ಚನ್ನಪಟ್ಟಣ: ಸಂತಾನವಿಲ್ಲದವರಿಗೆ ಮಕ್ಕಳ ಭಾಗ್ಯ ಕರುಣಿಸುವ ಅಂಬೆಗಾಲು ಕೃಷ್ಣ
ರಾಮನಗರ ಜಿಲ್ಲೆಯ ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಮಳೂರು ಗ್ರಾಮದಲ್ಲಿರುವ ಅಂಬೆಗಾಲು ಕೃಷ್ಣನ ದೇವಾಲಯ ಸಾಕಷ್ಟು ಮಹತ್ವ ಹೊಂದಿರುವ ದೇಗುಲವಾಗಿದೆ. ಶುಕ್ರವಾರ ಕೃಷ್ಣನ ಜನ್ಮದಿನವಾದ ಹಿನ್ನಲೆಯಲ್ಲಿ ಮಳೂರಿನಲ್ಲಿರುವ ಅಂಬೆಗಾಲು ದೇವಾಲಯದ ಅವರಣದಲ್ಲಿ ಚಿಣ್ಣರ ಕಲರವ ಮೇಳೈಸಲಿದೆ.
ಕೃಷ್ಣಜನ್ಮಾಷ್ಟಮಿಯಂದು ಜಿಲ್ಲೆ, ರಾಜ್ಯದ ನಾನಾ ಭಾಗಗಳಿಂದಷ್ಟೇ ಅಲ್ಲದೇ ದೇಶ ವಿದೇಶಗಳಿಂದ ದೇವಾಲಯಕ್ಕೆ ಆಗಮಿಸುವ ಭಕ್ತರು ತಮ್ಮ ಪುಟ್ಟ ಪುಟ್ಟ ಮಕ್ಕಳಿಗೆ ಕೃಷ್ಣ ರುಕ್ಮಿಣಿ ವೇಷ ತೊಡಿಸಿ ಅಂಬೆಗಾಲು ಕೃಷ್ಣನ ದೇವಾಲಯದ ಅಂಗಳದಲ್ಲಿ ನೃತ್ಯ ಮಾಡಿಸಿ, ಆಟಗಳನ್ನು ಆಡಿಸಿ, ಅಂಬೆಗಾಲು ಕೃಷ್ಣನ ಪೂಜಿಸುವ ಮೂಲಕ ತಮ್ಮ ಭಕ್ತಿ ಸಮರ್ಪಣೆ ಮಾಡುತ್ತಾರೆ.
ಕೃಷ್ಣ ಜನ್ಮಾಷ್ಟಮಿ: ಮಥುರಾದಲ್ಲಿ ಸಕಲ ಸಿದ್ಧತೆ; ಕೃಷ್ಣನ ಉಡುಗೆಗೆ ವಿದೇಶದಲ್ಲಿ ಭಾರಿ ಬೇಡಿಕೆ
ದೇಶ, ವಿದೇಶದ ಭಕ್ತರನ್ನು ಸೆಳೆಯುತ್ತಿರುವ ಅಂಬೆಗಾಲು ಕೃಷ್ಣ ದೇವಾಲಯ, ಉದ್ಯಾನನಗರಿ ಬೆಂಗಳೂರಿನ ಸುಮಾರು 64 ಕಿಮೀ ಅಂತರದಲ್ಲಿ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಪಕ್ಕದಲ್ಲಿದೆ.
ದೇವಾಲಯ ಚನ್ನಪಟ್ಟಣ ಬಸ್ ನಿಲ್ದಾಣದಿಂದ 4 ಕಿ. ಮೀ. ದೂರವಿದೆ. ಸಾಕಷ್ಟು ಸಾರಿಗೆ ವ್ಯವಸ್ಥೆ ಇದೆ, ಆಟೋ ಸೌಲಭ್ಯ ಕೂಡ ಇದ್ದು, ಪ್ರವಾಸಿಗರು ಬಂದು ದೇವರ ದರ್ಶನ ಪಡೆಯವುದರ ಜೊತೆಗೆ ದೇವಾಲಯದ ಸಮೀಪದಲ್ಲಿರುವ ಚನ್ನಪಟ್ಟಣದ ಮರದ ಅಟಿಕೆ ಮಳಿಗೆಗಳಿಗೆ ಭೇಟಿ ನೀಡಿ ವಿಶ್ವವಿಖ್ಯಾತ ಬೊಂಬೆಗಳನ್ನು ವಿಕ್ಷೀಸಿಬಹುದು ಹಾಗೂ ಖರೀದಿಸಬಹುದು.
