ಮೈಸೂರು ದಸರಾ ಮಹೋತ್ಸವ 2022: ಅಂತಾರಾಜ್ಯ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿದ ಸರಕಾರ
ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಎರಡು ವರ್ಷಗಳ ನಂತರ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಅದ್ದೂರಿಯಾಗಿ ದಸರಾ ಮಹೋತ್ಸವವನ್ನು ಆಯೋಜಿಸಲು ಸಿದ್ಧತೆ ಭಾರಿ ಬಿರುಸಿನಿಂದ ನಡೆಯುತ್ತಿದೆ. ಈ ನಡುವೆ ದಸರಾಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಬಂಪರ್ ಕೊಡುಗೆ ನೀಡಿದೆ.
ಈಗಾಗಲೇ ಪ್ರವಾಸಿಗರಿಗೆ ಅನುಕೂಲವಾಗಲೆಂದು ಮೈಸೂರು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಏಕೀಕೃತ ಟಿಕೆಟ್ (ಕ್ಯಾಂಬೋ ಟಿಕೆಟ್) ವ್ಯವಸ್ಥೆ ಜಾರಿ ಮಾಡಿದೆ. ಇದರ ಬೆನ್ನಲ್ಲೇ ರಾಜ್ಯ ಸರಕಾರ ಕೂಡ ದಸರಾ ವೀಕ್ಷಣೆಗೆ ಬರುವ ಅಂತಾರಾಜ್ಯ ಪ್ರವಾಸಿಗರ ವಾಹನಗಳಿಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ.
ದಸರಾ ವೇಳೆ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಕಾಂಬೋ ಟಿಕೆಟ್; ಸ್ಥಳ, ದರದ ವಿವರ
ಇನ್ನು ಈ ಬಾರಿಯ ದಸರಾದಲ್ಲಿ ಹೊರ ರಾಜ್ಯಗಳಿಂದ ಬರುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದ್ದು, ಇದನ್ನು ಮೈಸೂರು ಮಾತ್ರವಲ್ಲದೆ ಮಂಡ್ಯ ಜಿಲ್ಲೆಗೂ ವಿಸ್ತರಿಸಲಾಗುತ್ತಿದೆ. ಪ್ರತಿವರ್ಷ ಮೈಸೂರು ಜಿಲ್ಲೆಗೆ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು. ಈ ಬಾರಿ ಅಕ್ಕಪಕ್ಕದ ಜಿಲ್ಲೆಗಳಿಗೆ ವಿಸ್ತರಿಸಬೇಕೆಂಬ ಬೇಡಿಕೆ ಬಂದಿದ್ದು, ಸದ್ಯ ಮಂಡ್ಯ ಜಿಲ್ಲೆಗೆ ವಿಸ್ತರಿಸಲಾಗಿದೆ.
ಮೈಸೂರು ಸೇರಿದಂತೆ ಅಕ್ಕಪಕ್ಕದ ಪ್ರವಾಸಿ ತಾಣಗಳಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್ಎಸ್ ಜಲಾಶಯ ವೀಕ್ಷಣೆಗೆ ತೆರಳುವ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿ ಸಾರಿಗೆ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ, ಸೆಪ್ಟೆಂಬರ್ 29ರಿಂದ ಅಕ್ಟೋಬರ್ 6ರ ವರೆಗೆ ಈ ತೆರಿಗೆ ವಿನಾಯಿತಿ ಜಾರಿಯಲ್ಲಿರಲಿದೆ.
ಕೊಡಗು, ಹಾಸನ,ಚಾ.ನಗರವನ್ನು ಸೇರಿಸಲು ಒತ್ತಾಯ
ನಾಡ ಹಬ್ಬವನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರಿಗೆ ಸರಕಾರ ಪ್ರತಿ ವರ್ಷ ತೆರಿಗೆ ವಿನಾಯಿತಿ ನೀಡುತ್ತಿದೆ. ಆದರೆ ಈ ವಿನಾಯಿತಿಯನ್ನು ಮೈಸೂರಿನ ಜೊತೆಗೆ ಅಕ್ಕ ಪಕ್ಕದ ಜಿಲ್ಲೆಗಳಾದ ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳಿಗೆ ವಿಸ್ತರಿಸಬೇಕು. ಕನಿಷ್ಠ ಒಂದು ತಿಂಗಳಾದರೂ ವಿಸ್ತರಿಸಿದರೆ ಕೊರೊನಾದಿಂದ ಕಳೆಗುಂದಿರುವ ಪ್ರವಾಸೋದ್ಯಮವನ್ನು ಸ್ವಲ್ಪಮಟ್ಟಿಗಾದರೂ ಚೇತರಿಸಕೊಳ್ಳುವಂತೆ ಮಾಡಬಹುದು ಎಂದು ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಹಾಗೂ ಪ್ರವಾಸೋದ್ಯಮವನ್ನು ಅವಲಂಭಿಸಿರುವ ಇನ್ನಿತರರು ಮನವಿ ಮಾಡಿಕೊಂಡಿದ್ದರು.
