ಗ್ಲೋಬಲ್ ಗಮನಸೆಳೆದ ಕುಶಾಲ ನಗರದ ಗೋಲ್ಡನ್ ಟೆಂಪಲ್
ಒಂದು ಕಾಲದಲ್ಲಿ ಚೀನಾದಿಂದ ನಿರಾಶ್ರಿತರಾಗಿ ಬಂದು ಕುಶಾಲನಗರ ಬಳಿಯ ಬೈಲುಕುಪ್ಪೆಯ ಬೆಂಗಾಡಿನಲ್ಲಿ ನೆಲೆ ನಿಂತ ಟಿಬೆಟಿಯನ್ನರು ಇವತ್ತು ಆ ಸ್ಥಳವನ್ನು ಅಭಿವೃದ್ಧಿಗೊಳಿಸಿ ವಿಶ್ವಮಟ್ಟದಲ್ಲಿ ಗಮನಸೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾವಿರಾರು ಪ್ರವಾಸಿಗರು ಇತ್ತ ಕಡೆ ತಮ್ಮ ನೋಟ ಚೆಲ್ಲುವಂತೆ ಮಾಡಿದ್ದಾರೆ.
ಮೈಸೂರು ಜಿಲ್ಲೆಯಿಂದ ಸುಮಾರು 88ಕಿ.ಮೀ. ದೂರದಲ್ಲಿರುವ ಬೈಲುಕುಪ್ಪೆ ಪ್ರವಾಸಿತಾಣವಾಗಿ ಖ್ಯಾತಿ ಪಡೆಯಲು ಇಲ್ಲಿ ನಿರ್ಮಿಸಲ್ಪಟ್ಟಿರುವ ಸ್ವರ್ಣದೇಗುಲ(ಗೋಲ್ಡನ್ ಟೆಂಪಲ್)ವೇ ಮುಖ್ಯ ಕಾರಣವಾಗಿದೆ. ಟಿಬೆಟ್ ನಿರಾಶ್ರಿತರ ಶಿಬಿರವು ಸ್ವರ್ಣ ದೇಗುಲ ಸೇರಿದಂತೆ ಸುಮಾರು ಹದಿನೇಳಕ್ಕೂ ಹೆಚ್ಚು ವಿವಿಧ ದೇಗುಲಗಳು, ಧ್ಯಾನಕೇಂದ್ರ, ಸನ್ಯಾಸಿನಿಯರ ಬೌದ್ಧವಿಹಾರ, ಬೌದ್ಧ ಭಿಕ್ಷುಗಳ ಮಹಾವಿದ್ಯಾಲಯ, ಆಸ್ಪತ್ರೆ, ಬೌದ್ಧವಿಹಾರದ ಸುತ್ತ 1300 ಪ್ರಾರ್ಥನಾ ಚಕ್ರಗಳು, ಎಂಟು ಸ್ಥೂಪಗಳು ಹೀಗೆ ತನ್ನದೇ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿವೆ.
ಈ ಸ್ವರ್ಣ ದೇಗುಲ ಟಿಬೆಟ್ ದೇಶದ ಸಂಪ್ರದಾಯಗಳಿಗೆ ತಕ್ಕಂತೆ ನಿರ್ಮಾಣಗೊಂಡಿದೆ. ಪರಮ ಪೂಜ್ಯ ಪನೋರ್ ರಿನ್ ಪೋಚೆಯವರು ಇದನ್ನು 1995ರಲ್ಲಿ ಆರಂಭಿಸಿ 1999ರಲ್ಲಿ ಪೂರ್ಣಗೊಳಿಸಿದರು. ನಾಲ್ಕು ವರ್ಷಗಳ ಸತತ ಪರಿಶ್ರಮದಿಂದ ಆಕರ್ಷಕ, ವೈಶಿಷ್ಟ್ಯಪೂರ್ಣವಾಗಿಯೂ ನಿರ್ಮಿಸುವಲ್ಲಿ ಪೆನೋರ್ ರಿನ್ ಪೋಚೆಯವರ ಸಾಧನೆ ಸ್ಮರಣೀಯ.
