ಆನ್ ಲೈನ್ ಲೋನ್ ಆಪ್ ಗಳಿಂದ ಪಡೆದ ಸಾಲ ಮನ್ನಾ ಆದಂಗೆ ?
ಬೆಂಗಳೂರು, ಜನವರಿ 04: ಆನ್ಲೈನ್ನಲ್ಲೇ ತುರ್ತು ಸಾಲ ನೀಡಿ ಅಧಿಕ ಬಡ್ಡಿ ವಸೂಲಿ ಮಾಡಿ ಜನರ ಮಾನ ಹರಾಜು ಮಾಡುತ್ತಿದ್ದ ಆಪ್ ಗಳಿಗೆ ಕಂಟಕ ಎದುರಾಗಿದೆ. ಮೂರು ರಾಜ್ಯಗಳಲ್ಲಿ ಏಕ ಕಾಲಕ್ಕೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಆನ್ಲೈನ್ ಆಪ್ ಗಳ ಬ್ಯಾಂಕ್ ಖಾತೆಗಳು ಜಪ್ತಿಗೆ ಒಳಗಾಗುತ್ತಿವೆ. ಈ ಆನ್ಲೈನ್ ಲೋನ್ ಆಪ್ ಗಳ ಮೂಲಕ ನೀಡಿರುವ ಸಾಲ ಆರ್ಬಿಐ ನಿಯಮಗಳಿಗೆ ವಿರುದ್ದವಾಗಿದ್ದು, ಸದ್ಯಕ್ಕೆ ಸಾಲಪಡೆದವರು ನಿಟ್ಟುಸಿರು ಬಿಡುವಂತಾಗಿದೆ.
ಜನರಿಗೆ ಕ್ಷಣ ಮಾತ್ರದಲ್ಲಿ ಸಾಲ ನೀಡುವ ಆಪ್ ಗಳ ವಿರುದ್ಧ ಮೂರು ರಾಜ್ಯಗಳ ಪೊಲೀಸರ ಕಾಟ ಶುರುವಾಗಿದೆ. ಆನ್ಲೈನ್ ನಲ್ಲಿ ತುರ್ತು ಸಾಲ ಕೊಡುವ ಆಪ್ ಗಳ ಅಕ್ರಮದ ವಿರುದ್ಧ ವಿರುದ್ಧ ಮೂರು ರಾಜ್ಯಗಳ ಪೊಲೀಸರು ಏಕ ಕಾಲಕ್ಕೆ ತನಿಖೆ ಆರಂಭಿಸಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣ ಪೊಲೀಸರ ತನಿಖೆ ಬೆನ್ನಲ್ಲೇ ಇದೀಗ ತಮಿಳುನಾಡು ಪೊಲೀಸರು ಕೂಡ ತುರ್ತು ಸಾಲ ನೀಡುವ ಆಪ್ ಗಳ ಅಕ್ರಮದ ವಿರುದ್ಧ ಸಮರ ಸಾರಿದ್ದಾರೆ.
ಆನ್ಲೈನ್ ತುರ್ತು ಸಾಲಕ್ಕೆ ಕೈ ಹಾಕಿ ಬದುಕು ತೂತು ಮಾಡಿಕೊಳ್ಳಬೇಡಿ!
ಚೆನ್ನೈಯಲ್ಲಿ ಸುಮಾರು 300 ಕೋಟಿ
ಚೆನ್ನೈಯಲ್ಲಿ ಸುಮಾರು 300 ಕೋಟಿ ರೂಪಾಯಿಗೂ ಅಧಿಕ ಮೊತ್ತದ ತ್ವರಿತ ಸಾಲವನ್ನು ಆನ್ಲೈನ್ ನಲ್ಲೇ ನೀಡಿ ಸಾರ್ವಜನಿಕರಿಂದ ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದ ಆಪ್ ಗಳ ವಿರುದ್ಧ ಕೇಸು ದಾಖಲಿಸಿದ್ದಾರೆ. ಈ ಅಕ್ರಮಕ್ಕೆ ಸಂಬಂಧ ಪಟ್ಟಂತೆ ಚೈನಾ ಮೂಲದ ಇಬ್ಬರು ಆರೋಪಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಕೂತು ತಮಿಳುನಾಡಿನಾದ್ಯಂತ ಕೋಟ್ಯಂತರ ರೂಪಾಯಿ ಸಾಲ ನೀಡಿದ್ದರು. ಆನ್ಲೈನ್ ಆಪ್ ಗಳ ಮೂಲಕ ತುರ್ತು ಸಾಲ ಕೊಟ್ಟು ಜನರಿಂದ ಒಂದು ವಾರಕ್ಕೆ 36 ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದರು. ಈ ಕುರಿತು ತನಿಖೆ ಕೈಗೆತ್ತಿಕೊಂಡಿರುವ ಚೆನ್ನೈ ಪೊಲೀಸರು ಚೀನಾ ಮೂಲದ ಕ್ಸಿಯಾ ಯಾ ಮೌ ಹಾಗೂ ಯುವಾನ್ ಲುನ್ ಎಂಬುವರನ್ನು ಬಂಧಿಸಿದ್ದಾರೆ. ಸುಮಾರು ಇಪ್ಪತ್ತು ದಿನಗಳಿಂದ ಚೆನ್ನೈ ಪೊಲೀಸರು ಬಲೆ ಬೀಸಿದ್ದರು ಎಂದು ತಿಳಿದು ಬಂದಿದೆ.