ಮೈಸೂರು ಮೃಗಾಲಯ ದೇಶದಲ್ಲೇ 3ನೇ ಅತ್ಯುತ್ತಮ ಮೃಗಾಲಯ
ಪ್ರವಾಸೋದ್ಯಮಕ್ಕೆ ಚೇತರಿಕೆ
ಮೈಸೂರಿಗೆ ಆಗಮಿಸುವ ಪ್ರವಾಸಿಗರು ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ, ಬೃಂದಾವನ, ಶ್ರೀರಂಗಪಟ್ಟಣ, ಹಾಸನ ಜಿಲ್ಲೆಯ ಬೇಲೂರು-ಹಳೇಬೀಡು, ಶ್ರವಣಬೆಳಗೊಳ, ಕೊಡಗು ಜಿಲ್ಲೆಯ ಮಡಿಕೇರಿ ಸೇರಿದಂತೆ ನಾನಾ ಪ್ರವಾಸಿ ಸ್ಥಳಗಳ ವೀಕ್ಷಣೆಗೂ ತೆರಳುವುದರಿಂದ ಅಂತಾರಾಜ್ಯ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವಾಗ ಈ ಜಿಲ್ಲೆಗಳ ಹೆಸರೂ ಸೇರ್ಪಡೆಗೊಳಿಸಬೇಕು. ಆ ಮೂಲಕ ಕೊರೊನಾದಿಂದಾಗಿ ಎರಡು ವರ್ಷದಿಂದ ಕಳೆಗುಂದಿದ್ದ ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಸದ್ಯಕ್ಕೆ ಮಂಡ್ಯ ಜಿಲ್ಲೆಗೆ ಮಾತ್ರ ವಿಸ್ತರಿಸಲಾಗಿದೆ.
ಐದು ಸ್ಥಳಗಳಿಗೆ ಸೇರಿ ಟಿಕೆಟ್
ದಸರಾಗೆ ಹಬ್ಬದ ಹಿನ್ನೆಲೆ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗಾಗಿ ಮೈಸೂರಿನ ಕೆಲವು ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕಾಂಬೋ ಟಿಕೆಟ್ ವ್ಯವಸ್ಥೆ ಜಾರಿ ಮಾಡಿದೆ. ಈ ಕ್ಯಾಂಬೋ ಟಿಕೆಟ್ ಮೂಲಕ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ ಹಾಗೂ ಕೆಆರ್ಎಸ್ ಬೃಂದಾವನ ಸೇರಿ ಐದು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.
ಅಕ್ಟೋಬರ್ 5ರವರೆಗೆ ಯೋಜನೆ ಚಾಲ್ತಿ
ಸೆಪ್ಟೆಂಬರ್ 20ರಿಂದ ಅಕ್ಟೋಬರ್ 5ರವರೆಗೆ ಯೋಜನೆ ಚಾಲ್ತಿಯಲ್ಲಿರಲಿದೆ. ಟಿಕೆಟ್ಗೆ ವಯಸ್ಕರಿಗೆ 500 ರೂ ಹಾಗೂ ಮಕ್ಕಳಿಗೆ 250 ರೂ ನಿಗದಿಪಡಿಸಲಾಗಿದೆ. ಈ ಟಿಕೆಟ್ ಗಳನ್ನು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮಾರಾಟ ಮಾಡಲಾಗುತ್ತಿದ್ದು, ನಗರದ ಕೆಎಸ್ಟಿಡಿಸಿ ಹೋಟೆಲ್ ಹಾಗೂ ಟ್ರಾವೆಲ್ಸ್ ವಿಭಾಗದಲ್ಲಿ, ಕೆಎಸ್ಆರ್ಟಿಸಿ ಸಬರ್ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣದ 2 ಕಡೆ, ಚಾಮುಂಡಿಬೆಟ್ಟ, ಮೃಗಾಲಯ, ಕೆಆರ್ಎಸ್, ಅರಮನೆ ಹಾಗೂ ಮೈಸೂರು ನಗರದ ಪ್ರಮುಖ ಹೋಟೆಲ್ಗಳಲ್ಲಿ ಟಿಕೆಟ್ ದೊರೆಯಲಿದೆ.