ಬೈಲುಕುಪ್ಪೆಗೆ ತೆರಳುವ ಪ್ರವಾಸಿಗರನ್ನು ಸೆಳೆಯುವ ಸ್ವರ್ಣದೇಗುಲ ಮನಸ್ಸಿಗೆ ಹೊಸ ಅನುಭವ ನೀಡಿ ನಮ್ಮಲ್ಲಿದ್ದ ದುಃಖ, ದುಗುಡ, ದುಮ್ಮಾನಗಳು ಮಾಯವಾಗಿ ಮನಸ್ಸು ಉಲ್ಲಾಸದಿಂದ ತೇಲಾಡುವಂತೆ ಮಾಡುತ್ತದೆ. ದೇವಾಲಯದ ಬಳಿ ಸುಂದರ ಉದ್ಯಾನವನವಿದ್ದು, ಇಲ್ಲಿ ಕುಳಿತು ಪ್ರವಾಸಿಗರು ವಿಶ್ರಾಂತಿ ಪಡೆಯಬಹುದು.
ಒಟ್ಟಾರೆ ಬೈಲುಕುಪ್ಪೆಯ ಟಿಬೆಟ್ ನಿರಾಶ್ರಿತರ ಶಿಬಿರವು ಒಂದು 'ಮಿನಿ ಟಿಬೆಟ್ ದೇಶದಂತೆ' ಗೋಚರಿಸುವುದರಲ್ಲಿ ಸಂದೇಹವಿಲ್ಲ. ಹೀಗಾಗಿಯೇ ಇಲ್ಲಿಗೆ ದಿನಂಪ್ರತಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಬನ್ನಿ ನಾವು ಒಮ್ಮೆ ಭೇಟಿ ನೀಡೋಣ...[ಬೈಲಕುಪ್ಪೆ ಬೌದ್ಧ ವಿಶ್ವವಿದ್ಯಾಲಯ ಲೋಕಾರ್ಪಣೆಗೆ ದಲೈ ಲಾಮಾ]
ಸ್ವರ್ಣ ದೇಗುಲದ ವಿಶೇಷತೆ ಏನು?
ಸ್ವರ್ಣ ದೇವಾಲಯವು ಉತ್ಕೃಷ್ಟ ಶಿಲ್ಪಕಲೆಯಿಂದ ಕೂಡಿದ ಮಂದಿರವಾಗಿದ್ದು, ಕಲೆಗೆ ಚಿನ್ನದ ಲೇಪನ ಮೆರುಗು ನೀಡಿದೆ. ವಿಶಾಲ ಹಜಾರ ಹೊಂದಿರುವ ದೇವಾಲಯದ ಪೀಠದಿಂದಲೇ 60 ಅಡಿ ಎತ್ತರದ ಬುದ್ದನ ಮೂರ್ತಿ, 58 ಅಡಿ ಎತ್ತರದ ಗುರು ಪದ್ಮಸಂಭವ ಹಾಗೂ ಬುದ್ದ ಅಮಿತಾಯುಸ್ ನ ಮೂರು ಬೃಹತ್ ಪ್ರಧಾನ ಮೂರ್ತಿಗಳಿದ್ದು, ಇವುಗಳನ್ನು ಚಿನ್ನಲೇಪಿತ ತಾಮ್ರದ ಲೋಹದಿಂದ ನಿರ್ಮಿಸಲಾಗಿದೆ.
ಮೂರು ಬೃಹತ್ ಪ್ರಧಾನ ಮೂರ್ತಿ ಒಳಗೆ ಏನಿದೆ?
