ಬೆಂಗಳೂರು, ಸೆ.4: ಕ್ರಿಕೆಟರ್ ಹರ್ಭಜನ್ ಸಿಂಗ್ ಅವರನ್ನು ಕರ್ನಾಟಕದ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ತಮ್ಮ ಮನೆಗೆ ಕರೆಸಿಕೊಂಡು ಸನ್ಮಾನ ಮಾಡಿ ಕಳಿಸಿದ್ದಾರೆ. ಜೊತೆಗೆ ರಾಜ್ಯದ ಹೊಚ್ಚ ಹೊಸ ಮಹತ್ವದ ಯೋಜನೆಯಾದ 'ಸೂರ್ಯ ರೈತ' ಯೋಜನೆಗೆ ರಾಯಭಾರಿಯಾಗುವಂತೆ ಆಹ್ವಾನ ನೀಡಿದ್ದಾರೆ. ಆಹ್ವಾನ ಮನ್ನಿಸಿದ ಭಜ್ಜಿ, ರಾಜ್ಯದಲ್ಲಿ ಸೌರಘಟಕ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ.
ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಹಾಗೂ ಸ್ಪೀಡ್ ಕಿಂಗ್ ಉಸೇನ್ ಬೋಲ್ಟ್ ನಡುವಿನ ಪ್ಯೂಮಾ ಆಯೋಜನೆಯ ಪ್ರದರ್ಶನ ಕ್ರಿಕೆಟ್ ಪಂದ್ಯವಾಡಲು ಬೆಂಗಳೂರಿಗೆ ಆಗಮಿಸಿದ್ದ ಹರ್ಭಜನ್ ಸಿಂಗ್ ಅವರು ಕರ್ನಾಟಕದ ಹಸಿರು ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. [ಬೋಲ್ಟ್ 'ಸಿಕ್ಸರ್' ಕಿಂಗ್, ಯುವಿ 'ಸ್ಪೀಡ್' ಕಿಂಗ್]
ಪಂಜಾಬ್ ಮಾದರಿಯಲ್ಲಿ ಹಸಿರು ವಿದ್ಯುತ್ ಉತ್ಪಾದನಾ ಯೋಜನೆಯನ್ನು ರಾಜ್ಯದಲ್ಲಿ ಆರಂಭಿಸುವ ಕುರಿತು ಕ್ರಿಕೆಟಿಗ ಹರ್ಭಜನ್ಸಿಂಗ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದ್ದಾರೆ.
ತಂಡಕ್ಕೆ ಮರಳುವ ವಿಶ್ವಾಸ: ಭಾರತೀಯ ಕ್ರಿಕೆಟ್ ತಂಡಕ್ಕೆ ತಾನು ಶೀಘ್ರದಲ್ಲೇ ಮರಳುತ್ತೇನೆ ಎಂದು ಕ್ರಿಕೆಟಿಗ ಹರ್ಭಜನ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದಾಶಿವನಗರದಲ್ಲಿನ ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ಕಾರಣಗಳಿಂದಾಗಿ ತಂಡದಿಂದ ದೂರ ಉಳಿಯಬೇಕಾಯಿತು. ಆದರೆ, ಬಿಸಿಸಿಐ ಇದೀಗ ತನ್ನನ್ನು ತಂಡಕ್ಕೆ ಸೇರಿಸಿಕೊಳ್ಳುವ ಆಸಕ್ತಿಯನ್ನು ಹೊಂದಿದ್ದು, ಶೀಘ್ರದಲ್ಲೇ ತಂಡಕ್ಕೆ ಹಿಂದಿರುಗುವ ವಿಶ್ವಾಸವಿದೆ ಎಂದರು. [ಕರ್ನಾಟಕದಲ್ಲಿ ತಲೆ ಎತ್ತಲಿವೆ 5 ಸೋಲಾರ್ ವಿದ್ಯುತ್ ಘಟಕ]
ಹರ್ಭಜನ್ ಸಿಂಗ್ ಅವರ ಜೊತೆ ಭೇಟಿ ನಂತರ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಪಂಜಾಬ್ ರಾಜ್ಯವು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಅಲ್ಲಿನ ರೈತರು ತಮ್ಮ ಹೊಲಗಳಲ್ಲಿ ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ. ರಾಜ್ಯದಲ್ಲೂ ಇಂಥ ಯೋಜನೆಯನ್ನು ಆರಂಭಿಸುವ ಕುರಿತು ಹರ್ಭಜನ್ಸಿಂಗ್ ಚರ್ಚೆ ನಡೆಸಿದ್ದಾರೆ ಎಂದರು.
ಸೂರ್ಯ ರೈತ ಯೋಜನೆ: ರಾಜ್ಯ ಸರ್ಕಾರದ ಮಹತ್ವದ ಸೂರ್ಯ ರೈತ ಯೋಜನೆಯಲ್ಲಿ ರೈತರು ಹೊಲಗಳಲ್ಲಿ ಸೋಲಾರ್ ಪ್ಯಾನೆಲ್ಗಳನ್ನು ಅಳವಡಿಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಹೀಗೆ ಉತ್ಪಾದನೆಯಾದ ವಿದ್ಯುತ್ತನ್ನು ಸರ್ಕಾರವೇ ನೇರವಾಗಿ ರೈತರಿಂದ ಖರೀದಿಸಲಿದೆ ಎಂದು ಸಚಿವ ಡಿಕೆ ಶಿವಕುಮಾರ್ ವಿವರಿಸಿದರು.
'ಸೂರ್ಯ ರೈತ' ಯೋಜನೆಯಡಿ ಯಲ್ಲಿ ಉತ್ಪಾದನೆಯಾಗುವ ಸೌರ ವಿದ್ಯುತ್ನ್ನು ಖರೀದಿಸುವ ಕುರಿತು ಕೆಇಆರ್ಸಿ ಈಗಾಗಲೇ ದರವನ್ನು ನಿಗದಿಪಡಿಸಿದೆ. ಈ ಯೋಜನೆಯಿಂದ ರಾಜ್ಯವು ಪಂಜಾಬ್ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲಿದೆ. ಅಲ್ಲದೆ, ರೈತರ ಆದಾಯವು ವೃದ್ಧಿಸುತ್ತದೆ ಎಂದರು.