ಅಂಬೆಗಾಲು ಕೃಷ್ಣ ಹಿನ್ನಲೆ
ಇಡೀ ಭಾರತದಲೇ ಕೃಷ್ಣನ ಬಾಲಲೀಲೆಯನ್ನ ಹೋಲುವಂತಹ ವಿಗ್ರಹ ಇರುವುದು ಇದೇ ದೇಗುಲದಲ್ಲಿ. ಅಂಬೆಗಾಲು ಕೃಷ್ಣನ ಮೂಲ ಮೂರ್ತಿ ಇದೆ. ಬಲಗೈಯಲ್ಲಿ ಬೆಣ್ಣೆ ಹಿಡಿದು ಅಂಬೆಗಾಲನ್ನಿಟ್ಟುಕೊಂಡು ಮುನ್ನಡೆಯುತ್ತಿರುವ ಚಲನಾ ಸ್ಥಿತಿಯಲ್ಲಿರುವ ಬಾಲಕೃಷ್ಣನ ವಿಗ್ರಹ ನೋಡುತ್ತಿದ್ದರೆ ಒಂದು ರೀತಿಯ ಮನಸ್ಸಿಗೆ ಆಹ್ಲಾದ ಉಂಟಾಗುತ್ತದೆ.
ಕೃಷ್ಣ ಜನ್ಮಾಷ್ಟಮಿ 2022: ಶ್ರೀ ಕೃಷ್ಣ ನವಿಲು ಗರಿ, ಕೊಳಲು ಪ್ರೀತಿಸಲು ಕಾರಣವೇನು?
ಪುರಂದರದಾಸರಿಂದ ಕೀರ್ತನೆ
ಅಂಬೆಗಾಲು ಕೃಷ್ಣನ ಮೂರ್ತಿಯನ್ನು ಕಣ್ವ ಮಹರ್ಷಿಗಳು ತಪಸ್ಸು ಮಾಡಿ ಪ್ರತಿಷ್ಠಾಪಿಸಿದ್ದಾರೆಂಬ ಪುರಾಣದ ಕಥೆಯನ್ನು ಹೊಂದಿದೆ. ಪುರಂದರದಾಸರು ಇದೇ ಅಂಬೆಗಾಲು ಕೃಷ್ಣನನ್ನ ನೋಡಿ ಆಡಿಸಿದಳೆ ಯಶೋಧೆ, ಜಗದೋದ್ಧಾರನಾ ಎಂಬ ದಾಸರ ಪದಗಳನ್ನು ಹಾಡಿ ಅಂಬೆಗಾಲು ಕೃಷ್ಣನಿಗೆ ಭಕ್ತಿ ಭಾವಗಳನ್ನು ಸಮರ್ಪಿಸಿದ್ದರೆಂದು ಹೇಳಲಾಗಿದೆ.