ಈ ಮೂರ್ತಿಗಳ ಒಳಗೆ ಧರ್ಮಗ್ರಂಥಗಳು, ಮಹಾತ್ಮರ ಭಗ್ನಾವಶೇಷಗಳು, ಜೇಡಿಮಣ್ಣಿನ ಸ್ಥೂಪಗಳು, ಎರಕದ ಅಚ್ಚುಗಳು ಮತ್ತು ಸಣ್ಣ ಮೂರ್ತಿಗಳಿವೆ. ಇವು ಭಗವಾನ್ ಬುದ್ದನ ದೇಹ ನುಡಿ ಮತ್ತು ಮನಸ್ಸಿನ ಸಂಕೇತಗಳಾಗಿವೆ. ಇವುಗಳನ್ನು ಪೂಜಿಸಿದ್ದಲ್ಲಿ ಮನಸ್ಸಿನಲ್ಲಿ ನಂಬಿಕೆ, ಶಾಂತಿ, ವಿವೇಕ, ಪ್ರೀತಿ, ದಯೆ ಮತ್ತು ಅನುಕಂಪಗಳು ಮೂಡಿ ನಮ್ಮ ಕಲ್ಮಶ ಮನಸ್ಸು ಶುದ್ಧಗೊಳ್ಳುತ್ತದೆ ಎಂಬ ನಂಬಿಕೆಯಿದೆ.
ದೇವಾಲಯದ ಗೋಡೆಗಳ ಇಕ್ಕೆಲದಲ್ಲಿ ಏನೆಲ್ಲಾ ಕಾಣಬಹುದು?
ದೇವಾಲಯದ ಗೋಡೆಗಳಲ್ಲಿ ಪ್ರಧಾನ ಮೂರ್ತಿಗಳ ಇಕ್ಕೆಲಗಳಲ್ಲಿ ಜೋಗ್ ಬನ್ ರವರ ಬೋಧನೆಗಳನ್ನು ಆಚರಿಸಿ ಮಹಾಸಿದ್ದಿ ಪಡೆದ ಗುರುಪದ್ಮ ಸಂಭವರವರ 25 ಶಿಷ್ಯಂದಿಯರನ್ನು ಅಲ್ಲದೆ, ಬೃಹತ್ ಮೂರ್ತಿಗಳ ಹಿಂದೆ ಕಾಣಿಕೆಯ ದೇವತೆಯನ್ನು ಕಾಣಬಹುದಾಗಿದೆ. ಮೂರನೆಯ ಅಂತಸ್ತಿನ ಎರಡು ಕಡೆ ಜೋಗ್ ಚಿನ್ ಅವರ 12 ಮಹಾ ಮಹಿಮ ಗುರುಗಳನ್ನು ಪ್ರತಿನಿಧಿಸಿದರೆ, ಎರಡನೆಯ ಅಂತಸ್ತಿನ ಚಿತ್ರಗಳು ಪಾಲ್ಯುಲ್ ಸಂಪ್ರದಾಯದ ಸಿಂಹಾಸನಾಧೀಶರನ್ನು ಮತ್ತು ಜ್ಞಂಗ್ ಮ ಸಂಪ್ರದಾಯದ ಮಹಾಮಹಿಮ ವಿದ್ವಾಂಸರನ್ನು ಮತ್ತು ಶ್ರೇಷ್ಠ ಬೋಧಕರನ್ನು ಪ್ರತಿನಿಧಿಸುತ್ತದೆ.
ಮೊದಲನೆ ಅಂತಸ್ತಿನ ಗೋಡೆಯಲ್ಲಿ ಯಾವ ಚಿತ್ರಗಳಿವೆ?
