ಭಗವಾನ್ ಬುದ್ಧನ ಜನನ ಸ್ಥಾನ ಲುಂಬಿನಿ
ಸಿದ್ಧಾರ್ಥ ಹುಟ್ಟಿದ ಸ್ಥಳದಲ್ಲಿ ಚಪ್ಪಡಿ ಕಲ್ಲು ಇದ್ದು ಅದಕ್ಕೆ ಮಾರ್ಕರ್ ಸ್ಟೋನ್ (ಜನ್ಮದ ಕಲ್ಲು) ಎಂದು ಕರೆದು ಗಾಜಿನ ಪೆಟ್ಟಿಗೆಯಲ್ಲಿ ಇಟ್ಟಿದ್ದಾರೆ. ಹೋದವರೆಲ್ಲರೂ ಭಕ್ತಿ ಮತ್ತು ಮರ್ಯಾದೆ ಸೂಚಿಸುವುದಕ್ಕೆ ಹೂವು, ನಾಣ್ಯ ಹಾಕುತ್ತಿದ್ದರು. ಇದರ ಮುಂದೆ 249 ಬಿ.ಸಿ.ನಲ್ಲಿ ಅಶೋಕ ಚಕ್ರವರ್ತಿ ಸ್ಥಾಪಿಸಿರುವ ಅಶೋಕ ಸ್ಥಂಭವಿದೆ. ನಾವು ಹೋದ ದಿವಸ ಹನುಮಾನ್ ಜಯಂತಿ ಪ್ರಯುಕ್ತ ಪ್ರವೇಶ ಉಚಿತವಾಗಿ ಜನ ಸಮುದ್ರವೇ ನೆರೆದಿತ್ತು. ಲಾರಿಗಳಲ್ಲಿ ಭರ್ತಿ ಜನ ತುಂಬಿಕೊಂಡು, ಹಾಗೂ ಎರಡು ಚಕ್ರದ ಸೈಕಲ್ಲಿನಲ್ಲಿ 4,5 ಜನ ಕೂರಿಸಿಕೊಂಡು ಬರುತ್ತಿರುವುದನ್ನ ನೋಡುವುದಕ್ಕೆ ಚೆನ್ನ!
ನಾವೂ ಧಮ್ಮ ಜನನಿ ಮೆಡಿಟೇಶನ್ ಸೆಂಟರ್ ಒಳಗೆ ಹೋಗಿನೋಡಿದರೆ, ನಿಶ್ಯಭ್ಧವಾಗಿ ಕೆಲವರು ಹಾಲಿನಲ್ಲಿ ಕೂತು ಮೆಡಿಟೇಶನ್ ಮಾಡುತ್ತಿದ್ದರು. ಒಬ್ಬ ಮಹಿಳೆ, ನಡಿಗೆಯಲ್ಲೇ ಮೆಡಿಟೇಶನ್ ಮಾಡಿಕೊಂಡು ಶೌಚನಾಲಯಕ್ಕೆ ಹೋದರು. ಅಲ್ಲಿಯ ನಿಭಂದನೆ ಏನೆಂದರೆ, ನಮ್ಮ ಪಾದರಕ್ಷೆ ಬಿಟ್ಟು, ಅವರಿಟ್ಟಿರುವ ಶುದ್ಧವಾಗಿರುವ ಪಾದರಕ್ಷೆ ಹಾಕಿಕೊಂಡು ಹೋಗಿ ಬರಬೇಕು!! ನಾನೂ ಅದರ ಅವಕಾಶ ಪಡೆದೆ.
ಅಲ್ಲಿಂದ ದೇವಘಟ್ ಮಾರ್ಗವಾಗಿ ಜನಕಪುರಿಗೆ ಬಂದದ್ದಾಯಿತು. ದೇವಘಟ್ ಬಹಳ ಪವಿತ್ರ ಸ್ಥಳ. ರಿಷಿಕೇಶದಲ್ಲಿರುವ ಲಕ್ಷ್ಮಣ ಜೂಲಾ ತರಹದ ಸೇತುವೆ ಮೇಲೆ ನಡೆದುಕೊಂಡು ಪಶುಪತಿನಾಥನ ದೇವಸ್ಥಾನಕ್ಕೆ ಬರಬೇಕು. ದಾರಿಯಲ್ಲೆಲ್ಲಾ ಸಣ್ಣ ಸಣ್ಣ ದೇವಸ್ಥಾನಗಳು ಹಾಗೂ ಪವಿತ್ರ ಸ್ಥಳವಾದ್ದರಿಂದ ಅಲ್ಲಲ್ಲೇ, ಚೌಲ, ಮುಂಜಿ, ಮದುವೆ ಸಮಾರಂಭಗಳೂ ನಡೆಯುತ್ತಿತ್ತು. ಸತ್ಯನಾರಾಯಣ ದೇವಸ್ಥಾನದ ಅರ್ಚಕರು, ತೀರ್ಥ, ಪ್ರಸಾದ ಕೊಟ್ಟು, ಮೈಸೂರು ಮಹಾರಾಜರ ಅರಮನೆಯಲ್ಲಿ ಕೆಲಸ ಮಾಡಿದ್ದೆನೆಂದು ಹೆಮ್ಮೆಯಿಂದ ಹೇಳಿಕೊಂಡರು. ಸುಮಾರು ಮೆಟ್ಟಲುಗಳು ಇಳಿದುಕೊಂಡು ಬಂದರೆ, ಗುಡಿಯಲ್ಲಿ ಪಶುಪತಿನಾಥನ ಚಿಕ್ಕ ಮೂರ್ತಿ ಕಾಣಿಸುತ್ತದೆ. (ಕಠ್ಮಂಡು ಪಶುಪಥಿನಾಥನ ಲಿಂಗದ ಚಿಕ್ಕ ಸ್ವರೂಪ).
