ನವದೆಹಲಿ, ಡಿಸೆಂಬರ್ 28: ಕಾಮೆನ್ ವೆಲ್ತ್ ಕ್ರೀಡಾಕೂಟದ ಹಗರಣ ಆರೋಪ ಹೊತ್ತಿದ್ದ ಸುರೇಶ್ ಕಲ್ಮಾಡಿ ಅವರನ್ನು ಇಂಡಿಯನ್ ಒಲಿಂಪಿಕ್ ಅಸೋಶಿಯೇಷನ್ ನ ಅಜೀವ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ದಿನವೀಡಿ ವಿವಾದ ಎಬ್ಬಿಸಿದ್ದು ಗೊತ್ತಿರಬಹುದು. ದಿನದ ಅಂತ್ಯಕ್ಕೆ ಕಲ್ಮಾಡಿ ಅವರು ಅಧ್ಯಕ್ಷ ಸ್ಥಾನದ ಆಫರ್ ತಿರಸ್ಕರಿಸಿದ್ದಾರೆ.
ಕಲ್ಮಾಡಿ ಅವರ ಪರ ವಕೀಲ ಹಿತೇಶ್ ಜೈನ್ ಮಾತನಾಡಿ, ಅಧ್ಯಕ್ಷ ಸ್ಥಾನವನ್ನು ಕಲ್ಮಾಡಿ ತಿರಸ್ಕರಿಸಿದ್ದಾರೆ, ಹಗರಣದಿಂದ ಸಂಪೂರ್ಣ ಮುಕ್ತರಾಗುವ ತನಕ ಯಾವುದೇ ಹುದ್ದೆ ಸ್ವೀಕರಿಸದಿರಲು ಕಲ್ಮಾಡಿ ನಿರ್ಧರಿಸಿದ್ದಾರೆ ಎಂದು ಹೇಳಿದರು. ಇದಕ್ಕೂ ಮುನ್ನ ಕ್ರೀಡಾ ಸಚಿವಾಲಯದಿಂದ ಐಒಎಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.
ಭಾರತೀಯ ರಾಷ್ಟ್ರೀಯ ಲೋಕ್ ದಳ ನಾಯಕ ಅಭಯ್ ಸಿಂಗ್ ಚೌಟಾಲಾ ಅವರನ್ನು ಕೂಡಾ ಇಂಡಿಯನ್ ಒಲಿಂಪಿಕ್ ಅಸೋಶಿಯೇಷನ್ ಅಜೀವ ಅಧ್ಯಕ್ಷರಾಗಿ ಆಯ್ಕೆಮಾಡಲಾಗಿದೆ ಎಂದು ಜಂಟಿ ಕಾರ್ಯದರ್ಶಿ ರಾಕೇಶ್ ಗುಪ್ತಾ ಘೋಷಿಸಿದ್ದಾರೆ.
ಕಲ್ಮಾಡಿ ಅವರು ಈ ಮೊದಲು ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ 1996-2011ರವರೆಗೆ ಕಾರ್ಯನಿರ್ವಹಿಸಿದ್ದರು. ಆದರೆ, ಕಾಮನ್ವೆಲ್ತ್ ಗೇಮ್ಸ್ ನಲ್ಲಿನ ಹಗರಣ ಸಂಬಂಧ 10 ತಿಂಗಳ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಚೌಟಾಲಾ ಅವರು ಕೂಡಾ ಇಂಡಿಯನ್ ಒಲಿಂಪಿಕ್ ಅಸೋಶಿಯೇಷನ್ ಅಧ್ಯಕ್ಷರಾಗಿ 2012ರ ಡಿಸೆಂಬರ್ನಿಂದ 2014ರ ಫೆಬ್ರುವರಿ ವರೆಗೆ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.