ಹಾಸನಾಂಬೆ ದರ್ಶನಕ್ಕೆ ದಿನಗಣನೆ ಆರಂಭ
ಪ್ರತಿ ಬಾರಿಯಂತೆ ದೀಪಾವಳಿ ಹಬ್ಬ ಆಚರಣೆಯ ಆಶ್ಲೇಷ ಪೌರ್ಣಿಮೆಯ ಪ್ರಥಮ ಗುರುವಾರ ದಂದು ಸಂಪ್ರದಾಯದಂತೆ ದೇವಾಲಯದ ಬಾಗಿಲು ತೆರೆಯಲಿದೆ. ಅಕ್ಟೋಬರ್ 28 ರಂದು ಹಾಸನಾಂಬೆಯ ದರ್ಶನಕ್ಕೆ ದೇವಾಲಯದ ಗರ್ಭ ಗುಡಿಯ ಬಾಗಿಲು ತೆರೆಯಲಿದ್ದು, ನವೆಂಬರ್ 8ರವರೆಗೆ 12 ದಿನಗಳ ಕಾಲ ಭಕ್ತಾದಿಗಳಿಗೆ ದರ್ಶನ ಭಾಗ್ಯ ದೊರಕಲಿದೆ ಎಂದು ದೇವಾಲಯ ಸಮಿತಿ ಸದಸ್ಯ ಪ್ರಸನ್ನ ಕೃಷ್ಣಮೂರ್ತಿ ಹೇಳಿದರು.
ಸಂಪ್ರದಾಯದಂತೆ ಪ್ರತಿ ವರ್ಷ ಕನಿಷ್ಠ 9 ರಿಂದ ಗರಿಷ್ಠ 15 ದಿನಗಳ ಕಾಲ ಮಾತ್ರ ದೇವಾಲಯದ ಬಾಗಿಲು ತೆರೆದು ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸುವುದು ವಿಶೇಷವಾಗಿದೆ. ಕೃಷ್ಣಪ್ಪ ನಾಯಕ ಎಂಬ ಪಾಳೇಗಾರ 12ನೇ ಶತಮಾನದಲ್ಲಿ ನಿರ್ಮಿಸಿದ ದೇವಸ್ಥಾನದ ವಿಶೇಷತೆ ಎಂದರೆ, ವರ್ಷ ಕಳೆದರೂ ಹಚ್ಚಿಟ್ಟ ದೀಪ ನಂದದೆ ಪ್ರಜ್ವಲ್ವಿಸುತ್ತಾ ಇರುತ್ತದೆ. ಪವಿತ್ರ ದೀಪದ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ.
ಪೂರ್ಣಗೊಳ್ಳದ ಜೀರ್ಣೋದ್ಧಾರ: ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿಯನ್ನು ಕಳೆದ ವರ್ಷವೇ ಆರಂಭಿಸಲಾಗಿತ್ತು.
ದೇವಾಲಯದ ರಾಜಗೋಪುರ ನಿರ್ಮಾಣ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿದ್ದು, ಉಳಿದ ಕೆಲಸ ಶಿಲ್ಪಿಗಳಿಂದ ಆಗಬೇಕಿದ್ದು, ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.
ದೇವಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾಗಿರುವ 1 ಕೋಟಿ ರೂ.ಹಣದಲ್ಲಿ 50 ಲಕ್ಷ ಮಾತ್ರ ಬಿಡುಗಡೆಯಾಗಿದ್ದು, ಹಣದ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ ಎಂದು ಪ್ರಸನ್ನ ಕೃಷ್ಣಮೂರ್ತಿ ದೂರುತ್ತಾರೆ.
ಆದರೆ ಹಲವಾರು ಕಾರಣಗಳಿಂದ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳದೆ ಉಳಿದಿರುವುದು ಭಕ್ತಾದಿಗಳಿಗೆ ಬೇಸರ ತರಿಸಿದೆ. ಬೃಹತ್ ಆಕಾರದಲ್ಲಿ ನಿರ್ಮಿಸುತ್ತಿರುವ ರಾಜಗೋಪುರದ ಕಾಮಗಾರಿ ಆರಂಭಗೊಂಡ ಐದಾರು ತಿಂಗಳಲ್ಲಿಯೇ ಪೂರ್ಣಗೊಳ್ಳುವ ಭರವಸೆ ಇತ್ತು. ಆದರೆ ವರ್ಷ ಕಳೆದರೂ ಅದಕ್ಕೆ ಸ್ಪಷ್ಟರೂಪವೇ ಸಿಕ್ಕಿಲ್ಲ.
ಅರ್ಚಕರ ಅಳಲು: ದರ್ಶನಕ್ಕೆ ಬರುವ ಭಕ್ತಾದಿಗಳಿಂದ ಕಾಣಿಕೆ ರೂಪದಲ್ಲಿ ಯಾವುದೇ ರೀತಿಯ ನಿಧಿ ಸಂಗ್ರಹಿಸುತ್ತಿರಲಿಲ್ಲ. ಕಳೆದ ವರ್ಷದಿಂದ ಅರ್ಚನೆ ಮತ್ತು ಇನ್ನಿತರ ಪೂಜೆಗಳಿಗೆ ಇಂತಿಷ್ಟು ಎಂದು ನಿಗದಿಪಡಿಸಿ ಹಣ ಪಡೆಯುತ್ತಿರುವುದು ಅರ್ಚಕ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ಅರ್ಚಕರಿಗೆ ಸೂಕ್ತ ವಸತಿ ವ್ಯವಸ್ಥೆ ಇಲ್ಲದೆ ಜೀವನ ನಿರ್ವಹಿಸುವಂತಹ ಪ್ರಸಂಗ ಬಂದಿದೆ.
ಈ ಎಲ್ಲಾ ಕಾರಣಗಳಿಂದ ಬೇಸತ್ತಿರುವ ದೇವಸ್ಥಾನದ ಪ್ರಧಾನ ಅರ್ಚಕ ಸುರೇಶ್ವರ್ ದೇವಾಲಯದಲ್ಲಿ ಇನ್ನು ಮುಂದೆ ಪೂಜೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ದೇವಾಲಯದ ಸಮಿತಿ ಈ ನಿಟ್ಟಿನಲ್ಲಿ ಸೂಕ್ತವಾಗಿ ಕಾರ್ಯ ನಿರ್ವಹಿಸಿ ಭಕ್ತಾದಿಗಳ ಹಿತ ಕಾಯಬೇಕೆಂಬುದು ಒತ್ತಾಯವಾಗಿದೆ.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS