ಮಧುಗಿರಿಯ ಜಯಮಂಗಲಿಯಲ್ಲಿ ಕೃಷ್ಣಮೃಗ ನೋಡುವುದೇ ಚಂದ
ತುಮಕೂರು ಜಿಲ್ಲೆಯ ಮಧುಗಿರಿಯ ಎರಡು ಅದ್ಭುತ ಜಾಗಗಳನ್ನು ನಿಮಗೆ ತಿಳಿಸುವುದು ಉದ್ದೇಶ. ಏಕಶಿಲಾ ಬೆಟ್ಟ ಹಾಗೂ ಜಯಮಂಗಲಿ ಸಂರಕ್ಷಿತ ಪ್ರದೇಶದ ಕೃಷ್ಣಮೃಗ ಈ ಎರಡೂ ಒಮ್ಮೆಯಾದರೂ ನೋಡಲೇಬೇಕು. ಆ ಪೈಕಿ ಜಯಮಂಗಲಿ ಬಗ್ಗೆ ಮಾಹಿತಿ ಇಲ್ಲಿದೆ
ತುಮಕೂರು ಜಿಲ್ಲೆಯ ಮಧುಗಿರಿ ಅಂದರೆ ಎರಡು ಮುಖ್ಯ ಆಕರ್ಷಣೆಗಳಿವೆ. ಒಂದು ಏಕಶಿಲಾ ಬೆಟ್ಟ. ಮತ್ತೊಂದು ಅಲ್ಲಿನ ಜಯಮಂಗಲಿ ಸಂರಕ್ಷಿತ ಪ್ರದೇಶ. ಎರಡೂ ಕೂಡ ಅದ್ಭುತ ಅನುಭವ ನೀಡುವಂಥದ್ದು. ಆ ಎರಡರ ಪೈಕಿ ಕೃಷ್ಣಮೃಗದ ಬಗ್ಗೆ ತಿಳಿಸುವ ಪ್ರಯತ್ನ ಇದು. ಮಧುಗಿರಿಯ ಮೈದನಹಳ್ಳಿ ಕಾವಲ್ ನಲ್ಲಿ ಈ ಕೃಷ್ಣಮೃಗಗಳನ್ನು ನೋಡಬಹುದು.
ಬೆಳಗ್ಗೆ 8-9 ಗಂಟೆಯೊಳಗೆ ಹಾಗೂ ಸಂಜೆ 5 ಗಂಟೆ ಸುಮಾರಿಗೆ ಅಲ್ಲಿದ್ದರೆ ಕೃಷ್ಣಮೃಗಗಳು ನೋಡಲಿಕ್ಕೆ ಸಿಗುತ್ತವೆ. ಉಳಿದ ಸಮಯದಲ್ಲೂ ನೋಡಬಹುದು. ಈಗ ಬೇಸಿಗೆ ಆದ್ದರಿಂದ ನೀರಿರುವ ಕಡೆ ಕೂಡ ಅವುಗಳು ಹಿಂಡುಹಿಂಡಾಗಿ ಇರುತ್ತವೆ. ಆದರೆ ಇದು ಪ್ರಾಣಿ ಸಂಗ್ರಹಾಲಯದಲ್ಲಿ ನೋಡುವಂತೆ ಕೂಡಿಹಾಕಿರುವಂಥದ್ದಲ್ಲ.
ಕುರುಚಲು ಹುಲ್ಲು ಬೆಳೆದಿರುವ ಈ ಅರಣ್ಯ ಪ್ರದೇಶದಲ್ಲಿ ಸ್ವಚ್ಛಂದವಾಗಿ ಅಡ್ಡಾಡುತ್ತವೆ. ಆದ್ದರಿಂದಲೇ ಈ ಕೃಷ್ಣಮೃಗಗಳನ್ನು ನೋಡುವುದು ಮತ್ತೂ ಸೊಗಸು.[ರಾಮನಗರದ ರಣಹದ್ದು, ರಾಮ ದೇಗುಲ, ವಾರಾಂತ್ಯದ ಚಾರಣ]
ಸ್ವಂತ ವಾಹನದಲ್ಲಿ ತೆರಳಿದರೆ ಸಂರಕ್ಷಿತ ಪ್ರದೇಶದಲ್ಲಿ ಮಾಡಿರುವ ದಾರಿಯಲ್ಲಿ ಡ್ರೈವ್ ಮಾಡುತ್ತಾ ಇವುಗಳನ್ನು ನೋಡಬಹುದು. ಮಣ್ಣಿನ ರಸ್ತೆ ಇದೆ. ಹತ್ತಿರದಲ್ಲಿ ಯಾವುದೇ ಅಂಗಡಿ-ಹೋಟೆಲ್ ಗಳಿಲ್ಲ. ಬೆಂಗಳೂರು ಕಡೆಯಿಂದ ಮಧುಗಿರಿಗೆ ಹೋಗಿ ಅಲ್ಲಿಂದ ಮೈದನಹಳ್ಳಿಯಲ್ಲಿರುವ ಜಯಮಂಗಲಿಗೆ ಬರಬಹುದು. ಅದೇ ರೀತಿ ಗೌರಿಬಿದನೂರು ಕಡೆಯಿಂದಲೂ ಬರಬಹುದು.
