ಅಮರಾವತಿ (ಆಂಧ್ರಪ್ರದೇಶ), ಫೆಬ್ರವರಿ 24: ಕಳೆದ ವರ್ಷ ನಡೆದಿದ್ದ ರಿಯೊ ಒಲಿಂಪಿಕ್ಸ್ ನ ಮಹಿಳೆಯರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ತಂದುಕೊಟ್ಟಿದ್ದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರು, ಶೀಘ್ರದಲ್ಲೇ ಆಂಧ್ರ ಪ್ರದೇಶ ಸರ್ಕಾರದಲ್ಲಿ ಐಎಎಸ್ ಶ್ರೇಣಿಯ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಹೇಳಲಾಗಿದೆ.
ಹಿಂದೂಸ್ತಾನ್ ಟೈಮ್ಸ್ ನೀಡಿರುವ ವರದಿಯ ಪ್ರಕಾರ, ಆಂಧ್ರ ಪ್ರದೇಶ ಸರ್ಕಾರವು ಪಿ.ವಿ. ಸಿಂಧು ಅವರಿಗೆ ಕೆಲ ದಿನಗಳ ಹಿಂದೆಯೇ ಐಎಎಸ್ ಗ್ರೂಪ್ 1 ಶ್ರೇಣಿಯ ಹುದ್ದೆಯನ್ನು ನೀಡಲು ನಿರ್ಧರಿಸಿ, ಈ ಹಿನ್ನೆಲೆಯಲ್ಲಿ ಸಿಂಧು ಅವರ ಮುಂದೆ ಪ್ರಸ್ತಾವನೆಯನ್ನಿಟ್ಟಿತ್ತು. ಈ ಪ್ರಸ್ತಾವನೆಯನ್ನು ಒಪ್ಪಿಕೊಂಡಿರುವ ಈ ಬಗ್ಗೆ ಆಂಧ್ರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದು ತಾವು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ, ಅವರಿಗೆ ಜಿಲ್ಲಾಧಿಕಾರಿ ಹುದ್ದೆ ಅಥವಾ ಅದರ ಸರಿಸಮಾನ ಹುದ್ದೆ ನೀಡಲಾಗುವುದು ಎಂದು ಹೇಳಲಾಗಿದೆ.[ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು ಈಗ 13 ಕೋಟಿ ರು ಒಡತಿ]
ಇತ್ತೀಚೆಗೆ, ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಸಂಸತ್ ಸಮಾವೇಶದಲ್ಲಿ ಭಾಗವಹಿಸಿದ್ದ ಪಿ.ವಿ. ಸಿಂಧು ಅವರಿಗೆ ಸರ್ಕಾರದ ಉದ್ದೇಶವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದರು.[ಆಲಮಟ್ಟಿ ಎತ್ತರ ಹೆಚ್ಚಿಸಲು ಕರ್ನಾಟಕ ನಿರ್ಧಾರ; ತೆಲಂಗಾಣ, ಆಂಧ್ರಕ್ಕೆ ಶಾಕ್]
ಆಂಧ್ರ ಪ್ರದೇಶ ಸರ್ಕಾರದ ನಿರ್ಧಾರದಂತೆ, ಸಿಂಧು ಅವರು ಆಂಧ್ರ ಪ್ರದೇಶದ ನೂತನ ರಾಜಧಾನಿಯಾಗಿ ನಿರ್ಮಾಣವಾಗುತ್ತಿರುವ ಅಮರಾವತಿಯಲ್ಲಿ ಅವರು ಸೇವೆ ಸಲ್ಲಿಸಲಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಂಧು ಅವರ ತಾಯಿಯಾದ ಪಿ. ವಿಜಯಾ ಅವರೂ ಸಿಂಧು ಅವರ ನೇಮಕಾತಿ ಸುದ್ದಿಯನ್ನು ದೃಢಪಡಿಸಿದ್ದಾರೆಂದು ವರದಿ ಹೇಳಿದೆ.