ಮೊದಲನೆ ಅಂತಸ್ತಿನ ಗೋಡೆಯಲ್ಲಿ ತಾಂತ್ರಿಕ ಬೌದ್ದ ಧರ್ಮದ ಪ್ರಭಾವದ ಚಿತ್ರಗಳಾದ ಲಾಮ, ಏಡಂ ಮತ್ತು ಡಾಕಿನಿ ಎಂಬ ಮೂರು ದೇವತೆಗಳನ್ನು ಕಾಣಬಹುದಾಗಿದೆ. ಅಲ್ಲದೆ ಇಲ್ಲಿ ದೇವತೆಗಳನ್ನು ಉಗ್ರ ರೂಪದಲ್ಲಿಯೂ ಹಾಗೂ ಸಂಗಮ ರೂಪದಲ್ಲಿಯೂ ಚಿತ್ರಿಸಲಾಗಿದ್ದು, ಶಾಂತದೇವತೆಗಳು ರೇಷ್ಮೆ ವಸ್ತ್ರಗಳನ್ನು ಮತ್ತು ಅಮೂಲ್ಯ ಲೋಹ, ಹರಳುಗಳನ್ನು ಧರಿಸಿದ್ದರೆ, ಉಗ್ರ ಸ್ವರೂಪದ ದೇವತೆಗಳು ಚರ್ಮ ಮತ್ತು ಮೂಳೆಯ ಆಭರಣಗಳನ್ನು ಧರಿಸಿರುವುದು ಕಂಡು ಬರುತ್ತದೆ. ಇಲ್ಲಿರುವ ದೇವತೆಗಳನ್ನು ರೂಪಿಸಿರುವ ರೀತಿಗಳು ಮನುಷ್ಯನ ಮಾನಸಿಕ ಸ್ತರಗಳನ್ನು ತೋರಿಸುತ್ತದೆ.
ದೇವಾಲಯದ ಹೊರಭಾಗದಲ್ಲಿ ಎಷ್ಟು ಸ್ತೂಪಗಳಿವೆ?
ದೇವಾಲಯದ ಹೊರಭಾಗದಲ್ಲಿ ಎಂಟು ಸ್ತೂಪಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ ಭಗವಾನ್ ಬುದ್ದನ ಜನ್ಮಸ್ಥಳ ಲುಂಬಿನಿ, ಜ್ಞಾನೋದಯವಾದ ಸ್ಥಳ ಬುದ್ದಗಯ, ನಾಲ್ಕು ಮಹತ್ತರ ಸತ್ಯಗಳನ್ನು ಬೋಧಿಸಿದ ಸ್ಥಳ (ಧರ್ಮಚಕ್ರ ಸ್ಥೂಪ) ವಾರಣಾಸಿ, ಪವಾಡಗಳನ್ನು ಪ್ರದರ್ಶಿಸಿದ ಸ್ಥಳ(ಅದ್ಭುತ ಪವಾಡ ಸ್ಥೂಪ) ಶ್ರಾವಸ್ಥಿ, ಬುದ್ದನು ಸ್ವರ್ಗದಲ್ಲಿರುವ ತಮ್ಮ ಮಾತೃಶ್ರೀ ಯವರಿಗೆ ಜ್ಞಾನ ಪ್ರದಾನ ಮಾಡಿ ಸ್ವರ್ಗದಿಂದ ಹಿಂತಿರುಗಿದ ಸ್ಥಳ ವೈಶಾಲಿ, ಬುದ್ದನು ಸಂಘದಲ್ಲಿ ದೇವದತ್ತ ಮತ್ತು ಅವನ ಸಂಬಂಧಿಗಳು ಮಾಡಿದ ಎರಡು ಗುಂಪುಗಳ ನಡುವೆ ಸಂಧಾನ ನಡೆಸಿ ಒಂದು ಗೂಡಿಸಿ ಮತ್ತೆ ಸಂಘಕ್ಕೆ ಸೇರಿಸಿದ ಸ್ಥಳ (ಮೈತ್ರಿ ಸ್ಥೂಪ) ರಾಜಗೃಹ, ಬುದ್ದನು ಭಕ್ತರ ಕೋರಿಕೆಯ ಮೇರೆಗೆ ತಮ್ಮ ಜೀವಾವಧಿಯನ್ನು ಮೂರು ತಿಂಗಳು ಮುಂದೂಡಿದ ಸ್ಥಳ (ವಿಜಯ ಸ್ಥೂಪ) ವೈಶಾಲಿ, ಬುದ್ದನು ನಿರ್ವಾಣ ಹೊಂದಿದ ಸ್ಥಳ (ಪರಿನಿರ್ವಾಣ ಸ್ಥೂಪ) ಕುಶಿನಗರವಾಗಿದೆ. ಈ ಎಂಟು ಸ್ಥೂಪಗಳು ನೋಡಲು ಆಕರ್ಷಕವಾಗಿವೆ.
