ಮುಂಬೈ, ನ.7: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪ್ಲೇಯಿಂಗ್ ಇಟ್ ಮೈ ವೇ ಪುಸ್ತಕದಲ್ಲಿ ಹಲವರ ಬಗ್ಗೆ ಪ್ರಶಂಸೆ ಮಾತುಗಳಿದ್ದರೂ ಮ್ಯಾಚ್ ಫಿಕ್ಸಿಂಗ್, ಮಂಕಿಗೇಟ್, ಮುಲ್ತಾನ್ ಟೆಸ್ಟ್ ಡಿಕ್ಲೇರೇಷನ್, ಗ್ರೆಗ್ ಚಾಪೆಲ್ ಬಗ್ಗೆ ನೀಡಿರುವ ಹೇಳಿಕೆಗಳು ಚರ್ಚಾಸ್ಪದವಾಗಿವೆ. ಜೊತೆಗೆ ಭಾರತದ ಸರ್ವಶ್ರೇಷ್ಠ ಆಲ್ ರೌಂಡರ್ ಎನಿಸಿರುವ ಕಪಿಲ್ ದೇವ್ ಅವರ ಬಗ್ಗೆ ಸಚಿನ್ ಬರೆದಿರುವ ಸಾಲುಗಳು ಎಲ್ಲರ ಹುಬ್ಬೇರಿಸಿವೆ.
ಕಪಿಲ್ ದೇವ್ ಅವರು ತಮ್ಮ 'ಡೆವಿಲ್ಸ್ 'ಪಡೆ ಮೂಲಕ 1983ರಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ವಿಶ್ವಕಪ್ ತಂದಿರಬಹುದು. ಹಲವಾರು ಪಂದ್ಯಗಳಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಟೀಂ ಇಂಡಿಯಾದ ಕೀರ್ತಿ ಪತಾಕೆ ಹಾರಿಸಿರಬಹುದು. ಅದರೆ, ಒಂದು ವಿಷಯದಲ್ಲಿ ಕ್ರಿಕೆಟ್ ಜಗತ್ತಿನ ದೇವರು ಎಂದು ಕರೆಸಿಕೊಳ್ಳುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮೆಚ್ಚುಗೆ ಗಳಿಸುವಲ್ಲಿ ವಿಫಲರಾಗಿದ್ದಾರೆ.
ಕಪಿಲ್ ಅವರನ್ನು ಆಲ್ ರೌಂಡರ್ ಆಗಿ ಮೆಚ್ಚುವ ಸಚಿನ್ ಅವರು, ಕೋಚ್ ಆಗಿ ಕಪಿಲ್ ಸಾಧನೆ ಶೂನ್ಯ ಎಂದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆಂದು ತೆರಳಿದ್ದಾಗ ಕಪಿಲ್ ಅವರು ಪಂದ್ಯಕ್ಕೂ ಮುನ್ನ ರಣತಂತರ್ ರೂಪಿಸಲು ನಡೆಸುವ ಸಭೆಗಳಲ್ಲಿ ಪಾಲ್ಗೊಳ್ಳುತ್ತಲೇ ಇರಲಿಲ್ಲ. ಆಟಗಾರರನ್ನು ಹುರಿದುಂಬಿಸುವಲ್ಲಿ ಕಪಿಲ್ ಸೋತಿದ್ದರು ಎಂದು ಸಚಿನ್ ಅವರು ತಮ್ಮ ಆತ್ಮಕಥೆ ಪ್ಲೇಯಿಂಗ್ ಇಟ್ ಮೈ ವೇ ನಲ್ಲಿ ಬರೆದುಕೊಂಡಿದ್ದಾರೆ.
