ಮುಂಬೈ, ಡಿ.10:ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ಹೊಸ ಇತಿಹಾಸ ಸೃಷ್ಟಿಯಾಗಿದೆ. 40 ಬಾರಿ ರಣಜಿ ಚಾಂಪಿಯನ್ ಎನಿಸಿಕೊಂಡಿರುವ ಬಲಿಷ್ಠ ಮುಂಬೈ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿದ ಜಮ್ಮು ಮತ್ತು ಕಾಶ್ಮೀರ ದೈತ್ಯ ಸಂಹಾರಿಯಾಗಿದೆ.
ರಣಜಿ ಟೂರ್ನಿಯ ಶಿಶುಗಳನ್ನು ಈ ಮಟ್ಟಕ್ಕೆ ಬೆಳೆಸಿದ ಕೀರ್ತಿ ಕನ್ನಡ ಕುವರ, ಜಮ್ಮು ಮತ್ತು ಕಾಶ್ಮೀರ ತಂಡದ ಹಾಲಿ ಕೋಚ್ ಸುನೀಲ್ ಜೋಶಿ ಅವರಿಗೆ ಸಲ್ಲುತ್ತದೆ.
ಎ ಗುಂಪಿನ ಈ ಕುತೂಹಲಕಾರಿ ರಣಜಿ ಕದನದಲ್ಲಿ ಕೊನೆ ದಿನವಾದ ಇಂದು ಮುಂಬೈ ತಂಡವನ್ನು ಮಣಿಸಲು ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ 179 ರನ್ ಬೇಕಿತ್ತು, 9 ವಿಕೆಟ್ ಗಳಿದ್ದವು. 6 ವಿಕೆಟ್ ಕಳೆದುಕೊಂಡ ಜಮ್ಮು ತಂಡ ಒಟ್ಟಾರೆ ಟಾರ್ಗೆಟ್ 237 ದಾಟಿ ಗೆಲುವಿನ ಜಯಭೇರಿ ಬಾರಿಸಿತು.
ಈ ರನ್ ಚೇಸ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಆರಂಭಿಕ ಆಟಗಾರ ಶುಭಂ ಖಜೂರಿಯಾ 140 ಎಸೆತಗಳಲ್ಲಿ 78 ರನ್(10 ಬೌಂಡರಿ, 1 ಸಿಕ್ಸ್) ಗಳಿಸಿ ಗೆಲುವಿನ ದಡ ಮುಟ್ಟಿಸಿದರು. 6ನೇ ಕ್ರಮಾಂಕದಲ್ಲಿ ಆಡಲು ಬಂದ ಹರ್ದೀಪ್ ಸಿಂಗ್ 41 ರನ್ ಗಳಿಸಿ ಔಟಾಗದೆ ಉಳಿದು ತಂಡಕ್ಕೆ ಸ್ಮರಣೀಯ ಜಯ ತಂದಿತ್ತರು.
ಜೋಶಿ ಕಮಾಲ್ : ರಣಜಿ ಚಾಂಪಿಯನ್ ಶಿಪ್ ನ ಹಳೆ ಹುಲಿ ಮುಂಬೈ ತಂಡವನ್ನು ಎದುರಿಸಿದ ಮೊದಲ ಪಂದ್ಯದಲ್ಲೇ ಜಮ್ಮು ಮತ್ತು ಕಾಶ್ಮೀರ ಜಯಭೇರಿ ಬಾರಿಸಲು ಕಾರಣರಾದವರು ನಾಯಕ ಪರ್ವೇಜ್ ರಸೂಲ್ ಹಾಗೂ ಮಾಜಿ ಸ್ಪಿನ್ನರ್ ಕನ್ನಡಿಗ ಸುನೀಲ್ ಜೋಶಿ.
ಬಿಶನ್ ಸಿಂಗ್ ಬೇಡಿ ಅವರಿಂದ ತೆರವಾಗಿದ್ದ ಜಮ್ಮು ಮತ್ತು ಕಾಶ್ಮೀರ ತಂಡ ಕೋಚ್ ಸ್ಥಾನಕ್ಕೇರಿದ ಮಾಜಿ ಟೀಂ ಇಂಡಿಯಾ ಆಟಗಾರ ಸುನಿಲ್ ಜೋಶಿ ಅವರ ಕೋಚಿಂಗ್ ಕಮಾಲ್ ಮಾಡಿದೆ.
ರಣಜಿಯಲ್ಲಿ ಕರ್ನಾಟಕ ಪರ ಅತಿಹೆಚ್ಚು ವಿಕೆಟ್ ಗಳಿಸಿರುವ ಸುನಿಲ್ ಜೋಶಿ ಅವರು ರಣಜಿಯಲ್ಲಿ 4000 ರನ್ ಹಾಗೂ 400 ವಿಕೆಟ್ ಗಳಿಸಿದ ಸಾಧಕ. ಭಾರತದ ಪರ 15 ಟೆಸ್ಟ್ ಪಂದ್ಯಗಳನ್ನು ಆಡಿ 41 ವಿಕೆಟ್ ಗಳಿಸಿದ್ದ ಜೋಶಿ ಅವರು ಈಗ ಜಮ್ಮು ಮತ್ತು ಕಾಶ್ಮೀರದ ರಣಜಿ ತಂಡದ ಕೋಚ್ ಆಗಿ ತಮ್ಮ ವೃತ್ತಿಯಲ್ಲಿ ಶುಭಾರಂಭ ಮಾಡಿದ್ದಾರೆ. [ಜೋಶಿ ಕರ್ನಾಟಕದ ಕ್ರಿಕೆಟ್ ರತ್ನ]
ಸಂಕ್ಷಿಪ್ತ ಸ್ಕೋರ್: ಮುಂಬೈ 236 ಹಾಗೂ 254
ಜಮ್ಮು ಮತ್ತು ಕಾಶ್ಮೀರ 254 ಹಾಗೂ 237/6 (69.2 ಓವರ್ ಗಳು)