ಕೃಷ್ಣನ ಬಳಿ ಬಂದು ಹರಕೆ ಹೊತ್ತರೆ ಸಂತಾನ ಪ್ರಾಪ್ತಿ
ಈ ಅಂಬೆಗಾಲು ಕೃಷ್ಣನ ಮತ್ತೊಂದು ವಿಶೇಷ ಎಂದರೆ ಎಷ್ಟೋ ವರ್ಷಗಳಿಂದ ಮಕ್ಕಳಿಲ್ಲದವರು ಈ ಕೃಷ್ಣನ ಬಳಿ ಬಂದು ಹರಕೆ ಹೊತ್ತರೆ ಸಂತಾನ ಪ್ರಾಪ್ತಿಯಾಗುತ್ತದೆಂಬ ನಂಬಿಕೆ ಇಂದಿಗೂ ಇದೆ. ವೈದ್ಯರುಗಳೇ ಮಕ್ಕಳಾಗುವುದಿಲ್ಲವೆಂದು ಕೈಚೆಲ್ಲಿದ ಪ್ರಕರಣಗಳಲ್ಲಿ ಅಂಬೆಗಾಲು ಕೃಷ್ಣನ ಮೊರೆ ಹೋದವರಿಗೆ ಸಂತಾನಪ್ರಾಪ್ತಿಯಾಗಿದ ಘಟನೆಗಳು ಸಾಕಷ್ಟಿವೆ. ಹೀಗೆ ಸಂತಾನ ಪ್ರಾಪ್ತಿಯಾದ ಹಿನ್ನೆಲೆಯಲ್ಲಿ ಮರದ ಮತ್ತು ಬೆಳ್ಳಿಯ ತೊಟ್ಟಿಲುಗಳನ್ನು ಅಂಬೆಗಾಲು ಕೃಷ್ಣನಿಗೆ ಸಮರ್ಪಿಸಿ ತಮ್ಮ ಭಕ್ತಿ ಭಾವಗಳನ್ನ ಪ್ರದರ್ಶಿಸುತ್ತಾರೆ.
ಮೈಸೂರು ಅರಮನೆಯ ಸಂಬಂಧ
ಮೈಸೂರು ಮಹಾಸಂಸ್ಥಾನದ ಅಂದಿನ ದೊರೆ ಅಂಬೆಗಾಲು ಕೃಷ್ಣನ ಮೂರ್ತಿಯ ಅಂದವನ್ನು ನೋಡಿ ಅರಮನೆಯಲ್ಲಿರಬೇಕೆಂದು ಮಳೂರಿನಿಂದ ಆಸ್ಥಾನಕ್ಕೆ ತೆಗೆದುಕೊಂಡಿ ಹೋಗಿದ್ದರೆಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಕೃಷ್ಣನೇ ಮಹಾರಾಜರ ಕನಸಿನಲ್ಲಿ ಬಂದು ತನ್ನ ಸ್ವಸ್ಥಾನದಲ್ಲಿ ಇರಿಸುವಂತೆ ಹೇಳಿದ್ದನಂತೆ. ಮಹಾರಾಜರು ಕನಸಿನಲ್ಲಿ ಬಂದ ವಿಚಾರವನ್ನ ನಿರ್ಲಕ್ಷ್ಯ ಮಾಡಿದ್ದರಿಂದ ಅರಮನೆ ಅಗ್ನಿಗೆ ಆಹುತಿಯಾಯಿತು. ನಂತರ ಮಹಾರಾಜರು ಅಂಬೆಗಾಲು ಕೃಷ್ಣನ ಮೂರ್ತಿಯನ್ನ ಮತ್ತೆ ಸ್ವಸ್ಥಾನದಲ್ಲೇ ಪ್ರತಿಷ್ಠಾಪಿಸಿದರೆಂಬ ಕಥೆ ಇದೆ.
ಸಾಕಷ್ಟು ವೈಶಿಷ್ಠ್ಯತೆಗಳನ್ನು ಹೊಂದಿರುವ ಅಂಬೆಗಾಲು ಕೃಷ್ಣನ ದೇವಾಲಯಕ್ಕೆ ದಿನ ನಿತ್ಯ ನೂರಾರು ಭಕ್ತರು ಬಂದು ಇಷ್ಠಾರ್ಥ ಸಿದ್ಧಿಗಾಗಿ ಹರಕೆ ಹೊರುತ್ತಾರೆ. ವಿಶೇಷವಾಗಿ ಕೃಷ್ಣನ ಜನ್ಮದಿನದಂದು ಬಾಲ ಕೃಷ್ಣ, ನವನೀತಚೋರನ ಆಶೀರ್ವಾದ ಪಡೆಯಲು ನೂರಾರು ಭಕ್ತರ ದಂಡೆ ಹರಿದು ಬರುತ್ತದೆ. ತಮ್ಮ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಬಂದು ದೇವರಿಗೆ ಹರಕೆ ಸಲ್ಲಿಸುತ್ತಾರೆ.