ಇಲ್ಲಿ ಪ್ರವೇಶ ಶುಲ್ಕ ಅಂತಲೋ ಕ್ಯಾಮೆರಾ ಬಳಸಿದ್ದಕ್ಕೆ ಇಷ್ಟು ಹಣ ಅಂತಲೋ ಯಾವುದೂ ಇಲ್ಲ. ಅಸಲಿಗೆ ಜನರೇ ಇರದ ಪ್ರದೇಶವಿದು. ಹಾಗಂತ ಸ್ವೇಚ್ಛಾಚಾರವಾಗಿರಬಹುದು ಅಂತ ಅಂದುಕೊಳ್ಳಬೇಡಿ. ಏಕೆಂದರೆ ಕೃಷ್ಣಮೃಗ ಅಳಿವಿನಂಚಿನಲ್ಲಿರುವ ಪ್ರಾಣಿ. ಅವುಗಳನ್ನು ಉಳಿಸಿಕೊಳ್ಳಬೇಕಾದ್ದು ಎಲ್ಲರ ಜವಾಬ್ದಾರಿ. ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಸಂರಕ್ಷಿತ ಪ್ರದೇಶದ ಎಲ್ಲೂ ಎಸೆಯಬೇಡಿ.[ಸಫಾರಿಗೆ ಹೋಗುವ ಮುನ್ನ ಏನೇನು ಸಿದ್ಧತೆ ಮಾಡಿಕೊಳ್ಳಬೇಕು?]
ಹೇಗೆಂದರೆ ಹಾಗೆ ಗಾಡಿ ಚಲಾಯಿಸಿ ಅವುಗಳನ್ನು ಗಾಬರಿ ಪಡಿಸಬೇಡಿ. ಫೋಟೋಗ್ರಫಿ ಮಾಡುವುದಕ್ಕೆ ಹೇಳಿ ಮಾಡಿಸಿದ ಜಾಗದಂತಿರುವ ಇಲ್ಲಿ, ಉಳಿದುಕೊಳ್ಳುವುದಕ್ಕೆ ಹೆಚ್ಚಿನ ಅನುಕೂಲಗಳಿಲ್ಲ. ಪೆಟ್ರೋಲ್-ಡೀಸೆಲ್ ಅಗತ್ಯವಾದಷ್ಟು ಇರುವಂತೆ ಮುಂಚಿತವಾಗಿಯೇ ನೋಡಿಕೊಳ್ಳಿ. ಜತೆಗೆ ಬೈನಾಕ್ಯುಲರ್ ಇದ್ದರೆ ಚಂದ.
ಒಂದು ದಿನದಲ್ಲಿ ಜಯಮಂಗಲಿಯ ಕೃಷ್ಣಮೃಗ ಹಾಗೂ ಏಕಶಿಲಾ ಬೆಟ್ಟ ನೋಡಿಬರಲು ಸಾಧ್ಯವಿದೆ. ಬೆಂಗಳೂರಿಗರಿಗಂತೂ ತುಂಬ ಹತ್ತಿರದ ಜಾಗ. ಬೆಂಗಳೂರಿನಿಂದ ಹೊರಡುವುದಾದರೆ ದಾಬಸ್ ಪೇಟೆ ಬಳಿ ಬಲಕ್ಕೆ ತಿರುಗಿದರೆ ಸೀದಾ ಕೊರಟಗೆರೆಗೆ ಹೋಗಿ, ಅಲ್ಲಿಂದ ಮಧುಗಿರಿಗೆ ಹೋಗಬಹುದು.