ಜನಕಪುರಿ, ಜನಕ ಮಹಾರಾಜನ ರಾಜಧಾನಿ ಹಾಗೂ ರಾಮಾಯಣದ ಸೀತಾಮಾತೆಯ ಜನ್ಮಸ್ಥಳ. ಸೀತಾರಾಮರ ಸ್ವಯಂವರ ವಾಗಿರುವುದು ಇಲ್ಲಿಯ ಸ್ಥಳ ಪುರಾಣ. ಜನಕಪುರಿ ಧನುಶ ಜಿಲ್ಲೆಯಲ್ಲಿರುವುದು. ಪಟ್ಟಣದ ಮಹಾದ್ವಾರದಲ್ಲಿ ಎರಡು ಬಿಲ್ಲಿನಾಕಾರದ್ದು ಸ್ವಾಗತಿಸುತ್ತೆ. ಊರಿನ ಮಧ್ಯದಲ್ಲಿ ಸೀತಾಮಾತೆಯ ದೇವಸ್ಥಾನ ಬಹಳ ಪ್ರಸಿದ್ಧವಾದದ್ದು. ಸುಂದರವಾದ ದೊಡ್ಡ ಅರಮನೆಯಂತೆ ಕಾಣುವುದನ್ನು ಮೊಘಲ್ ಮತ್ತು ರಾಜಪುಟ್ ಕೆತ್ತನೆಯಿಂದ ಮಾಡಿರುವುದನ್ನು ನೋಡಲು ಹೋದರೆ, ಒಳಗೆ ಗರ್ಭಗುಡಿಯಲ್ಲಿ, ಸೀತಾರಾಮರ ವಿಗ್ರಹ, ಅರ್ಚಕರು ಪಾದುಕೆಯನ್ನು ತೋರಿಸಿ, ತೀರ್ಥ ಪ್ರಸಾದ ಕೊಟ್ಟು, ದೇವರಡಿಯಲ್ಲಿಟ್ಟಿರುವ ಸಾಲಿಗ್ರಾಮಗಳನ್ನೂ ತೋರಿಸಿದರು. ಪಕ್ಕದಲ್ಲಿ ವಿವಾಹ ಮಂಟಪ(ಗಾಜಿನ ಮನೆಯಲ್ಲಿ ಎಲ್ಲ ಋಷಿ ವರ್ಯರೂ ಕೂತಿರುವುದು) ನೋಡಲು ಬಹಳ ಅಧ್ಭುತವಾಗಿತ್ತು.
ಇಲ್ಲಿಂದ 18 ಕಿ.ಮೀ ದೂರವಿರುವ ಧನುಶಾದಂನಲ್ಲಿ ರಾಮ, ಗಣೇಶ, ಪಂಚಮುಖಿ ಹನುಮಂತ ಮಂದಿರಗಳಿವೆ. ಮಾರ್ಗದಲ್ಲಿ ಒಂದು ಕೊಳ ಸಿಕ್ಕುವುದು ಅದನ್ನು ದಶರಥ ಥಾಲ್ ಎನ್ನುವರು. ಇಲ್ಲಿನ ವಿಶೇಷವೆಂದರೆ, ಸೀತಾ ಸ್ವಯಂವರ ಸಮಯದಲ್ಲಿ, ಶ್ರೀರಾಮ, ಶಿವಧನಸ್ಸನ್ನು, ಭೇದಿಸಿದಾಗ ಅದು ಮೂರು ಭಾಗವಾಗಿ, ಒಂದು ಭಾಗವನ್ನು ಆಕಾಶಕ್ಕೆ, ಇನ್ನೊಂದು ಭಾಗವನ್ನು ಪಾತಾಳಕ್ಕೆ ಎಸೆದಾಗ, ಮುರಿದು ಬಿದ್ದ ಒಂದು ಭಾಗ ಇಲ್ಲಿ ಬಿದ್ದಿರುವುದಾಗಿ ಹೇಳಿದರು. 500 ವರ್ಷಗಳಿಂದ ಇರುವ ಆಲದಮರದ ಬುಡದಲ್ಲಿ ಸುಮಾರು 25ರಿಂದ 30 ಗಜ ಉದ್ದದಲ್ಲಿ ಬಿಟ್ಟು ಬಿಟ್ಟು ಇರುವ ಬಿಲ್ಲಿನಾಕಾರದ ಮರದ ತುಂಡುಗಳ ಸುತ್ತ ಸಿಮೆಂಟ್ ಹಾಕಿ ಕಟ್ಟಿ, ಪ್ರವಾಸಿಗಳಿಗೆ ನೋಡಲು ಅನುಕೂಲಮಾಡಿರುವರು.
