ಕೈಲಾಸ ಮಾನಸ ಸರೋವರ ಯಾತ್ರೆಗೆ ಪ್ರೋತ್ಸಾಹ ಧನ
ಕರ್ನಾಟಕದ ಖಾಯಂ ನಿವಾಸಿಗಳು, ದಿನಾಂಕ 3/6/2006 ರಲ್ಲಿ ನೀಡಿರುವ ಸರ್ಕಾರಿ ಆಜ್ಞೆಯ ಮಾರ್ಗಸೂಚಿಗಳ ಷರತ್ತುಗಳಿಗೆ ಒಳಪಟ್ಟವರು ಮಾತ್ರ ಧನ ಸಹಾಯ ಪಡೆಯಲು ಅರ್ಹರಾಗಿರುತ್ತಾರೆ. ಈ ಉದ್ದೇಶಕ್ಕಾಗಿ ಪಾಸ್ಪೋರ್ಟ್ನಲ್ಲಿ ನಮೂದಿಸಲಾಗಿರುವ ಕರ್ನಾಟಕ ರಾಜ್ಯದ ವಿಳಾಸವನ್ನು ಪರಿಗಣಿಸಲಾಗುವುದು. ಈಗಾಗಲೇ ಮಾನಸ ಸರೋವರ ಯಾತ್ರೆ ಕೈಗೊಂಡು ಸರ್ಕಾರದಿಂದ ಧನ ಸಹಾಯ ಪಡೆದಿರುವ ಯಾತ್ರಿಕರು, ಈ ಉದ್ದೇಶಕ್ಕಾಗಿ ಎರಡನೇ ಬಾರಿಗೆ ಈ ಧನ ಸಹಾಯ ಪಡೆಯಲು ಅರ್ಹರಾಗುವುದಿಲ್ಲ.
ಸರ್ಕಾರದ ಮಾರ್ಗಸೂಚಿಗಳಿಗೆ ಒಳಪಟ್ಟು ಧನ ಸಹಾಯ ಪಡೆಯಲು ಇಚ್ಚಿಸುವ ಯಾತ್ರಿಕರು ತಾವು ಯಾತ್ರೆ ಮುಗಿಸಿದ್ದಕ್ಕೆ ಪಡೆಯುವ ಪ್ರಮಾಣ ಪತ್ರದ ದಿನಾಂಕದಿಂದ ಎರಡು ತಿಂಗಳು ಒಳಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, 2ನೇ ಮಹಡಿ, ಮಲೆ ಮಹದೇಶ್ವರ ವಾರ್ತಾ ಭವನ, ಆಲೂರು ವೆಂಕಟರಾವ್ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18. ಈ ಕಛೇರಿಯಲ್ಲಿ ಖುದ್ದು ಪಡೆದು ಸಲ್ಲಿಸತಕ್ಕದ್ದು. ಹೆಚ್ಚಿನ ವಿವರಗಳಿಗಾಗಿ ಮೇಲ್ಕಂಡ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಭಾರತ, ಚೀನಾ ಹಾಗೂ ಟಿಬೇಟ್ ಗಡಿ ಭಾಗವನ್ನು ಹಾದು ಕೈಲಾಸ ಪರ್ವತವನ್ನು ನೋಡಬಹುದಾಗಿದೆ. ಸಾಕ್ಷತ್ ಶಿವನ ಸನ್ನಿಧಿ ಎಂದು ನಂಬಲಾಗಿರುವ ಕೈಲಾಸ ಪರ್ವತ ಪರಿಕ್ರಮ ಹಾಗೂ ಮಾನಸ ಸರೋವರ ಯಾತ್ರೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕಾಣಲೇ ಬೇಕಾದ ಪುಣ್ಯಸ್ಥಳ ಎಂದು ಹಿಂದೂಗಳ ನಂಬಿಕೆ. ಹಿಂದೂಗಳಲ್ಲದೆ, ಬೌದ್ಧ, ಜೈನ ಹಾಗೂ ಬಾನ್ ಧರ್ಮದವರಿಗೂ ಕೈಲಾಸ ಪರ್ವತ ಪವಿತ್ರ ಸ್ಥಳವಾಗಿದೆ.
ಗುಜರಾತ್ ಸರ್ಕಾರ 50,000 ರು ಗಳನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತಿದ್ದು, ಕರ್ನಾಟಕ ಸರ್ಕಾರ 25,000 ರು ಗಳನ್ನು ನೀಡುತ್ತಿದೆ. ಬೆಂಗಳೂರಿನ ಎಸ್ ಜಿಎಲ್ ಟೂರ್ಸ್ ಹಾಗೂ ಟ್ರಾವೆಲ್ಸ್ ಕಂಪೆನಿ ಹಲವಾರು ವರ್ಷಗಳಿಂದ ಕೈಲಾಸ ಯಾತ್ರೆಯನ್ನು ಆಯೋಜಿಸುತ್ತಾ ಬಂದಿದೆ.