ಸೈಬರಾಬಾದ್ :
ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಆನ್ಲೈನ್ ಆಪ್ ಗಳಿಂದ ತುರ್ತು ಸಾಲ ಪಡೆದಿದ್ದ ಕೆಲವರು ದುಬಾರಿ ಬಡ್ಡಿ ಕಟ್ಟಲಾಗಿರಲಿಲ್ಲ. ಸಾಮಾಜಿಕ ಜಾಲ ತಾಣದಲ್ಲಿ ಮರ್ಯದೆ ಹರಾಜು ಹಾಕಿದ್ದರು. ಈ ಬಗ್ಗೆ ನೊಂದ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸೈಬರಾಬಾದ್ ಪೊಲೀಸರು ಸುಮಾರು 150 ಆನ್ಲೈನ್ ಆಪ್ ಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ದೇಶದಲ್ಲಿ ಸುಮಾರು 21 ಕೋಟಿ ರೂಪಾಯಿ ಮೌಲ್ಯದ ವ್ಯವಹಾರ ಹೊಂದಿರುವ ಸಂಗತಿ ತನಿಖೆಯಲ್ಲಿ ಹೊರ ಬಿದ್ದಿತ್ತು.
ಸಾಲ ಕೊಡುವ ಆನ್ಲೈನ್ ಆಪ್ ಗಳ ಮೇಲೆ ಸಿಸಿಬಿ ಹದ್ದಿನ ಕಣ್ಣು !
ಏಕ ಕಾಲದಲ್ಲಿ ತುರ್ತು ಸಾಲ
ಬೆಂಗಳೂರಿನಲ್ಲಿ ಸಿಸಿಬಿ ಹಾಗು ಸಿಐಡಿ ಪೊಲೀಸರು ಏಕ ಕಾಲದಲ್ಲಿ ತುರ್ತು ಸಾಲ ನೀಡುವ ಆನ್ಲೈನ್ ಆಪ್ಗಳ ಜಾಲ ಪತ್ತೆ ಮಾಡಿದ್ದಾರೆ. ಸುಮಾರು ಐವತ್ತು ಲಕ್ಷ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಾಲ ಪಾವತಿ ಮಾಡದವರನ್ನು ಅವಾಚ್ಯ ಪದಗಳಿಂದ ನಿಂದನೆ ಮಾಡುವರು ಕೆಲಸ ಬಿಟ್ಟು ಪರಾರಿಯಾಗುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಸಾಲ ವಸೂಲಿ ಮಾಡುವ ಕಾರ್ಯ ಮೂರು ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಸ್ಥಗಿತಗೊಂಡಿದೆ. ಪೊಲೀಸರ ಬಂಧನ ಭೀತಿಯಿಂದ ಆಪ್ ಗಳ ಮಾಲೀಕರು ತಲೆಮರೆಸಿಕೊಂಡಿದ್ದಾರೆ. ತಾತ್ಕಾಲಿಕವಾಗಿ ಸಾಲ ವಸೂಲಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಆಪ್ಗಳ ಅಕ್ರಮ
ಆಪ್ಗಳ ಅಕ್ರಮ ಕುರಿತು ಮೂರು ರಾಜ್ಯಗಳ ಪೊಲೀಸರು ಸಮನ್ವಯ ಸಾಧಿಸಿ ಮಾಹಿತಿ ಪರಸ್ಪರ ವಿನಿಯಮ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆನ್ಲೈನ್ ಸಾಲ ಕೊಟ್ಟು ಹೆಚ್ಚು ಬಡ್ಡಿ ವಸೂಲಿ ಮಾಡುತ್ರಿರುವ ಆನ್ಲೈನ್ ಆಪ್ ಗಳ ಕಾರ್ಯಚರಣೆ ಸ್ಥಗಿತಗೊಳಿಸಲು ಗೂಗಲ್ ಕಂಪನಿಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
'ಆನ್ಲೈನ್ ನಲ್ಲಿ ಲೋನ್ ಆಪ್ ಗಳು ಸಾಲ ನೀಡುವುದೇ ಅಕ್ರಮ. ಆರ್ ಬಿಐ ಅಥವಾ ರಾಜ್ಯ ಸಹಕಾರ ಇಲಾಖೆಯಲ್ಲಿ ನೋಂದಣಿ ಮಾಡದ ಯಾವುದೇ ಸಂಸ್ಥೆ ಬಡ್ಡಿಗೆ ಸಾಲ ನೀಡಲು ಅವಕಾಶವಿಲ್ಲ. ಆದರೆ, ಆನ್ಲೈನ್ ಮೂಲಕ ಕಂಪನಿಗಳು ನಡೆಸುತ್ತಿರುವ ವಹಿವಾಟು ಕಾನೂನಿನ ಉಲ್ಲಂಘನೆ. ಸಾಲ ಮರುಪಾವತಿ ಮಾಡದಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶ ವಿಲ್ಲ' ಎಂದು ಹಿರಿಯ ವಕೀಲ ನಾರಾಯಣಸ್ವಾಮಿ ತಿಳಿಸಿದ್ದಾರೆ. ಪೊಲೀಸರು ಕೂಡ ಈ ಸಂಗತಿಯನ್ನು ಖಚಿತ ಪಡಿಸಿದ್ದಾರೆ.