ಪುರಾಣದ ಪ್ರಕಾರ ಪ್ರಸಿದ್ಧ ಮುನಿಯೊಬ್ಬರು ಮಹದಾಕಾರದ ಧನಸ್ಸೊಂದನ್ನು ಮಹಾಶಿವನಿಗೆ ಕೊಟ್ಟಿದ್ದು, ಶಿವಧನಸ್ಸು ಎಂದು ಪ್ರಸಿದ್ಧಿಯಾಯಿತು. ಮಹಾಶಿವನು ಧನಸ್ಸನ್ನು ಪರಶುರಾಮನಿಗೆ ಕೊಟ್ಟ. ಪರಶುರಾಮನು, ರಾಜಶ್ರೀ ಜನಕನಿಗೆ ಕೊಟ್ಟಿರುವುದಾಗಿ ಹೇಳಿದ. ಜನಕರಾಜನು ತನ್ನ ಆಸ್ಥಾನದಲ್ಲಿದ್ದ ಧನಸ್ಸನ್ನು ಭೇದಿಸಿದವರಿಗೆ ತನ್ನ ಮಗಳಾದ ಸೀತೆಯನ್ನು ಕೊಟ್ಟು ಸ್ವಯಂವರ ನಡೆಸುವುದಾಗಿ ಸಾರಿದ. ಅನೇಕ ರಾಜ ಮಹಾರಾಜರುಗಳು ಮತ್ತು ರಾವಣನೂ ಸ್ಪರ್ಧಿಸಿದರು. ಯಾರಿಗೂ ಧನಸ್ಸನ್ನು ಮುರಿಯಲಾಗಲಿಲ್ಲ. ಕಡೆಗೆ ವಿಶ್ವಾಮಿತ್ರರೊಡಗೂಡಿ ಬಂದ ಶ್ರೀರಾಮನು ಧನಸ್ಸನ್ನು ಮುರಿದ. ಸೀತಾರಾಮರ ಸ್ವಯಂವರ ನಡೆಯಿತು.
ಮೇಲೆ ಹೇಳಿದಂತೆ, ಈ ಬಿಲ್ಲಿನ ಒಂದು ಭಾಗ ಧನುಶಾಮದಲ್ಲಿದೆ. ಧನುಸ್ಸಿನ ಚಿಕ್ಕ ಚಿಕ್ಕ ಭಾಗಗಳು ಪ್ರತಿ ದಿನವೂ ಒಂದು ಎಳ್ಳು ಬೀಜದಷ್ಟು ಬೆಳೆಯುತ್ತಿರುವುದು ಹಾಗೂ ಮಥುರಾದಲ್ಲಿರುವ ಶ್ರೀ ಕೃಷ್ಣ ಕಿರುಬೆರಳಿನಲ್ಲಿ ಎತ್ತಿದ ಗೋವರ್ಧನಗಿರಿ ಸ್ವಲ್ಪ ಸ್ವಲ್ಪವಾಗಿ ಕರಗಿ ಒಂದು ದಿವಸ ನೆಲಸಮವಾಗುವುದಾಗಿಯೂ ಪ್ರತೀತಿ ಉಂಟು. ಶಿವಧನಸ್ಸು ಒಂದಾಗಿ, ಗೋವರ್ಧನಗಿರಿ ನೆಲಸಮವಾದಾಗ ಮಹಾಪ್ರಳಯ ಆಗುವುದೆಂದು ಅಲ್ಲಿಯ ಒಬ್ಬ ಹಿರಿಯ ವ್ಯಕ್ತಿ ಬಹಳ ಸುಂದರವಾಗಿ ಕಥೆ ನಿರೂಪಿಸಿದ್ದು ಕೇಳಿ ಹೋಗಿಬಂದದ್ದು ಸಾರ್ಥಕವೆನಿಸಿತು.
ಹಿಮಾಲಯ ತಪ್ಪಲಿನ ಮುಕ್ತಿನಾಥಕ್ಕೆ ಪಯಣ