ಚಿಕ್ಕಮಗಳೂರು ಜಿಲ್ಲೆಯಲ್ಲಿವೆ ಅಪರೂಪದ ಪ್ರವಾಸಿ ತಾಣಗಳು, ಇಲ್ಲಿದೆ ಮಾಹಿತಿ
ಚಿಕ್ಕಮಗಳೂರು, ಅಕ್ಟೋಬರ್, 05: ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಮಾಣಿಕ್ಯಧಾರ, ಮೂಡಿಗೆರೆ ಚಾರ್ಮಡಿ ಘಾಟ್, ದತ್ತಾತ್ರೇಯ ಪೀಠ, ಕಳಸ ಕಳಸೇಶ್ವರ ದೇವಸ್ಥಾನ, ಲಕ್ಕವಳ್ಳಿ ಭದ್ರಾ ಜಲಾಶಯ, ಶೃಂಗೇರಿ ಋಷ್ಯಾ ಶೃಂಗಪುರ, ಶೃಂಗೇರಿ ಶಾರದಾಂಬೆ, ಮೂಡಿಗೆರೆ ದೇವರಮನೆ ಬೆಟ್ಟ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಜಿಲ್ಲೆಯಲ್ಲಿ ಐತಿಹಾಸಿಕ ಹಾಗೂ ಮನಮೋಹನ ಪ್ರವಾಸಿ ತಾಣಗಳಿವೆ.
ಮುಳ್ಳಯ್ಯನಗಿರಿ ಕರ್ನಾಟಕದ ಎತ್ತರ ಗಿರಿಶಿಖರ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಇದು ಸಮುದ್ರ ಮಟ್ಟದಿಂದ 1,930 ಮೀಟರ್ (6,330ಅಡಿ) ಎತ್ತರವನ್ನು ಹೊಂದಿದೆ. ಇದು ಚಿಕ್ಕಮಗಳೂರು ನಗರದಿಂದ 26 ಕಿಲೋ ಮೀಟರ್ ದೂರದಲ್ಲಿದ್ದು, ಮುಳ್ಳಯ್ಯನಗಿರಿಗೆ ಸಾಗುವ ದಾರಿಯಲ್ಲಿ ಸೀತಾಳಯ್ಯ ನಗಿರಿ ಮೊದಲು ನಿಮ್ಮನ್ನು ಸ್ವಾಗತಿಸುತ್ತದೆ. ಅಲ್ಲಿಂದ ಮುಂದೆ ಸಾಗಿದರೆ ಮುಳ್ಳಯ್ಯನಗಿರಿ ತುತ್ತ ತುದಿಗೆ ತಲುಪುತ್ತೇವೆ. ಬೆಟ್ಟದ ಬುಡದ ತನಕ ವಾಹನ ಚಲಿಸಲು ಅನುಕೂಲವಿದೆ. ಮುಂದೆ ಸರ್ಪದ ದಾರಿಯಂತಿರುವ ಹಾದಿಯಲ್ಲಿ ನಡೆದು ಬೆಟ್ಟದ ತುದಿಯನ್ನು ಏರಬೇಕು. ಇಲ್ಲಿನ ಸುಂದರ ಪರಿಸರ, ಮಂಜಿನ ಹನಿಗಳನ್ನು ನೀವು ಕಣ್ತುಂಬಿಕೊಳ್ಳಬಹುದು. ಹನ್ನೆರಡು ವರ್ಷಕ್ಕೊಮ್ಮೆ ಬಿಡುವ ಕುರಂಜಿ ಹೂವು ಇಲ್ಲಿನ ವಿಶೇಷ ಆಕರ್ಷಣೆ ಆಗಿದೆ.
ಕಾಫಿನಾಡಿನ ಮುಳ್ಳಯ್ಯನಗಿರಿಗೆ 10 ಸಾವಿರ ಪ್ರವಾಸಿಗರ ಭೇಟಿ
ದೇವಿರಮ್ಮ ಬೆಟ್ಟಕ್ಕೆ ತಲುಪುವ ಮಾರ್ಗಗಳು?