ದೇವಾಲಯದ ಹೊರಭಾಗದಲ್ಲಿ ಎಷ್ಟು ಸ್ತೂಪಗಳಿವೆ?
ದೇವಾಲಯದ ಹೊರಭಾಗದಲ್ಲಿ ಎಂಟು ಸ್ತೂಪಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ ಭಗವಾನ್ ಬುದ್ದನ ಜನ್ಮಸ್ಥಳ ಲುಂಬಿನಿ, ಜ್ಞಾನೋದಯವಾದ ಸ್ಥಳ ಬುದ್ದಗಯ, ನಾಲ್ಕು ಮಹತ್ತರ ಸತ್ಯಗಳನ್ನು ಬೋಧಿಸಿದ ಸ್ಥಳ (ಧರ್ಮಚಕ್ರ ಸ್ತೂಪ) ವಾರಣಾಸಿ, ಪವಾಡಗಳನ್ನು ಪ್ರದರ್ಶಿಸಿದ ಸ್ಥಳ(ಅದ್ಭುತ ಪವಾಡ ಸ್ತೂಪ) ಶ್ರಾವಸ್ಥಿ, ಬುದ್ದನು ಸ್ವರ್ಗದಲ್ಲಿರುವ ತಮ್ಮ ಮಾತೃಶ್ರೀ ಯವರಿಗೆ ಜ್ಞಾನ ಪ್ರದಾನ ಮಾಡಿ ಸ್ವರ್ಗದಿಂದ ಹಿಂತಿರುಗಿದ ಸ್ಥಳ ವೈಶಾಲಿ, ಬುದ್ದನು ಸಂಘದಲ್ಲಿ ದೇವದತ್ತ ಮತ್ತು ಅವನ ಸಂಬಂಧಿಗಳು ಮಾಡಿದ ಎರಡು ಗುಂಪುಗಳ ನಡುವೆ ಸಂಧಾನ ನಡೆಸಿ ಒಂದು ಗೂಡಿಸಿ ಮತ್ತೆ ಸಂಘಕ್ಕೆ ಸೇರಿಸಿದ ಸ್ಥಳ (ಮೈತ್ರಿ ಸ್ತೂಪ) ರಾಜಗೃಹ, ಬುದ್ದನು ಭಕ್ತರ ಕೋರಿಕೆಯ ಮೇರೆಗೆ ತಮ್ಮ ಜೀವಾವಧಿಯನ್ನು ಮೂರು ತಿಂಗಳು ಮುಂದೂಡಿದ ಸ್ಥಳ (ವಿಜಯ ಸ್ತೂಪ) ವೈಶಾಲಿ, ಬುದ್ದನು ನಿರ್ವಾಣ ಹೊಂದಿದ ಸ್ಥಳ (ಪರಿನಿರ್ವಾಣ ಸ್ತೂಪ) ಕುಶಿನಗರವಾಗಿದೆ. ಈ ಎಂಟು ಸ್ತೂಪಗಳು ನೋಡಲು ಆಕರ್ಷಕವಾಗಿವೆ.
ಈ ದೇವಾಲಯದ ಬಗೆಗಿರುವ ನಂಬಿಕೆ ಏನು?
ಪ್ರವೇಶದ್ವಾರದಿಂದ ಆರಂಭವಾಗಿ ದೇವಾಲಯಕ್ಕೆ ಸುತ್ತುವರಿದುಕೊಂಡು ಸುಮಾರು ಸಾವಿರದ ಮುನ್ನೂರು ಪ್ರಾರ್ಥನಾ ಚಕ್ರಗಳಿದ್ದು, ಈ ಪ್ರಾರ್ಥನಾ ಚಕ್ರಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿ ಅವುಗಳನ್ನು ಬಲಭಾಗದಿಂದ ತಿರುಗಿಸಿದರೆ ನಾವು ರೋಗ-ರುಜಿನಗಳಿಂದ ಮುಕ್ತಗೊಂಡು ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ.