ತಲಕಾಡು ಪಂಚಲಿಂಗದರ್ಶನಕ್ಕೆ ಸಕಲ ಸಿದ್ಧತೆ
ಮೈಸೂರು, ಮೇ. 28: 2009ನೇ ನವೆಂಬರ್ 16ರಂದು ನಡೆಯಲಿರುವ ತಲಕಾಡು ಪಂಚಲಿಂಗದರ್ಶನ ಮಹೋತ್ಸವಕ್ಕೆ ಸಂಬಂಧಿಸಿದ ಕಾಮಗಾರಿಗಳ ಅನುಷ್ಠಾನವನ್ನು ಚುರುಕುಗೊಳಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ ಪಿ. ಮಣಿವಣ್ಣನ್ ಅವರು ಮೈಸೂರು ಸಹಾಯಕ ಆಯುಕ್ತರು ಎಲ್ಲಾ ಸಿದ್ಧತಾ ಕೆಲಸಗಳ ಸಮನ್ವಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ತಿಳಿಸಿದರು.
ಪಂಚಲಿಂಗದರ್ಶನ ಮಹೋತ್ಸವ ಸಿದ್ಧತೆಗಳ ಪರಿಶೀಲನೆಗಾಗಿ ಇಂದು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ದೇವಾಲಯಗಳ ದುರಸ್ತಿ ಕಾರ್ಯವನ್ನು ದೇವಸ್ಥಾನ ಸಮಿತಿಗಳಲ್ಲಿ ಲಭ್ಯವಿರುವ ಹಣದಿಂದ ಕೂಡಲೇ ಆರಂಭಿಸಲು ಕ್ರಮ ವಹಿಸುವಂತೆ ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಇಲಾಖೆ, ಮತ್ತಿತರ ಇಲಾಖೆಗಳು ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ಪರಿಶೀಲಿಸಿದ ಅವರು ಕುಡಿಯುವ ನೀರು, ಸ್ವಚ್ಚತೆ, ಸಂಚಾರ ವ್ಯವಸ್ಥೆ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಇನ್ನುಮುಂದೆ ನಿಯಮಿತವಾಗಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಮೈಸೂರು ಸಹಾಯಕ ಆಯುಕ್ತರು ಹೆಚ್ಚಿನ ಆಸಕ್ತಿ ವಹಿಸಿ ಸಿದ್ಧತೆಗಳ ಪರಿಶೀಲನೆ ನಡೆಸುವರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಶಾಶ್ವತ ಕಾಮಗಾರಿಗಳನ್ನು ಇದೇ ಸಂದರ್ಭದಲ್ಲಿ ಕೈಗೊಳ್ಳುವಂತೆಯೂ ಅವರು ಹೇಳಿದರು.ಟಿ.ನರಸೀಪುರ ತಾಲ್ಲೂಕು ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
(ದಟ್ಸ್ ಕನ್ನಡವಾರ್ತೆ)