ಇನ್ನು ಕೆಮ್ಮಣ್ಣುಗುಂಡಿಗೆ ತರೀಕೆರೆ ತಾಲೂಕು ಲಿಂಗದಹಳ್ಳಿ ಮಾರ್ಗವಾಗಿ ಸಾಗಬೇಕು. ಪವರ್ತಗಳ ಸಾಲು, ಕಾಡಿನ ರಸ್ತೆಯಲ್ಲಿ ಸಾಗಿದರೆ ಈ ಗಿರಿಧಾಮ ಸಿಗುತ್ತದೆ. ತರೀಕೆರೆ ಪಟ್ಟಣದಿಂದ ಈ ಪ್ರವಾಸಿ ತಾಣ 38 ಕಿಲೋ ಮೀಟರ್ ದೂರದಲ್ಲಿದೆ. ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್ ಇದನ್ನು ತಮ್ಮ ಬೇಸಿಗೆ ಧಾಮವನ್ನಾಗಿ ಮಾಡಿಕೊಂಡಿದ್ದರಿಂದ ಇದನ್ನು ಕೆ.ಆರ್.ಗಿರಿಧಾಮ ಅಂತಲೂ ಕರೆಯಲಾಗುತ್ತದೆ. ಇಲ್ಲಿ ವರ್ಷವಿಡೀ ತಂಪಾದ ಹವಾಗುಣ, ಸುತ್ತಲು ಚಂದ್ರದ್ರೊಣ ಪರ್ವತ ಸಾಲುಗಳು ಸಾಥ್ ನೀಡುತ್ತವೆ. ರಾಜಭವನ ಮತ್ತು ಸೂರ್ಯಾಸ್ತದ ದೃಶ್ಯ, ಝೆಡ್ ಪಾಯಿಂಟ್ ಇಲ್ಲಿಯ ವಿಶೇಷ ಆಕರ್ಷಣೆ ಆಗಿದೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ಬೆಟ್ಟ ಅತ್ಯಂತ ಆಕರ್ಷಣಿಯ ಸ್ಥಳವಾಗಿದೆ. ಪ್ರತೀ ವರ್ಷ ದೀಪಾವಳಿಯ ಹಿಂದಿನ ದಿನದಂದು ರಾತ್ರಿ ಇಲ್ಲಿ ದೀಪೋತ್ಸವ ನಡೆಯುತ್ತದೆ. ಕಡಿದಾದ ಬೆಟ್ಟವನ್ನು ಬರಿಗಾಲಿನಲ್ಲಿ ಹತ್ತಿ ದೇವಿಯ ದರ್ಶನ ಮತ್ತು ದೀಪೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಇಲ್ಲಿಗೆ ವರ್ಷಕ್ಕೊಮ್ಮೆ ಮಾತ್ರ ಭೇಟಿ ನೀಡಲು ಸಾಧ್ಯ. ಬೇರೆ ದಿನಗಳಲ್ಲಿ ಬೆಟ್ಟದ ಬುಡದಲ್ಲಿರುವ ದೇವಿರಮ್ಮ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆಯಬಹುದಾಗಿದೆ.
ಕಾಫಿನಾಡಿನ ನೀಲಿ ಕುರುಂಜಿ ಹೂ ಇದೀಗ ಪ್ರವಾಸಿಗರ ಆಕರ್ಷಣೆ; ವಿಶೇಷತೆ ಇಲ್ಲಿದೆ ನೋಡಿ
ಬಾಬಾಬುಡನ್ ಗಿರಿ ಎಂದು ಹೆಸರು ಬರಲು ಕಾರಣ?
