ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ವೇಯಿಂದ ಪ್ರಯಾಣಿಕರಿಗೆ ಆಗುವ ಲಾಭಗಳೇನು?
ಬೆಂಗಳೂರು, ಆಗಸ್ಟ್ 22: ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ವೇ. ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಸಂಚರಿಸಲಿರುವ ಇದು ನಿರ್ಣಾಯಕ ಮೂಲಸೌಕರ್ಯ ಯೋಜನೆಯಾಗಿದೆ. ಚೆನೈ ಅನ್ನು ಬೆಂಗಳೂರಿಗೆ ಸಂಪರ್ಕಿಸುವ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ವಿಶ್ವದರ್ಜೆಯ ಎಕ್ಸ್ಪ್ರೆಸ್ವೇಗಳಲ್ಲಿ ಒಂದಾಗಿದೆ. ಈ ಚೆನ್ನೈ ಬೆಂಗಳೂರು ಎಕ್ಸ್ಪ್ರೆಸ್ವೇ ಅನ್ನು ಭಾರತಮಾಲಾ ಪರಿಯೋಜನಾ ಕಾರ್ಯಕ್ರಮದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಚೆನ್ನೈ ಮತ್ತು ಬೆಂಗಳೂರು ಎಕ್ಸ್ಪ್ರೆಸ್ವೇ ಪ್ರಯಾಣದ ಅವಧಿಯಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತದೆ. ಬೆಂಗಳೂರು ಮತ್ತು ಚೆನ್ನೈ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಐದರಿಂದ ಎರಡು ಗಂಟೆಗೆ ತಗ್ಗಲಿದೆ. ಎರಡು ರಾಜ್ಯಗಳ ರಾಜಧಾನಿ ನಡುವಿನ ಅಂತರವನ್ನು ಕಡಿಮೆ ಮಾಡುವುದರಲ್ಲಿ ಎಕ್ಸ್ಪ್ರೆಸ್ವೇ ಪ್ರಮುಖ ಪಾತ್ರ ವಹಿಸಲಿದೆ.
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಮೂಲಕ 2 ಗಂಟೆಗೆ ತಗ್ಗಿದ ಪ್ರಯಾಣ ಅವಧಿ
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ವೈಶಿಷ್ಟ್ಯತೆಗಳೇನು? ಈ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ಎಷ್ಟು ಹಣ ಖರ್ಚು ಆಗುತ್ತದೆ? ಎಷ್ಟು ರಾಜ್ಯಗಳಿಗೆ ಎಕ್ಸ್ಪ್ರೆಸ್ವೇ ಸಹಕಾರಿ ಆಗಲಿದೆ?, ಎಕ್ಸ್ಪ್ರೆಸ್ವೇ ಮೂಲಕ ಪ್ರಯಾಣಿಕರಿಗೆ ಹೇಗೆ ಉಪಯೋಗವಾಗಲಿದೆ ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇಗೆ ಎಷ್ಟು ಖರ್ಚಾಗುತ್ತೆ?
1990ರ ದಶಕದಲ್ಲಿ ಕೇಂದ್ರ ಸಚಿವರಾಗಿದ್ದ ಪಿ ಚಿದಂಬರಂ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ವೇ ಅನ್ನು ಘೋಷಿಸಿದರು. ಆದಾಗ್ಯೂ, ಈ ಯೋಜನೆ ಕಾರ್ಯರೂಪಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ 2018ರಲ್ಲಿ ಈ ಯೋಜನೆ ಪ್ರಾರಂಭಿಸಲಾಯಿತು. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 258 ಕಿಮೀ ಉದ್ದದ ಮಾರ್ಗವನ್ನು ಅಭಿವೃದ್ಧಿಪಡಿಸುತ್ತಿದೆ. ಈ ಚತುಷ್ಪಥ ಎಕ್ಸ್ಪ್ರೆಸ್ವೇಗೆ ಬರೋಬ್ಬರಿ 18,000 ಕೋಟಿ ರೂಪಾಯಿ ಖರ್ಚಾಗಲಿದೆ. 2021ರ ಜನವರಿಯಲ್ಲಿ ಈ ಎಕ್ಸ್ಪ್ರೆಸ್ವೇ ಅನ್ನು ರಾಷ್ಟ್ರೀಯ ಎಕ್ಸ್ಪ್ರೆಸ್ವೇ 7 (NE-7) ಎಂದು ಗೊತ್ತುಪಡಿಸಲಾಗಿದೆ. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಈ ಎಕ್ಸ್ಪ್ರೆಸ್ವೇ ಹಾದುಹೋಗುತ್ತದೆ.