Tumultuous Times: India in Australia, November 1999-January 2000 ಎಂಬ ಅಧ್ಯಾಯದಲ್ಲಿ ಕಪಿಲ್ ಅವರಿಂದ ನಾನು ಹೆಚ್ಚಿನ ನೆರವು ನಿರೀಕ್ಷಿಸಿದ್ದೆ ಎಂದು ಬರೆದಿರುವ ಸಚಿನ್ ಅವರು ಕಪಿಲ್ ಕೋಚಿಂಗ್ ತಂತ್ರಗಾರಿಕೆ ವಿವರ ಬಿಚ್ಚಿಟ್ಟಿದ್ದಾರೆ.. ಈ ಅಧ್ಯಾಯಯ ಸಂಕ್ಷಿಪ್ತ ವಿವರ ಇಲ್ಲಿದೆ:
* ನಾನು ಎರಡನೇ ಬಾರಿಗೆ ನಾಯಕನಾದಾಗ ಕಪಿಲ್ ನನ್ನ ತಂಡದ ಕೋಚ್ ಆಗಿದ್ದರು. ಆಸ್ಟ್ರೇಲಿಯಾ ಪ್ರವಾಸದ ವೇಳೆ ಕಪಿಲ್ ಅವರಿಂದ ಹೆಚ್ಚಿನ ನಿರೀಕ್ಷೆಯಿತ್ತು.
* ಕೋಚ್ ಪಾತ್ರ ತುಂಬಾ ಹಿರಿದಾದುದು ಎಂಬ ನಂಬಿಕೆ ನನ್ನಲ್ಲಿತ್ತು. ತಂಡದ ಆಯ್ಕೆ, ಅಂತಿಮ XI, ಮುಂದಿನ ಪಂದ್ಯದ ರಣತಂತ್ರ ರೂಪಿಸುವಲ್ಲಿ ಕೋಚ್ ಮುಖ್ಯ ಪಾತ್ರವಹಿಸುತ್ತಾರೆ. ಕಪಿಲ್ ಜೊತೆಗಿದ್ದರೆ ಉತ್ತಮ ತಂತ್ರಗಾರಿಕೆ ಸಲಹೆ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಅದರೆ, ನನ್ನ ನಿರೀಕ್ಷೆ ಹುಸಿಯಾಯಿತು.
* 1997ರಲ್ಲಿ ಶಾರ್ಜಾ ಸರಣಿ ವೇಳೆಯಲ್ಲಿ ರಾಬಿನ್ ಸಿಂಗ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವ ನಿರ್ಧಾರ ಸಂಪೂರ್ಣ ಕೈಕೊಟ್ಟಿತು. ಮಾಧ್ಯಮಗಳು ಈ ಬಗ್ಗೆ ಕಟುವಾಗಿ ಟೀಕಿಸಿದ್ದವು.
* ಡಿಸೆಂಬರ್ 14 ರಂದು ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದೆ. ಇದು ಮ್ಯಾನೇಜ್ಮೆಂಟ್ ನಿರ್ಣಯವಾಗಿತ್ತು. ಅದರೆ. ರಾಬಿನ್ ಸಿಂಗ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಇಳಿಸಿ ತಪ್ಪು ಮಾಡಿದೆವು.
* ಅದರೆ, 1998ರಲ್ಲಿ ಅಜರ್ ನಾಯಕತ್ವದಲ್ಲಿ ಇದೇ ಪ್ರಯೋಗವನ್ನು ಮುಂದುವರೆಸಲಾಯಿತು. ಆಗ ರಾಬಿನ್ ಉತ್ತಮವಾಗಿ ಆಡಿ ತಂಡದ ಗೆಲುವಿಗೆ ಕಾರಣರಾದರು. ಜೂಜಾಟದ ರೀತಿ ಇರುವ ಬ್ಯಾಟಿಂಗ್ ಕ್ರಮಾಂಕವನ್ನು ಆಯ್ಕೆ ಮಾಡುವಾಗ ನಾಯಕ ಹಾಗೂ ಕೋಚ್ ಪಾತ್ರ ನಿರ್ಣಾಯಕ ಎಂದು ಸಚಿನ್ ಹೇಳಿದ್ದಾರೆ.