ಮುಳ್ಳಯ್ಯನಗಿರಿಗೆ ಸಾಗುವ ರಸ್ತೆಯಲ್ಲಿಯೇ ಮುಂದೆ ಸಾಗಿದರೆ ಇನಾಂ ದತ್ತತ್ರೇಯ ಬಾಬಾಬುಡನ್ ಗಿರಿ ಸಿಗುತ್ತದೆ. ಈ ಗಿರಿಪ್ರದೇಶ ಅನಾದಿ ಕಾಲದಿಂದಲ್ಲೂ ಪ್ರಸಿದ್ಧಿ ಹೊಂದಿದೆ. ಎತ್ತರದ ಶಿಖರವನ್ನು ಹೊಂದಿದ್ದು, ನೂರಾರು ವರ್ಷಗಳ ಹಿಂದೆ ಬಾಬಾ ಬುಡನ್ ಇಲ್ಲಿದ್ದರೆಂದು ನಂಬಿಕೆ ಇದೆ. ಮುಸ್ಲಿಮರು, ಗುರು ದತ್ತಾತ್ರೇಯ ಸ್ವಾಮಿ ಇಲ್ಲಿ ಇದ್ದರೆಂದು ಹಿಂದೂಗಳ ನಂಬಿಕೆ ಆಗಿದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದವರ ಯಾತ್ರ ಸ್ಥಳವಾಗಿದೆ. ಇಲ್ಲಿನ ಸುತ್ತಲಿನ ಪರ್ವತಶ್ರೇಣಿ ಕಡಿದಾದ ಪ್ರಪಾತ ಕಣ್ಣಿಗೆ ಹಬ್ಬನ್ನುಂಟು ಮಾಡುತ್ತದೆ. ಇನ್ನು ಕುದುರೆ ಮುಖದ ಬಗ್ಗೆ ಹೇಳುವುದಾದರೆ, ಇಲ್ಲಿನ ಪರ್ವತ ಕುದುರೆಮುಖವನ್ನು ಹೋಲುವುದರಿಂದ, ಇದಕ್ಕೆ ಕುದುರೆಮುಖ ಎಂಬ ಹೆಸರು ಬಂದಿದೆ. ಇದು ಕಬ್ಬಿಣದ ನಿಕ್ಷೇಪಗಳನ್ನು ಹೊಂದಿರುವ ಪರ್ವತ ಆಗಿದ್ದು, ಈ ಹಿಂದೆ ಇಲ್ಲಿಂದ ಕಬ್ಬಿಣದ ಅದಿರು ಹೊರತೆಗೆಯಲಾಗುತ್ತಿತ್ತು. ಟೌನ್ಶಿಫ್ ನಿರ್ಮಿಸಿ ಜನವಸತಿಯನ್ನು ಕಲ್ಪಿಸಲಾಗಿತ್ತು. ಇದೀಗ ಅಲ್ಲಿ ಕಬ್ಬಿಣ ಅದಿರು ಹೊರ ತೆಗೆಯುವುದನ್ನು ನಿಷೇಧಿಸಲಾಗಿದೆ. ಜನವಸತಿ ಪ್ರದೇಶವು ಪಾಳುಬಿದಿದ್ದು, ಅಂದಿನ ಕುರುಹುಗಳು ಮಾತ್ರ ಉಳಿದುಕೊಂಡಿದೆ. ಇಲ್ಲಿಯ ಸುತ್ತಲ ಪರ್ವತಶ್ರೇಣಿ, ಕಡಿದಾದ ಕಣಿವೆಗಳು, ಪ್ರಪಾತಗಳನ್ನು ಒಳಗೊಂಡಿದ್ದು, ನೋಡಲು ರಮಣೀಯವಾಗಿದೆ.
ಧಾರ್ಮಿಕ ಕ್ಷೇತ್ರವಾಗ್ತಿದೆಯಾ ದೇವರ ಮನೆ?
ಮೂಡಿಗೆರೆ ತಾಲೂಕಿನಲ್ಲಿರುವ ದೇವಮನೆ ಇತ್ತೀಚೆಗೆ ಪ್ರವಾಸಿ ಕ್ಷೇತ್ರ ಮತ್ತು ಧಾರ್ಮಿಕ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ. ಇಲ್ಲಿಯ ಪರಿಸರ, ಬೆಟ್ಟಗುಡ್ಡಗಳ ಸಾಲು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ದೇವರಮನೆಗೆ ಹತ್ತಿರದಲ್ಲಿರುವ ನಾಣ್ಯ ಭೈರವೇಶ್ವರ ದೇವಸ್ಥಾನ ಸುಮಾರು 950 ವರ್ಷಗಳ ಇತಿಹಾಸವನ್ನು ಹೊಂದಿದ್ದು, ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇನ್ನು ಮೂಡಿಗೆರೆಯಿಂದ 35 ಕಿಲೋ ಮೀಟರ್ ದೂರದಲ್ಲಿರುವ ಶಿಶಿಲ ಪರ್ವತಶ್ರೇಣಿ ಅತ್ಯಂತ ಆಕರ್ಷಣಿಯ ಸ್ಥಳವಾಗಿದೆ. ಇದು ದುರ್ಗಮ ಕಲ್ಲುಬಂಡೆಗಳನ್ನು ಒಳಗೊಂಡಿದೆ. ಇಲ್ಲಿ ಪರಿಸರ ವಿಸ್ಮಯ, ಪ್ರಾಣಿ ಪಕ್ಷಿಗಳ ಕಲರವವನ್ನು ಸವಿಯಬಹುದಾಗಿದೆ. ಇದು ಚಾರಣ ಪ್ರೀಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಮೂರು ಜಿಲ್ಲೆಗಳ ಮಧ್ಯೆ ಕಳಸದಂತಿದೆ.
ಜಲಪಾತಗಳಿಗೆ ತಲುಪುವ ಮಾರ್ಗಗಳು
ಹೆಬ್ಬೆ ಜಲಪಾತ ತರೀಕೆರೆ ತಾಲೂಕು ಕೆಮ್ಮಣ್ಣುಗುಂಡಿಯಿಂದ 10 ಕಿಲೋ ಮೀಟರ್ ದೂರದಲ್ಲಿದೆ. ಕಾನನ, ಕಾಫಿ ತೋಟದ ನಡುವೆ ಸಾಗಿದರೆ ಹಬ್ಬೆ ಜಲಪಾತ ಸಿಗುತ್ತದೆ. ಈ ಜಲಪಾತ 551ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುತ್ತದೆ. ಸುತ್ತಲ ಹಸಿರು ಪರಿಸರದ ಸುಂದ ಅನುಭವ ನೀಡುತ್ತದೆ. ಹಾಗೆಯೇ ತರೀಕೆರೆ ತಾಲೂಕು ಲಿಂಗದಹಳ್ಳಿ ಹೋಬಳಿಯ ಕಲ್ಲತ್ತಗಿರಿ ಜಲಪಾತ ಚಂದ್ರದ್ರೋಣ ಪವರ್ತ ತಪ್ಪಲಿನಲ್ಲಿದೆ. ಈ ಜಲಪಾತ ಆನೆ ಸೊಂಡಲಿನ ಆಕಾರದಲ್ಲಿ ಹರಿಯುತ್ತದೆ. ಕಲ್ಲತ್ತಗಿರಿ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಎರಡು ಕವಲುಗಳಾಗಿ ಧುಮ್ಮಿಕ್ಕುತ್ತದೆ. ಮಳೆಗಾಲದಲ್ಲಿ ಭಾರಿ ಪ್ರಮಾಣದ ನೀರು ಹರಿಯಲಿದ್ದು, ಇಲ್ಲಿನ ಜಲಧಾರೆ ಸೊಬಗನ್ನು ನೋಡಲು ಜನಸಾಗರವೇ ನೆರೆಯುತ್ತದೆ.
ಸಿರಿಮನೆ ಜಲಪಾತ ಪ್ರವಾಸಿಗರ ಹಾಟ್ಸ್ಪಾರ್
ಶೃಂಗೇರಿ ಶಾರದಾಂಬೆ ಸನ್ನಿಧಿಯ ಹಸಿರು ಕಾನನದ ಮಧ್ಯೆ ಧುಮುಕುವ ಸಿರಿಮನೆ ಜಲಪಾತ, ಪ್ರವಾಸಿಗರ ಪ್ರಮುಖ ಆಕರ್ಷ ತಾಣವಾಗಿದೆ. ಇದು ಶೃಂಗೇರಿಯಿಂದ 20 ಕಿಲೋ ಮೀಟರ್ ದೂರದಲ್ಲಿದೆ. ಕಿಗ್ಗಾದಿಂದ 5 ಕಿಲೋ ಮೀಟರ್ ಸಾಗಬೇಕು. 40 ಅಡಿ ಎತ್ತರದ ಬಂಡೆಯ ಮೇಲಿನಿಂದ ನೀರು ಧುಮ್ಮಿಕ್ಕುವ ದೃಶ್ಯ ರಮಣೀಯವಾಗಿರುತ್ತದೆ. ಹಾಗೆಯೇ ಕುದರೆಮುಖ ಅಭಯಾರಣ್ಯ ಮಧ್ಯೆ ಕಂಗೊಳಿಸುವ ನೂರಾರು ಜಲಪಾತಗಳಲ್ಲಿ ಹನುಮಾನ್ ಜಲಪಾತವು ಒಂದಾಗಿದೆ. ಈ ಜಲಪಾತ ತುಂಗಾ ಮೂಲದಿಂದ ಸೃಷ್ಟಿ ಆಗಿದೆ. ಹನುಮಾನ್ ಜಲಪಾತ ಎಂಬುದು ಜಲಪಾತದ ಹೆಸರಲ್ಲ. ಇದು ಸ್ಥಳದ ಹೆಸರಾಗಿದ್ದು, ಸೂತನಬ್ಬಿ ಎಂದು ಈ ಜಲಪಾತವನ್ನು ಕರೆಯಲಾಗುತ್ತದೆ. ಇದು ಕಳಸ ಪಟ್ಟಣದಿಂದ 25 ಕಿಲೋ ಮೀಟರ್ ದೂರದಲ್ಲಿದೆ.
