತೊಪ್ಪೆಯಾಗಿದೆ. ಇಂತಹ ಸಂದರ್ಭದಲ್ಲಿ ಮಲೆನಾಡು, ಕರಾವಳಿಗೆ ನೀವು ಹೊರಟ್ಟಿದ್ದೀರಾ?. ಹಾಗಾದರೆ ಹೊರಡುವ ಮುನ್ನ ಕೆಲವೊಂದು ಎಚ್ಚರಿಕೆಗಳು ಇಲ್ಲಿದೆ, ಓದಿ ಹೊರಡಿ.
ಮಂಗಳೂರು: 15 ದಿನವಾದರೂ ಇಳಿಯದ ನೆರೆ ನೀರು, ಮನೆಯಿಂದ ಹೊರಬರಬೇಕಾದರೆ ಬೇಕು ಬೋಟ್!
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಮಳೆ ಜುಲೈ13 ರವರೆಗೆ ಮುಂದುವರಿಯುವ ಸೂಚನೆ ಇರೋದರಿಂದ ರಾಜ್ಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ ಅಂತಾ ಹವಾಮಾನ ಇಲಾಖೆ ಜಿಲ್ಲಾಡಳಿತವನ್ನು ಎಚ್ಚರಿಸಿದ್ದು, ಮುನ್ನಚ್ಚೆರಿಕಾ ಕ್ರಮಗಳನ್ನು ಅನುಸರಿಸುವಂತೆ ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ಯಾವ ರಸ್ತೆಗಳೂ ಕೂಡಾ ಈಗ ಸುರಕ್ಷಿತವಾಗಿಲ್ಲ. ಘಾಟ್ ಗಳಲ್ಲಿ ಅಲ್ಲಲ್ಲಿ ಮರ, ವಿದ್ಯುತ್ ಕಂಬಗಳು ಧರೆಗುರುಳಿತ್ತಿದೆ. ಗುಡ್ಡ ಕುಸಿತವಾಗುತ್ತಿದೆ. ಕರಾವಳಿಯನ್ನು ಸಂಪರ್ಕಿಸುವ ಶಿರಾಡಿ ಘಾಟ್, ಚಾರ್ಮಾಡಿ ಘಾಟ್, ಆಗುಂಬೆ ಘಾಟ್, ಹುಲಿಕಲ್ ಘಾಟ್, ಸಂಪಾಜೆ ರಸ್ತೆಯಲ್ಲೂ ಭೂ ಕುಸಿತ ಪ್ರಕರಣ ಸಂಭವಿಸುತ್ತಿದೆ.
ಅಪಾಯದ ಸ್ಥಿತಿಯಲ್ಲಿ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟ
ಇನ್ನು ಕರಾವಳಿ ಜಿಲ್ಲೆಗಳಿಗೆ ಅತೀ ಹೆಚ್ಚು ಜನ ಬರುವ ಶ್ರದ್ಧಾ ಕೇಂದ್ರಗಳ ನದಿಗಳೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಳೆದ ಒಂದು ವಾರದಿಂದ ಕುಕ್ಕೆ ಸುಬ್ರಹ್ಮಣ್ಯ ದ ಕುಮಾರಾಧಾರಾ ಸ್ನಾನ ಘಟ್ಟ ಸಂಪೂರ್ಣ ಜಲಾವೃತವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟವೂ ಅಪಾಯದ ಸ್ಥಿತಿಯಲ್ಲಿದೆ. ಎರಡೂ ಕಡೆಗಳಲ್ಲಿ ಭಕ್ತರಿಗೆ ನದಿಗಿಳಿದು ತೀರ್ಥ ಸ್ನಾನಕ್ಕೆ ಅವಕಾಶ ಇಲ್ಲ. ಕೇವಲ ನದಿ ನೀರನ್ನು ಸಂಪ್ರೋಕ್ಷಣೆ ಮಾಡಬಹುದು.
ಹೆಚ್ಚಾದ ಕಡಲ್ಕೊರೆತ-ಯುಟಿ ಖಾದರ್ -ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪ-ಬಡವಾದ ಸಂತ್ರಸ್ತ!
ಪ್ರವಾಸಿಗರಿಗೆ ನಿಷೇಧ
ಇನ್ನೂ ಪಶ್ಚಿಮ ಘಟ್ಟ ಭಾಗದ ತಪ್ಪಲಲ್ಲಿ ಇರುವ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಜಲಪಾತಗಳು ನಿರಂತರ ಮಳೆಯಿಂದ ಮೈ ತುಂಬಿ ಹರಿಯುತ್ತಿದೆ. ಭಾರೀ ಮಳೆಗೆ ಜಲಪಾತ ಗಳು ಭೋರ್ಗರೆಯುತ್ತಿದೆ. ಕೆಂಪು ನೀರು ಹಾಲ್ನೊರೆಯಾಗಿ ಧುಮ್ಮುಕ್ಕುತ್ತಾ ವೈಭವ ಸೃಷ್ಠಿಸಿದೆ. ಜಲ ಕನ್ನಿಕೆಯರ ಈ ನೃತ್ಯ ವೈಭವ ಕಣ್ಣಿಗೆ ಹಬ್ಬವಾದರೂ ಅಷ್ಟೇ ಭಯಂಕರವಾದ ಅಪಾಯ ತಂದೊಡ್ಡಬಲ್ಲವು. ಬೆಳ್ತಂಗಡಿ ತಾಲೂಕಿನ ಎಲ್ಲಾ ಜಲಪಾತಗಳಿಗೂ ಸ್ಥಳೀಯಾಡಳಿತ ಪ್ರವಾಸಿಗರಿಗೆ ಪ್ರವೇಶ ನಿಷೇಧ ಮಾಡಿದೆ.
ಕಿಲೋ ಮೀಟರ್ಗಟ್ಟಲೆ ಟ್ರಾಫಿಕ್ ಜಾಮ್
ಮಂಗಳೂರು ನಗರಕ್ಕೂ ಪ್ರವಾಸ ಯೋಜನೆ ಹಾಕಿದರೂ ಸದ್ಯ ಮುಂದೂಡುವುದು ಉಳಿತು. ಮಂಗಳೂರು-ಬೆಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿದೆ. ಮಳೆಯಿಂದ ಕಾಮಗಾರಿ ಕಾರ್ಯ ಅಸ್ತವ್ಯಸ್ತ ವಾಗಿದೆ. ಕಿಲೋಮೀಟರ್ ಗಟ್ಟಲೆ ವಾಹನ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಮಂಗಳೂರು ನಗರದಲ್ಲೂ ಸ್ಮಾರ್ಟ್ ಸಿಟಿ ಅವಾಂತರ ಸೃಷ್ಠಿಸಿದೆ. ರಸ್ತೆಗಳೆಲ್ಲಾ ಸಣ್ಣ ಮಳೆಗೂ ನೀರು ತುಂಬಿ ಜಲಾವೃತಗೊಳ್ಳುತ್ತದೆ.
ಬೀಚ್ಗಳಿಗೂ ನಿಷೇಧ
ಬೀಚ್ ಗಳಿಗೂ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಅರಬ್ಬೀ ಸಮುದ್ರ ಅಬ್ಬರಿಸುತ್ತಿದೆ. ಕಡಲ್ಕೊರೆತ ಸಮಸ್ಯೆಯೂ ತೀವ್ರವಾಗುತ್ತಿದೆ. ಹೀಗಾಗಿ ಮಲೆ ನಾಡು ಮತ್ತು ಕರಾವಳಿ ಗೆ ನೀವು ಬರೋದಾದರೆ ಮಳೆ ನಿಂತು,ಮೂಲ ಸೌಕರ್ಯ ಅಭಿವೃದ್ಧಿ ಆಗುವರೆಗೂ ನಿಮ್ಮ ಪ್ರವಾಸ ಮುಂದೂಡೋದು ಉತ್ತಮ ಆಯ್ಕೆಯಾಗಿದೆ .