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ವಿಶೇಷತೆಗಳೇನು?
ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ವೇ ಏನೆಲ್ಲ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಬೆಂಗಳೂರು ಮತ್ತು ಚೆನ್ನೈ ಎರಡು ನಗರಗಳ ನಡುವೆ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗುತ್ತದೆ. ಸದ್ಯಕ್ಕೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗಲು 6 ರಿಂದ 7 ಗಂಟೆ ಆಗುತ್ತದೆ. ಆದರೆ, ಎಕ್ಸ್ಪ್ರೆಸ್ವೇ ಸಿದ್ಧವಾದ ನಂತರ ಈ ಪ್ರಯಾಣದ ಸಮಯವು 4 ಗಂಟೆಗೆ ಇಳಿಕೆಯಾಗಲಿದೆ. ಇದರ ಜೊತೆಗೆ ಹಲವು ವಿಶೇಷತೆಗಳನ್ನು ಈ ಎಕ್ಸ್ಪ್ರೆಸ್ವೇ ಹೊಂದಿದೆ.
ಎಕ್ಸ್ಪ್ರೆಸ್ವೇ ವಿಶೇಷತೆಗಳೇನು?
* ಎಕ್ಸ್ಪ್ರೆಸ್ವೇಯಲ್ಲಿ ಗಂಟೆಗೆ 120 ಕಿ. ಮೀ ವೇಗದಲ್ಲಿ ಸಂಚರಿಸಲು ಅನುಮತಿ ನೀಡಲಾಗಿದ್ದು, ನಗರಗಳ ನಡುವಿನ ಅಂತರವು 80 ಕಿಮೀ ಕಡಿಮೆಯಾಗಿದೆ
* ರಸ್ತೆಯನ್ನು ಉತ್ತಮವಾಗಿ ನಿರ್ಮಿಸುವುದರ ಮೂಲಕ ಸುಗಮ ಸಂಚಾರ ಮತ್ತು ರಸ್ತೆಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ
* ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ವೇ ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್ ಅನ್ನು ಉತ್ತೇಜಿಸುವುದರ ಜೊತೆಗೆ ಪ್ರದೇಶದ ಉತ್ಪಾದನಾ ವಲಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ
* ಎಕ್ಸ್ಪ್ರೆಸ್ವೇಯು ಟ್ರಕ್ ಬೇಗಳು, ವಾಹನಗಳು ಮತ್ತು ಪ್ರಾಣಿಗಳಿಗೆ ಅಂಡರ್ಪಾಸ್ಗಳು ಮತ್ತು ಪಾದಚಾರಿ ಮತ್ತು ಸಂಚಾರ ಆಡಳಿತ ವ್ಯವಸ್ಥೆಗಳಂತಹ ಅಗತ್ಯ ಸೌಕರ್ಯಗಳನ್ನು ಹೊಂದಿರುತ್ತದೆ
* ಎಕ್ಸ್ಪ್ರೆಸ್ವೇ ಮಾರ್ಗದಲ್ಲಿ ಬರುವ ನಗರಗಳು ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ಅತ್ಯುತ್ತಮ ಆಕರ್ಷಣೆಯಾಗಿದೆ, ಏಕೆಂದರೆ ಎಕ್ಸ್ಪ್ರೆಸ್ವೇ ಸಿದ್ಧವಾದ ನಂತರ ಆಸ್ತಿ ಮೌಲ್ಯಗಳು ಹೆಚ್ಚಾಗಬಹುದು
* ಕರ್ನಾಟಕದ ಆಟೋಮೊಬೈಲ್ ಹಬ್ ಆದ ಬೆಂಗಳೂರಿನ ಹೊಸಕೋಟೆ ಪ್ರದೇಶದಿಂದ ಎಕ್ಸ್ಪ್ರೆಸ್ವೇ ಆರಂಭವಾಗಲಿದೆ. ಇದರಿಂದ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ
ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ವೇ ಮೂಲಕ ಯಾವ ನಗರಕ್ಕೆ ಸಂಪರ್ಕ
ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ವೇ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಮೂರು ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಬೆಂಗಳೂರಿನ ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೋಲಾರ ಗೋಲ್ಡ್ ಫೀಲ್ಡ್ಸ್, ವೆಂಕಟಗಿರಿಕೋಟ, ಪಲಮನೇರ್, ಬಂಗಾರುಪಾಲೆಂ, ಚಿತ್ತೂರು, ರಾಣಿಪೇಟ್, ಶ್ರೀಪೆರಂಬದೂರ್ ಮುಂತಾದ ನಗರಗಳು ಚೆನ್ನೈ ಬೆಂಗಳೂರು ಎಕ್ಸ್ಪ್ರೆಸ್ವೇ ಮಾರ್ಗದಲ್ಲಿವೆ.
ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ವೇ ಮೂಲಕ ಜನರಿಗೆ ಲಾಭ
ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ವೇ ಈ ಪ್ರದೇಶದ ಅತ್ಯಂತ ಭರವಸೆಯ ರಸ್ತೆ ಕಾರಿಡಾರ್ ಆಗಿದೆ. ದಕ್ಷಿಣ ಭಾರತದ ಎರಡು ಮಹಾನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿತಗೊಳಿಸುವುದರ ಜೊತೆಗೆ ಈ ಕೆಳಗಿನ ಪ್ರಯೋಜನಗಳನ್ನು ಹೊಂದುವ ನಿರೀಕ್ಷೆಯಿದೆ.
* ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಬೆಂಗಳೂರು ಮತ್ತು ಚೆನ್ನೈ ನಡುವಿನ ಸಂಚಾರ ಅವಧಿಯನ್ನು ಮೂರು ಗಂಟೆ ಕಡಿಮೆ ಮಾಡಲಿದೆ
* ಕಾರಿಡಾರ್ಗಳಲ್ಲಿ ಕನಿಷ್ಠ ಅಡೆತಡೆಗಳಿದ್ದು, ಕಾರಿಡಾರ್ ನಲ್ಲಿ ಸಂಪೂರ್ಣವಾಗಿ ಬೇಲಿ ಹಾಕಲಾಗುತ್ತಿದ್ದು, ಯಾವುದೇ ಪ್ರಾಣಿಗಳು ದಾರಿತಪ್ಪಿ ಹೆದ್ದಾರಿ ಪ್ರವೇಶಿಸುವುದಕ್ಕೆ ಅವಕಾಶ ಇರುವುದಿಲ್ಲ
* ಎಕ್ಸ್ಪ್ರೆಸ್ವೇ ಸೌಲಭ್ಯವನ್ನು ಗ್ರೀನ್ಫೀಲ್ಡ್ ಅಲೈನ್ಮೆಂಟ್ನಲ್ಲಿ ಸಂಪೂರ್ಣ ಪ್ರವೇಶ ನಿಯಂತ್ರಿತ ಸೌಲಭ್ಯವಾಗಿ ಅಭಿವೃದ್ಧಿಪಡಿಸಲಾಗುವುದು, ಅಂದರೆ ಜೋಡಣೆಯಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ರಸ್ತೆ ಇರುವುದಿಲ್ಲ
* ಪ್ರಯಾಣಿಕರ ಸುರಕ್ಷತೆಯನ್ನು ಅತಿಮುಖ್ಯವಾಗಿಡಲು ಎಕ್ಸ್ಪ್ರೆಸ್ವೇ ಸಾಮಾನ್ಯವಾಗಿ 3.50 ಮೀಟರ್ಗೆ ಬದಲಾಗಿ 3.75 ಮೀಟರ್ಗಳಷ್ಟು ಅಗಲವಾದ ಲೇನ್ಗಳನ್ನು ಹೊಂದಿರುತ್ತದೆ
ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಪ್ರಧಾನಿ
ಕಳೆದ ಮೇ ತಿಂಗಳಿನಲ್ಲಿ 262 ಕಿಲೋ ಮೀಟರ್ ದೂರದ ಎಕ್ಸ್ಪ್ರೆಸ್ವೇಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಹೆದ್ದಾರಿಯು ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸಂಚರಿಸಲಿದೆ. ಹೆದ್ದಾರಿಯು ಚೆನ್ನೈ ಮತ್ತು ಬೆಂಗಳೂರು ನಡುವಿನ ಪ್ರಸ್ತುತ ಐದರಿಂದ ಆರು ಗಂಟೆಗಳ ಸರಾಸರಿ ಪ್ರಯಾಣದ ಸಮಯವನ್ನು ಎರಡರಿಂದ ಮೂರು ಗಂಟೆಗೆ ಕಡಿತಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ 117 ಕಿಲೋಮೀಟರ್ ಬೆಂಗಳೂರು-ಮೈಸೂರು ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಅಕ್ಟೋಬರ್ನೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
Recommended Video