ಮಾಣಿಕ್ಯಧಾರಾ ಜಲಪಾತವು ಚಿಕ್ಕಮಗಳೂರು ನಗರದಿಂದ 40 ಕಿಲೋ ಮೀಟರ್ ದೂರದಲ್ಲಿದೆ. ಮುಳ್ಳಯ್ಯನಗಿರಿ ಶೋಲಾ ಅರಣ್ಯದ ಮಧ್ಯಭಾಗದಲ್ಲಿ ಬೃಹತ್ ಕಲ್ಲುಬಂಡೆಯ ನಡುವಿನಿಂದ ಪ್ರಪಾತಕ್ಕೆ ಇಲ್ಲಿನ ನೀರು ಧುಮುಕುತ್ತದೆ. ಈ ಜಲಪಾತ ಧಾರ್ಮಿಕ ಶ್ರದ್ಧ ಭಕ್ತಿಯ ಕೇಂದ್ರವು ಆಗಿದೆ. ಎಲ್ಲಾ ಋತುವಿನಲ್ಲೂ ಹರಿಯುವ ಜಲಪಾತವಾಗಿದ್ದು, ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತದೆ. ಇನ್ನು ಮುಳ್ಳಯ್ಯನಗಿರಿ ಪ್ರದೇಶಕ್ಕೆ ಸಾಗುವ ಮಾರ್ಗಮಧ್ಯದಲ್ಲಿ ಜರಿ ಫಾಲ್ಸ್ ಜಲಪಾತ ಸಿಗುತ್ತದೆ. ಹೊನ್ನಮ್ಮನ ಹಳ್ಳದಿಂದ ಹರಿದು ಬರುವ ನೀರು ಸುಮಾರು 30ರಿಂದ 40ಅಡಿ ದುಮುಕುತ್ತದೆ. ಈ ಜಲಪಾತ ಮುಂದೆ ಕಾಫಿತೋಟದ ನಡುವೆ ಮೈಯಾರದಿಂದ ಹರಿದು ಮುಂದೆ ಸಾಗುತ್ತದೆ.
ವಿದ್ಯಾಶಂಕರ ದೇವಾಲಯದ ಉತ್ತರಕ್ಕೆ ಈ ಮೊದಲು ಚಿಕ್ಕ ದೇವಾಲಯವಿತ್ತು. ಈ ದೇವಾಲಯದ ಸ್ಥಳದಲ್ಲಿ ದೊಡ್ಡ ದೇವಾಲಯವನ್ನು ಸ್ಥಾಪಿಸಲಾಗಿದೆ. 1906ರಲ್ಲಿ ಪ್ರಾರಂಭವಾಗಿ 1915ರಲ್ಲಿ ಈ ದೇವಸ್ಥಾನದ ಕಾಮಗಾರಿ ಮುಕ್ತಾಯಗೊಂಡಿತು. ಮೈಸೂರಿನ ಮಹಾರಾಜ ಒಡೆಯರ್ ಈ ಹೊಸ ದೇವಾಲಯ ನಿರ್ಮಾಣದ ಮೇಲ್ವಿಚಾರಣೆಯನ್ನು ವಹಿಸಿದ್ದರು. ಇನ್ನು ಈ ಶಾರದಾಂಬ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಹಾಗೆಯೇ ಹೊರನಾಡು ಕಳಸ ಪಟ್ಟಣದಿಂದ 8 ಕಿಲೋ ಮೀಟರ್ ದೂರದಲ್ಲಿದೆ. ಶಿಲಾಶಾಸನ ಮತ್ತು ತಾಮ್ರ ಶಾಸನಗಳು ಈ ಸ್ಥಳದ ಅಭಿವೃದ್ಧಿಗೆ ಹಣ ಮತ್ತು ಭೂಮಿಯನ್ನು ನೀಡಿದ ಬಗ್ಗೆ ಮಾಹಿತಿ ನೀಡುತ್ತದೆ.